ಬಯಲು ಸೀಮೆ ಪ್ರದೇಶದಲ್ಲಿ ಒಂದು ನದಿ ಅಥವಾ ನೀರಿನ ಚಿಲುಮೆ ಕಂಡರೆ ಅದೆಷ್ಟು ಖುಷಿ ಆಗುತ್ತದೆ ಅಲ್ಲವಾ? ನಿಜ, ಅಂತಹ ಒಂದು ಖುಷಿ ಕೊಡಬಹುದಾದ ಜಲಧಾರೆ ಯಾದಗಿರಿ ಹಾಗೂ ಗುಲ್ಬರ್ಗಕ್ಕೆ ಸಮೀಪವಿದೆ. ಬೇಸಿಗೆಯಲ್ಲಿ ಅಷ್ಟಾಗಿ ನೀರು ಇರದಿದ್ದರೂ ಮಳೆಗಾಲದಲ್ಲಿ ಮೈದುಂಬಿ ಧುಮುಕುತ್ತದೆ.
ಧಬ್ ಧಬಿ ಜಲಧಾರೆ
ಯಾದಗಿರಿಯ ಚಿಂತನಹಳ್ಳಿಯಲ್ಲಿ ಬರುವ ಈ ಜಲಧಾರೆ ಗುಲ್ಬರ್ಗದಿಂದ 150 ಕಿ.ಮೀ. ದೂರದಲ್ಲಿದೆ. ಬೆಟ್ಟಗಳ ಮಧ್ಯೆ ಹರಿದು ಬರುತ್ತಾ ಸುಮಾರು 100ಅಡಿ ಎತ್ತರದಿಂದ ಜಿಗಿಯುವ ಈ ಜಲಧಾರೆ ನೋಡುಗರಿಗೆ ಹೊಸತನದ ಅನುಭವ ನೀಡುತ್ತದೆ. ಅಲ್ಲಿಯೇ ಗವಿ ಸಿದ್ಧೇಶ್ವರ ದೇಗುಲ ಇದೆ. ಜಲಧಾರೆಯಲ್ಲಿ ಸ್ನಾನ ಮಾಡಿ ದೇವಸ್ಥಾನದ ಪ್ರವೇಶ ಮಾಡಬಹುದು.
ಗವಿಸಿದ್ಧೇಶ್ವರ ದೇಗುಲ
ಚಿಂತನ ಹಳ್ಳಿಯ ಪ್ರಸಿದ್ಧ ದೇಗುಲ ಗವಿಗಂಗಾಧರೇಶ್ವರ. ಗುಹೆಯ ಒಳಗಿರುವ ಈ ದೇಗುಲದ ಮೇಲಿನಿಂದ ಜಲಧಾರೆ ಬೀಳುತ್ತದೆ. ಈ ದೇಗುಲದ ಒಳ ಪ್ರವೇಶ ಮಾಡುವಾಗ ಭಕ್ತಾದಿಗಳು ನೀರಿನ ಚಿಲುಮೆಗೆ ತಲೆಯೊಡ್ಡಿಯೇ ಹೋಗಬೇಕು. ಚಿಂತನ ಹಳ್ಳಿಯಿಂದ 30 ಕಿ.ಮೀ. ದೂರದಲ್ಲಿರುವ ಈ ದೇಗುಲ ವಿಶೇಷ ಇತಿಹಾಸವನ್ನು ಹೊಂದಿದೆ.
ರುಚಿ ನೋಡಿ
ಉತ್ತರ ಕರ್ನಾಟಕದ ಜನರು ಮಂಡಕ್ಕಿಯನ್ನು ಹೆಚ್ಚು ಬಳಕೆ ಮಾಡುತ್ತಾರೆ. ಇಲ್ಲಿ ಬಂದಾಗ ಮಂಡಕ್ಕಿಯಿಂದ ತಯಾರಿಸಿದ ವಿಶೇಷ ಚಾಟ್ಸ್ ಸವಿಯಲೇ ಬೇಕು.
ಎಚ್ಚರಿಕೆ
* ಇಲ್ಲಿ ನೀರು ಬೀಳು ಬಂಡೆಗಳ ಮೇಲೆ ಹತ್ತುವಂತಿಲ್ಲ.
* ದೇಗುಲದ ಒಳಗೆ ಹೊರಗೆ ಎಲ್ಲೂ ಕಲ್ಲಲ್ಲಿ ಕೊರೆಯುವುದು, ಹೆಸರು ಬರೆಯುವುದು, ಬೇಡದ ಚಿತ್ರಗಳನ್ನು ಬಿಡಿಸುವಹಾಗಿಲ್ಲ.
* ಪ್ಲಾಸ್ಟಿಕ್ ಕವರ್ಗಳನ್ನು ನೀರಿನಲ್ಲಿ ಬಿಸಾಡುವಂತಿಲ್ಲ.
ಜಲಧಾರೆಗೆ ಹತ್ತಿರ
ಧಬ್ ಧಬಿ ಜಲಪಾತವನ್ನು ನೋಡಿಕೊಂಡು ಯಾದಗಿರಿ, ಗುಲ್ಬರ್ಗದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು.
ಎಷ್ಟು ದೂರ
ಈ ಹಳ್ಳಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಬೆಂಗಳೂರಿನಿಂದ ಯಾದಗಿರಿಗೆ ಹೋಗಿ, ನಂತರ ಗುರಮಿತ್ಕಲ್ಲಿಗೆ ಹೋಗಬೇಕು. ಅಲ್ಲಿಂದ 40 ಕಿ.ಮೀ. ದೂರ. ಗುಲ್ಬರ್ಗದಿಂದ ಬರುವುದಾದರೆ 150 ಕಿ.ಮೀ. ದೂರ.