ನೀವು ಕೇಳುತ್ತಿರುವುದು ನಿಜ. ಇಲ್ಲಿ ಆಂಜನೇಯನನ್ನು ಪೂಜಿಸುವ ಹಾಗಿಲ್ಲ. ಆಂಜನೇಯನಿಗೆ ಸಂಬಂಧಿಸಿದ ಯಾವ ಆಚರಣೆಗಳನ್ನೂ ಮಾಡುವ ಹಾಗಿಲ್ಲ. ಅಷ್ಟೆ ಏಕೆ, ಆಂಜನೇಯನ ಹೆಸರುಗಳನ್ನೂ ಸಹ ಮಕ್ಕಳಿಗೆ ಇಡುವ ಹಾಗಿಲ್ಲ. ಇನ್ನೂ ವಿಶೇಷವೆಂದರೆ ಬೇರೆ ಯಾವುದೇ ದೇವ ದೇವತೆಯರನ್ನೂ ಸಹ ಆರಾಧಿಸುವ ಹಾಗಿಲ್ಲ.
ಈ ದೇವಾಲಯಗಳ ಹಿನ್ನಿಲೆ ಕೇಳಿದರೆ ಸಾಕು, ಏನಪ್ಪಾ ಇಷ್ಟೊಂದು ವಿಚಿತ್ರ ಎನ್ನುವಿರಿ
ಈ ಹಳ್ಳಿಗೆ ಒಬ್ಬನೆ ಅಧಿದೇವತೆ. ಅವನನ್ನೆ ಪೂಜಿಸಬೇಕು, ಆರಾಧಿಸಬೇಕು. ವಿಚಿತ್ರ ಎಂದರೆ ಅವನೊಬ್ಬ ದೈತ್ಯ. ಅಂದರೆ ಇಲ್ಲಿ ದೈತ್ಯನನ್ನೆ ದೇವರಂತೆ ಪೂಜಿಸಬೇಕು. ಯಾರಾದರು ಇದನ್ನು ಅನುಸರಿಸದೆ ಹೋದರೆ ಅವರಿಗೆ ಕೆಡುಕು ಉಂಟಾಗುವುದು ಖಚಿತ ಎಂದು ಇಲ್ಲಿನ ಜನರು ಬಲವಾಗಿ ನಂಬುತ್ತಾರೆ.
ಇನ್ನೂ ನೀವು ಈ ಗ್ರಾಮಕ್ಕೆ ತೆರಳ ಬಯಸಿದರೆ ಒಂದೊಮ್ಮೆ ಖಚಿತಪಡಿಸಿಕೊಳ್ಳಿ ನಿಮ್ಮ ಹತ್ತಿರ ಮಾರುತಿಯ ಯಾವ ವಾಹನಗಳೂ ಇಲ್ಲವೆಂದು. ಮಾರುತಿ ಕಾರುಗಳಿಗೂ ಸಹ ಈ ಗ್ರಾಮಕ್ಕೆ ಪ್ರವೇಶಿಸಲು ಅನುಮತಿಯಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಹನುಮನನ್ನು ಖಳನಾಯಕನಂತೆಯೆ ನೋಡಲಾಗುತ್ತದೆ.
ನಿಂಬಾ ದೈತ್ಯ
ನಿಮಗೆ ಇಂತಹ ವಿಶಿಷ್ಟ ಗ್ರಾಮಕ್ಕೆ ಪ್ರವಾಸ ಮಾಡಲು ಕುತೂಹಲವಿದ್ದರೆ ಮಹಾರಾಷ್ಟ್ರಕ್ಕೆ ತೆರಳಬೇಕು. ಹೌದು ಈ ಗ್ರಾಮದ ಹೆಸರು ದೈತ್ಯ ನಾಂದೂರು ಎಂದು. ಇಲ್ಲಿ ದೈತ್ಯ ನಿಂಬಾ ಎಂಬ ಅಸುರನು ಈ ಗ್ರಾಮದ ಅಧಿದೇವತೆ. ಇದು ಅಹ್ಮದ್ ನಗರ ಜಿಲ್ಲೆಯ ಪಾರನೇರ್ ತಾಲೂಕಿನಲ್ಲಿರುವ ಗ್ರಾಮ. ಮುಂಬೈನಿಂದ ಸುಮಾರು ಐದು ಘಂಟೆಗಳಷ್ಟು ಪ್ರಯಾಣಾವಧಿಯ ಅಂತರದಲ್ಲಿದೆ.
ನಿಂಬಾ ದೈತ್ಯನನ್ನು ಇಲ್ಲಿ ಮುಖ್ಯವಾಗಿ ಆರಾಧಿಸಲಾಗುತ್ತದೆ. ಪ್ರತೀತಿಯಂತೆ ನಿಂಬಾ ಒಬ್ಬ ಬಲಶಾಲಿ ಅಸುರನಾಗಿದ್ದರೂ ಸಹ ಶ್ರೀರಾಮನ ಪರಮ ಭಕ್ತ. ಒಮ್ಮೆ ಇಲ್ಲಿರುವ ಕೇದಾರೇಶ್ವರ ದೇವಾಲಯಕ್ಕೆ ರಾಮನು ಸೀತೆ ಹಾಗೂ ಲಕ್ಷ್ಮಣರೊಡನೆ ಬಂದಾಗ ಅವನ ದರ್ಶನ ಕೋರಿ ಈ ದೈತ್ಯನು ಆಗಮಿಸಲು ನಿರ್ಧರಿಸುತ್ತಾನೆ.
ಸಾಂದರ್ಭಿಕ ಚಿತ್ರ, ಹನುಮ ಹಾಗೂ ದೈತ್ಯನೊಬ್ಬನ ಕಾಳಗ
ಇಷ್ಟರಲ್ಲೆ, ರಾಮನ ಜೊತೆಗಿದ್ದ ಹನುಮನ ಕುರಿತು ದೈತ್ಯನಿಗೆ ತಿಳಿದು ಸಹಿಸಿಕೊಳ್ಳಲಾಗದೆ ಅವನೊಡನೆ ಕಾಳಗಕ್ಕಿಳಿಯುತ್ತಾನೆ. ಹೀಗೆ ಇಬ್ಬರ ಮಧ್ಯೆ ಭೀಕರ ಕಾಳಗ ನಡೆಯಲು, ಇದರ ಕುರಿತು ರಾಮನಿಗೆ ತಿಳಿದು ಅವನು ಅಲ್ಲಿಗೆ ಬಂದು ಅವರಿಬ್ಬರನ್ನೂ ಸಮಾಧಾನಗೊಳಿಸುತ್ತಾನೆ. ದೈತ್ಯನಾದರೂ ರಾಮನ ಕುರಿತು ಅಪಾರ ಭಕ್ತಿ ಹೊಂದಿರುವ ನಿಂಬಾನನ್ನು ಆಶೀರ್ವದಿಸುತ್ತಾನೆ.
ಹೀಗೆ ನಿಂಬಾನ ತಪಸ್ಸಿಗೆ ಮೆಚ್ಚಿದ ರಾಮ ಈ ಸ್ಥಳವು ದೈತ್ಯನಿಗೆ ಮೀಸಲಾಗಿದ್ದು ಇಲ್ಲಿ ವಾಸಿಸುವ ಪ್ರತಿಯೊಬ್ಬರ ರಕ್ಷಕ, ಪಾಲಕನಾಗಿ ನಿಂಬಾನನ್ನು ನಿಯಮಿಸುತ್ತಾನೆ. ಅದಕ್ಕೆ ಪ್ರತಿಯಾಗಿ ನಿಂಬಾ ಇಲ್ಲಿ ಯಾವ ಕಾರಣಕ್ಕೂ ಆಂಜನೇಯನ ಹೆಸರಾಗಲಿ, ಪೂಜೆಯಾಗಲಿ ನಡೆಯಕೂಡದು ಎಂದು ಬೇಡಿಕೊಳ್ಳುತ್ತಾನೆ. ಅದರ ಫಲವಾಗಿಯೆ ಇಂದಿಗೂ ಇಲ್ಲಿ ಆಂಜನೇಯನನ್ನು ಪೂಜಿಸಲಾಗುವುದಿಲ್ಲ.