ಅಂದು ಸಿಲಾನ್ ಎಂದು ಕರೆಯಲ್ಪಡುತ್ತಿದ್ದ ಇಂದಿನ ಶ್ರೀಲಂಕಾ ದೇಶಕ್ಕೆ ಇಲ್ಲಿಯವರೆಗೂ ಅಪ್ಪಳಿಸಿದ ಅತಿ ಭಯಾನಕ ಚಂಡಮಾರುತ 1964 ರಲ್ಲಿ ಉಂಟಾದದ್ದು. ಇದನ್ನು ರಾಮೇಶ್ವರಂ ಚಂಡಮಾರುತ ಎಂದೆ ಕರೆಯುತ್ತಾರೆ. ಅಂಡಮಾನ್ ಸಮುದ್ರದಲ್ಲಿ ಮೊದ ಮೊದಲು ಕಡಿಮೆ ಒತ್ತಡದ ಸ್ಥಿತಿ ನಿರ್ಮಾಣವಾಗಿ ಮೂರು ನಾಲ್ಕು ದಿನಗಳು ಕಳೆಯುವ ಹೊತ್ತಿಗೆ ಅಗಾಧ ಶಕ್ತಿಯ ಚಂಡ ಮಾರುತ ನಿರ್ಮಾಣವಾಗಿತ್ತು.
ಇದು ನಡೆದದ್ದು 1964 ರ ಡಿಸೆಂಬರ್ ಸಂದರ್ಭದಲ್ಲಿ. ಈ ಚಂಡಮಾರುತವು ಶ್ರೀಲಂಕಾ ಅಲ್ಲದೆ ಭಾರತದ ರಾಮೇಶ್ವರಂ ವ್ಯಾಪ್ತಿಯ ಪ್ರದೇಶಕ್ಕೂ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ನಾಶ ಉಂಟಾಗುವಂತೆ ಮಾಡಿತು. ಧನುಷ್ಕೋಡಿಯು ಸಾಕಷ್ಟು ಹಾನಿಗೊಳಗಾಯಿತು. ಆದರೆ ಎಷ್ಟೊ ಗಟ್ಟಿ ಮುಟ್ಟಾದ ರಚನೆಗಳು ನಿರ್ನಾಮಗೊಂಡರೂ ಒಂದು ಪುರಾತನ ದೇವಾಲಯ ಮಾತ್ರ ಹಾಗೆ ಚೂರೂ ಅಳುಕದೆ ಹಾಗೆ ನಿಂತಿತು.
ರಾಮೇಶ್ವರಂ ಪಂಬನ್ ಸೇತುವೆ, ಚಿತ್ರಕೃಪೆ: Bobinson K B
ರಭಸವಾಗಿ ಬೀಸುತ್ತಿದ್ದ ಗಾಳಿಗೆ ಎದೆಯೊಡ್ಡಿ ಬೀಳದಂತೆ ಗಟ್ಟಿಯಾಗಿ ನಿಂತಿತು. ಸ್ವಲ್ಪ ಪ್ರಮಾಣದ ಹಾನಿ ಬಿಟ್ಟರೆ ಬಹುತೇಕವಾಗಿ ಈ ಚಂಡಮಾರುತವನ್ನು ಯಶಸ್ವಿಯಾಗಿ ಎದುರಿಸಿದ ದೇವಾಲಯವಿದು. ಇಂದು ಪ್ರವಾಸಿ ಆಕರ್ಷಣೆಯಾಗಿ ಸಾಕಷ್ಟು ಜನರಿಂದ ಭೇಟಿ ನೀಡಲ್ಪಡುತ್ತದೆ. ರಾಮೇಶ್ವರಂಗೆ ತೆರಳುವವರು ಈ ದೇವಾಲಯವನ್ನು ನೋಡದೆ ಹಿಂತಿರುಗಲಾರರು.
ಅಷ್ಟಕ್ಕೂ ಈ ದೇವಾಲಯ ಯಾವುದೆಂಬ ಕುತೂಹಲ ನಿಮಗುಂಟಾಗಿರಬೇಕಲ್ಲವೆ? ಹೌದು, ಇದು ರಾಮನಿಗೆ ಮುಡಿಪಾದ ಶ್ರೀ ಕೋದಂಡರಾಮಸ್ವಾಮಿ ದೇವಾಲಯ. ಕೇವಲ ರಾಮನು ಮಾತ್ರವಲ್ಲದೆ ಈ ದೇವಾಲಯದಲ್ಲಿ ರಾಮನ ಮಡದಿ ಸೀತೆ, ರಾಮನ ಸಹೋದರ ಲಕ್ಷ್ಮಣ ಹಾಗೂ ಲಂಕೆಯ ರಾವಣನ ಸಹೋದರನಾದ ವಿಭೀಷಣನ ವಿಗ್ರಹಗಳು ಇಲ್ಲಿ ಕಂಡುಬರುತ್ತವೆ.
ಚಿತ್ರಕೃಪೆ: Ryan
ಅಲ್ಲದೆ ಆಂಜನೇಯನಿಗೆ ಮುಡಿಪಾದ ಸನ್ನಿಧಿಯೂ ಇಲ್ಲಿ ಕಂಡುಬರುತ್ತದೆ. ಇಂದು ಹೆಚ್ಚು ನಿರ್ಜನವಾದ ಪ್ರದೇಶದಲ್ಲಿರುವ ಈ ದೇವಾಲಯ ಕೇವಲ ಕುತೂಹಲ ಕೆರಳಿಸುವ ರಚನೆಯಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇವಾಲಯಕ್ಕೆ ಹೋಗುವ ಮಾರ್ಗವು ಒಂದು ರೀತಿಯ ವಿಚಿತ್ರ ಭಾವನೆಯು ಮನದಲ್ಲಿ ಮೂಡುವಂತೆ ಮಾಡುತ್ತದೆ.
ರಾಮೇಶ್ವರಂ ಒಂದು ದ್ವೀಪವಾಗಿದ್ದು ಇದರ ದಕ್ಷಿಣದ ತುತ್ತ ತುದಿಯಲ್ಲಿರುವ ಧನುಷ್ಕೋಡಿ ಪ್ರದೇಶದಲ್ಲಿ ಈ ದೇವಾಲಯವಿದೆ. ರಾಮೇಶ್ವರಂ ನಗರ ಕೇಂದ್ರದಿಂದ 13 ಕಿ.ಮೀ ಗಳಷ್ಟು ದೂರದಲ್ಲಿರುವ ಈ ರಾಮಸ್ವಾಮಿ ದೇವಾಲಯವನ್ನು ಸುಲಭವಾಗಿ ತಲುಪಬಹುದಾಗಿದೆ. ತೆರಳಲು ಬಾಡಿಗೆ ಜೀಪುಗಳು, ಕಾರುಗಳು ದೊರೆಯುತ್ತವೆ.
ದೂರದಲ್ಲಿ ಕಾಣುವ ದೇವಾಲಯ, ಚಿತ್ರಕೃಪೆ: Drajay1976
ಶಿಕಾಗೊಗೆ ಭೇಟಿ ನೀಡಿ ಭಾರತಕ್ಕೆ ಮರಳಿದ್ದ ಸ್ವಾಮಿ ವಿವೇಕಾನಂದರು ರಾಮೇಶ್ವರಂನಲ್ಲಿರುವ ಈ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಆ ಒಂದು ಕಾರಣದಿಂದಾಗಿಯೂ ಸಹ ಈ ದೇವಾಲಯವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲದೆ ದೇವಾಲಯದ ಸುತ್ತಮುತ್ತಲಿನ ಪ್ರದೇಶವು ಶಾಂತಮಯವಾಗಿದ್ದು ಒಂದು ರೀತಿಯ ಅಲೌಕಿಕ ಭಾವನೆಯಿಂದ ಕೂಡಿದ್ದು ಹೆಚ್ಚಿನ ಕುತೂಹಲ ಕೆರಳಿಸುತ್ತದೆ.
ತಮಿಳುನಾಡಿನ ನಿಗೂಢ ಹಾಗೂ ಆಕರ್ಷಕ ಸ್ಥಳ