ತಮಿಳುನಾಡು ರಾಜಯದಲ್ಲಿರುವ ಈ ದೇವಾಲಯದ ಕುರಿತು ಸಾಕಷ್ಟು ಜನರಿಗೆ ತಿಳಿದಿಲ್ಲವಾದರೂ ಗೊತ್ತಿರುವವರಿಗೆ ಈ ದೇವಿಯ ಮಹಿಮೆ ಗೊತ್ತಿರದೆ ಇರಲಾರದು. ಅದೆಷ್ಟೊ ಮಕ್ಕಳಿಲ್ಲದ ಸುಮಂಗಲಿಯರು ಈ ದೇವಿಗೆ ಬಂದು ಪ್ರಾರ್ಥಿಸಿ ಸಂತಾನ ಫಲವನ್ನು ಪಡೆದಿದ್ದಾರೆಂದು ಹೇಳಲಾಗುತ್ತದೆ. ಅಷ್ಟೆ ಅಲ್ಲ, ಗರ್ಭಧರಿಸಿದ ಮಹಿಳೆಯರೂ ಸಹ ಸುರಕ್ಷಿತ ಹಾಗೂ ಸುಸೂತ್ರವಾಗಿ ಹೆರಿಗೆಯಾಗುವಂತೆ ಈ ದೇವಿಗೆ ಪ್ರಾರ್ಥಿಸುತ್ತಾರಂತೆ!
ಇಲ್ಲಿ ದೇವಿ ಮುಟ್ಟಾಗುತ್ತಾಳೆ ಹಾಗೂ ಆ ಸಮಯ ಇಲ್ಲಿ ದೊಡ್ಡ ಹಬ್ಬ!
ಹೌದು, ಈ ದೇವಿಯ ವಿಶೇಷತೆ ಅಥವಾ ಮಹಿಮೆಯೆ ಹಾಗಿದೆ. ಇದೊಂದು ಪುರಾತನ ಶಿವ ದೇವಾಲಯವಾಗಿದ್ದು ಶಿವನ ಅವತಾರವಾದ ಮುಳ್ಳೈವನಾಥರ್ ಹಾಗೂ ಗರ್ಭರಕ್ಷಾಂಬಿಕೆ ಅಮ್ಮನವರಿಗೆ ಮುಡಿಪಾಗಿದೆ. ಇಲ್ಲಿ ದೇವಿಯನ್ನು ಗರ್ಭರಕ್ಷಾಂಬಿಕೆಯಾಗಿಯೆ ಪೂಜಿಸಲಾಗುತ್ತದೆ. ಹೆಸರೆ ಸೂಚಿಸುವ ಹಾಗೆ ಈ ದೇವಿಯು ಗರ್ಭ ಧರಿಸಿರುವ ಮಹಿಳೆಯರ ಗರ್ಭಕ್ಕೆ ಯಾವ ರೀತಿಯ ತೊಂದರೆಯಾಗದಂತೆ ಕಾಪಾಡುತ್ತಾಳೆಂದು ನಂಬಲಾಗಿದೆ.
ಚಿತ್ರಕೃಪೆ: Selvamrpr
ದಂತ ಕಥೆಯೊಂದರ ಪ್ರಕಾರ, ವೇದಿಕೈ ಎಂಬ ದೇವಿ ಭಕ್ತೆಯೊಬ್ಬಳಿದ್ದಳು. ಸಾಮಾನ್ಯವಾಗಿ ಎಲ್ಲ ಮಹಿಳೆಯರು ಬಯಸುವಂತೆ ಮದುವೆಯಾದ ನಂತರ ಸಂತಾನಕ್ಕಾಗಿ ಈ ದೇವಿಯನ್ನು ಪ್ರಾರ್ಥಿಸಿದ್ದಳು. ಅದರಂತೆ ಅವಳು ಒಂದು ಗರ್ಭಧರಿಸಿ ಅತಿ ಸಂತಸಪಟ್ಟಳು. ಆದರೆ ಮುಂದೆ ಸಮಯ ಗತಿಸುತ್ತಿದ್ದಂತೆ ಅವಳಿಗೆ ಗರ್ಭದಲ್ಲಿ ತೊಂದರೆಯುಂಟಾಗಿ ಭ್ರೂಣವು ನಾಶಗೊಳ್ಳುವಂತಹ ಕಂಟಕ ಎದುರಾಯಿತು.
ದಂತಕಥೆ ಸಾರುವ ಶಾಸನ, ಚಿತ್ರಕೃಪೆ: Ssriram mt
ಇದರಿಂದ ಅತೀವವಾದ ದುಖ ಪಟ್ಟ ವೇದಿಕೈ ಅಂತಿಮವಾಗಿ ಗರ್ಭರಕ್ಷಾಂಬಿಕೆಗೆ ಮೊರೆ ಹೋದಳು ಹಾಗೂ ತನ್ನ ಸಂತಾನವನ್ನು ಉಳಿಸಿಕೊಳ್ಳಲು ಪ್ರಾರ್ಥಿಸಿದಳು. ಸ್ವತಃ ಗರ್ಭರಕ್ಷಾಂಬಿಕೆಯೆ ಇವಳ ಆರೈಕೆ ಮಾಡಿ ಅವಳು ಯಾವ ವಿಧದ ತೊಂದರೆಯೂ ಇಲ್ಲದೆ ಸುಸೂತ್ರವಾಗಿ ಮಗು ಹೆರುವಂತೆ ಮಾಡಿದಳು. ಹೀಗಾಗಿ ಈ ದೇವಿಗೆ ನಡೆದುಕೊಳ್ಳುವ ಭಕ್ತರು ಅಪಾರ.
ದೇವಾಲಯ ಪುಷ್ಕರಿಣಿ, ಚಿತ್ರಕೃಪೆ: Selvamrpr
ಮದುವೆಯಾಗಿ ಸಾಕಷ್ಟು ಸಮಯ ಗತಿಸಿದರೂ ಇನ್ನೂ ಸಂತಾನ ಪಡೆಯದ ದಂಪತಿಗಳು ದೇವಿಯ ಈ ಸನ್ನಿಧಾನಕ್ಕೆ ಭೇಟಿ ನೀಡುತ್ತಾರೆ ಹಾಗೂ ಸಂತಾನ ಫಲವನ್ನು ಬೇಡುತ್ತಾರೆ. ಕೇವಲ ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಇತರೆ ದೇಶಗಳಿಂದಲೂ ಸಹ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ದೇವಿಯನ್ನು ಪೂಜಿಸಿ ಸಂತಾನ ಪಡೆದ ಅದೆಷ್ಟೊ ಭಕ್ತರು ಈ ದೇವಾಲಯದ ಅಧಿಕೃತ ವೆಬ್ ತಾಣದಲ್ಲಿ ಭಕ್ತರ ಓಲೆ ಎಂಬ ವಿಭಾಗದಲ್ಲಿ ತಮ್ಮ ಅನುಭವಗಳನ್ನು ಹಚಿಕೊಂಡಿರುವುದೆ ಈ ದೇವಿಯ ಅಪಾರ ಮಹಿಮೆಗೆ ಸಾಕ್ಷಿ ಎಂದು ಹೇಳಿದರೂ ತಪ್ಪಾಗಲಾರದು.
ಮುಖ್ಯ ಪ್ರವೇಶ ದ್ವಾರ, ಚಿತ್ರಕೃಪೆ: Selvamrpr
ಕೇವಲ ಇಷ್ಟೆ ಅಲ್ಲ, ಗರ್ಭಾಂಬಿಕೈ ಜೊತೆಯಾಗಿ ನೆಲೆಸಿರುವ ಮುಳ್ಳೈವನಾಥರ್ ನನ್ನು ದೀರ್ಘ ಆಯಸ್ಸು ಹಾಗೂ ಉತ್ತಮ ಆರೋಗ್ಯಕ್ಕಾಗಿ ಪೂಜಿಸಲಾಗುತ್ತದೆ. ಈ ರೀತಿಯಾಗಿ ಈ ದೇವಾಲಯವು ದೂರದೂರುಗಳಿಂದ ಬೇಡಿ ಬರುವ ಭಕ್ತರ ಆರೋಗ್ಯ ಹಾಗೂ ದಮ್ಪತಿಗಳಿಗೆ ಸಂತಾನ ಫಲ ಕರುಣಿಸುವ ಪ್ರಮುಖ ಸನ್ನಿಧಾನವಾಗಿ ಗಮನ ಸೆಳೆಯುತ್ತದೆ.
ಭಕ್ತರ ಸಕಲ ಪಾಪಗಳನ್ನು ತೊಳೆಯುವ ಪಾಪನಾಶಂ
ಗರ್ಭರಕ್ಷಾಂಬಿಕೆಯ ಈ ದೇವಾಲಯವು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿದೆ. ತಂಜಾವೂರಿನ ಉತ್ತರಕ್ಕೆ ಸುಮಾರು 20 ಕಿ.ಮೀ ದೂರದಲ್ಲಿರುವ ತಿರುಕರುಕಾವೂರು ಎಂಬ ಗ್ರಾಮದಲ್ಲಿ ದೇವಿಯ ಈ ಸನ್ನಿಧಾನವಿದೆ. ಮತ್ತೊಂದು ಪುಣ್ಯ ಕ್ಷೇತ್ರವಾದ ಪಾಪನಾಶಂನಿಂದ ಕೇವಲ ಆರು ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ತಂಜಾವೂರು ಹಾಗೂ ಪಾಪನಾಶಂನಿಂದ ಇಲ್ಲಿಗೆ ತೆರಳಲು ಬಸ್ಸುಗಳು ಹಾಗೂ ಬಾಡಿಗೆ ಕಾರುಗಳು ದೊರೆಯುತ್ತವೆ. ಇನ್ನೂ ತಂಜಾವೂರು ರೈಲು ನಿಲ್ದಾಣ ಹೊಂದಿದ್ದು ದಕ್ಷಿಣ ಭಾರತದ ಅನೇಕ ಪ್ರಮುಖ ನಗರಗಳಿಂದ ತಂಜಾವೂರಿಗೆ ರೈಲುಗಳಿವೆ.
ತಂಜಾವೂರಿಗಿರುವ ರೈಲುಗಳು