ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಒಂದಾಗಿದೆ. ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಜಗತ್ಪೀಠಗಳ ಪೈಕಿ ಮೊದಲನೇಯ ಪೀಠ ಎಂಬ ಹೆಗ್ಗಳಿಕೆ ಪಡೆದಿದೆ ಶೃಂಗೇರಿಯ ಶ್ರೀ ಶಾರದಾ ಪೀಠ. ದ್ವೈತ ಪಂಥದ ಪಾಲಿಸುವವರಿಗೆ ಶೃಂಗೇರಿಯ ಶಂಕರ ಮಠವು ಮುಖ್ಯ ಸನ್ನಿಧಿಯಾಗಿ ಕಾರ್ಯನಿರ್ವಹಿಸುತ್ತದೆ.
ನಿಶ್ಕಲ್ಮಶ ಪರಿಸರ ಹಾಗೂ ಅದ್ಭುತ ಕಾಡು ಪ್ರದೇಶಗಳಿಂದ ಸುತ್ತುವರೆದಿರುವ ಶೃಂಗೇರಿಯು ಕೇವಲ ಧಾರ್ಮಿಕವಾಗಿಯಲ್ಲದೆ ಪ್ರಕೃತಿಯ ಸವಿಯನ್ನು ಆಸ್ವಾದಿಸಬಯಸುವ ಪ್ರತಿಯೊಬ್ಬ ಪ್ರವಾಸಿಗನನ್ನು ತುಂಬು ಹೃದಯದಿಂದ ಆಕರ್ಷಿಸುತ್ತದೆ.
ಚಿತ್ರಕೃಪೆ: Prabhu B Doss
ತುಂಗಾ ನದಿ ತಟದಲ್ಲಿ ನೆಲೆಸಿರುವ ಶೃಂಗೇರಿಯು ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹರಿಹರ-ಬುಕ್ಕರ ಆಸ್ಥಾನದಲ್ಲಿದ್ದ ಸಂತ ವಿದ್ಯಾರಣ್ಯರು ಗುರುಗಳಾದ ವಿದ್ಯಾಶಂಕರರಿಗೆ ಗೌರವಾರ್ಥವಾಗಿ ನಿರ್ಮಿಸಿರುವ ವಿದ್ಯಾಶಂಕರ ದೇವಸ್ಥಾನಕ್ಕೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಈ ದೇಗುಲದಲ್ಲಿ ಸಾಕಷ್ಟು ಇತರೆ ದೇವೆ ದೇವತೆಯರ ಅತಿ ಸುಂದರವಾದ ಮೂರ್ತಿಗಳನ್ನು ಬಹು ಕಲಾತ್ಮಕವಾಗಿ ಕೆತ್ತಲಾಗಿರುವುದನ್ನು ಕಾಣಬಹುದು.
ನಿಮಗಿಷ್ಟವಾಗಬಹುದಾದ : ಶೃಂಗೇರಿ ಹಾಗೂ ಸುತ್ತಮುತ್ತಲು
ದೇವಾಲಯ ಮಂಟಪದ ಪೂರ್ವ ಭಾಗವು 12 ಅದ್ಭುತವಾಗಿ ಕೆತ್ತಲಾದ ಖಂಬಗಳಿಂದ ಕೂಡಿದ್ದು ಆ ಖಂಬಗಳಲ್ಲಿ ಕ್ರಮವಾಗಿ 12 ರಾಶಿಗಳನ್ನು ಕೆತ್ತಲಾಗಿದೆ. ಇದರ ವಿಶೇಷತೆ ಎಂದರೆ ವರ್ಷದ 12 ತಿಂಗಳುಗಳ ಸಂಕೇತವಾದ 12 ರಾಶಿಗಳ ಮೇಲೆ ಆಯಾ ತಿಂಗಳಕ್ಕೆ ಸಂಬಂಧಿಸಿದ ರಾಶಿಯ ಮೇಲೆ ಆಯಾ ತಿಂಗಳಿನಲ್ಲೆ ಮೊದಲ ಸೂರ್ಯ ರಶ್ಮಿಯು ಬೀಳುತ್ತದೆ.
ಚಿತ್ರಕೃಪೆ: umstwit
ದಂತ ಕಥೆಯ ಪ್ರಕಾರ, ಹಿಂದೆ ಈ ಸ್ಥಳದಲ್ಲಿ ಆದಿ ಗುರು ಶಂಕರರು ತಮ್ಮ ಶಿಷ್ಯರೊಂದಿಗೆ ತೆರಳುವಾಗ ಇಲ್ಲಿ ನಡೆದ ಒಂದು ಅಮೋಘ ಪ್ರಸಂಗಕ್ಕೆ ಸಾಕ್ಷಿಯಾದರು. ಅದರ ಪ್ರಕಾರ, ಇನ್ನಷ್ಟೆ ಸಂತಾನ ಪಡೆಯಬೇಕಿದ್ದ ಕಪ್ಪೆಯೊಂದಕ್ಕೆ ಬಿಸಿಲಿನ ತಾಪ ತಟ್ಟದ ಹಾಗೆ ಸರ್ಪವೊಂದು ಹೆಡೆ ಎತ್ತಿ ನಿಂತು ನೆರಳೊದಗಿಸಿತ್ತು. ಸ್ವಾಭಾವಿಕ ಶತ್ರುಗಳೆ ತಮ್ಮ ವೈರತ್ವ ಮರೆತಿರುವ ಇಂತಹ ಸ್ಥಳವೆ ತಮಗೆ ಉತ್ತಮ ಎಂದು ಬಗೆದ ಶಂಕರರು ಇಲ್ಲಿ 12 ವರ್ಷಗಳ ಕಾಲ ತಂಗಿ ಶಾರದಾ ಪೀಠವನ್ನು ಸ್ಥಾಪಿಸಿದರು.
ಹೆಚ್ಚಿನ ಓದಿಗೆ : ಆದಿ ಶಂಕರರು ಜನಸಿದ ಕಾಲಡಿಗೆ ಭೇಟಿ
ಚಿತ್ರಕೃಪೆ:
ಇಲ್ಲಿರುವ ಶಾರದಾಂಬೆಯ ದೇಗುಲವು ವಿದ್ಯಾ ಹಾಗೂ ಜ್ಞಾನದ ದೇವತೆಯಾದ ಶಾರದಾಂಬೆಗೆ ಮುಡಿಪಾಗಿದ್ದು, ಸಾಕಷ್ಟು ಭಕ್ತಾದಿಗಳು ವರ್ಷಪೂರ್ತಿ ದೇವಿಯ ದರ್ಶನ ಕೋರಿ ಶೃಂಗೇರಿಗೆ ಭೇಟಿ ನೀಡುತ್ತಾರೆ. ಶೃಂಗೇರಿ ಶಾರದಾ ಪೀಠವನ್ನು ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠ ಎಂತಲೂ ಕರೆಯಲಾಗುತ್ತದೆ ಹಾಗೂ ಈ ಮಠವು ಯಜುರ್ವೇದ ಪಾಲಿಸುವ ಮಠವಾಗಿದ್ದು ಸ್ಮಾರ್ತ ಸಂಪ್ರದಾಯವನ್ನು ಹೊಂದಿದೆ. ಮಠದ ಮುಖ್ಯ ಗುರುವನ್ನು ಜಗದ್ಗುರು ಶಂಕರಾಚಾರ್ಯ ಎಂಬ ನಾಮಾಂಕಿತದಿಂದ ಸಂಭೋದಿಸಲಾಗುತ್ತದೆ.
ಚಿತ್ರಕೃಪೆ: Philanthropist 1
ಮಠದ ಜಗದ್ಗುರುಗಳು ವಿದ್ಯಾಶಂಕರ ದೇಗುಲದ ಪಕ್ಕದಲ್ಲಿ ಹರಿದಿರುವ ತುಂಗಾ ನದಿಯ ಇನ್ನೊಂದು ದಂಡೆಯಲ್ಲಿ ವಾಸಿಸುತ್ತಾರೆ ಹಾಗೂ ಆ ಸ್ಥಳವನ್ನು ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಮೂಲಕವಾಗಿ ಸಾಗಿ ತಲುಪಬಹುದು. ಸೇತುವೆಯ ಮೇಲಿಂದ ತುಂಗಾ ನದಿಯ ಪ್ರದೇಶ ಹಾಗೂ ದಂಡೆಯಲ್ಲಿ ಭಕ್ತರು ನೀಡುವ ಆಹಾರವನ್ನು ತಿನ್ನಲು ಕುರಿ ಹಿಂಡಿನಂತೆ ಮುಕುರುವ ದೇವರು ಮೀನುಗಳ ದೃಶ್ಯವನ್ನು ಅದ್ಭುತವಾಗಿ ಸವಿಯಬಹುದು. ಗಮನಿಸಬೇಕಾದ ವಿಷಯವೆಂದರೆ ಇಲ್ಲಿ ಯಾರು ಮೀನುಗಳನ್ನು ಹಿಡಿಯುವಂತಿಲ್ಲ.
ನಿಮಗಿಷ್ಟವಾಗಬಹುದಾದ : ಸಮ್ಮೋಹನಗೊಳಿಸುವ ಚುಂಚನಕಟ್ಟೆ ಜಲಪಾತ
ಇನ್ನೂ ಶೃಂಗೇರಿಯ ಸನೀಹದಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅವುಗಳಲ್ಲೊಂದಾಗಿದೆ ಸಿರಿಮನೆ ಜಲಪಾತ. ಶೃಂಗೇರಿಯಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಈ ಜಲಪಾತ ತಾಣವನ್ನು ಕಿಗ್ಗ ಎಂಬ ಹಳ್ಳಿಯ ಮೂಲಕ ಸಾಗಿ ನಿರಾಯಾಸವಾಗಿ ತಲುಪಬಹುದು. ಕಿಗ್ಗವು ಶೃಂಗೇರಿಯಿಂದ 9 ಕಿ.ಮೀ ದೂರವಿದ್ದು ಅಲ್ಲಿಂದ ಸಿರಿಮನೆ ಜಲಪಾತ ಕೇಂದ್ರವು 5 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.
ಚಿತ್ರಕೃಪೆ: Vaikoovery
ಪಶ್ಚಿಮ ಘಟ್ಟಗಳ ಸುಂದರವಾದ ಕಾಡು ಪ್ರದೇಶಗಳ ಮಧ್ಯದಲ್ಲಿ ನೆಲೆಸಿರುವ ಸಿರಿಮನೆ ಜಲಪಾತ ಖಂಡಿತವಾಗಿಯೂ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಈ ಜಲಪಾತವು ಕೆಳ ಭಾಗದಲ್ಲಿ ನೆಲೆಸಿದ್ದು ನೀವು ನಿಮ್ಮ ವಾಹನಗಳನ್ನು ನಿಲ್ಲಿಸಿ ನಿಧಾನವಾಗಿ ಕೆಳಗಿಳಿಯುತ್ತ ಜಲಪಾತ ತಲುಪಬಹುದು. ಇಳಿಯುವುದು ಸುಲಭವಾಗಿದ್ದು ಮಳೆಗಾಲದ ಸಮಯದಲ್ಲಿ ಜಾರುವಿಕೆಯಿರುವುದರಿಂದ ಜಾಗೃತರಾಗಿರಬೇಕು. ಅಲ್ಲದೆ ರಕ್ತ ಹೀರುವ ಜಿಗಣೆಗಳು ಇಲ್ಲಿ ಸಾಕಷ್ಟಿರುವುದರಿಂದ ಎಚ್ಚರಿಕೆ ವಹಿಸುವುದು ಅವಶ್ಯ.
ಚಿತ್ರಕೃಪೆ: Neelima v
ಇಳಿಯುತ್ತ ಇಳಿಯುತ್ತ ಸಾಗುತ್ತಿರುವಂತೆ ಜಲಪಾತದ ಸುಶ್ರಾವ್ಯವಾದ ಜಲದ ಸದ್ದು ಕೀವಿಗಳಲ್ಲಿ ಹೊಕ್ಕಿ ರೋಮಾಂಚನವನ್ನುಂಟು ಮಾಡುತ್ತದೆ. ಯಾವಾಗ ಜಲಪಾತ ಕಾಣುತ್ತದೊ ಎಂಬ ಚಂಚಲವಾದ ಹಂಬಲ ಮನದಲ್ಲುಂಟಾಗುತ್ತದೆ. ಒಂದೊಮ್ಮೆ ಜಲಪಾತ ಕಾಣಿಸಿದಾಗ ನಿಮ್ಮೆಲ್ಲ ಅವಸರಕ್ಕೆ ಪರಿಹಾರ ದೊರಕುತ್ತದೆ ಹಾಗೂ ಆ ದೃಶ್ಯವು ನಿಮ್ಮ ಮನದಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ. ಹಾಗಾದರೆ ನೀವು ಒಮ್ಮೆ ಹೋಗಿ ಬನ್ನಿ ಸಿರಿಮನೆಗೆ. ಶೃಂಗೇರಿಗೆ ತೆರಳಲು ಬೆಂಗಳೂರು, ಮಂಗಳೂರುಗಳಿಂದ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಲಭ್ಯವಿದೆ. ಶೃಂಗೇರಿಯು ಬೆಂಗಳೂರಿನಿಂದ ಹಾಗೂ ಮಂಗಳೂರಿನಿಂದ ಕ್ರಮವಾಗಿ 322 ಕಿ.ಮೀ ಹಾಗೂ 120 ಕಿ.ಮೀ ಗಳಷ್ಟು ದೂರದಲ್ಲಿದೆ.