ಹೊಯ್ಸಳರ ಕಾಲದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ಜಿಲ್ಲೆ ಹಾಸನ. ಇಂದು ಈ ತಾಣ ಹೊಯ್ಸಳರ ವಾಸ್ತುಶಿಲ್ಪದಿಂದ ಜಗತ್ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಅನೇಕ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಶಿಲ್ಪಕಲೆಯ ಆಗರಗಳು ಗುರುತಿಸಲ್ಪಟ್ಟಿವೆ. ಐತಿಹಾಸಿಕ ಪ್ರದೇಶಗಳ ಜೊತೆ ಆರ್ಥಿಕ, ತಾಂತ್ರಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದೆ. ಈ ಸುಂದರ ಜಿಲ್ಲೆಯಲ್ಲಿ ನೋಡಬಹುದಾದಂತಹ ಅನೇಕ ತಾಣಗಳಿವೆ.
ಈ ತಾಣ ಬೆಂಗಳೂರಿನಿಂದ 182.6 ಕಿ.ಮೀ. ವ್ಯಾಪ್ತಿಯಲ್ಲಿದೆ. ಹಿತಕರವಾದ ವಾತಾವರಣ ಇರುವುದರಿಂದ ವರ್ಷದ ಎಲ್ಲಾ ಕಾಲದಲ್ಲೂ ಪ್ರವಾಸ ಕೈಗೊಳ್ಳಬಹುದು. ಕುಟುಂಬದವರೊಡನೆ, ಸ್ನೇಹಿತರೊಡನೆ ಅಥವಾ ಪ್ರೇಮಿಗಳಾಗಿ ಬಂದರೂ ಸ್ವಾಗತಿಸುವ ಈ ತಾಣದ ಸೊಬಗನ್ನು ಸವಿಯುವುದೇ ಒಂದು ಚೆಂದ. ಇಲ್ಲಿಗೆ ಒಮ್ಮೆ ಬಂದರೆ ತಪ್ಪದೆ ವೀಕ್ಷಿಸಬೇಕಾದ ತಾಣಗಳ ಬಗ್ಗೆ ತಿಳಿಯೋಣ...
ಬಾಹುಬಲಿ
ಶ್ರವಣಬೆಳಗೊಳದಲ್ಲಿ ಇರುವ ಈ ಬಾಹುಬಲಿ ಪ್ರತಿಮೆ 58 ಅಡಿ ಎತ್ತರದವನ್ನು ಹೊಂದಿದೆ. ಈ ಏಕಶಿಲಾ ಬಾಹುಬಲಿ ಪ್ರತಿಮೆಯನ್ನು ಚಾಮುಂಡರಾಯ ಕೆತ್ತಿಸಿದನು. ಜೈನರ ಪವಿತ್ರ ಕ್ಷೇತ್ರವಾದ ಇಲ್ಲಿ 12 ವರ್ಷಕ್ಕೊಮ್ಮೆ ಮಸ್ತಕಾಭಿಷೇಕವನ್ನು ನೆರವೇರಿಸಲಾಗುತ್ತದೆ. ಇದು ಗಿರಿ ಪ್ರದೇಶದಲ್ಲಿ ಇರುವುದರಿಂದ ಚಾರಣ ಪ್ರಿಯರಿಗೊಂದು ಸ್ವರ್ಗ ತಾಣ.
PC: wikipedia.org
ಕೇದಾರೇಶ್ವರ ದೇಗುಲ
ಹಳೆಬೀಡು ದೇಗುಲಕ್ಕೆ ಸಮೀಪದಲ್ಲಿರುವ ಈ ದೇವಸ್ಥಾನ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯದಲ್ಲಿ ಹೊಯ್ಸಳರ ಲಾಂಛನಗಳಿರುವುದನ್ನು ಕಾಣಬಹುದು. ಮನೋಹರವಾಗಿ ಕೆತ್ತಿದ ಗೋಡೆಗಳು, ಛಾವಣಿಗಳು, ಮಹಾಭಾರತ, ರಾಮಾಯಣಕ್ಕೆ ಸಂಬಂಧಿಸಿದ ಕೆತ್ತನೆಗಳಿರುವುದನ್ನು ಕಾಣಬಹುದು.
PC: wikipedia.org
ಶೆಟ್ಟಿಹಳ್ಳಿ ರೋಸರಿ ಚರ್ಚ್
ಶೆಟ್ಟಿಹಳ್ಳಿಯಿಂದ 22 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ಚರ್ಚ್ಅನ್ನು 1860ರಲ್ಲಿ ಫ್ರೆಂಚ್ ಪಾದ್ರಿಗಳು ನಿರ್ಮಿಸಿದರು ಎನ್ನಲಾಗುತ್ತದೆ. ಇದು ಗೋಥಿಕ್ ವಿನ್ಯಾಸದಲ್ಲಿ ರಚನೆಗೊಂಡಿದೆ. ಹೇಮಾವತಿ ನದಿ ದಂಡೆಯ ಮೇಲೆ ನಿಂತಿರುವುದರಿಂದ ಪ್ರವಾಸಿಗರಿಗೊಂದು ವಿಶೇಷ ಆಕರ್ಷಣಾ ಸ್ಥಳವಾಗಿದೆ. ಮಳೆಗಾಲದಲ್ಲಿ ಅತಿ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
PC: wikipedia.org
ಲಕ್ಷ್ಮಿ ನರಸಿಂಹ ದೇವಾಲಯ
13ನೇ ಶತಮಾನದಲ್ಲಿ ನಿರ್ಮಾಣಗೊಂಡ ಭವ್ಯ ದೇಗುಲ ಇದು. 1246ರಲ್ಲಿ ಬೊಮ್ಮನ ದಂಡನಾಯಕ ನಿರ್ಮಿಸಿದ ಎನ್ನಲಾಗುತ್ತದೆ. ಹಾಸನದಿಂದ 50 ಕಿ.ಮೀ. ದೂರದಲ್ಲಿರುವ ಈ ತಾಣ ವಿಶಿಷ್ಟ ಕೆತ್ತನೆಗಳಿಂದ ಕೂಡಿದೆ. ಕಲ್ಲಿನಲ್ಲೇ ನಿರ್ಮಾಣಗೊಂಡ ಈ ದೇಗುಲ ಹೊಯ್ಸಳರ ಸುಂದರ ಕಲಾಕೃತಿಗೆ ಕನ್ನಡಿ ಹಿಡಿಯುತ್ತದೆ.
PC: wikipedia.org
ಚಂದ್ರಗಿರಿ ಬೆಟ್ಟ
ಶ್ರವಣ ಬೆಳಗೊಳದಲ್ಲಿರುವ ಜೈನರ ಪವಿತ್ರ ಕ್ಷೇತ್ರವಿದು. ಇಲ್ಲಿ ಜೈನ ಧರ್ಮದ ಕೆಲವು ಸ್ಮಾರಕಗಳು, ಬಸದಿಗಳು, ಶಾಸನಗಳು, ಗೊಮ್ಮಟ ಹಾಗೂ ಸ್ತಂಭಗಳು ಇವೆ. ಪುಟ್ಟ ಬೆಟ್ಟದ ಮೇಲಿರುವ ಈ ತಾಣ ಹಾಸನ ಜಿಲ್ಲೆಯ ಪ್ರಮುಖ ಆಕರ್ಷಣ ಸ್ಥಳಗಳಲ್ಲೊಂದು.
PC: wikipedia.org
ಬಿಸಲೆ ಘಾಟಿ
ಸಕಲೇಶಪುರದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಈ ತಾಣ ಬಿಸಿಲೆ ಎಂಬ ಗ್ರಾಮದಲ್ಲಿದೆ. ಈ ಗ್ರಾಮದಿಂದ 1 ಕಿ.ಮೀ. ದೂರದಲ್ಲಿ ಅರಣ್ಯ ಇಲಾಖೆ ವೀಕ್ಷಣಾ ಗೋಪುರವನ್ನು ನಿರ್ಮಿಸಿದೆ. ಮಳೆಗಾಲವನ್ನು ಹೊರತು ಪಡಿಸಿ ಉಳಿದ ಎಲ್ಲಾ ಕಾಲದಲ್ಲೂ ಇಲ್ಲಿ ನಿಂತು ಸುಂದರ ಪರಿಸರದ ದೃಶ್ಯವನ್ನು ಸೆರೆ ಹಿಡಿಯಬಹುದು.
PC: wikipedia.org
ಹೇಮಾವತಿ ಅಣೆಕಟ್ಟು
ಹಾಸನ ಜಿಲ್ಲೆಯ ಗೋರೂರಿನಲ್ಲಿ ಹೇಮಾವತಿ ನದಿಗೆ ಅಡ್ಡವಾಗಿ ಅಣೆಕಟ್ಟನ್ನು ಕಟ್ಟಲಾಗಿದೆ. ಇದು 245 ಕಿ.ಮೀ. ಉದ್ದ ಹಾಗೂ 5410 ಕಿ.ಮೀ. ಕಾಲುವೆ ಪ್ರದೇಶವನ್ನು ಒಳಗೊಂಡಿದೆ.
PC: wikipedia.org
ಬುಚೇಶ್ವರ ದೇಗುಲ
ಕೊರವಂಗಳದಲ್ಲಿರುವ ಬುಚೇಶ್ವರ ದೇಗುಲ 12ನೇ ಶತಮಾನದ್ದು. ಹೊಯ್ಸಳರ ಶೈಲಿಯಲ್ಲಿ ನಿರ್ಮಾಣಗೊಂಡ ಈ ದೇಗುಲ ಹಾಸನ ನಗರದಿಂದ 10 ಕಿ.ಮೀ. ದೂರದಲ್ಲಿದೆ. ಪುರಾತತ್ವ ಇಲಾಖೆಯು ಈ ದೇಗುಲದ ಸಂರಕ್ಷಣೆಯನ್ನು ಮಾಡಿದೆ. ಅಪರೂಪದ ಸೂಕ್ಷ್ಮ ಕಲಾಕೃತಿಯ ಕೆತ್ತನೆಯನ್ನು ಹೊಂದಿರುವ ಈ ದೇಗುಲ ಹಾಸನ ಜಿಲ್ಲೆಯ ಪ್ರಮುಖ ಆಕರ್ಷಣಾ ಕೇಂದ್ರ.
PC: wikipedia.org