ಶಿರಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಒಂದು ತಾಲೂಕು ಕೇಂದ್ರ. ಇದು ಪ್ರಶಾಂತ ಪರಿಸರ ಹಾಗೂ ಹಚ್ಚ ಹಸಿರಿನ ಕಾಡಿಗೆ ಪ್ರಸಿದ್ಧಿಪಡೆದಿದೆ. ಕಾಡಿನ ಮಧ್ಯೆ ಧುಮುಕುವ ಜಲಪಾತಗಳು, ಪುರಾತನ ದೇವಾಲಯಗಳು ಇಲ್ಲಿ ಹಲವಾರಿವೆ. ಚಾರಣ ಪ್ರಿಯರಿಗೆ ತವರಾದ ಈ ತಾಣ ಸುರಕ್ಷಿತ ಪ್ರದೇಶವೂ ಹೌದು. ಬೆಂಗಳೂರಿನಿಂದ 404.8 ಕಿ.ಮೀ. ದೂರ ಇರುವುದರಿಂದ ವಾರದ ರಜೆಯಲ್ಲಿ ಗೊಂದಲವಿಲ್ಲದೆ ಬರಬಹುದು.
ಬೆಂಗಳೂರಿನಿಂದ ಶಿರಸಿಗೆ ಬಹಳಷ್ಟು ಬಸ್ವ್ಯವಸ್ಥೆಗಳಿವೆ. ಒಮ್ಮೆ ಶಿರಸಿಗೆ ಬಂದು ಇಳಿದರೆ, ಅನುಕೂಲಕರ ದರದಲ್ಲೇ ಶಿರಸಿ ಸಿರಿಯನ್ನು ನೋಡಬಹುದು. ಇಲ್ಲಿ ವಸತಿ ವ್ಯವಸ್ಥೆಯೂ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು. ಶಿರಸಿ ಸಿಟಿಯಲ್ಲಿಯೇ ಅನೇಕ ಹೋಟೆಲ್ ಮತ್ತು ರೆಸಾರ್ಟ್ಗಳಿವೆ.
ಮಾರಿಕಾಂಬ ದೇಗುಲ
17ನೇ ಶತಮಾನದ ಇತಿಹಾಸವನ್ನು ಹೊಂದಿರುವ ಈ ದೇಗುಲ ಶಿರಸಿಯ ಹೃದಯ ಭಾಗದಲ್ಲಿದೆ. ಇಲ್ಲಿರುವ ಏಳು ಅಡಿ ಎತ್ತರದ ಮರದ ದೇವಿ ವಿಗ್ರಹಕ್ಕೆ ಭಕ್ತರು ಪೂಜೆ ಮಾಡಬಹುದು. ಇಲ್ಲಿ ಎರಡು ವರ್ಷಕ್ಕೊಮ್ಮೆ ಅದ್ದೂರಿಯಿಂದ ಜಾತ್ರೆ ಮಾಡಲಾಗುತ್ತದೆ. ಮಂದಿಯ ಸಂಕಷ್ಟಗಳನ್ನು ಬಗೆಹರಿಸುವ ಈ ತಾಯಿಗೆ ಭಕ್ತರ ಹರಿವು ಅಪಾರ.
PC: wikipedia.org
ಬನವಾಸಿ ದೇಗುಲ
9ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇಗುಲ ವರದಾ ನದಿಯ ತಟದಲ್ಲಿದೆ. ಬನ ಮತ್ತು ವಾಸಿ ಎಂಬ ಪದಗಳಿಂದ ಬನವಾಸಿ ಎಂದು ಕರೆಯುತ್ತಾರೆ. ಕಾಡು ಮತ್ತು ವಸಂತ ಎನ್ನುವ ಅರ್ಥವನ್ನು ನೀಡುತ್ತದೆ. ಮಧುಕೇಶ್ವರ ದೇವರ ಆರಾಧನೆ ಮಾಡಲಾಗುಗುತ್ತದೆ. ಈ ದೇವರಿಗೆ ನಡೆದುಕೊಳ್ಳುವ ಭಕ್ತರ ಸಂಖ್ಯೆಯೂ ಅಪಾರ.
PC: wikipedia.org
ಉಂಚಳ್ಳಿ ಜಲಪಾತ
ಶಿರಸಿಗೆ 30 ಕಿ.ಮೀ. ದೂರದಲ್ಲಿರುವ ಉಂಚಳ್ಳಿ ಜಲಪಾತ ಸಿದ್ಧಾಪುರ ತಾಲೂಕಿನಲ್ಲಿ ಬರುತ್ತದೆ. ಇದನ್ನು ಲುಶಿಂಗ್ಟನ್ ಜಲಪಾತ ಎಂತಲೂ ಕರೆಯುತ್ತಾರೆ. ಅಘನಾಶಿನಿ ನದಿಯಿಂಂದ ಹುಟ್ಟುವ ಈ ಜಲಪಾತವು 381 ಅಡಿ ಎತ್ತರದಿಂದ ಧುಮುಕುತ್ತದೆ.
PC: wikipedia.org
ಸಹಸ್ರಲಿಂಗ
ಹೆಸರೇ ಹೇಳುವ ಹಾಗೆ ಸಾವಿರಾರು ಶಿವಲಿಂಗಗಳಿವೆ. ಈ ಪ್ರದೇಶವನ್ನು ಯಾತ್ರಿಕರು ಒಮ್ಮೆ ನೋಡಲೇ ಬೇಕಾದ ಸುಂದರ ತಾಣ. ಶಿರಸಿಯಿಂದ 10.ಕಿ.ಮೀ ದೂರದಲ್ಲಿರುವ ಈ ಪ್ರದೇಶಕ್ಕೆ ಮಹಾ ಶಿವರಾತ್ರಿಯಲ್ಲಿ ಅನೇಕ ಜನರು ಬರುತ್ತಾರೆ. ಶಾಲ್ಮಲ ನದಿಯ ತೀರದಲ್ಲಿ ಬರುವ ಈ ತಾಣ ಭಕ್ತಸಮೂಹಕ್ಕೊಂದು ವರದಾನದ ಪ್ರದೇಶ.
PC: wikipedia.org
ಮಂಜುಗುಣಿ ದೇಗುಲ|
ಸುಂದರವಾದ ಪ್ರಕೃತಿ ಮಧ್ಯದಲ್ಲಿರುವ ಈ ಕ್ಷೇತ್ರ ಶಿರಸಿಯಿಂದ 23 ಕಿ.ಮೀ. ದೂರದಲ್ಲಿದೆ. ಈ ದೇವಾಲಯದಲ್ಲಿ ವೆಂಕಟರಮಣನನ್ನು ಆರಾಧಿüಸಲಾಗುತ್ತದೆ. ಈ ದೇವರ ಮೂರ್ತಿ 1300 ವರ್ಷಗಳಷ್ಟು ಹಳೆಯದ್ದು ಎನ್ನಲಾಗುತ್ತದೆ. ಅನೇಕ ಭಕ್ತರ ಆಕರ್ಷಣೆಗೆ ಒಳಗಾದ ಈ ದೇವಸ್ಥಾನವನ್ನು ಕರ್ನಾಟಕದ ತಿರುಪತಿ ಮತ್ತು ಚಿಕ್ಕ ತಿರುಪತಿ ಎಂತಲೂ ಕರೆಯುತ್ತಾರೆ.
ಬೆಣ್ಣೆ ಹೊಳೆ ಜಲಪಾತ
ಪಶ್ಚಿಮ ಘಟ್ಟದಲ್ಲಿ ಹರಿಯುವ ಅಘನಾಶಿನಿ ನದಿಯಿಂದ ಜನ್ಮವೆತ್ತ ಜಲಪಾತವೇ ಬೆಣ್ಣೆ ಹೊಳೆ ಜಲಪಾತ. ಉತ್ತರ ಕನ್ನಡದಲ್ಲಿ ಇರುವ ಸುಂದರ ಜಲಪಾತಗಳಲ್ಲಿ ಬೆಣ್ಣೆ ಹೊಳೆ ಜಲಪಾತವೂ ಒಂದು. ಇದು ಸುಮಾರು 200 ಅಡಿ ಎತ್ತರದಿಂದ ಧುಮುಕುತ್ತದೆ. ಶಿರಸಿಯಿಂದ 21 ಕಿ.ಮೀ. ದೂರದಲ್ಲಿದೆ.
ಬುರಡೆ ಜಲಪಾತ
ಶಿರಸಿಯಿಂದ 55 ಕಿ.ಮೀ. ಹಾಗೂ ಸಿದ್ಧಾಪುರದಿಂದ 20 ಕಿ.ಮೀ ದೂರದಲ್ಲಿದೆ ಈ ಜಲಪಾತ. ಶಾಂತವಾದ ಪ್ರಕೃತಿಯ ಮಡಿಲಲ್ಲಿದೆ. ಮಳೆಗಾಲದಲ್ಲಿ ಇದರ ಆರ್ಭಟ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಇಲ್ಲಿಗೆ ಬರಲು ಸ್ವಲ್ಪ ಕಷ್ಟ.