ನಮ್ಮ ಪ್ರವಾಸಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಜಲಪಾತಗಳು. ಮಳೆಗಾಲದ ಅವಧಿಯಲ್ಲಿ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಈ ತಾಣಗಳನ್ನು ಕಣ್ಣಾರೆ ಕಂಡು ಆನಂದಿಸಬೇಕು ಎಂದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ನಮ್ಮ ಭಾರತ ದೇಶದಲ್ಲಿ ಹಲವಾರು ಜಲಪಾತಗಳಿವೆ. ಪ್ರಸ್ತುತ ಲೇಖನದಲ್ಲಿ ನಮ್ಮ ಕರುನಾಡಿನಲ್ಲಿನ ಸುಂದರವಾದ ಜಲಪಾತಗಳ ಬಗ್ಗೆ ತಿಳಿಯೊಣ. ಒಮ್ಮೆ ಈ ಜಲಪಾತಗಳಿಗೆಲ್ಲಾ ಭೇಟಿ ನೀಡಿ.
ಭಾರತ ದೇಶದಲ್ಲಿಯೇ ಈ ಒಂದೇ ಸ್ಥಳದಲ್ಲಿ ಕಾಣಿಸುವ ವಿಚಿತ್ರ!
ನಮ್ಮ ಕರ್ನಾಟಕದಲ್ಲಿ ಜಲಪಾತಗಳಿಗೇನು ಕಡಿಮೆ ಇಲ್ಲ ಎಂದೇ ಹೇಳಬಹುದು. ಒಂದಕ್ಕಿಂದ ಒಂದು ಜಲಪಾತ ಸಮೃದ್ಧವಾಗಿ ಹಾಗು ಆಕಾಶದಿಂದ ಧರೆಗೆ ಇಳಿಯುತ್ತಿರುವ ಹಾಲು ನೊರೆಯಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೆಲವು ಜಲಪಾತಗಳು ನಿಮಗೆ ತಿಳಿದಿದ್ದರು ಇನ್ನೂ ಹಲವಾರು ಜಲಪಾತಗಳ ಬಗ್ಗೆ ನಿಮಗೆ ಮಾಹಿತಿ ತಿಳಿದಿಲ್ಲ. ಆ ತಾಣಗಳು ಕೂಡ ನಿಮ್ಮನ್ನು ಕೈಬೀಸಿ ಕರಿಯುತ್ತಿದೆ. ಒಂದಕ್ಕಿಂತ ಒಂದು ಜಲಪಾತ ಅತ್ಯಂತ ಮನೋಹರವಾಗಿದೆ. ಹಾಗಾದರೆ ಆ ಜಲಪಾತಗಳು ಯಾವುವು? ಎಂಬುದನ್ನು ಲೇಖನದ ಮೂಲಕ ತಿಳಿಯಿರಿ.
ಗೊಡಚಿನಮಲ್ಕಿ
ಈ ಸುಂದರವಾದ ಜಲಪಾತವಿರುವುದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಬಳಿಯಲ್ಲಿ. ಈ ಜಲಪಾತವನ್ನು ಕಾಣಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಈ ಜಲಪಾತದ ಸೊಬಗನ್ನು ಕಾಣಲು 2 ಕಣ್ಣುಸಾಲದು. ಸ್ವರ್ಗವೇ ಧರೆಗೆ ಇಳಿದ ಹಾಗೆ ಗೋಚರಿಸುವ ಈ ಜಲಪಾತಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ. ಮೆಟ್ಟಿಲುಗಳ ಆಕಾರದಲ್ಲಿ ಹರಿಯುತ್ತ ಕೊನೆಯದಾಗಿ ರಭಸದಿಂದ ಭೂಮಿಗೆ ಇಳಿಯುವ ದೃಶ್ಯ ಮನಮೋಹಕವಾದುದು.
ಸೊಗಲ್ ಜಲಪಾತ
ಸೊಗಲ್ ಬೆಳಗಾವಿ ಜಿಲ್ಲೆಯಲ್ಲಿರುವ ಒಂದು ಪವಿತ್ರವಾದ ಯಾತ್ರಾ ಸ್ಥಳವಾಗಿದೆ. ಈ ಪವಿತ್ರವಾದ ಸ್ಥಳಕ್ಕೆ ಒಂದು ಸ್ಥಳ ಪುರಾಣವು ಕೂಡ ಇದೆ. ಅದೇನೆಂದರೆ ಸುಗೊಳ ಎಂಬ ಮುನಿ ಒಂದು ಕಾಲದಲ್ಲಿ ಈ ಸ್ಥಳದಲ್ಲಿ ನೆಲೆಸಿದ್ದರಂತೆ. ಹಾಗಾಗಿಯೇ ಈ ಸ್ಥಳಕ್ಕೆ ಸೊಗಲ್ ಎಂದು ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಮತ್ತೊಂದು ಸ್ಥಳ ಪುರಾಣದ ಪ್ರಕಾರ ಈ ಸ್ಥಳವು ಶಿವ ಹಾಗು ಪಾರ್ವತಿ ವಿವಾಹವಾದ ಸ್ಥಳ ಎಂದು ಹೇಳಲಾಗುತ್ತದೆ. ಈ ಪುಣ್ಯ ಸ್ಥಳದಲ್ಲಿಯೂ ಸುಂದರವಾದ ಒಂದು ಜಲಪಾತವನ್ನು ಕಾಣಬಹುದಾಗಿದೆ.
ಸಾತೋಡಿ ಜಲಪಾತ
ಚಿತ್ರ ನೋಡುತ್ತಿದ್ದಂತೆ ಈ ಸ್ಥಳಕ್ಕೆ ತೆರಳಲೇಬೇಕು ಎಂದು ನಿಮಗೆ ಅನಿಸದೇ ಇರದು. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮರುಳಾಗದೆ ಯಾರು ಇರಲಾರರು. ಈ ಸುಂದರವಾದ ಜಲಪಾತವಿರುವುದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಕಲ್ಲರಮನೆ ಘಾಟ್ ಸಮೀಪದಲ್ಲಿ. ಈ ಜಲಪಾತವು ಸುಮಾರು 50 ಅಡಿಗಳಷ್ಟು ಎತ್ತರದಿಂದ ಹಾಲಿನ ನೊರೆಯಂತೆ ಧುಮುಕುತ್ತದೆ.
ಮಲ್ಲಳ್ಳಿ ಜಲಪಾತ
ಈ ಅದ್ಭುತವಾದ ಜಲಪಾತವು ಸ್ವರ್ಗದಿಂದ ಧರೆಗೆ ಇಳಿಯುತ್ತಿರುವ ಗಂಗಾ ಮಾತೆಯಂತೆ ಕಾಣುತ್ತದೆ. ಕೊಡಗು ಜಿಲ್ಲೆಯಲ್ಲಿರುವ ಈ ಸುಂದರವಾದ ಜಲಪಾತವನ್ನು ಕಾಣಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪುಷ್ಪಗಿರಿ ಬೆಟ್ಟಗಳ ತುದಿಯಲ್ಲಿ ಈ ಜಲಪಾತವಿದ್ದು, ಸೋಮವಾರ ಪೇಟೆಯಿಂದ ಸುಮಾರು 25 ಕಿ.ಮೀ ಗಳಷ್ಟು ಅಂತರದಲ್ಲಿದೆ.
ಚುಂಚಿ ಜಲಪಾತ
ಈ ಚುಂಚಿ ಬೆಂಗಳೂರು ನಗರ ಪ್ರದೇಶದಿಂದ ಸುಮಾರು 85 ಕಿ.ಮೀ ದೂರದಲ್ಲಿ (ಬೆಂಗಳೂರು ಗ್ರಾಮಾಂತರ)ದಲ್ಲಿ ಚುಂಚಿ ಎಂಬ ಹಳ್ಳಿಯಲ್ಲಿ ಈ ಅದ್ಭುತವಾದ ಜಲಪಾತವಿದೆ. ಮೇಕೆದಾಟುವಿನ ಮೇಲೆ ಸುಮಾರು 6 ಕಿ.ಮೀ ದೂರದಲ್ಲಿದೆ ಈ ಚುಂಚಿ ಜಲಪಾತ.
ಮುತ್ಯಾಲಮಡುವು ಜಲಪಾತ
ಈ ಸುಂದರವಾದ ಜಲಪಾತವು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ ಆನೇಕಲ್ ತಾಲ್ಲೂಕಿನ ಮುತ್ಯಾಲ ಮಡುವು ಎಂಬ ಆಕರ್ಷಕವಾದ ಪ್ರವಾಸಿ ತಾಣವಿದೆ. ಆ ಸ್ಥಳದಲ್ಲಿಯೇ ಈ ಜಲಪಾತವಿದೆ. ಈ ಜಲಪಾತವನ್ನು ಕಂಡು ಆನಂದಿಸಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
ಚೆಲಾವರ ಜಲಪಾತ
ಈ ಅದ್ಭುತವಾದ ಚೆಲಾವರ ಜಲಪಾತವು ಅಪ್ಸರೆಯರು ಬಂದು ಇಲ್ಲಿ ಸ್ನಾನ ಮಾಡುವ ಹಾಗೆ ಕಾಣುತ್ತದೆ. ಇದರ ಅಂದ ಚೆಂದಕ್ಕೆ ಮನಸೋಲದೇ ಯಾರು ಇರಲಾರರು. ಕೊಡಗಿನ ವಿರಾಜಪೇಟೆಯಿಂದ ಸುಮಾರು 16 ಕಿ.ಮೀ ದೂರದಲ್ಲಿ ಚೆಲಾವರ ಜಲಪಾತವಿದೆ. ಹಚ್ಚ ಹಸಿರಿನ ವಾತಾವರಣದಿಂದ ಕಂಗೊಳಿಸುತ್ತಿರುವ ಈ ಜಲಪಾತವು ಪ್ರಾಶಾಂತವಾಗಿರುತ್ತದೆ.
ಒನಕೆ ಅಬ್ಬಿ ಜಲಪಾತ
ಈ ಒನಕೆ ಅಬ್ಬಿ ಎಂಬ ಮನಮೋಹಕವಾದ ಜಲಪಾತವು ಸುಮಾರು 400 ಅಡಿಗಳಷ್ಟು ಎತ್ತರದಿಂದ ಧರೆಗೆ ಧುಮುಕುತ್ತದೆ. ಈ ಸುಂದರವಾದ ಜಲಪಾತವನ್ನು ಆಗುಂಬೆಯ ಪಶ್ಚಿಮ ಘಟ್ಟದಲ್ಲಿ ಕಾಣಬಹುದಾಗಿದೆ. ಈ ಪಶ್ಚಿಮ ಘಟ್ಟ ಅತ್ಯಂತ ದಟ್ಟವಾದ ಕಾಡು, ಇಲ್ಲಿಂದ ಸುಮಾರು 5 ಕಿ.ಮೀ ದೂರದಲ್ಲಿ ಈ ಜಲಪಾತವನ್ನು ಕಾಣಬಹುದಾಗಿದೆ. ಟ್ರೆಕ್ಕಿಂಗ್ ಪ್ರೇಮಿಗಳು ಈ ತಾಣವನ್ನು ಆಯ್ದುಕೊಳ್ಳಬಹುದಾಗಿದೆ.
ಬರ್ಕಣ ಜಲಪಾತ
ಈ ಅದ್ಭುತವಾದ ಜಲಪಾತವು ಕೂಡ ಪಶ್ಚಿಮ ಘಟ್ಟದ ಆಗುಂಬೆಯಲ್ಲಿಯೇ ಇದ್ದು, 2 ಸುಂದರವಾದ ಜಲಪಾತವನ್ನು ಒಂದೇ ಸ್ಥಳದಲ್ಲಿ ಕಂಡು ಅಸ್ವಾಧಿಸಬಹುದಾಗಿದೆ. ಈ ಜಲಾಪತವು ನಯನ ಮನೋಹರವಾದ ದಟ್ಟ ಅರಣ್ಯದ ಮಧ್ಯೆಯಲ್ಲಿ ಕಾಣಬಹುದಾಗಿದೆ. ಸುಮಾರು 850 ಅಡಿ ಎತ್ತರದಿಂದ ಧುಮುಕುವ ಈ ಸುಂದರವಾದ ಜಲಪಾತವು ದೂರದಿಂದ ಪ್ರಕೃತಿಯ ಭವ್ಯವಾದ ಸೌಂದರ್ಯವನ್ನು ಕೂಡ ಅಸ್ವಾಧಿಸಬಹುದಾಗಿದೆ.
ಕೂಡ್ಲು ತೀರ್ಥ ಜಲಪಾತ
ಈ ಸುಂದರವಾದ ಕೂಡ್ಲು ತೀರ್ಥವು ಕೂಡ ಆಗುಂಬೆಯಲ್ಲಿದೆ. ಹೆಬ್ರಿಯಿಂದ ಸುಮಾರು 20 ಕಿ.ಮೀ ದೂರದಲ್ಲಿ ಈ ಅದ್ಭುತವಾದ ಜಲಪಾತವನ್ನು ಕಾಣಬಹುದು. ಆಗುಂಬೆಯ ದಟ್ಟವಾದ ಕಾಡಿನ ಮಧ್ಯೆ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಅತಿ ರಮಣೀಯ ಪ್ರವಾಸಿ ತಾಣವೇ ಈ ಕೂಡ್ಲು ತೀರ್ಥ.
ಅಣಶಿ ಜಲಪಾತ
ಅಣಶಿ ಜಲಪಾತವು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುತ್ತದೆ. ಈ ಜಲಪಾತವು ಸುಮಾರು 150 ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ. ಈ ಸುಂದರವಾದ ಜಲಪಾತವಿರುವುದು ಕಾರವರ-ದಾಂಡೇಲಿ ಹೆದ್ದಾರಿಯಲ್ಲಿ. ಕಾರವಾರದಿಂದ ಸುಮಾರು 32 ಕಿ.ಮೀ ದೂರದಲ್ಲಿದೆ. ಈ ಜಲಪಾತವನ್ನು ಮಳೆಗಾಲದ ಅವಧಿಯಲ್ಲಿ ಭೇಟಿ ಮಾಡಲು ಅವಕಾಶವಿದೆ.
ಮಾಣಿಕ್ಯಧಾರ ಜಲಪಾತ
ಮಾಣಿಕ್ಯಧಾರ ಜಲಪಾತವು ಬಾಬಾಬುಡನ್ ಗಿರಿಯಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಈ ಜಲಪಾತವು ಮಾಣಿಕ್ಯದ ಮಣಿಗಳಂತೆ ಭೂಮಿಗೆ ಧುಮುಕುವುದರಿಂದ ಇದಕ್ಕೆ ಮಾಣಿಕ್ಯಧಾರ ಎಂದು ಕರೆಯಲಾಗುತ್ತದೆ. ಇದು ಚಿಕ್ಕಮಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ.
ಕೋಸಳ್ಳಿ ಜಲಪಾತ
ಕೋಸಳ್ಳಿ ಎಂಬ ಅದ್ಭುತವಾದ ಜಲಪಾತವು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬೈಂದೂರಿನಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಬೈಂದರಿನಿಂದ ಶಿರೂರು ಮಾರ್ಗವಾಗಿ ಚಲಿಸುತ್ತ ಸುಮಾರು 8 ಕಿ.ಮೀಗಳಷ್ಟು ದೂರವಿರುವ ತೂದಳ್ಳಿಗೆ ಬಂದು ಅಲ್ಲಿಂದ ಸುಮಾರು 3 ಕಿ.ಮೀ ಕಾಡು ಮಾರ್ಗದಲ್ಲಿ ನಡೆದರೆ ಕೋಸಳ್ಳಿ ಜಲಪಾತ ದೊರೆಯುತ್ತದೆ. ವಿಶೇಷವೆನೆಂದರೆ ಈ ಜಲಪಾತವು 3 ಹಂತದಿಂದ 5 ಹಂತದವರೆಗೆ ಧುಮುಕುತ್ತದೆ.
ಉಂಚಳ್ಳಿ ಜಲಪಾತ
ಈ ಅದ್ಭುತವಾದ ಉಂಚಳ್ಳಿ ಜಲಪಾತವನ್ನು "ಲುಷಿಂಗ್ಟನ್ ಜಲಪಾತ" ಎಂತಲೂ ಕರೆಯುತ್ತಾರೆ. ಇದು ಅಘನಾಶಿನಿ ನದಿಯಿಂದ ರೂಪುಗೊಂಡಿರುವ ಜಲಪಾತವಾಗಿದೆ. ಈ ಜಲಪಾತವು ಸುಮಾರು 116 ಎತ್ತರದಿಂದ ಧರೆಗೆ ಧುಮುಕುತ್ತದೆ. ಈ ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.
ಬೆಣ್ಣೆ ಹೊಳೆ ಜಲಪಾತ
ಈ ಜಲಪಾತವು ನೋಡಲು ಬೆಣ್ಣೆಯಂತೆಯೇ ಗೋಚರಿಸುತ್ತದೆ. ಈ ರಮಣೀಯವಾದ ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬಳಿ ಇದೆ. ಈ ಜಲಪಾತವು ಕೂಡ ಅಘನಾಶಿನಿಯಿಂದ ಸೃಷ್ಟಿಯಾಗುತ್ತದೆ. ಈ ಜಲಪಾತವು ಸುಮಾರು 200 ಅಡಿಗಳ ಎತ್ತರದಿಂದ ಧರೆಗೆ ಇಳಿಯುತ್ತದೆ.
ಕಲ್ಹತ್ತಿಗಿರಿ ಜಲಪಾತ
ಕಲ್ಹತ್ತಿಗಿರಿ ಜಲಪಾತವು ಬೀರೂರು ಹತ್ತಿರವಿರುವ ಲಿಂಗದಹಳ್ಳಿಯಿಂದ ಕೆಮ್ಮಣ್ಣುಗುಂಡಿಗೆ ತೆರಳುವ ಮಾರ್ಗದಲ್ಲಿದೆ. ಕೆಮ್ಮಣ್ಣುಗುಂಡಿ ತಲುಪುವ ಸುಮಾರು 10 ಕಿ.ಮೀ ಮೊದಲು ಈ ಜಲಪಾತ ಸಿಗುತ್ತದೆ. ಈ ಅತ್ಯದ್ಭುತವಾದ ಜಲಪಾತವು ಸುಮಾರು 300 ಅಡಿ ಎತ್ತರದಿಂದ ಧರೆಗೆ ಬೀಳುತ್ತದೆ. ವಿಶೇಷವೆನೆಂದರೆ ಇಲ್ಲಿ 2 ಆನೆಗಳ ಮಧ್ಯೆ ಹಾಗು ಬ್ರಹ್ಮ ದೇವನ ಪಾದ ಕಮಲದಿಂದ ಧರೆಗೆ ನೀರು ಧುಮುಕುವುದು ಮನೋಹರವಾದ ದೃಶ್ಯ ಇದಾಗಿದೆ.
ವಿಭೂತಿ ಜಲಪಾತ
ಇದೆನ್ನಪ್ಪ ವಿಭೂತಿ ಜಲಪಾತವೇ ಎಂದು ಆಶ್ಚರ್ಯ ಪಡಬೇಡಿ. ಇದು ನಿಜ ಈ ಚಿತ್ರ ಗಮನಿಸಿದರೆ ಯಾವುದೂ ಒಂದು ಸ್ಥಳದಿಂದ ನೀರು ಧುಮುಕುತ್ತಿದೆ ಎಂಬಂತೆ ಗೋಚಾರವಾಗುತ್ತದೆ. ಈ ಸುಂದರವಾದ ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಯಾಣ ಎಂಬ ಹಳ್ಳಿಯಲ್ಲಿದೆ. ಈ ಜಲಪಾತದ ನೀರು ವಿಭೂತಿ ಅಥವಾ ಭಸ್ಮದ ಹಾಗೆ ಕಾಣಿಸುವುದರಿಂದ ಈ ಜಲಪಾತಕ್ಕೆ ಈ ಹೆಸರು ಬಂದಿದೆ. ಇಲ್ಲಿ ಸುತ್ತ-ಮುತ್ತ ಸುಣ್ಣದ ಕಲ್ಲುಗಳನ್ನು ಕೂಡ ಕಾಣಬಹುದಾಗಿದೆ.
ದೇವರಗುಂಡಿ ಜಲಪಾತ
ಈ ಜಲಪಾತವು ಅತ್ಯಂತ ಪಾವಿತ್ರ್ಯತೆ ಹಾಗು ಪರಿಶುದ್ಧವಾಗಿರುವುದನ್ನು ಕಾಣಬಹುದು. ಇದಕ್ಕೆ ಮುಖ್ಯವಾದ ಕಾರಣವೆನೆಂದರೆ ಈ ಪ್ರದೇಶದಲ್ಲಿ ಹೆಚ್ಚಾಗಿ ಜನಸಂಚಾರವಿಲ್ಲದೇ ಇರುವುದೇ ಇದಕ್ಕೆ ಪ್ರಮುಖವಾದ ಕಾರಣವಾಗಿದೆ. ಈ ಜಲಪಾತವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ತೊಡಿಕಾನ ಎಂಬ ಹಳ್ಳಿಯಲ್ಲಿದೆ.
ಸಿರಿಮನೆ ಜಲಪಾತ
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಯ ಬಳಿಯಲ್ಲಿ ಕಿಗ್ಗ ಎಂಬ ಪುಟ್ಟದಾದ ಗ್ರಾಮವಿದೆ. ಈ ಗ್ರಾಮದಿಂದ ಸುಮಾರು 5 ಕಿ.ಮೀ ದೂರದಲ್ಲಿ ಸಿರಿಮನೆ ಜಲಪಾತವಿದೆ. ಆದರೆ ಈ ಜಲಪಾತಕ್ಕೆ ತೆರಳುವ ಹಾದಿಯಲ್ಲಿ ಸಾಕಷ್ಟು ಜಿಗಣೆಗಳು ಇರುವುದರಿಂದ ಎಚ್ಚರಿಕೆ ವಹಿಸಿ ತೆರಳುವುದು ಉತ್ತಮವಾದುದು.
ಬಲಮುರಿ ಮತ್ತು ಎಡಮುರಿ ಜಲಪಾತ
ಬಲಮುರಿ ಮತ್ತು ಎಡಮುರಿ ಎರಡು ಜಲಪಾತಗಳು ಮೈಸೂರಿನಿಂದ ಕೃಷ್ಣ ರಾಜ ಸಾಗರ ಜಲಾಶಯಕ್ಕೆ ತೆರಳುವ ಮುಖ್ಯ ದಾರಿಯಿಂದ ಸುಮಾರು 3 ಕಿ.ಮೀ ದುರದಲ್ಲಿ ಕಂಡು ಬರುತ್ತದೆ.
ಹಿಡ್ಲುಮನೆ ಜಲಪಾತ
ಕರ್ನಾಟಕದ ಸುಂದರವಾದ ಟ್ರೆಕ್ಕಿಂಗ್ ಶಿಖರವಾದ ಕೊಡಚಾದ್ರಿಯಿಂದ ಸುಮಾರು 5 ಕಿ.ಮೀ ದೂರದಲ್ಲಿ ಈ ಹಿಡ್ಲುಮನೆ ಜಲಪಾತವಿದೆ. ಕೊಡಚಾದ್ರಿಯಿಂದ ಅಮೋಘವಾದ ಚಾರಣದ ಮೂಲಕ ಈ ಜಲಪಾತದ ತಾಣಕ್ಕೆ ತಲುಪಬಹುದಾಗಿದೆ.
Shrikanth n
ಕಡಾಂಬಿ ಜಲಪಾತ
ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಪ್ರದೇಶದಲ್ಲಿ ಈ ಸುಂದರವಾದ ಕಡಾಂಬಿ ಎಂಬ ಜಲಪಾತವಿದೆ. ಈ ಜಲಪಾತ ನೋಡಲು ಕಾಡಿನಲ್ಲಿಯೇ ಹುಟ್ಟಿರುವಂತೆ ಗೋಚಾರವಾಗುತ್ತದೆ.