ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯ ಆಂಧ್ರ ಪ್ರದೇಶ ಚಿತ್ತೂರು ಜಿಲ್ಲೆಯ ಬೆಟ್ಟಗಳ ತಪ್ಪಲಿನಲ್ಲಿದೆ ತಿರುಪತಿ. ಹೆಸರು ಕೇಳಿದಾಕ್ಷಣ ಧಾರ್ಮಿಕತೆ ಮನದುಂಬಿಕೊಳ್ಳುವ ಈ ಪ್ರದೇಶ ದೇಶದ ಸಾಂಸ್ಕೃತಿಕ ಶ್ರೀಮಂತ ನಗರಿಗಳಲ್ಲಿ ಒಂದೆನಿಸಿದೆ. ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ತಿರುಪತಿಗೆ ನಿತ್ಯ ಸಾವಿರಾರು ಮಂದಿ ಭಕ್ತರು ಮಾತ್ರವಲ್ಲ, ಪ್ರವಾಸಿಗರೂ ಆಗಮಿಸುತ್ತಾರೆ.
ತಿರುಪತಿ ಇಂದು ಜನಪ್ರಿಯತೆಯ ಉತ್ತುಂಗದಲ್ಲಿದೆ. ಇದರ ಹೆಸರೇ ಇಂದು ವಿಶ್ವ ಮಟ್ಟದಲ್ಲಿ ಆಂಧ್ರ ಪ್ರದೇಶವನ್ನು ಗುರುತಿಸುತ್ತದೆ. ವಿಶೇಷ ಎಂದರೆ ಈ ತಿರುಪತಿ ಶಬ್ಧದ ನಿಜಾರ್ಥ ಇದುವರೆಗೂ ಸ್ಪಷ್ಟವಾಗಿಲ್ಲ. ಒಂದು ಮಾಹಿತಿ ಪ್ರಕಾರ "ತಿರು' ಹಾಗೂ "ಪತಿ' ಎಂಬ ಎರಡು ಶಬ್ಧದ ಸಮ್ಮಿಲನ ಇದಾಗಿದೆ. ತಮಿಳು ಭಾಷೆಯಲ್ಲಿ ತಿರು ಎಂದರೆ ಗೌರವಾನ್ವಿತ ಎಂದಾಗುತ್ತದೆ. ಅದೇ ರೀತಿ ಪತಿ ಎಂದರೆ ಗಂಡ (ಒಡೆಯ) ಎಂದಾಗುತ್ತದೆ. ಈ ಎರಡೂ ಶಬ್ಧದ ಒಟ್ಟಾರ್ಥ 'ಜವಾಬ್ದಾರಿಯುತ ಪತಿ/ಒಡೆಯ' ಎಂದಾಗುತ್ತದೆ.
ತಿರುಪತಿ ದೇವಾಲಯ ತಿರುಮಲ ಪರ್ವತ ಶ್ರೇಣಿಗಳಲ್ಲಿದೆ. ಈ ಪರ್ವತ ಶ್ರೇಣಿ ನಗರ ಕೇಂದ್ರಕ್ಕೆ ಅತ್ಯಂತ ಹತ್ತಿರವಾಗಿದೆ ಕೂಡ. ತಿರುಮಲ ಪರ್ವತವು ವಿಶ್ವದ ಅತ್ಯಂತ ಹಿರಿಯ ಕಲ್ಲಿನ ಪರ್ವತಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಜನಪ್ರಿಯ ಈ ದೇವಾಲಯವನ್ನು ಯಾರು ಕಟ್ಟಿದ್ದಾರೆ ಎಂಬ ಕುರಿತ ಪುರಾವೆ ಇದುವರೆಗೂ ಸಿಕ್ಕಿಲ್ಲ. ಆದರೆ ಅನೇಕ ಆಡಳಿತಗಾರರು, ರಾಜರು ದೇವಾಲಯದ ಜೀರ್ಣೋದ್ಧಾರ, ನವೀಕರಣ ಮಾಡಿದ್ದಾರೆ. ನಾಲ್ಕನೇ ಶತಮಾನದಿಂದಲೂ ಇದನ್ನು ನವೀಕರಿಸಿರುವ ಬಗ್ಗೆ ಮಾಹಿತಿ ಇದೆ. ಏನೇ ಇರಲಿ 14-15ನೇ ಶತಮಾನದ ಹೊತ್ತಲ್ಲಿ ಇದು ಮುಸ್ಲಿಂಮರ ದಾಖಲೆಯಲ್ಲಿ ನಮೂದಾಗಿದೆ. ಇದಲ್ಲದೇ ಬ್ರಿಟಿಷರು ಕೂಡ ಇದನ್ನು ರಕ್ಷಿಸಿಕೊಂಡು ಬಂದರು. ಇಂದು ವಿಶ್ವದ ಅತ್ಯಂತ ರಕ್ಷಣಾತ್ಮಕ ವಲಯದಲ್ಲಿ ಬರುವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಮದ್ರಾಸ್ ವಿಧಾನಸಭೆಯಲ್ಲಿ ಇದಕ್ಕಾಗಿಯೇ 1933 ರಲ್ಲಿ ಪ್ರತ್ಯೇಕ ಕಾನೂನು ರಚನೆ ಆಗಿದೆ. ದೇವಾಲಯದ ರಕ್ಷಣೆ, ನಿರ್ವಹಣೆ ಹೊಣೆಯನ್ನು ಪ್ರತ್ಯೇಕ ತಿರುಪತಿ, ತಿರುಮಲ ದೇವಸ್ಥಾನ ಸಮಿತಿ ರಚಿಸಿ ಅದರ ಅಧಿನಕ್ಕೆ ನೀಡಲಾಗಿದೆ. ಅಂದು ಮದ್ರಾಸ್ ಸರ್ಕಾರ ಇದಕ್ಕಾಗಿಯೇ ಪ್ರತ್ಯೇಕ ಜಿಲ್ಲಾಧಿಕಾರಿಯನ್ನೂ ನೇಮಕ ಮಾಡಿ ಆದೇಶ ಹೊರಡಿಸಿದೆ.
ತಿರುಪತಿ ತಿರುಮಲ ದೇವಸ್ಥಾನ ವ್ಯಾಪ್ತಿಯು ಅದನ್ನು ನೋಡಿಕೊಳ್ಳುತ್ತಿರುವವರಿಗೇ ಮುಡಿಪಾಗಿದೆ. ಇದಕ್ಕೆ ಪ್ರತ್ಯೇಕ ಧಾರ್ಮಿಕ ಸಲಹಾ ಸಮಿತಿ ಇದ್ದು ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತದೆ. ತಿರುಪತಿ ಪಟ್ಟಣವು ಕೊಟ್ಟೂರಿಗೆ ಸಮೀಪವಾಗಿದೆ. ಇಂದು ಇದನ್ನು ಕೆಟಿ ರೋಡ್ ಅನ್ನಲಾಗುತ್ತದೆ. ನಂತರ ಇದು ಗೋವಿಂದರಾಜ ಸ್ವಾಮಿ ದೇವಾಲಯಕ್ಕೆ ಸ್ಥಳಾಂತರಗೊಂಡಿತು. ಇಂದು ಅದೇ ಸ್ಥಳ ನಿರೀಕ್ಷೆಗೂ ಮೀರಿದ ಅಗಾಧ ಬೆಳವಣಿಗೆ ಸಾಧಿಸಿದೆ. ಈ ನಗರವು ಹಬ್ಬ ಹಾಗೂ ಉತ್ಸವಗಳ ನಗರವಾಗಿ ಅಭಿವೃದ್ಧಿಗೊಂಡಿದೆ.
ಹಬ್ಬ-ಹರಿದಿನಗಳ ನಗರ
ತಿರುಪತಿ ದೇವಾಲಯ ಕೇವಲ ಧಾರ್ಮಿಕ ಕೇಂದ್ರವಾಗಿ ಮಾತ್ರ ಜನಪ್ರಿಯವಾಗಿಲ್ಲ. ಬದಲಾಗಿ ಇದೊಂದು ಶ್ರೀಮಂತ ಸಾಂಸ್ಕೃತಿಕ ಕೇಂದ್ರವೂ ಆಗಿದೆ. ಹಬ್ಬ ಹಾಗೂ ಹರಿದಿನಗಳಿಗೆ ಇದು ಅತ್ಯಂತ ಪ್ರಸಿದ್ಧಿ ಹೊಂದಿದೆ. ಮೇ ತಿಂಗಳಲ್ಲಿ ಇಲ್ಲಿ ನಡೆಯುವ ಗಂಗಮ್ಮ ಜಾತ್ರೆ ಇದಕ್ಕೊಂದು ಉತ್ತಮ ಉದಾಹರಣೆ. ನಿರೀಕ್ಷೆಗೂ ಮೀರಿದ ಉತ್ಸಾಹ, ಸಂಭ್ರಮ ಹಾಗೂ ಪಾಲ್ಗೊಳ್ಳುವಿಕೆ ಇಲ್ಲಿ ಕಾಣುತ್ತದೆ. ಇದು ಧಾರ್ಮಿಕ ಶಕ್ತಿ ಕೇಂದ್ರವಾಗಿ ಜನಪ್ರಿಯವಾಗಿದ್ದು, ಭಕ್ತರು ದೇವಾಲಯ ಆವರಣದಲ್ಲಿಯೇ ಸುತ್ತಾಡುತ್ತಾ, ಪ್ರದಕ್ಷಿಣೆ ಹಾಕಿ ಪ್ರಾರ್ಥಿಸುತ್ತಾರೆ. ಅತ್ಯಂತ ಶಕ್ತಿಶಾಲಿ ಧಾರ್ಮಿಕ ಕೇಂದ್ರ ಎಂಬ ಭಾವನೆ ಇಲ್ಲಿನವರಿಗಿದೆ. ಕೇಶ ಮುಂಡನ ಮಾಡಿಸಿಕೊಂಡು ಮುಡಿಯನ್ನು ದೇವರಿಗೆ ಅರ್ಪಿಸಿ, ಹಣೆಗೆ ಗಂಧದ ಲೇಪನವನ್ನು ಭಕ್ತರು ಇಟ್ಟುಕೊಳ್ಳುತ್ತಾರೆ. ತಲೆಯ ಮೇಲೆ ಮಲ್ಲಿಗೆ ಹೂವಿನ ಮಾಲೆ ಸುತ್ತಿಕೊಂಡು ದೇವಾಲಯದ ಆವರಣದೊಳಗೆ ಪ್ರವೇಶಿಸುತ್ತಾರೆ. ಜಾತ್ರೆಯಲ್ಲಿ ಕೊನೆಯದಾಗಿ ದೇವಿಯ ಬೃಹತ್ ಮಣ್ಣಿನ ಮೂರ್ತಿಯನ್ನು ಒಡೆದುಹಾಕಲಾಗುತ್ತದೆ. ಇಲ್ಲಿಗೆ ಸಮೀಪದ ಹಾಗೂ ದೂರದೂರಿನಿಂದ ಭಕ್ತರು ಇತ್ತ ಆಗಮಿಸುತ್ತಾರೆ. ತಿರುಪತಿಯ ಅತ್ಯಂತ ಜನಪ್ರಿಯ ಉತ್ಸವಗಳಲ್ಲಿ ಬ್ರಹ್ಮೋತ್ಸವಂ ಕೂಡ ಒಂದು. ಅತಿ ದೊಡ್ಡ ಆಚರಣೆ ಇದಾಗಿದೆ. ದೇವಾಲಯ ನಗರಿಯ ಇತರೆ ಆಚರಣೆಯಲ್ಲಿ ಪ್ರಮುಖವಾದುದು ವಿಜಯನಗರ ಉತ್ಸವ. ಇದನ್ನು ಚಂದ್ರಗಿರಿ ಕೋಟೆಯಲ್ಲಿ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ರಾಯಲ್ಸೀಮಾ ನೃತ್ಯ ಹಾಗೂ ಆಹಾರ ಉತ್ಸವ ಆಯೋಜನೆಯಾಗುತ್ತದೆ. ಅತಿ ಹೆಚ್ಚು ಸಂಖ್ಯೆಯ ಜನರನ್ನು ಇದು ಆಕರ್ಷಿಸುತ್ತದೆ.
ಆಕರ್ಷಣೆಗಳು
ಇಲ್ಲಿ ಧಾರ್ಮಿಕ ಕೇಂದ್ರಗಳು ಅಪಾರ ಸಂಖ್ಯೆಯಲ್ಲಿವೆ. ಶಕ್ತಿಶಾಲಿ ದೇವರುಗಳಿವೆ. ಮುಖ್ಯವಾದವೆಂದರೆ ತಿರುಪತಿ ದೇವಾಲಯ, ವರಾಹಸ್ವಾಮಿ ದೇವಾಲಯ, ವೆಂಕಟೇಶ್ವರಸ್ವಾಮಿ ಟೆಂಪಲ್, ಪದ್ಮಾವತಿ ದೇವಸ್ಥಾನ, ಗೋವಿಂದರಾಜ ದೇವಾಲಯ, ಶ್ರೀನಿವಾಸಮಂಗಪುರಂ ಇತ್ಯಾದಿ. ಅನೇಕ ವಿಧದ ಪಕ್ಷಿ ಹಾಗೂ ಪ್ರಾಣಿಗಳ ಆವಾಸ ತಾಣವಾಗಿರುವ ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್ ಕೂಡ ಇಲ್ಲಿ ಭೇಟಿ ನೀಡಬಹುದಾದ ತಾಣದಲ್ಲಿ ಒಂದಾಗಿದೆ. ಹಣ ನೀಡಿ ಪ್ರವೇಶ ಪಡೆಯುವ ತಾಣ ಕಲ್ಲಿನ ಉದ್ಯಾನ ಶಿಲಾತೋರಣಂ. ಇದು ಕೂಡ ನೋಡಲೇಬೇಕಾದ ಸ್ಥಳ. ಇನ್ನು ಇಷ್ಟಾದ ಮೇಲೆ ತಿರುಪತಿಗೆ ಭೇಟಿ ನೀಡಿ ಇಲ್ಲಿನ ಸಿಹಿ ಪೊಂಗಲ್ (ಅನ್ನ) ಹಾಗೂ ಲಡ್ಡು (ಲಾಡು) ತಿನ್ನದೇ ತೆರಳಲು ಸಾಧ್ಯವೇ ಇಲ್ಲ. ಮರದ ಆಕರ್ಷಕ ಕೆತ್ತನೆಯುಳ್ಳ ಕರಕುಶಲ ವಸ್ತುಗಳನ್ನು ಕೊಳ್ಳದೇ ಹೋದರೆ ಇಲ್ಲಿಗೆ ಬಂದೂ ಬರದಂತೆ ಅನ್ನಿಸುತ್ತದೆ. ಅಷ್ಟು ಪ್ರಸಿದ್ಧಿ ಇಲ್ಲಿನ ಕರಕುಶಲ ವಸ್ತುಗಳಿಗೆ. ಬಿಳಿ ಮರದ ಗೊಂಬೆಗಳು, ಕಲಾಮಕರಿ ಇತ್ಯಾದಿಗಳು ಇಲ್ಲಿ ಪ್ರಸಿದ್ಧಿ. ತಂಜಾವೂಡು ಚಿನ್ನದ ಎಲೆ ಲೇಪನ ಹಾಗೂ ಚಂದನದ ಉಂಡೆ ಇಲ್ಲಿ ಅತ್ಯಂತ ಪ್ರಮುಖ.
ವಾತಾವರಣ ಹಾಗೂ ಸಂಪರ್ಕ
ತಿರುಪತಿಗೆ ಬರುವುದು ಅತ್ಯಂತ ಸುಲಭ. ಈ ಪ್ರಯಾಣ ಸಾಕಷ್ಟು ಆರಾಮದಾಯಕವಾಗಿದೆ. ರೇನಿಗುಂಟಾ ವಿಮಾನ ನಿಲ್ದಾಣ ತಿರುಪತಿಯಿಂದ 15 ಕಿ.ಮೀ. ದೂರದಲ್ಲಿದೆ. ದಿಲ್ಲಿ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ಮತ್ತಿತರ ಭಾಗದಿಂದ ರೇನಿಗುಂಟಾಗೆ ನಿರಂತರ ವಿಮಾನ ಸಂಪರ್ಕ ಇದೆ. ದೇಶದ ಎಲ್ಲಾ ನಗರಗಳಿಂದ ನೇರಸಂಪರ್ಕ ಹೊಂದಿರುವ ಉತ್ತಮ ರೈಲು ನಿಲ್ದಾಣ ತಿರುಪತಿಯಲ್ಲಿಯೇ ಇದೆ. ಖಾಸಗಿ ಹಾಗೂ ಸರ್ಕಾರಿ ಬಸ್ಗಳಿಗಂತೂ ಕೊರತೆ ಇಲ್ಲ. ಚೆನ್ನೈ, ಬೆಂಗಳೂರು, ವೈಜಾಗ್, ಹೈದ್ರಾಬಾದ್ಗಳಿಂದ ಇಲ್ಲಿಗೆ ಸಂಪರ್ಕ ಇದೆ. ನಗರದ ಒಳಗೆ ಸಂಚರಿಸುವುದು ಕೂಡ ಆರಾಮದಾಯಕವಾಗಿದೆ. ಕಾರು, ಬಸ್ಗಳು ಸಾಕಷ್ಟು ಇವೆ. ಒಂದು ದಿನದ ಬಾಡಿಗೆ ರೂಪದಲ್ಲಿ ನಗರ ಸುತ್ತಲು ಕಾರುಗಳು ಕೂಡ ಇಲ್ಲಿ ಸಿಗುತ್ತವೆ. ಸಾಮಾನ್ಯ ದರದಲ್ಲಿ ಇವು ಸಿಗುವುದು ವಿಶೇಷ.
ಚಳಿಗಾಲದಲ್ಲಿ ಅಂದರೆ ಡಿಸೆಂಬರ್ನಿಂದ ಫೆಬ್ರವರಿ ನಡುವಿನ ಅವಧಿ ತಿರುಪತಿ ಭೇಟಿಗೆ ವರ್ಷದಲ್ಲೇ ಉತ್ತಮ ಕಾಲ. ಬೇಸಿಗೆಯಲ್ಲಿ ವಿಪರೀತ ಸೆಖೆ ಇರುತ್ತದೆ. ಈ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡದಿರುವುದೇ ಒಳಿತು. ಮಳೆಗಾಲದ ಸಂದರ್ಭದಲ್ಲಿ ಉಷ್ಣಾಂಶ ಕಡಿಮೆ ಇರುತ್ತದೆ. ಮಳೆಗಾಲ ಇಲ್ಲಿನ ಸೌಂದರ್ಯವನ್ನು ಒಂದಿಷ್ಟು ಹೆಚ್ಚಿಸುತ್ತದೆ. ತಿರುಪತಿ ನಗರವೇ ಧಾರ್ಮಿಕ ಆಚರಣೆ, ನಡತೆಗೆ ಹೆಸರಾದ ತಾಣ. ಇಲ್ಲಿ ಬರುವಾಗ ತರುವ ಹಾಗೂ ತರಬಾರದ ವಸ್ತುಗಳ ಬಗ್ಗೆ ಪ್ರವಾಸಿಗರು ಕೊಂಚ ತಿಳಿದಿದ್ದರೆ ಉತ್ತಮ. ಸೂಕ್ತ ಬಟ್ಟೆ ತೊಡುವುದು ಇಲ್ಲಿ ಮುಖ್ಯ. ಟೋಪಿ ಅಥವಾ ಹ್ಯಾಟ್ಗಳನ್ನು ತರದಿದ್ದರೆ ಉತ್ತಮ. ಜಡೆಗೆ ಹೂ ಮುಡಿಯುವಂತಿಲ್ಲ. ಏಕೆಂದರೆ ಹೂವು ದೇವರಿಗೆ ಮಾತ್ರ ಇಲ್ಲಿ ಮೀಸಲು. ಮಾಂಸ ಹಾಗೂ ಮದ್ಯ ಇಲ್ಲಿ ಸಮರ್ಪಕವಾಗಿ ಸಿಗುವುದಿಲ್ಲ. ಅಲ್ಲದೇ ಇದನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ. ಕ್ಯಾಮರಾ, ಫೋನ್ ಇತ್ಯಾದಿ ವಸ್ತುವನ್ನು ದೇವಾಲಯದ ಆವರಣದಲ್ಲಿ ಬಳಸುವಂತಿಲ್ಲ. ತಿರುಪತಿ ಧಾರ್ಮಿಕ ಆಚರಣೆಗೆ ಮಾತ್ರ ಹೆಸರಾಗಿಲ್ಲ. ಬದಲಾಗಿ ಒಂದು ಪ್ರವಾಸಿ ತಾಣವಾಗಿಯೂ ಜನಪ್ರಿಯವಾಗಿದೆ. ತನ್ನದೇ ಆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನಲೆಯನ್ನು ಬಿಂಬಿಸುತ್ತಿದೆ.