ತಲಕಾಡು ಒಂದು ಕಾಲದಲ್ಲಿ 30 ದೇವಾಲಯಗಳಿಂದ ಕೂಡಿದ ಭವ್ಯ ನಗರವಾಗಿತ್ತು. ಆದರೆ 16ನೇ ಶತಮಾನದಲ್ಲಿ ಇವುಗಳೆಲ್ಲವು ಮರಳಿನಲ್ಲಿ ಮುಚ್ಚಿ ಹೋದವು. ಇತಿಹಾಸದ ಆಧಾರದ ಮೇಲೆ ಹೇಳುವುದಾದರೆ ಇದಕ್ಕೆ ಕಾರಣ ಒಡೆಯರ ಆಳ್ವಿಕೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ, ಆದರೆ ಸ್ಥಳೀಯ ದಂತಕಥೆಗಳು ಮತ್ತು ಕಟ್ಟುಕಥೆಗಳು ಹೇಳುವುದೇನೆಂದರೆ, ತಲಕಾಡು ಮರಳಲ್ಲಿ ಮುಚ್ಚಿಹೋಗಲು ಇಲ್ಲಿನ ರಾಣಿಯಾಗಿದ್ದ ಅಲಮೇಲಮ್ಮನ ಶಾಪ ಕಾರಣವಂತೆ.
ತಲಕಾಡು ಮೊದಲಿಗೆ ಪಂಚ ಶಿವಲಿಂಗ ದೇವಾಲಯಗಳಿಗೆ ಪ್ರಸಿದ್ಧವಾಗಿತ್ತು. ಗಂಗರು ಈ ಊರನ್ನು ಮೊದಲಿಗೆ ಆಳಿದರು ನಂತರ ಇದನ್ನು ಚೋಳರು ಆಳಿದರು. ಹೊಯ್ಸಳರ ಅರಸ ವಿಷ್ಣುವರ್ದನ ಚೋಳರನ್ನು ಇಲ್ಲಿಂದ ತೊಲಗಿಸಿ ತನ್ನ ರಾಜ್ಯಭಾರ ಮಾಡಿದನು. ಅನಂತರ ಇದನ್ನು ವಿಜಯನಗರದ ರಾಜರು ಆಳಿದರು. ಅವರ ಬಳಿಕ ಮೈಸೂರು ಒಡೆಯರು ಈ ನಗರದ ಆಡಳಿತವಹಿಸಿಕೊಂಡರು.
16ನೇ ಶತಮಾನದಲ್ಲಿ ಒಮ್ಮೆ ಮೈಸೂರಿನ ರಾಜ ತಲಕಾಡಿನ ಮೇಲೆ ಸೈನ್ಯ ಸಹಿತ ದಂಡೆತ್ತಿ ಹೋದನಂತೆ, ಆಗ ಆತನು ತಲಕಾಡಿನ ರಾಣಿ ಅಲಮೇಲುವಿನ ಆಭರಣಗಳ ಮೇಲೆ ಕೈಹಾಕಲು ಹೋದಾಗ, ಆಕೆ ಅದನ್ನು ಕಾವೇರಿ ನದಿಯಲ್ಲಿ ಎಸೆದು ತಾನು ನೀರಿಗೆ ಹಾರಿದಳಂತೆ. ದಂತಕಥೆಗಳ ಪ್ರಕಾರ ಆಕೆ ಸಾಯುವ ಮೊದಲು “ ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ ಮತ್ತು ಮೈಸೂರು ಅರಸರಿಗೆ ಮಕ್ಕಳಾಗದಿರಲಿ”ಎಂದು ಶಾಪ ನೀಡಿದಳಂತೆ. ಅಂದಿನಿಂದ ತಲಕಾಡು ಮರಳಲ್ಲಿ ಮುಚ್ಚಿ ಹೋಯಿತು ಎನ್ನುತ್ತಾರೆ.
ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆ.
ಈ ನಗರವು ತನ್ನ ಐದು ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಅವುಗಳೆಂದರೆ ವೈಧ್ಯನಾಥೇಶ್ವರ, ಪಾತಳೇಶ್ವರ, ಮರಳೇಶ್ವರ, ಅರ್ಕೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳು. ಈ ಎಲ್ಲಾ ದೇವಾಲಯಗಳು ಪ್ರತಿವರ್ಷ ಮರಳಿನಲ್ಲಿ ಮುಚ್ಚಿ ಹೋಗುತ್ತಿರುತ್ತವೆ. ಆದರೆ ಇತ್ತೀಚೆಗೆ ಇವುಗಳು ಮರಳಿನಲ್ಲಿ ಮುಚ್ಚಿ ಹೋಗದಂತೆ ಕಾಪಾಡುವ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿರುತ್ತವೆ. ಈ ಪ್ರಾಂತ್ಯದಲ್ಲಿ ಶಿವನ ದೇವಾಲಯಗಳೊಂದಿಗೆ ಒಂದು ವಿಷ್ಣು ದೇವಾಲಯವು ಇತ್ತು. ಅದನ್ನು ಕೀರ್ತಿನಾಥೇಶ್ವರ ದೇವಾಲಯವೆಂದು ಕರೆಯುತ್ತಾರೆ. ಇದನ್ನು ಈಗ ಪುನರ್ ನಿರ್ಮಾಣ ಮಾಡಲಾಗುತ್ತಿದೆ.
ಈ ನಗರದ ಪಕ್ಕದಲ್ಲಿಯೆ ಕಾವೇರಿ ನದಿ ಹರಿಯುತ್ತಿದ್ದು ಅದು ಇಲ್ಲಿ ತೀಕ್ಷ್ಣವಾದ ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ ಇಲ್ಲಿನ ನದಿ ತೀರ ಮತ್ತು ಅದರ ಸುತ್ತಲಿನ ದೃಶ್ಯಗಳು ನಯನ ಮನೋಹರವಾಗಿರುತ್ತವೆ. ತಲಕಾಡು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪಂಚಲಿಂಗ ದರ್ಶನ ಉತ್ಸವದಿಂದ ಭಾರಿ ಜನಪ್ರಿಯತೆ ಪಡೆದಿದೆ, ಇತ್ತೀಚೆಗೆ 2009ರಲ್ಲಿ ಈ ಉತ್ಸವ ನಡೆಯಿತು, ಪಂಚಲಿಂಗ ದರ್ಶನವು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಕುಹ ಯೋಗ ಮತ್ತು ವಿಶಾಖ ನಕ್ಷತ್ರಗಳು ಒಟ್ಟಿಗೆ ಬಂದಾಗ ಜರುಗುತ್ತದೆ.
ತಲಕಾಡಿಗೆ ಹೋದಾಗ ಪ್ರವಾಸಿಗರು ಸೋಮನಾಥಪುರ, ಶಿವನ ಸಮುದ್ರ, ಮೈಸೂರು, ಶ್ರೀರಂಗ ಪಟ್ಟಣ, ರಂಗನತಿಟ್ಟು ಮತ್ತು ಬಂಡೀಪುರಗಳಿಗೆ ಭೇಟಿಕೊಡಬಹುದು.
ತಲಕಾಡಿನ ಕುರಿತು ಕೆಲವು ಮಾಹಿತಿಗಳು.
ತಲಕಾಡಿಗೆ ಭೇಟಿ ಕೊಡಲು ನವೆಂಬರ್ ನಿಂದ ಮಾರ್ಚ್ ವರೆಗಿನ ಕಾಲ ಉತ್ತಮವಾಗಿರುತ್ತದೆ. ಆಗ ಇಲ್ಲಿನ ಹವಾಮಾನ ಹಿತಕರವಾಗಿರುತ್ತದೆ.
ತಲಕಾಡು ಮೈಸೂರು ಜಿಲ್ಲೆಯಲ್ಲಿದ್ದು, ಮೈಸೂರಿನಿಂದ 43 ಕಿ.ಮೀ ಹಾಗು ಬೆಂಗಳೂರಿನಿಂದ 120 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಎರಡು ಪ್ರಮುಖ ನಗರಗಳಿಂದ ತಲಕಾಡಿಗೆ ಸಾರಿಗೆ ವ್ಯವಸ್ಥೆ ಇದ್ದು, ರಸ್ತೆ ಮೂಲಕ ಸುಲಭವಾಗಿ ತಲುಪಬಹುದು.
ತಲಕಾಡಿನಲ್ಲಿ ಹೋದರೆ ದೇವಾಲಯಗಳ ದರ್ಶನ ಮಾಡಬಹುದು. ಇಲ್ಲವಾದರೆ ಅಲ್ಲಿನ ಅಂಗಡಿಗಳಲ್ಲಿ ಸಿಗುವ ಕುರುಕಲು ತಿಂಡಿಗಳನ್ನು ಮತ್ತು ಪಾನೀಯಗಳನ್ನು ಸವಿಯಬಹುದು. ಇಲ್ಲಿ ವಾಸ್ತವ್ಯ ಹೂಡಲು ಮನಸ್ಸು ಮಾಡಿದರೆ, ಈ ಊರಿನ ಪ್ರಮುಖ ಹೋಟೆಲ್ ಗಳು ಬಾಡಿಗೆ ರೂಮುಗಳನ್ನು ಒದಗಿಸುತ್ತವೆ. ನೀವು ಪುರಾಣ ಮತ್ತು ಇತಿಹಾಸ ಆಸಕ್ತರಾದಲ್ಲಿ ತಲಕಾಡಿನ ನಿಗೂಢ ಪಟ್ಟಣವು ನಿಮ್ಮ ಕುತೂಹಲವನ್ನು ಕೆರಳಿಸುತ್ತದೆ.