ಶ್ರೀರಂಗಂ - ಮನಸೂರೆಗೊಳ್ಳುವ ಆಕರ್ಷಕ ದ್ವೀಪವಾಗಿದ್ದು ತಮಿಳುನಾಡು ರಾಜ್ಯದ ತಿರುಚಿರಾಪಳ್ಳಿಯಲ್ಲಿದೆ. ಹಿಂದಿನ ಕಾಲದಲ್ಲಿ ಶ್ರೀರಂಗಂಗೆ ವೆಳ್ಳಿತಿರುಮುತಗ್ರಾಮ ಎಂಬ ಹೆಸರಿತ್ತು. ತಮಿಳು ಭಾಷೆಯಲ್ಲಿ ಶ್ರೀರಂಗಂ ನಗರ ಪ್ರಸಿದ್ದವಾಗಿರುವುದು ತಿರುವರಂಗಂ ಎಂದು.
ಎರಡು ಪ್ರಸಿದ್ದ ನದಿಗಳಾದ ಕಾವೇರಿ ಮತ್ತು ಕೊಲ್ಲಿಡಂ(ಕಾವೇರಿ ನದಿಯ ಕವಲು) ನಡುವಿನಲ್ಲಿದೆ ಈ ತಾಣ. ಶ್ರೀರಂಗಂನಲ್ಲಿ ಶಿವ ಮತ್ತು ವಿಷ್ಣುವಿನ ಹಲವು ದೇವಸ್ಥಾನಗಳಿರುವುದರಿಂದ ಹಿಂದೂ ಯಾತ್ರಾರ್ಥಿಗಳಿಗೆ ಇದು ಪುಣ್ಯಕ್ಷೇತ್ರ. ಅದರಲ್ಲೂ, ಶ್ರೀರಂಗಂನಲ್ಲಿ ವಿಷ್ಣುವನ್ನು ಪೂಜಿಸುವ ವೈಷ್ಣವರು ಬಹಳ ಸಂಖ್ಯೆಯಲ್ಲಿದ್ದಾರೆ.
ಇಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲೊಂದು ಶ್ರೀ ರಂಗನಾಥಸ್ವಾಮಿ ದೇವಸ್ಥಾನ. ವಿಷ್ಣುವಿನ ಕೃಪೆಗೆ ಪಾತ್ರರಾಗಲು ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಡಿ ಪ್ರಪಂಚದಲ್ಲಿಯೇ ದೊಡ್ಡ ಹಿಂದೂ ದೇವಾಲಯ ಇದೆಂದು ನಂಬಲಾಗಿದೆ. 631000 ಸ್ಕ್ವೇರ್ ಮೀಟರ್ ವಿಸ್ತೀರ್ಣದಲ್ಲಿ ಅಂದರೆ 4 ಕಿ.ಮೀ ಪೆರಿಮೀಟರ್ ಅಳತೆಯಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ.
ದೇವತೆಗಳ ನೆಲೆವೀಡು
ಶ್ರೀರಂಗಂ ವಿಷ್ಣುವಿನ ಎಂಟು ಸ್ವಯಂ ವ್ಯಕ್ತ ಕ್ಷೇತ್ರಗಳಲ್ಲೆ ಮೊದಲನೇಯದೆಂಬ ಖ್ಯಾತಿ ಪಡೆದಿದೆ. ಅಲ್ಲದೆ, ವಿಷ್ಣುವಿನ 108 ದೇವಸ್ಥಾನಗಳಲ್ಲಿ ಇದು ಮುಖ್ಯವಾದದ್ದು. ಈ ವಿಷ್ಣು ದೇವಸ್ಥಾನ ಗಾತ್ರದಲ್ಲಿ ದೊಡ್ಡದಾಗಿದ್ದು 156 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲ್ಪಟ್ಟಿದೆ. ದೇವಸ್ಥಾನದ ರಚನೆಯೂ ವಿಭಿನ್ನವಾಗಿದೆ. ದೇವಸ್ಥಾನ ಕಾವೇರಿ ಮತ್ತು ಕೊಲರೂನ್ ನದಿಗಳಿಂದಾದ ದ್ವೀಪದಲ್ಲಿ ಕಟ್ಟಲ್ಪಟ್ಟಿದೆ. ದೇವಸ್ಥಾನದಲ್ಲಿ ಏಳು ಪರಿಧಿಗಳಿದ್ದು ಭಕ್ತಾಧಿಗಳು ಸ್ಥಳೀಯ ಬಾಷೆಯಲ್ಲಿ ಕರೆಯುವಂತೆ ಈ ಏಳು ಪ್ರಾಕಾರಗಳನ್ನು ದಾಟಿಕೊಂಡು ಹೋಗಬೇಕು. ಈ ಪರಿಧಿಗಳು ಅಥವಾ ಪ್ರಾಕಾರಗಳು ದಪ್ಪನೆಯ ಗಟ್ಟಿಯಾದ ವೃತ್ತಾಕಾರದ ಗೋಡೆಗಳಿಂದ ಕೂಡಿವೆ. ಏಳೂ ಪ್ರಾಕಾರಗಳು ಘನಗಾಂಭೀರ್ಯದಿಂದ ಕೂಡಿದ 21 ಗೋಪುರಗಳನ್ನು ಹೊಂದಿವೆ. ಪ್ರಾಕಾರಗಳ ಸಂಪೂರ್ಣ ರಚನೆ ವಾಸ್ತುಶಿಲ್ಪದ ಸೋಜಿಗವೆಂದೇ ಹೇಳಬೇಕು.
ದೇವಾಲಯಗಳ ನಗರಿ
ಶ್ರೀರಂಗಂನಲ್ಲಿರುವ ಪ್ರಸಿದ್ಧ ವಿಷ್ಣುವಿನ ದೇವಸ್ಥಾನ ಇತರೆ ಮೂರು ಮುಖ್ಯ ವಿಷ್ಣುವಿನ ದೇವಾಲಯಗಳಲ್ಲೊಂದಾಗಿದೆ. ಇವುಗಳನ್ನು ಕಾವೇರಿ ನದಿಯಲ್ಲಿ ನೈಸರ್ಗಿಕವಾಗಿ ರೂಪಗೊಂಡ ದ್ವೀಪಗಳಲ್ಲಿ ಕಾಣಬಹುದಾಗಿದೆ. ಆ ಮೂರು ಮುಖ್ಯ ದೇವಸ್ಥಾನಗಳೆಂದರೆ ಆದಿ ರಂಗ ದೇವಸ್ಥಾನ(ಶ್ರೀರಂಗಪಟ್ಟಣದಲ್ಲಿದೆ), ಮಧ್ಯರಂಗ ದೇವಸ್ಥಾನ(ಶಿವನಸಮುದ್ರ), ಅಂತ್ಯ ರಂಗ ದೇವಸ್ಥಾನ(ಶ್ರೀರಂಗಂ). ಶ್ರೀರಂಗಂನಲ್ಲಿರುವ ಉಳಿದ ಪ್ರಸಿದ್ದ ದೇವಸ್ಥಾನಗಳೆಂದರೆ, ಕಲ್ಲುಕೋಟೆ ದೇವಸ್ಥಾನ, ತಿರುವಾನೈಕೋವಿಲ್ ದೇವಸ್ಥಾನ, ಉರೈಯೂರ್ವೆಕ್ಕಳಿ ಅಮ್ಮನ ದೇವಸ್ಥಾನ, ಸಮಯಪುರಂ ಮಾರಿಯಮ್ಮನ್ ದೇವಸ್ಥಾನ, ಕುಮಾರ ವೈಯಲೂರ್ ದೇವಸ್ಥಾನ ಮತ್ತು ಕಾಟಾಳ್ಗಿಯಾ ಸಿಂಗರ್ ದೇವಸ್ಥಾನಗಳನ್ನು ಹೆಸರಿಸಬಹುದು.
ಇಲ್ಲಿರುವ ಇತರೆ ಪ್ರಸಿದ್ದ ವಿಷ್ಣು ದೇವಸ್ಥಾನವೆಂದರೆ ವಡಿವೆಳಗಿಯನಂಬಿ ಪೆರುಮಾಳ್ ಮಂದಿರ. ಇಲ್ಲಿ ಅಪ್ಪಳ ರಂಗನಾಥರ್ ವಿಗ್ರಹವನ್ನು ಪೂಜಿಸಲಾಗುತ್ತಿದ್ದು, ಆ ಕಾರಣದಿಂದಾಗಿ ಇದನ್ನು ಅಪ್ಪುಕುಡತ್ತನ್ ಮಂದಿರವೆಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶ್ರೀರಂಗಂಗೆ ಹತ್ತಿರದಲ್ಲಿರುವ ಹಳ್ಳಿ ಕೊವಿಲಾಡಿಯಲ್ಲಿ ಈ ದೇವಸ್ಥಾನವಿದೆ. ಮತ್ತೊಂದು ಪ್ರಮುಖ ದೇವಸ್ಥಾನ ತಿರುಚ್ಚಿಯಲ್ಲಿದೆ. ಅದು-ಅಳಗಿಯನಂಬಿ ದೇವಸ್ಥಾನ, ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಉಪವಿಭಾಗ.
ನಗರದ ಮಧ್ಯಭಾಗದಲ್ಲಿಯೇ ಹತ್ತಾರು ಹಿಂದೂ ದೇವಾಲಯಗಳಿರುವುದರಿಂದ ಶ್ರೀರಂಗಂ ಹಿಂದೂ ಭಕ್ತಾಧಿಗಳ ಪಾಲಿಗೆ ಒಂದು ಪ್ರಮುಖ ಯಾತ್ರಾ ಕ್ಷೇತ್ರವಾಗಿದೆ.