ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ನೆರವಾಗಿವೆ. ಈ ಊರು ಪಶ್ಚಿಮಘಟ್ಟದ ಹೃದಯ ಭಾಗದಲ್ಲಿದ್ದು, ಬೆಂಗಳೂರಿನಿಂದ 425 ಕಿ.ಮೀ ದೂರದಲ್ಲಿದೆ.
ಶಿರಸಿಯಲ್ಲಿ ನೀವು ನೋಡಬಹುದಾದ ಸ್ಥಳಗಳು
ಶಿರಸಿಯು ಒಂದು ಅದ್ಭುತ ಊರು. ಅಘನಾಶಿನಿ ನದಿಯು ಶಿರಸಿ ಸಮೀಪದ ದೋಣಿಹಳ್ಳ ಎಂಬಲ್ಲಿ ಹುಟ್ಟಿ ಮುಂದೆ ಹರಿಯುತ್ತದೆ. ಈ ನದಿಯು ಶಿರಸಿಯ ಬೆಟ್ಟಗಳಿಂದ ಕೆಳಗೆ ಧುಮುಕುವಾಗ ಸೃಷ್ಟಿಸುವ ಭವ್ಯ ಜಲಪಾತಗಳು ನೋಡುಗರ ಮೈ ಮನಗಳಿಗೆ ಮುದ ನೀಡುತ್ತದೆ. ಈ ಊರಿನಲ್ಲಿ ಮಳೆಗಾಲದಲ್ಲಿ ಅತಿ ಮಳೆಯಾಗುವ ಕಾರಣದಿಂದ ಹಾಗು ಇಲ್ಲಿ ಉಷ್ಣವಲಯದ ಕಾಡುಗಳು ಇದ್ದು ಆ ಕಾಡಿನಲ್ಲಿ ವಿಪುಲವಾದ ವನ್ಯಜೀವಿ ಸಂಪತ್ತು ನೆಲೆ ಕಂಡು ಕೊಂಡಿವೆ. ಈ ಸ್ವಾಭಾವಿಕ ಸೌಂದರ್ಯವು ಶಿರಸಿಯನ್ನು ಪ್ರಮುಖ ವಿಹಾರ ತಾಣವಾಗಿಸಲು ನೆರವಾಗಿದೆ.
ಇಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ 16ನೇ ಶತಮಾನಕ್ಕೆ ಸೇರಿದ ಮಾರಿಕಾಂಬ ದೇವಾಲಯವು ಒಂದು. ಈ ದೇವಿಯ ವಾರ್ಷಿಕ ಜಾತ್ರೆಗೆ ಲಕ್ಷೋಪಲಕ್ಷ ಭಕ್ತರು ಬಂದು ಸೇರುತ್ತಾರೆ. ಇದರಷ್ಟೆ ಪ್ರಸಿದ್ಧಿಯನ್ನು ಪಡೆದಿರುವ ಇನ್ನೊಂದು ದೇವಾಲಯ ಇಲ್ಲಿನ ಮಹಾಗಣಪತಿ ದೇವಾಲಯ. ಭಕ್ತಾದಿಗಳು ಯಾವುದೇ ಕೆಲಸ ಮಾಡುವ ಮೊದಲು ಈ ಸ್ವಾಮಿಯ ಆಶೀರ್ವಾದ ಪಡೆಯಲು ತಂಡೋಪತಂಡವಾಗಿ ಆಗಮಿಸುತ್ತಾರೆ. ದಂತಕಥೆಗಳ ಪ್ರಕಾರ ಈ ಸ್ವಾಮಿಯ ಆಶೀರ್ವಾದ ಪಡೆದವರು ಯಾರು ನಿರಾಸೆ ಹೊಂದಿಲ್ಲ.
ಇಲ್ಲಿಗೆ ಭೇಟಿ ಕೊಡುವವರು ಬನವಾಸಿ, ಸಹಸ್ರ ಲಿಂಗ ಮತ್ತು ಉಂಚಳ್ಳಿ ಜಲಪಾತವನ್ನು ನೋಡಬಹುದು. ಬನವಾಸಿಯು ಕರ್ನಾಟಕದ ಪೂರ್ವಾಕಾಲದ ರಾಜಧಾನಿಯಾಗಿತ್ತು. ಸಹಸ್ರಲಿಂಗವು ಸಾವಿರ ಲಿಂಗಗಳನ್ನು ಹೊಂದಿರುವ ಸ್ಥಳವಾಗಿದ್ದು, ದಟ್ಟ ಅಡವಿಯ ಮಧ್ಯದಲ್ಲಿನ ನದಿಯಲ್ಲಿ ಮುಳುಗಿದೆ. ಶಿರಸಿಗೆ ಸಮೀಪದ ವಿಮಾನನಿಲ್ದಾಣವು ಹುಬ್ಬಳ್ಳಿಯಾಗಿದ್ದು, ಅದು ಇಲ್ಲಿಂದ 100 ಕಿ.ಮೀ ದೂರದಲ್ಲಿದೆ ಹಾಗು ರಸ್ತೆಯ ಮೂಲಕವು ಶಿರಸಿಗೆ ತಲುಪಲು ಉತ್ತಮ ಸೌಕರ್ಯಗಳಿವೆ.