ತಮಿಳುನಾಡಿನ ನಾಗಪಟ್ಟಿನಮ್ ಜಿಲ್ಲೆಯಲ್ಲಿ ಬಂಗಾಳ ಕೊಲ್ಲಿಯ ತೀರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಸೀರ್ಕಾಳಿಯು ಒಂದು ಪ್ರಸಿದ್ಧ ಹಿಂದೂ ಯಾತ್ರಾ ಸ್ಥಳವಾಗಿದೆ. ಸೀರ್ಕಾಳಿಯು ಒಂದು ಶಾಂತವಾದ ಪರಿಸರವನ್ನು ಹೊಂದಿರುವ ದಕ್ಷಿಣ ಭಾರತದ ಒಂದು ಪಟ್ಟಣವಾಗಿದೆ. ಈ ಊರಿಗೆ ಒಂದು ಐತಿಹಾಸಿಕ ಹಿನ್ನಲೆಯಿದೆ. ಜೊತೆಗೆ ಆಧುನಿಕ ಜಗತ್ತಿನ ಅಭಿವೃದ್ಧಿ ಮಂತ್ರವು ಇಲ್ಲಿ ಅಡಗಿದೆ. ಅಲ್ಲದೆ ಈ ಊರಿನಲ್ಲಿ ಸಂಪ್ರದಾಯಗಳು ಮತ್ತು ಆಚರಣೆಗಳು ಎಲ್ಲವು ಸೇರಿ ಈ ಊರನ್ನು ಪ್ರವಾಸೋದ್ಯಮದ ನಕಾಶೆಯಲ್ಲಿ ಗುರುತಿಸುವಂತೆ ಮಾಡಿವೆ.
ದಂತ ಕಥೆಗಳ ಮತ್ತು ಪುರಾಣಗಳ ಪ್ರಕಾರ, ಒಂದೊಮ್ಮೆ ಸಿರ್ಕಾಳಿ ಹಾಗು ಇಡೀ ಭೂಮಿಯೆ ನೀರಿನಲ್ಲಿ ಮುಳುಗಿ ಹೋದಾಗ ಈ ಸ್ಥಳದಲ್ಲಿ ಬ್ರಹ್ಮನು ಶಿವನನ್ನು ಪ್ರಾರ್ಥಿಸಿದನಂತೆ (ಅದಕ್ಕಾಗಿಯೇ ಬ್ರಹ್ಮೇಶ್ವರರ್ ಎಂಬ ಹೆಸರು ಬಂದಿದೆ). ಆಗ ಪರಶಿವನು ಒಂದು ದೋಣಿಯಲ್ಲಿ ಬಂದು ಎಲ್ಲರನ್ನು ಕಾಪಾಡಿದನಂತೆ. ಹಾಗಾಗಿ ಈ ಊರಿನಲ್ಲಿ ಶಿವನ ಎಲ್ಲ ಅವತಾರಗಳನ್ನು ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಸೀರ್ಕಾಳಿಗೆ ತೋಣಿಪುರಂ ಅಥವಾ ತೋಣಿಯಪ್ಪರ್ ಎಂಬ ಹೆಸರು ಸಹ ಇದೆ. ತಮಿಳಿನಲ್ಲಿ ತೋಣಿ ಎಂದರೆ ದೋಣಿ ಎಂದರ್ಥ.
ಸೀರ್ಕಾಳಿಯು ತಮಿಳುನಾಡಿನ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಈ ಊರಿನಲ್ಲಿ ಅಸಂಖ್ಯಾತ ಶಿವನ ದೇವಾಲಯಗಳು ಇವೆ. ಹಾಗಾಗಿ ಇಲ್ಲಿಗೆ ಕೇವಲ ತಮಿಳು ನಾಡಿನಿಂದಷ್ಟೇ ಅಲ್ಲದೆ ದೇಶದ ಮೂಲೆ ಮೂಲೆಗಳಿಂದ ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಜನವರಿ ತಿಂಗಳಿನಲ್ಲಿ ಇಲ್ಲಿ ಜರುಗುವ ಮಕರ ಪೊಂಗಲ್ ಹಬ್ಬವನ್ನು ಭಾರೀ ಸಡಗರದಿಂದ ಆಚರಿಸಲಾಗುತ್ತದೆ. ಇದು ಇಲ್ಲಿ ಮೂರು ದಿನಗಳ ಕಾಲ ನಡೆಯುತ್ತದೆ. ಮಹಾಶಿವರಾತ್ರಿ ಬರುವ ಫೆಬ್ರವರಿ ತಿಂಗಳಿನಲ್ಲಿ ಇಲ್ಲಿರುವ ಅಸಂಖ್ಯಾತ ಶಿವನ ದೇವಾಲಯಗಳಿಗೆ ಭೇಟಿಕೊಡುವ ಸಲುವಾಗಿ ಅಸಂಖ್ಯಾತ ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಾರೆ. ಇದರ ಜೊತೆಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ನಡೆಯುವ ದೀಪಾವಳಿ ಹಬ್ಬವನ್ನು ಸಹ ಇಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ.
ಈ ಸ್ಥಳಕ್ಕೆ ಉತ್ತಮ ಸಾರಿಗೆ ವ್ಯವಸ್ಥೆಯು ಸಹ ಇದೆ ಮತ್ತು ಬೇಸಿಗೆಯಲ್ಲಿ ಆರ್ದ್ರತೆಯಿಂದ ಕೂಡಿದ ಹವಾಮಾನವಿರುತ್ತದೆ.