ಶಿರಡಿಯು ನಾಶಿಕ್ ನಿಂದ ಸುಮಾರು 76 ಕಿಮೀ ದೂರದಲ್ಲಿರುವ ಮಹಾರಾಷ್ಟ್ರ ರಾಜ್ಯದ ಅಹ್ಮದ್ ಜಿಲ್ಲೆಯ ಒಂದು ಆಕರ್ಷಣೀಯವಾದ ಧಾರ್ಮಿಕ ಪ್ರಖ್ಯಾತಿಯ ಸಣ್ಣ ಹಳ್ಳಿಯಾಗಿದೆ. ಇಂದು, ಇದು ಒಂದು ಸದಾ ಸದ್ದುಮಾಡುವ ತೀರ್ಥಯಾತ್ರೆ ಕೇಂದ್ರವಾಗಿ ಬದಲಾಗಿದೆ.
ಶಿರಡಿ, 20 ನೇ ಶತಮಾನದ ಮಹಾನ್ ಸಂತರಾದ ಸಾಯಿ ಬಾಬಾರ ಮನೆಯಾಗಿತ್ತು. ಬಾಬಾ ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ಶಿರಡಿಯಲ್ಲಿ ಜೀವಿಸಿದ್ದರು, ತಮ್ಮ ಜೀವನದ 50 ವರ್ಷಕ್ಕೂ ಹೆಚ್ಚು ಕಾಲ ಈ ಸಣ್ಣ ಹಳ್ಳಿಯನ್ನು ಹಲವಾರು ಸ್ಥಳಗಳಿಂದ ಭಕ್ತರು ಬಂದು ನೋಡಲು ಮತ್ತು ಪ್ರಾರ್ಥನೆ ಸಲ್ಲಿಸಲು ಸಹಕರಿಸುವ ಬೃಹತ್ ಯಾತ್ರಾ ಸ್ಥಳವಾಗಿ ಮಾರ್ಪಾಡು ಮಾಡುವಲ್ಲಿ ಶ್ರಮಿಸಿದರು.
ಶಿರಡಿ - ಅತೀಂದ್ರಿಯ ಸಾಯಿ ನಿವಾಸ
ಸಾಯಿ ಬಾಬಾರ ಮೂಲವನ್ನು ಯಾರೂ ತಿಳಿದಿಲ್ಲ ಮತ್ತು ಅವರ ಜನ್ಮ ವಿವರಗಳು ಇನ್ನೂ ಒಗಟಾಗಿಯೇ ಉಳಿದಿದೆ. ಅವರು 16 ವರ್ಷದ ಯೌವ್ವನದಲ್ಲಿ ಒಂದು ಬೇವಿನ ಮರದ ಕೆಳಗೆ ಕಾಣಿಸಿಕೊಂಡ ಸನ್ನಿವೇಶವು ಮೊದಲ ಬಾರಿಗೆ ಎಲ್ಲರ ಮುಂದೆ ಬಂದ ಉದಾಹರಣೆಯಾಗಿದೆ. ಸಂತರು ಬಡ-ಬಗ್ಗರು ಮತ್ತು ನೊಂದವರನ್ನು ಮೇಲೆತ್ತಲು ತಮ್ಮ ಸಂಪೂರ್ಣ ಜೀವನವನ್ನು ಮೀಸಲಿಟ್ಟಿದ್ದರು. ಸಾಯಿ ಬಾಬಾ ಅವರು ಶಿವನ ಅವತಾರ ಎಂದು ನಂಬಿದ್ದ ಭಕ್ತರಲ್ಲಿ ಅವರು 'ದೇವರ ಮಗು’ ಎಂದೇ ಪ್ರಖ್ಯಾತರಾಗಿದ್ದರು. ಅವರು ತಮ್ಮ ಪೂರ್ತಿ ಜೀವನವನ್ನು ಎಲ್ಲಾ ಧರ್ಮಗಳ ನಡುವೆ ಸಾರ್ವತ್ರಿಕ ಭ್ರಾತೃತ್ವ ಮತ್ತು ಶಾಂತಿಯ ಸಂದೇಶವನ್ನು ಬೋಧಿಸುವಲ್ಲಿ ಮುಡುಪಾಗಿಸಿದ್ದಲ್ಲದೆ ಸದಾ 'ಸಬ್ ಕಾ ಮಾಲಿಕ್ ಏಕ್ ' ಎಂಬ ಉಲ್ಲೇಖವನ್ನು ಸಾರಿದರು.
ನಂತರದಲ್ಲಿ ಶಿರಡಿಯು ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಸಂದರ್ಶಕರು ಮತ್ತು ನಂಬಿಕಸ್ತರಿಂದ ಜನಸಂದಣಿಗೆ ಸಾಕ್ಷಿಯಾಯಿತು. ಇದಕ್ಕೆ ಕಾರಣ ಸಾಯಿ ಅವರ ಆಶ್ಚರ್ಯಕರ ರೂಪವನ್ನು ತಮ್ಮ ಕಣ್ಣುಗಳಿಂದಲೇ ನೋಡಿ ಸವಿಯುವ ಆಸೆ. ಈ ಮಹಾನ್ ಸಂತರು 1918 ರಲ್ಲಿ ಸ್ವರ್ಗಸ್ಥರಾದರು, ಮತ್ತು ಅವರ ಸಮಾಧಿ ನೋಡಲು ಇಂದಿಗೂ ಲಕ್ಷಗಟ್ಟಲೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಬಾಬಾರವರು ಬಾಲಯೋಗಿಯಂತೆ ಶಿರಡಿಗೆ ಬಂದ ಜಾಗವನ್ನು ಗುರುಸ್ಥಾನ್ ಎಂದು ಕರೆಯಲಾಗುತ್ತದೆ. ಈಗ ಒಂದು ದೇವಸ್ಥಾನ ಮತ್ತು ಸಣ್ಣ ಪುಣ್ಯ ಸ್ಥಳವನ್ನು ಇದೇ ಜಾಗದಲ್ಲಿ ಕಾಣಬಹುದು. ಸಾಯಿ ಬಾಬಾರವರಿಗೆ ಸಂಬಂಧಿಸಿದ ಇತರೆ ಪ್ರಮುಖ ಸ್ಥಳಗಳಲ್ಲಿ ಅವರು ಪರ್ಯಾಯ ರಾತ್ರಿಗಳಲ್ಲಿ ಮಲಗುತ್ತಿದ್ದ ದ್ವಾರಕಮಯಿ ಮಸೀದಿಯು ಒಂದಾಗಿದೆ. ಇದಲ್ಲದೆ ಖಂಡೋಬಾ ದೇವಸ್ಥಾನ, ಸಕೋರಿ ಆಶ್ರಮ, ಶನಿ ಮಂದಿರ, ಚಾಂಗ್ ದೇವ್ ಮಹಾರಾಜ್ ಸಮಾಧಿ ಮತ್ತು ನರಸಿಂಹ ಮಂದಿರ ಶಿರಡಿಗೆ ಭೇಟಿ ನೀಡುವ ಪ್ರವಾಸಿಗರನ್ನು ಆಕರ್ಷಿಸುವ ಇತರೆ ಸ್ಥಳಗಳಾಗಿವೆ.
ಲೆಂದಿ ಬಾಗ್ ಬಾಬಾರವರು ತಾವೇ ಮಾಡಿದ ಮತ್ತು ಸ್ವತಃ ನೀರೆರೆದ ಒಂದು ಸಣ್ಣ ತೋಟವಾಗಿದೆ. ಬಾಬಾ ಈ ಸ್ಥಳಕ್ಕೆ ದಿನವೂ ಭೇಟಿ ನೀಡಿ ಒಂದು ಬೇವಿನ ಮರದ ಕೆಳಗೆ ವಿಶ್ರಮಿಸುತ್ತಿದ್ದರು. ಅಷ್ಟಭುಜಾಕೃತಿಯ ದೀಪಗೃಹವಾದ ನಂದಾ ದೀಪವನ್ನು ಅವರ ನೆನಪಿನಲ್ಲಿ ಕಲ್ಲುಗಳಿಂದ ನಿರ್ಮಿಸಲಾಯಿತು.
ಭಕ್ತರು ಸಾಮಾನ್ಯವಾಗಿ ಬೆಳಗಿನ ಜಾವದಿಂದಲೇ ಸಾಲಿನಲ್ಲಿ ನಿಂತು ಸಾಯಿ ಬಾಬಾರ ಸಹಜಗಾತ್ರದ ಪ್ರತಿಮೆಯ ಒಂದು ನೋಟವನ್ನು ಮತ್ತು ಆಶೀರ್ವಾದವನ್ನು ಪಡೆಯುತ್ತಾರೆ. ವಿಶೇಷ ಪೂಜೆ ಮತ್ತು ದರ್ಶನದ ಕಾರಣ ದೇವಸ್ಥಾನವು ಗುರುವಾರಗಳಂದು ದಟ್ಟಾದ ಜನಸಂದಣೆಯನ್ನು ಹೊಂದಿರುತ್ತದೆ. ದೇವಸ್ಥಾನ ಪ್ರತಿದಿನ ಮುಂಜಾನೆ 5 ಘಂಟೆಗೆ ತೆರೆಯುತ್ತದೆ ಮತ್ತು ರಾತ್ರಿ ಪ್ರಾರ್ಥನೆಗಳೊಂದಿಗೆ 10 ಘಂಟೆಗೆ ಅಂತ್ಯಗೊಳ್ಳುತ್ತದೆ. ಇಲ್ಲಿ ಸುಮಾರು 600 ಭಕ್ತರು ಸೇರಬಲ್ಲ ಸಾಮರ್ಥ್ಯವುಳ್ಳ ಮಂದಿರವಿದೆ. ದೇವಸ್ಥಾನದ ಮೊದಲ ಮಹಡಿ ಮಹಾನ್ ಸಂತರ ಜೀವನವನ್ನು ಚಿತ್ರಿಸುವ ಚಿತ್ರಗಳನ್ನು ಹೊಂದಿದ್ದು ವೀಕ್ಷಣೆಗೆ ಮುಕ್ತವಾಗಿದೆ. ಈ ಪವಿತ್ರ ಪಟ್ಟಣದ ಬೀದಿಗಳು, ಅಂಗಡಿಗಳಿಂದ ತುಂಬಿದ್ದು ಅವುಗಳಲ್ಲಿ ಸಾಯಿ ಬಾಬಾ ಜೀವನದ ಯಶೋಗಾಥೆಗಳನ್ನು ಮಾರುವುದನ್ನು ಕಾಣಬಹುದು.
ಶಿರಡಿ - ಒಂದು ಯಾತ್ರಿ ಕೇಂದ್ರ
ಸಣ್ಣ ಪಟ್ಟಣವಾದ ಶಿರಡಿಯು, ಇಂದು ವಿಶ್ವದ ಎಲ್ಲ ಭಾಗಗಳಿಂದ ಬರುವ ಭಕ್ತಾದಿಳು ಸೂಸುವ ಭಕ್ತಿಯ ತೀವ್ರತೆಯ ಸುಗಂಧದಿಂದ ತುಂಬಿ ತುಳುಕುತ್ತಿದೆ. ಈ ಸಮೂಹವನ್ನು ವಿಶ್ವದ ಆಧ್ಯಾತ್ಮಿಕ ನಕ್ಷೆಯಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಲಾಗಿದೆ. ಇಲ್ಲಿ ಒಮ್ಮೆ ಭೇಟಿಕೊಡಬಹುದಾದ ಶನಿ, ಗಣಪತಿ ಮತ್ತು ಶಂಕರರ ದೇವಾಲಯಗಳೂ ಇವೆ.
ಈ ಪವಿತ್ರಸ್ಥಳವನ್ನು ವರ್ಷದ ಯಾವುದೇ ಸಮಯದಲ್ಲಿ ಸಂದರ್ಶಿಸಬಹುದು, ಆದರೆ ಮಳೆಗಾಲದಲ್ಲಿ ಈ ಪ್ರದೇಶವು ನೀಡುವ ಚೆಲುವನ್ನು ಸವಿಯಲು ಬರಬಹುದಾಗಿದ್ದು ಈ ಸಮಯದಲ್ಲಿ ಆಹ್ವಾನಕರ ವಾತಾವರಣದಿಂದ ಪ್ರದೇಶವು ಭೇಟಿಗೆ ಆದ್ಯತೆಯನ್ನು ಹೊಂದಿರುತ್ತದೆ.
ಪ್ರವಾಸಿಗರು ತಮ್ಮ ಪ್ರಯಾಣವನ್ನು ಪ್ರಮುಖ ಹಬ್ಬಗಳ ಜೊತೆಗೆ ಆಯೋಜಿಸಬಹುದಾಗಿದ್ದು ಗುರು ಪೂರ್ಣಿಮಾ, ದಸರಾ ಮತ್ತು ರಾಮ ನವಮಿ ಶಿರಡಿಯ ಪ್ರಮುಖ ಉತ್ಸವಗಳು. ಈ ಹಬ್ಬಗಳ ಸಂದರ್ಭಗಳಲ್ಲಿ ಸೇರಿರುವ ಅಪಾರ ಪ್ರಮಾಣದ ಭಕ್ತ ಸಮೂಹ ಮತ್ತು ಜನಜಂಗುಳಿಯಿಂದ ಇಡೀ ವಾತಾವರಣವು ರೋಮಾಂಚಕಾರಿಯಾಗಿ ಜೀವಕಳೆ ತುಂಬಿರುತ್ತದೆ. ಎಲ್ಲರೂ ಪಾಲ್ಗೊಳ್ಳಬಹುದಾದಂತಹ ಭಜನೆಗಳು ಮತ್ತು ರಥಯಾತ್ರೆಗಳನ್ನು ನೋಡಬಹುದಾಗಿದ್ದು ಕೇವಲ ಈ ವಿಶೇಷ ದಿನಗಳಲ್ಲಿ ಮಾತ್ರ ಸಾಯಿರವರ ಸಮಾಧಿಯನ್ನು ಇಡೀ ರಾತ್ರಿ ತೆರೆದಿಡಲಾಗುತ್ತದೆ.
ಸಾಯಿ ಬಾಬಾರ ಪವಿತ್ರ ನೆಲೆಯನ್ನು ರಸ್ತೆ, ರೈಲು ಮತ್ತು ವಿಮಾನ ಮಾರ್ಗವಾಗಿ ಸುಲಭದಿಂದ ತಲುಪಬಹುದು. ಈ ಪಟ್ಟಣವು ಉತ್ತಮ ಅಭಿವೃದ್ದಿಯನ್ನು ಹೊಂದಿದ್ದು ನಾಶಿಕ್, ಪುಣೆ ಮತ್ತು ಮುಂಬೈಗಳಿಂದ ಬಸ್ಸುಗಳ ಮೂಲಕ ಸಂಪರ್ಕ ಹೊಂದಿದೆ. ಸಮೀಪದಲ್ಲೇ ಒಂದು ವಿಮಾನ ನಿಲ್ದಾಣವನ್ನೂ ನಿರ್ಮಿಸಲಾಗುತ್ತಿದ್ದು, ವಿಶ್ವದ ಇತರೆ ಭಾಗಗಳಿಂದ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಇದು ಅತ್ಯಂತ ಅನುಕೂಲಕರ ಬೆಳವಣಿಗೆಯಾಗಿದೆ. ರಸ್ತೆ ಮಾರ್ಗವಾಗಿ ಇಲ್ಲಿಗೆ ತಲುಪಬೇಕಾದ್ದಲ್ಲಿ ಅಹಮದ್ ನಗರ್ - ಮನ್ಮಾಡ್ ನಂ.10 ರಾಜ್ಯ ಹೆದ್ದಾರಿಯನ್ನು ಬಳಸಬಹುದಾಗಿದ್ದು, ಇದು ಅಹಮದ್ ನಗರ್ ನ ಸಣ್ಣ ಗ್ರಾಮವಾದ ಕೊಪರ್ಗಾಂವ್ ನಿಂದ ಕೇವಲ 15 ಕಿ ಮೀ ಅಂತರದಲ್ಲಿದೆ.