ಸಾಹಿತ್ಯಿಕವಾಗಿ ಶಿವನ ಮೊಗ ಎಂಬರ್ಥದಿಂದ ಹೆಸರು ಪಡೆದಿರುವ ಶಿವಮೊಗ್ಗ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 275 ಕಿಲೋ ಮೀಟರ್ ದೂರದಲ್ಲಿದೆ. ಸ್ಥಳಿಯರು ಕರೆಯುವಂತೆ ಮಲೆನಾಡಿನ ಭಾಗವಾಗಿರುವ ಶಿವಮೊಗ್ಗ ಪಶ್ಚಿಮಘಟ್ಟಗಳ ಸಾಲಿನಲ್ಲಿ ನೆಲೆ ನಿಂತಿದ್ದು ಸುಲಭವಾದ ಪ್ರಯಾಣಕ್ಕೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ರಸ್ತೆ ಮತ್ತು ರೈಲು ಮಾರ್ಗಗಳ ಸಂಪರ್ಕವನ್ನು ಹೊಂದಿದೆ.
ಶಿವಮೊಗ್ಗದ ಬಗೆಗಿನ ಕೆಲವು ಅಂಶಗಳು
ಐದು ನದಿಗಳ ಹರಿವನ್ನು ಹೊಂದಿರುವ ಶಿವಮೊಗ್ಗ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ್ದು ಕರ್ನಾಟಕ ಆಹಾರದ ತೊಟ್ಟಿಲು ಮತ್ತು ಕರ್ನಾಟಕದ ಅಕ್ಕಿಯ ಕಣಜ ಎಂಬ ಹೆಸರು ಪಡೆದಿದೆ. ಸಹ್ಯಾದ್ರಿ ಬೆಟ್ಟಗಳ ಸಾಲಿನಿಂದಾಗಿ ಶಿವಮೊಗ್ಗೆಯಲ್ಲಿ ಹರಿಯುವ ನದಿಗಳು ವರ್ಷಪೂರ್ತಿ ಮಳೆಯನ್ನು ಕಂಡು ತುಂಬಿ ಹರಿಯುತ್ತವೆ. ಸ್ಥಳೀಯರು ಶಿವಮೊಗ್ಗವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುತ್ತಾರೆ. ಇಲ್ಲಿ ದೇವಸ್ಥಾನಗಳು, ಬೆಟ್ಟಗುಡ್ಡಗಳು, ತರಕಾರಿ ಬೆಳೆಯುವ ಸ್ಥಳಗಳು ಮತ್ತು ಭಾರತದಲ್ಲಿಯೇ ಅತಿ ಎತ್ತರದ ಪ್ರಸಿದ್ದ ಜೋಗ ಜಲಪಾತ ಇಲ್ಲಿದೆ.
ಪ್ರವಾಸಿಗರಿಗೆ ಅಚ್ಚರಿಗಳ ತೊಟ್ಟಿಲು
ಶಿವಮೊಗ್ಗ ಕರ್ನಾಟಕದ ಪ್ರಸಿದ್ದ ಪ್ರವಾಸಿ ಸ್ಥಳಗಳಿಗೆ ಹತ್ತಿರದಲ್ಲಿರುವ ಕಾರಣ ಬಹುತೇಕ ಪ್ರವಾಸಿಗರು ರಾಜ್ಯದ ಬೇರೇ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮುಂಚೆ ಶಿವಮೊಗ್ಗೆಗೆ ಬರುತ್ತಾರೆ. ಶಿವಮೊಗ್ಗದಿಂದ 90 ಕಿಲೋ ಮೀಟರ್ ದೂರದಲ್ಲಿ ಜಿಲ್ಲೆಯ ಗಡಿಭಾಗದಲ್ಲಿರುವ ಆಗುಂಬೆ ತನ್ನ ಸೂರ್ಯಾಸ್ತದ ಸೌಂದರ್ಯಕ್ಕೆ ಸುಪ್ರಸಿದ್ದ. ಸ್ವಚ್ಚ ವಾತಾವರಣವಿರುವ ಸಂದರ್ಭದಲ್ಲಿ ಸೂರ್ಯಾಸ್ತಮಾನವನ್ನು ಆಗುಂಬೆಯಲ್ಲಿ ನೋಡಲು ಚಂದವೇ ಚಂದ. ಆಗುಂಬೆಯ ಸೂರ್ಯಾಸ್ತ ಸ್ಥಳದಲ್ಲಿ ದಟ್ಟವಾದ ಕಾಡು, ಕಣಿವೆಗಳು, ಬೆಟ್ಟದ ಮೇಲಿನಿಂದ ಜಿಗಿಯುವ ನದಿ ಮತ್ತು ಜಲಪಾತಗಳನ್ನು ಕಣ್ತುಂಬಿಕೊಳ್ಳಬಹುದು.
ಗಾಜನೂರು ಬಳಿಯಲ್ಲಿ ತುಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಜಲಾಶಯ ಶಿವಮೊಗ್ಗದಿಂದ 15 ಕಿಲೋ ಮೀಟರ್ ದೂರದಲ್ಲಿದ್ದು ಪ್ರಸಿದ್ದ ವಿಹಾರ ತಾಣವಾಗಿದೆ. ವನ್ಯಜೀವಿಗಳ ಬಗ್ಗೆ ಆಸಕ್ತಿಯುಳ್ಳವರಿಗೆ ತ್ಯಾವರೆಕೊಪ್ಪ ಸಿಂಹಧಾಮವಿದೆ. ಶಿವಮೊಗ್ಗದಿಂದ 28 ಕಿಲೋ ಮೀಟರ್ ದೂರದಲ್ಲಿರುವ ಭದ್ರಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು ಸುಮಾರು 200 ಅಡಿ ಎತ್ತರವಿದ್ದು ರಾಜ್ಯದಲ್ಲಿಯೇ ಹೆಚ್ಚು ಎತ್ತರದ ಅಣೆಕಟ್ಟು ಇದಾಗಿದೆ. ಬೌದ್ಧ ಮತ್ತು ಜೈನ ಧರ್ಮಗಳ ಪ್ರಭಾವದಿಂದ ಹಿಂದೂ ಧರ್ಮವನ್ನು ರಕ್ಷಿಸಲು ಆದಿ ಶಂಕರಾಚಾರ್ಯರು ಸ್ಥಾಪಿಸಿರುವ ನಾಲ್ಕು ಮಠಗಳಲ್ಲಿ ಶೃಂಗೇರಿ ಶಾರದಾ ಮಠವೂ ಒಂದು. ಶಿವಮೊಗ್ಗದಿಂದ ಶೃಂಗೇರಿ 100 ಕಿಲೋ ಮೀಟರ್ ದೂರದಲ್ಲಿದೆ. ಯಾತ್ರಾರ್ಥಿಗಳಿಗೆ ನೆಚ್ಚಿನ ತಾಣವಾಗಿರುವ ಶೃಂಗೇರಿಗೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಪಶ್ಚಿಮಘಟ್ಟಗಳು ಅಧ್ಬುತವಾದ ಕಲ್ಪೆನಗೂ ನಿಲುಕದ ಅಂದಾಜಿಸಲೂ ಸಾಧ್ಯವಿಲ್ಲದ ನಿಸರ್ಗದ ಅನುಭವಗಳನ್ನು ನೀಡುತ್ತವೆ. ಭಾರತದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಎರಡನೇ ಪ್ರದೇಶ ಆಗುಂಬೆಯಾಗಿದ್ದು ಏಕೈಕ ಮಳೆಕಾಡುಗಳ ಅಧ್ಯಯನ ಕೇಂದ್ರ ಆಗುಂಬೆಯಲ್ಲಿದೆ ಮತ್ತು ಆಗುಂಬೆ ಕಾಳಿಂಗ ಸರ್ಪಗಳ ಆವಾಸ ತಾಣವು ಕೂಡ ಹೌದು. ಮಳೆರಾಯನ ಕೃಪೆಯಿಂದ ಶಿವಮೊಗ್ಗ ಜಿಲ್ಲೆಯ ನದಿ ತೊರೆ ಜಲಪಾತಗಳು ಜುಲೈ ನಿಂದ ಜನವರಿ ತಿಂಗಳಲ್ಲಿ ಜೀವಂತಿಕೆ ಪಡೆದುಕೊಳ್ಳುವುದರಿಂದ ಈ ಸಮಯದಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಬೇಕು. ಶಿವಮೊಗ್ಗದಲ್ಲಿ ಸೂಕ್ತ ಬೆಲೆಗೆ ದೊರಕುವ ಹೊಟೆಲ್ ಮತ್ತು ರೆಸಾರ್ಟ್ ಗಳಿದ್ದು ಉಳಿದ ಪ್ರವಾಸಿ ತಾಣಗಳನ್ನು ಭೇಟಿ ನೀಡುವ ಮುಂಚೆ ಇಲ್ಲಿ ಕ್ಯಾಂಪ್ ಹೂಡಬಹುದು.