ಹಿಮಾಚಲ ಪ್ರದೇಶವು, ಹಿಮದಿಂದ ಆವೃತವಾದ ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿಗೆ ಪ್ರತಿವರ್ಷ ಅಸಂಖ್ಯ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಶಿಖರ, ಹಿಮ ನದಿಗಳು, ಸರೋವರಗಳು ಇನ್ನು ಸಾಕಷ್ಟು ಸುಂದರ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಅಲ್ಲದೇ ವರ್ಷದ ಎಲ್ಲಾ ದಿನಗಳೂ ಇಲ್ಲಿ ಒಂದೇ ರೀತಿಯ ವಾತಾವರಣವಿರುವುದರಿಂದ ಇಲ್ಲಿಗೆ ವರ್ಷದ ಯಾವುದೇ ಸಮಯದಲ್ಲೂ ಪ್ರವಾಸಿಗರು ಭೇಟಿ ನೀಡಬಹುದು.
ಹಿಮಾಚಲ ಪ್ರದೇಶದ, ಸರಹನ್ ಪ್ರದೇಶವು ಇಂತಹ ಪ್ರದೇಶಗಳಲ್ಲಿ ಒಂದು. ಇಲ್ಲಿನ ಅದ್ಭುತವಾದ ಭೂಪ್ರದೇಶ ಹಾಗೂ ಸೇಬು ತೋಟಗಳು, ಹಚ್ಚ ಹಸಿರಿನ ಹುಲ್ಲು ಹಾಸು, ಹಿಮಾಚ್ಛಾದಿತ ಶಿಖರಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತವೆ.
ಸಹರನ್, ಸಟ್ಲೆಜ್ ಕಣಿವೆಯಲ್ಲಿರುವ ಸುಂದರವಾದ ಹ್ಯಾಮ್ಲೆಟ್ (ಹಳ್ಳಿ). ಇದು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿದೆ, ಅಲ್ಲದೇ ಇದು ಮನಸ್ಸು ಸೆಳೆಯುವಂತಹ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಸರಾಸರಿ ಸಮುದ್ರ ಮಟ್ಟದಿಂದ 2165 ಮೀ ಎತ್ತರದ ಸ್ಥಾನದಲ್ಲಿದೆ. ಈ ಸ್ಥಳವು ಸೇಬು ಹಣ್ಣಿನ ತೋಟಗಳು, ಪೈನ್ ಕಾಡುಗಳು, ಸಣ್ಣ ಹೊಳೆಗಳು, ವಕ್ರವಾದ ರಚನೆಗಳು ಮತ್ತು ಸ್ಲೇಟ್ ಛಾವಣಿ ಮನೆ ಮೊದಲಾದವುಗಳಿಗೆ ಜನಪ್ರಿಯವಾಗಿದೆ.
ಸರಹನ್ ಗೆ ಸಂಬಂಧಿಸಿದ ಹಲವಾರು ಪುರಾಣಗಳು ಮತ್ತು ಜನಪದ ಕಥೆಗಳು ಕೇಳಸಿಗುತ್ತವೆ. ಒಂದು ದಂತಕಥೆಯ ಪ್ರಕಾರ ಹೀಗೆ ಹೇಳಲಾಗುತ್ತದೆ : ಕುಲ್ಲು ರಾಜ, ನೆರೆಯ ಸಾಮ್ರಾಜ್ಯ ಬುಶೈರ್ ಮೇಲೆ ಯುದ್ಧ ಘೋಷಿಸಿದ. ಬುಶೈರ್ ರಾಜ ಯುದ್ಧ ಗೆಲ್ಲುತ್ತಾನೆ ಮತ್ತು ಕುಲ್ಲು ರಾಜ ಇವನಿಂದ ಕೊಲ್ಲಲ್ಪಟ್ಟನು. ನಂತರ ಬುಶೈರ್ ರಾಜನು ಮೃತ ಕುಲ್ಲು ರಾಜನ ಶಿರಚ್ಛೇದನ ಮಾಡಿ, ಅದನ್ನು ಸರಹನ್ ಹೊರಭಾಗದಲ್ಲಿ ನೇತು ಹಾಕಿದನು. ಹೀಗಿರುವಾಗ ಮೃತ ರಾಜನ ಕುಟುಂಬದವರು ಅಂತಿಮ ಸಂಸ್ಕಾರ ಕೈಗೊಳ್ಳಲು, ರಾಜನ ತಲೆ ನೀಡಬೇಕೆಂದು ಬುಶೈರ್ ರಾಜನನ್ನು ಕೇಳಿದಾಗ, ಬುಶೈರ್ ರಾಜ ಅವರ ಮನವಿಗೆ ಮೂರು ಶರತ್ತುಗಳ ಮೇಲೆ ಒಪ್ಪಿದನು. ಮೊದಲನೆಯ ಶರತ್ತು, ಕುಲ್ಲು ಜನರು ಬುಶೈರ್ ರಾಜನ ಆಡಳಿತವನ್ನು ಎಂದಿಗೂ ವಿರೋಧಿಸುವಂತಿಲ್ಲ. ಇನ್ನೊಂದು ಶರತ್ತೆಂದರೆ, ಹಿಂದೆ ಕುಲ್ಲು ರಾಜನಿಂದ ವಶಪಡಿಸಿಕೊಂಡ ಭೂಮಿಯನ್ನು ಹಿಂತಿರುಗಿಸುವುದು. ಅಂತಿಮ ಶರತ್ತು, ಈ ಸರಹನ್ ಪ್ರದೇಶದ ಮುಖ್ಯ ದೇವರಾದ ರಘುನಾಥ ಚಿತ್ರವನ್ನು ಮತ್ತೆ ಮರಳಿಸಲಾಗುವುದಿಲ್ಲ. ಮೂರು ಷರತ್ತುಗಳನ್ನು ಬುಶೈರ್ ನಲ್ಲಿ ದಸರಾ ಹಬ್ಬವನ್ನು ಆಚರಿಸಬೇಕೆಂಬ ನಿಬಂಧನೆಯಡಿ ಒಪ್ಪಿಕೊಳ್ಳಲಾಯಿತು. ಅಂದಿನಿಂದ ದಸರಾ ಈ ಪ್ರದೇಶದ ಒಂದು ಪ್ರಮುಖ ಉತ್ಸವವಾಗಿ ಆಚರಿಸಲ್ಪಡುತ್ತಿದೆ. ರಘುನಾಥ್ ದೇವರ ಚಿತ್ರವನ್ನು ದೇವತೆ ಭೀಮಕಾಲಿ ಜೊತೆಗೆ ಇರಿಸಲಾಗಿದೆ.
ಸರಹನ್ ನಲ್ಲಿ ಹಲವಾರು ಪ್ರವಾಸಿ ಆಕರ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ ಭೀಮಕಾಲಿ ದೇವಾಲಯ ಸಂಕೀರ್ಣ, ಪಕ್ಷಿಗಳ ಉದ್ಯಾನ (ಬರ್ಡ್ ಪಾರ್ಕ್) ಮತ್ತು ಭಾಬಾ ಕಣಿವೆ ಹೀಗೆ ಇನ್ನೂ ಹಲವನ್ನು ನಮೂದಿಸಬಹುದು. ಭೀಮಕಾಲಿ ದೇವಾಲಯ ಸಂಕೀರ್ಣ ಕನಿಷ್ಠ 800 ವರ್ಷಗಳ ಹಳೆಯ ದೇವಾಲಯ ಎಂದು ನಂಬಲಾಗಿದೆ. ಭಕ್ತರು ಭಾರೀ ಸಂಖ್ಯೆಯಲ್ಲಿ ಇಲ್ಲಿಗೆ ಪ್ರಣಾಮ ಪಾವತಿಸಲು ಪ್ರತಿ ವರ್ಷ ಬರುತ್ತಾರೆ. ದೇವಾಲಯದ ವಾಸ್ತು ಶೈಲಿಯು ಭಾರತೀಯ ಮತ್ತು ಬೌದ್ಧರ ವಾಸ್ತುಶಿಲ್ಪ ಶೈಲಿಗಳ ಒಂದು ಅನನ್ಯ ಮಿಶ್ರಣವಾಗಿದೆ. ಈ ದೇವಾಲಯ ದೇಶದ ಪ್ರಮುಖ 'ಶಕ್ತಿಪೀಠ' ಅಥವಾ 'ಪವಿತ್ರ ಸ್ಥಳಗಳ'ಲ್ಲಿ ಒಂದು.
ಜಲಾಶಯ ಸರೋವರ ಮತ್ತು ಆಲ್ಪೈನ್ ಹುಲ್ಲುಗಾವಲುಗಳ ಒಂದು ಸೌಮ್ಯ ಭೂ ಪ್ರದೇಶವನ್ನು ಹೊಂದಿರುವ ಭಾಬಾ ವ್ಯಾಲಿ, ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸರಹನ್ ಪ್ರದೇಶಕ್ಕೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಪಕ್ಷಿ ಉದ್ಯಾನಕ್ಕೂ ಭೇಟಿ ನೀಡಲೇಬೇಕು. ಇದು ಪಕ್ಷಿಗಳ ಸಂತಾನೋತ್ಪತ್ತಿಯ ಕೇಂದ್ರವಾಗಿದ್ದು ಹಿಮಾಚಲ ಪ್ರದೇಶ ರಾಜ್ಯದಲ್ಲಿ ಕಾಣಸಿಗುವ ಮೊನಲ್ ಪಕ್ಷಿಗಳ ನೆಲೆಯಾಗಿದೆ.
ಸಮೃದ್ಧ ಹಸಿರು ದೇವದಾರು ಮರಗಳು ಮತ್ತು ಹಿಮದಿಂದ ಆವೃತವಾದ ಇಲ್ಲಿನ ಬಶೈಲ್ ಶೀಖರ ಮತ್ತೊಂದು ಪ್ರಸಿದ್ಧವಾದ ತಾಣ. ಸರಹನ್ ಸಮುದ್ರ ಮಟ್ಟದಿಂದ 5155 ಮೀಟರ್ ಎತ್ತರದಲ್ಲಿದ್ದು, ಇದು ಶ್ರೀಖಂಡ ಮಹಾದೇವ್ ಎಂದೇ ಹೆಸರುವಾಸಿಯಾಗಿದೆ. ಇದು ಹಿಂದೂ ಯಾತ್ರಾ ಕೇಂದ್ರವಾಗಿದ್ದು ಇಲ್ಲಿನ ಹಿಂದೂ ದೇವರು ಶಿವನು, ಒಂದು ಕಥೆಯ ಪ್ರಕಾರ ಈ ಶಿಖರದಲ್ಲಿ ಧ್ಯಾನ ಮಾಡುತ್ತಿದ್ದನು ಎಂದು ಹೇಳಲಾಗುತ್ತದೆ. ಭಾರತೀಯ ಮಹಾನ್ ಕಾವ್ಯ, 'ಮಹಾಭಾರತ' ಪ್ರಕಾರ, ಪಾಂಡವರು ಈ ಪವಿತ್ರ ಶಿಖರವನ್ನು ಏರಿದ್ದರು ಎನ್ನಲಾಗಿದೆ. ಈ ಶಿಖರ ಇಂದು ಇಲ್ಲಿಗೆ ಬರುವ ಸಂದರ್ಶಕರಿಗೆ, ಪ್ರವಾಸಿಗರಿಗೆ ಪ್ರಚಂಡ ಚಾರಣ ಮಾಡುವಿಕೆಗೆ ಅವಕಾಶಗಳನ್ನು ಒದಗಿಸುವತ್ತ ಮುಂದುವರೆದಿದೆ.
ಸರಹನ್ ನ ಇನ್ನುಳಿದ ಕೆಲವು ಪ್ರವಾಸಿ ಆಕರ್ಷಣೆಯ ತಾಣಗಳೆಂದರೆ, ಜಿಯೋರಿ, ಬಂಜಾರ ರಿಟ್ರೀಟ್ (ಆಶ್ರಯಧಾಮ), ಗೌರ್, ದರಂಗ್ ಘಾಟಿ ಮತ್ತು ಸಂಗ್ಲಾ ಕಣಿವೆ ಮೊದಲಾದವುಗಳು. ಜಿಯೋರಿ ಇದೊಂದು ಬಿಸಿ ನೀರಿನ ಬುಗ್ಗೆಯಾಗಿದ್ದು ಸರಹನ್ ನಿಂದ 20 ಕೀ.ಮಿ ದೂರದಲ್ಲಿದೆ. ಹಾಗೆಯೆ ರಾಷ್ಟ್ರೀಯ ಹೆದ್ದಾರಿ 22 ಮಾರ್ಗದಲ್ಲಿರುವ ಬಂಜಾರ ರಿಟ್ರೀಟ್, ಅದರ ಹಸಿರು ಸೇಬು ತೋಟಗಳಿಂದ ಪ್ರಸಿದ್ಧವಾಗಿದೆ. ಸಂಗ್ಲಾ ಕಣಿವೆ ಸರಹನ್ ಹತ್ತಿರದಲ್ಲಿಯೇ ಇದ್ದು, ಇದು ಅಲ್ಲಿ ಸಮೃದ್ಧವಾಗಿ ಬೆಳೆಯುವ ಸೇಬು ಮತ್ತು ಚೆರ್ರಿ ಹಣ್ಣಿನ ತೋಟಗಳು ಮತ್ತು ಹಿಮಝರಿಗಳಿಗೆ ಜನಪ್ರಿಯವಾದ ಬೆಟ್ಟದ ಪಟ್ಟಣ.
ಸರಹನ್ ಗೆ ಪ್ರಯಾಣ ಬೆಳೆಸಲು ಯೋಚಿಸಿರುವ ಪ್ರಯಾಣಿಕರು, ಈ ಸ್ಥಳವನ್ನು ತಲುಪಲು ರಸ್ತೆ ಮಾರ್ಗ, ರೈಲ್ವೆ ಮಾರ್ಗ, ವಿಮಾನ ಮಾರ್ಗ ಹೀಗೆ ಎಲ್ಲಾ ವಿಧದ ಸಾರಿಗೆ ಮಾರ್ಗಗಳ ಮೂಲಕವೂ ಇಲ್ಲಿಗೆ ಸುಲಭವಾಗಿ ತಲುಪಲು ಸಾಧ್ಯ. ಸರಹನ್ ಪಟ್ಟಣಕ್ಕೆ ಪ್ರವಾಸಕ್ಕೆ ಬರುವವರಿಗೆ ಸಲಹೆಯೆಂದರೆ ಎಪ್ರೀಲ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಈ ಸ್ಥಳಕ್ಕೆ ಬರುವುದು ಹೆಚ್ಚು ಸೂಕ್ತವಾದ ಸಮಯ. ಆದಾಗ್ಯೂ ಪ್ರವಾಸಿಗರು ತಂಪಾದ ವಾತಾವರಣವನ್ನು ಹೊಂದಿರುವ ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸುವ ಚಳಿಗಾಲದ ಅವಧಿಯಲ್ಲಿಯೂ ಕೂಡಾ ಈ ಸ್ಥಳಕ್ಕೆ ಪ್ರವಾಸಕ್ಕಾಗಿ ಆಗಮಿಸಬಹುದು.