ದಟ್ಟಾರಣ್ಯದ ನಡುವೆ ನೆಲೆ ನಿಂತಿರುವ ಶಬರಿಮಲೆ ಹಿಂದೂಗಳ ಪಾಲಿಗೆ ಪುಣ್ಯಕ್ಷೇತ್ರ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆ ನಿಂತಿರುವ ಶಬರಿಮಲೆ, ಸದಾ ಜುಳು ಜುಳು ಹರಿಯುವ ತೊರೆ ಮತ್ತು ಪಂಪಾ ನದಿಯ ಕಾಳಜಿಯಿಂದಾಗಿ ತನ್ನ ನೈಜ ಸೌಂದರ್ಯವನ್ನು ಉಳಿಸಿಕೊಂಡಿದೆ. ಮಲಯಾಳಂ ಕ್ಯಾಲೆಂಡರ್ ಪ್ರಕಾರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನ ಪವಿತ್ರ ಮಂಡಲಕಾಲ ಸಮಯದಲ್ಲಿ ಲಕ್ಷಾಂತರ ಭಕ್ತರು ಹಿಂಡು ಹಿಂಡಾಗಿ ಇಲ್ಲಿ ಸೇರುವುದನ್ನು ಕಾಣಬಹುದು. ಈ ಪುಣ್ಯ ಸಮಯದಲ್ಲಿ ಯಾವುದೇ ಜಾತಿ, ವರ್ಗ ಮತ್ತು ಆರ್ಥಿಕ ಹಿನ್ನೆಲೆಯನ್ನು ನೋಡದೆ ಭಾರತದ ವಿವಿಧ ಕಡೆಗಳಿಂದ ಮತ್ತು ವಿದೇಶಗಳಿಂದಲೂ ಭಕ್ತರ ದಂಡು ಶಬರಿಮಲೆಯತ್ತ ಧಾವಿಸಿ ಬರುತ್ತದೆ.
ಪುರಾಣದಲ್ಲಿನ ಕಲ್ಪನೆ
ಶಬರಿಮಲೆ ಎಂಬ ಹೆಸರು ಬರಲು ರಾಮಾಯಣದಲ್ಲಿ ಬರುವ ಪೌರಾಣಿಕ ಪಾತ್ರವಾದ ಶಬರಿಗೆ ಸೇರಿದ ಬೆಟ್ಟ ಎಂಬುದೇ ಕಾರಣ. ಪದನಮತಿಟ್ಟ ಜಿಲ್ಲೆಯ ಪೂರ್ವದಲ್ಲಿ ನೆಲೆ ನಿಂತಿರುವ ಶಬರಿಮಲೆ, ಕೇರಳದ ಸೌಂದರ್ಯವನ್ನು ಹೆಚ್ಚಿಸಿದ ಸಂರಕ್ಷಿತ ಪೆರಿಯಾರ್ ಹುಲಿಬೆಟ್ಟವನ್ನೂ ಒಳಗೊಂಡಿದೆ. ಶಬರಿಮಲೆಯಲ್ಲಿ ಪೂಜಿಸಲ್ಪಡುವ ಅಧಿದೇವತೆ ಸ್ವಾಮಿ ಅಯ್ಯಪ್ಪ. ಶಬರಿಮಲೆಗೆ ತೀರ್ಥಯಾತ್ರೆಗೆ ಬರಲು ಇಚ್ಚಿಸುವ ಭಕ್ತರು ಕಡ್ಡಾಯವಾಗಿ ಮಾಂಸಾಹಾರವನ್ನು ತ್ಯಜಿಸಬೇಕು ಮತ್ತು 41 ದಿನಗಳ ಕಠಿಣ ವ್ರತಾಚರಣೆ ನಡೆಸಬೇಕು. ದಟ್ಟ ಮರಗಳು ಮತ್ತು ತೊರೆಗಳ ಮಧ್ಯೆ ಕಡಿದಾದ ಬೆಟ್ಟವನ್ನು ಏರುವ ಅನುಭವವನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಒಮ್ಮೆಯಾದರೂ ಹೊಂದಲೇಬೇಕು.
ದೇವರೆಡೆಗೆ ಸಾಗುವ ಹಾದಿ
ನಡಿಗೆಯ ಮೂಲಕ ದೇವಸ್ಥಾನವನ್ನು ತಲುಪಲು ಇಚ್ಚಿಸುವವರಿಗೆ, ಶಬರಿಮಲೆ ದೇವಸ್ಥಾನದ ಹಾದಿ ಕಡಿದಾದ, ಅಷ್ಟೇ ಪ್ರಯಾಸಕರವಾದ ಮತ್ತು ದೂರದ ಹಾದಿ. ಆದರೆ ಬಹಳ ದಣಿವಾದರೆ ಮರಗಳು ಸಮಾಧಾನ ನೀಡುತ್ತವೆ. ನೆರಳು ನಿಮ್ಮನ್ನು ಪ್ರಯಾಣದುದ್ದಕ್ಕೂ ಸಂತೈಸುತ್ತದೆ. ಪ್ರತಿವರ್ಷ ಸರಿಸುಮಾರು 45-50 ದಶಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಿದ್ದು, ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚು ವಾರ್ಷಿಕ ಭಕ್ತರು ಭೇಟಿ ನೀಡುವ ತೀರ್ಥಕ್ಷೇತ್ರ ಎನಿಸಿಕೊಂಡಿದೆ. ಸ್ವಾಮಿ ಅಯ್ಯಪ್ಪ ದೇವಸ್ಥಾನ 18 ಬೆಟ್ಟಗಳ ಮಧ್ಯೆ ನೆಲೆ ನಿಂತಿದ್ದು, ಯಾವೊಬ್ಬ ಪ್ರವಾಸಿಯೂ ಈ ಚಿತ್ರಣವನ್ನು ನೋಡುವುದನ್ನು ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಶಬರಿಮಲ ದೇವಸ್ಥಾನ ಪರ್ವತಗಳ ಸಾಲು ಹಾಗೂ ದಟ್ಟ ಅರಣ್ಯಗಳಿಂದ ಸುತ್ತುವರಿದಿದ್ದು ಸಮುದ್ರ ಮಟ್ಟದಿಂದ 1535 ಅಡಿ ಎತ್ತರದಲ್ಲಿದೆ.
ಶಬರಿಮಲೆಯ ಐತಿಹ್ಯ
ಪುರಾಣ ಐತಿಹ್ಯಗಳ ಪ್ರಕಾರ, ಹಿಂದೂ ದೇವರಾದ ಅಯ್ಯಪ್ಪ ದಿಗಿಲು ಹುಟ್ಟಿಸಿದ್ದ ಭಯಂಕರ ರಕ್ಕಸಿ ಮಹಿಷಿಯನ್ನು ಸಂಹಾರ ಮಾಡಿದ ನಂತರ ಇದೇ ಸ್ಥಳದಲ್ಲಿ ಧ್ಯಾನಸ್ಥನಾಗುತ್ತಾನೆ. ಅನೇಕರಿಗೆ ಶಬರಿಮಲೆ ದೇವಸ್ಥಾನವೆಂದರೆ ಏಕತೆ, ಸಮಾನತೆ ಮತ್ತು ಪ್ರಪಂಚದ ಎಲ್ಲ ಒಳ್ಳಯತನಗಳ ಸಂಕೇತ. ವಾಸ್ತವದಲ್ಲಿ ಇದು ಸೂಚಿಸುವುದೆಂದರೆ ದುಷ್ಟ ಶಕ್ತಿಗಳ ವಿರುದ್ದ ಧರ್ಮಕ್ಕೆ ವಿಜಯ ಮತ್ತು ಪ್ರತಿಯೊಬ್ಬರಿಗೂ ನ್ಯಾಯ ದೊರೆಯುತ್ತದೆ ಎಂಬುದು. ಭಕ್ತರ ಜನಾಂಗ, ಸಂತತಿ, ವಂಶ ಮತ್ತು ಧರ್ಮಗಳನ್ನು ಲೆಕ್ಕಿಸದೇ ಎಲ್ಲ ಭಕ್ತರನ್ನೂ ಒಪ್ಪಿಕೊಳ್ಳುವ ಅಪರೂಪದ ದೇವಸ್ಥಾನಗಳಲ್ಲಿ ಶಬರಿಮಲೆಯೂ ಒಂದು. ವಿಷ್ಣುವಿನ ಅವತಾರವಾದ ಸಂತ ಪರಶುರಾಮ ತನ್ನ ಕೊಡಲಿಯಿಂದ ಅಯಪ್ಪನ ಮೂರ್ತಿಯನ್ನು ಕಡೆದನೆಂಬ ಮಾತಿದೆ. ಶಬರಿಮಲೆಯು ಸರ್ಕಾರಿ ಸ್ವಾಮ್ಯದ ತಿರುವಾಂಕೂರ್ ದೇವಸ್ಥಾನ ಮಂಡಳಿಯ ಆಡಳಿತದಲ್ಲಿದೆ.
ತೀರ್ಥಯಾತ್ರೆ
ನವೆಂಬರ್ ತಿಂಗಳ ಮಧ್ಯಭಾಗದಿಂದ ಶುರುವಾಗುವ ತೀರ್ಥಯಾತ್ರೆಯ ಸಮಯ ಜನವರಿ ತಿಂಗಳ ನಾಲ್ಕನೇ ವಾರಕ್ಕೆ ಅಂತ್ಯವಾಗುತ್ತದೆ. ಸ್ಥಳಿಯರ ವಾಸ ಕಡಿಮೆ ಇರುವ ಶಬರಿಮಲೆ ಸದಾ ತೀರ್ಥಯಾತ್ರಿಗಳಿಂದ ಗಿಜಿಗುಡುತ್ತದೆ. ಮಂಡಲಪೂಜೆ ಮತ್ತು ಮಕರವಿಳಕ್ಕು ಶಬರಿಮಲೆಯ ಪ್ರಮುಖ ಹಬ್ಬದ ಅವಧಿಗಳು. ಮುಸ್ಲಿಂ ಸಂತ ವಾವರ ಸ್ವಾಮಿಯ ಪುಣ್ಯ ಸ್ಥಳವೂ ಇಲ್ಲಿದ್ದು ಪೂಜೆ ಸಲ್ಲಿಸಲಾಗುತ್ತಿದ್ದು ಧಾರ್ಮಿಕ ಸಹಿಷ್ಣುತೆ ಮತ್ತು ಏಕತೆಗೆ ಸೂಕ್ತವಾದ ಉದಾಹರಣೆ.
ಒಂದು ಮರೆಯಲಾರದ ಅನುಭವ
ಆಧ್ಯಾತ್ಮಿಕ ಮತ್ತು ಸೌಂದರ್ಯಯುತ ಮೌಲ್ಯವನ್ನು ಹೊಂದಿದ ಶಬರಿಮಲೆಯ ಭೇಟಿ ಅನುಭವದ ಕಣಜ. ಸಾವಿರಾರು ತೀರ್ಥಯಾತ್ರಿಕರು ವರ್ಷದಲ್ಲಿ ಒಮ್ಮೆಯಾದರೂ ತಮ್ಮ ಭಕ್ತಿಯನ್ನು ಸಂತ್ರಪ್ತಿಗೊಳಿಸಲು ಈ ಆಧ್ಯಾತ್ಮ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಹುಲುಸಾಗಿ ಬೆಳೆದ ಕಾಡು ಮತ್ತು ಹರಿಯುವ ತೊರೆಯ ಬುಗ್ಗೆಗಳನ್ನು ದಾಟಿ ಬೆಟ್ಟವೇರುತ್ತ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಸುತ್ತಾಡುವುದು ಒಂದು ಸಾಹಸವೇ ಸರಿ.
ದೇವಸ್ಥಾನದ ತುದಿಯನ್ನೇರಲು ಸರಿಸುಮಾರು 3 ಕಿಲೋ ಮೀಟರ್ ಗಳ ಚಾರಣದ ಅಗತ್ಯವಿದೆ. ಆದರೆ ಮಾಡಿದ ಚಾರಣ ಸಾರ್ಥಕವೆನಿಸುತ್ತದೆ. ಏರಿಳಿಯುವ ಪರ್ವತ ಶ್ರೇಣಿಗಳು ಮತ್ತು ಆಯಾ ಕಾಲದ ಹೂವು, ಮರಗಿಡ, ಪಶು ಪಕ್ಷಿಗಳನ್ನು ನೋಡುತ್ತ ಸಾಗುವ ಚಾರಣ ಪ್ರಕೃತಿ ಪ್ರಿಯರಿಗಂತೂ ತ್ರಪ್ತಿ ನೀಡುತ್ತವೆ. ಮುಖ್ಯ ನಗರಗಳಿಂದ ರಸ್ತೆ ಮತ್ತು ರೈಲುಮಾರ್ಗವಾಗಿ ಪಂಪಾನಗರವನ್ನು ತಲುಪಿಕೊಂಡರೆ ಶಬರಿಮಲೆಯನ್ನು ನೋಡಬಹುದು. ಶಬರಿಮಲೆಯನ್ನು ಭೇಟಿ ಮಾಡುವವರಿಗೆ ಎಲ್ಲ ಕಾಲದಲ್ಲೂ ಪ್ರವಾಸಿ ಪ್ಯಾಕೇಜ್ ಗಳು ಮತ್ತು ತಕ್ಕುದಾದ ಹೊಟೇಲುಗಳು ಇಲ್ಲಿ ಲಭ್ಯವಿವೆ.