ರಾಜ್ ಕೋಟ್ ಸೌರಾಷ್ಟ್ರ ರಾಜ್ಯದ ಮಾಜಿ ರಾಜಧಾನಿಯಾಗಿ ಭಾರೀ ಪ್ರಸಿದ್ಧಿ ಪಡೆದುಕೊಂಡಿತ್ತು. ಈಗ ಅದು ರಾಜಧಾನಿಯಲ್ಲದಿದ್ದರೂ ವೈಭವದ ಗತಕಾಲ ಮತ್ತು ಬ್ರಿಟಿಷರ ಕಾಲದಿಂದ ಇತಿಹಾಸದಲ್ಲಿ ತನ್ನ ಹೆಸರನ್ನು ಉಳಿಕೊಂಡಿರುವ ಮತ್ತು ರಾಜ್ ಕೋಟ್ ಜನರ ಆತಿಥ್ಯದಿಂದಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಇತಿಹಾಸ
ಕ್ರಿ.ಶ. 1620ರಲ್ಲಿ ಜಮಾನಗರ್ ರಾಜ ಕುಟುಂಬದ ಥಾಕೊರೆ ಸಾಹಿಬ್ ವಿಭೋಜಿ ಅಜೊಜಿ ಜಡೇಜಾ ಎಂಬವರು ರಾಜ್ ಕೋಟ್ ನ್ನು ನಿರ್ಮಿಸಿದ್ದರು. ಇದರ ಸಹಸ್ಥಾಪಕರಾದ ರಾಜು ಸಂಧಿ ಅವರ ಹೆಸರನ್ನೇ ರಾಜ್ ಕೋಟ್ ಗೆ ಇಡಲಾಗಿದೆ. ಮುಘಲ್ ದೊರೆಗಳಿಗೆ ಗುಜರಾತ್ ನಲ್ಲಿ ಆಡಳಿತ ಸ್ಥಾಪಿಸಲು ನೆರವಾದ ಥಾಕೊರೆ ಸಾಹಿಬ್ ಗೆ ಈ ಭೂಭಾಗವನ್ನು ನೀಡಲಾಗಿತ್ತು. ಇದರೊಂದಿಗೆ ಆತ ತನ್ನ ಸಾಮ್ರಾಜ್ಯವನ್ನು ಬಲಗೊಳಿಸಲು ಸ್ಥಳೀಯ ಕಥಿ ಬುಡಕಟ್ಟು ಜನಾಂಗ ಮತ್ತು ಜುನಾಗಢ್ ನ ರಾಜನನ್ನು ಎದುರಿಸಬೇಕಾಯಿತು.
ನವಾಬರ ಆಡಳಿತಾವಧಿಯಲ್ಲಿ
ಕ್ರಿ.ಶ. 1720ರಲ್ಲಿ ರಾಜ್ ಕೋಟ್ ನ್ನು ಜುನಾಗಢ್ ನ ಆಡಳಿತದ ಅಧಿಕಾರಿಯಾಗಿದ್ದ ಮಾಸುಮ್ ಖಾನ್ ವಶಪಡಿಸಿಕೊಂಡ. ಆತ ಇದಕ್ಕೆ ಮಸುಮಾಬಾದ್ ಎಂದು ಹೆಸರಿಟ್ಟ. ಕ್ರಿ.ಶ. 1722ರಲ್ಲಿ ನಗರದ ರಕ್ಷಣೆಗಾಗಿ 8 ಅಡಿ ದಪ್ಪ ಗೋಡೆ ಮತ್ತು ಎಂಟು ದ್ವಾರಗಳನ್ನು ನಿರ್ಮಿಸಿ ಅದಕ್ಕೆ ಕಬ್ಬಿಣದ ಪ್ರಕ್ಷೇಪಗಳನ್ನು ಅಳವಡಿಸಿದ. ಖಾದಿ ನಾಕಾ ಎಂದು ಕರೆಯಲ್ಪಡುತ್ತಿದ್ದ ಎಂಟನೇ ದ್ವಾರದಲ್ಲಿ ಮಾತ್ರ ಯಾವುದೇ ಮೊಳೆಗಳಿರಲಿಲ್ಲ ಮತ್ತು ಇದನ್ನು ನಖಲಂಕ ಮಂದಿರ ರಕ್ಷಿಸುತ್ತಿತ್ತು ಎಂದು ನಂಬಲಾಗಿತ್ತು. ಬೇಡಿ ನಾಕಾ ಮತ್ತು ರಾಯಕ ನಾಕಾ ದ್ವಾರಗಳು ಈಗಲೂ ಉಳಿದುಕೊಂಡಿದೆ. ಬ್ರಿಟಿಷರು ಇದನ್ನು ನವೀಕರಿಸಿ ಮೂರು ಮಹಡಿಗಳ ಗಡಿಯಾರ ಮಹಲುಗಳನ್ನಾಗಿ ಮಾಡಿದರು.
ಬ್ರಿಟಿಷರ ಸಂಘ
ಬ್ರಿಟಿಷರ ಆಡಳಿತಾವಧಿಯಲ್ಲಿ ರಾಜ್ ಕೋಟ್ ಕಲೆ, ಸಂಸ್ಕೃತಿ ಮತ್ತು ಶಿಕ್ಷಣದಲ್ಲಿ ಭಾರೀ ಅಭಿವೃದ್ದಿ ಕಂಡಿತು. ರಾಜ್ ಕುಮಾರ್ ಕಾಲೇಜ್, ವಾಟ್ಸನ್ ಮ್ಯೂಸಿಯಂ, ಲಾಂಗ್ ಲೈಬ್ರೇರಿ, ಕನೌಟ್ ಹಾಲ್ ಮತ್ತು ಮಾಸೊನಿಕ್ ಲಾಡ್ಜ್(ಮಾಸೊನ್ ಗಳ ಮೊದಲ ಭೇಟಿಯ ಸ್ಥಳ) ಮೊದಲಾದ ಪ್ರಮುಖ ಕಟ್ಟಡಗಳನ್ನು ಈ ವೇಳೆ ನಿರ್ಮಿಸಲಾಯಿತು. ಬ್ರಿಟಿಷರ ಆಡಳಿತದಲ್ಲಿ ರಾಜ್ ಕೋಟ್ ಪ್ರಮುಖ ಶಿಕ್ಷೇಣ ಕೇಂದ್ರವಾಗಿ ಮಾರ್ಪಟ್ಟಿತ್ತು. ಇಲ್ಲಿಂದ ಬಂದ ಹಲವಾರು ಮಂದಿ ಪದವೀಧರರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದರು.
ರಾಜ್ ಕೋಟ್ ನೊಂದಿಗೆ ಗಾಂಧೀಜೀ ಸಂಬಂಧ
ಗಾಂಧೀಜೀ ತನ್ನ ಬಾಲ್ಯದ ಶಿಕ್ಷಣವನ್ನು ಇಲ್ಲಿನ ಅಲ್ಫ್ರೆಡ್ ಹೈಸ್ಕೂಲ್ ನಲ್ಲಿ ಮಾಡಿದರು. ಈ ಶಾಲೆ ಇಂದು ಗಾಂಧಿ ವಿದ್ಯಾಲಯವೆಂದು ಕರೆಯಲ್ಪಡುತ್ತಿದೆ. ಗಾಂಧೀಜೀ ರಾಷ್ಟ್ರೀಯಶಾಲಾವನ್ನು ಸ್ಥಾಪಿಸಿ ಖಾದಿ ಮೂಲಕ ಸ್ವದೇಶಿ ಚಳುವಳಿ ಆರಂಭಿಸಿದರು.
ಸಂಸ್ಕೃತಿ
ಭಾರತದ ಎಲ್ಲಾ ಭಾಗಗಳ ಜನರು ಇಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ರಾಜ್ ಕೋಟ್ ಬಹುಸಂಸ್ಕೃತಿಯ ನಗರವಾಗಿದೆ. ನಿರಾತಂಕದ ವರ್ತನೆ ಮತ್ತು ಮನೋರಂಜನ ಪ್ರವೃತ್ತಿಯಿಂದಾಗಿ ರಾಜ್ ಕೋಟ್ ನ ಜನರನ್ನು ಎಲ್ಲೂ ಗುರುತಿಸಬಹುದು. ಜನರ ಈ ಗುಣದಿಂದಾಗಿಯೇ ರಾಜ್ ಕೋಟ್ ಗೆ `ರಂಗಿಲೋ ರಾಜ್ ಕೋಟ್' ಎನ್ನುವ ಹೆಸರು ಕೂಡ ಬಂದಿದೆ. ಹೃದಯವೈಶಾಲ್ಯವಿರುವ ರಾಜ್ ಕೋಟ್ ನ ಜನರು ತಮ್ಮ ಕಥಿವಾರಿ ಆತಿಥ್ಯಕ್ಕೆ ಜನಪ್ರಿಯರು. ಇಲ್ಲಿನ ಹೆಚ್ಚಿನ ಜನರು ಸಸ್ಯಹಾರಿಗಳು ಮತ್ತು ಮಹಿಳೆಯರು ತಮ್ಮನ್ನು ಅತಿಯಾದ ಒಡವೆಗಳಿಂದ ಶೃಂಗರಿಸಿಕೊಳ್ಳುತ್ತಾರೆ.
ಭೌಗೋಳಿಕತೆ ಮತ್ತು ಹವಾಮಾನ
ಅಜಿ ಮತ್ತು ನಿರಾರಿ ನದಿ ದಡದಲ್ಲಿರುವ ರಾಜ್ ಕೋಟ್ ಶುಷ್ಕ ಹವಾಗುಣದೊಂದಿಗೆ ಬಿಸಿ ಹಾಗೂ ಶುಷ್ಕ ಬೇಸಿಗೆ ಮತ್ತು ಮಾನ್ಸೂನ್ ನಲ್ಲಿ ಭಾರೀ ಮಳೆಯಾಗುತ್ತದೆ. ಮಾನ್ಸೂನ್ ತಿಂಗಳಲ್ಲಿ ಅರೇಬಿಯನ್ ಸಮುದ್ರದಲ್ಲಿ ಏಳುವ ಚಂಡಮಾರುತ ಮತ್ತು ಚಂಡಮಾರುತ ಮಳೆಗೆ ರಾಜ್ ಕೋಟ್ ಪ್ರಸಿದ್ಧಿ.
ಜನಸಂಖ್ಯೆ
ಇಲ್ಲಿನ ಸರಾಸರಿ ಜನಸಂಖ್ಯೆ ಶೇ. 80.6. ಹಿಂದೂಗಳು ಬಹುಸಂಖ್ಯೆಯಲ್ಲಿದ್ದರೆ, ಶೇ. 10ರಷ್ಟು ಮುಸ್ಲಿಮರಿದ್ದಾರೆ.
ಸಂಪರ್ಕ
ಗುಜರಾತ್ ರಾಜ್ಯ ಹೆದ್ದಾರಿ ಮೂಲಕ ರಾಜ್ ಕೋಟ್ ಗೆ ರಸ್ತೆ ಸಂಪರ್ಕವಿದೆ. ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಜಿಎಸ್ ಆರ್ ಟಿಸಿ) ರಾಜ್ ಕೋಟ್ ಮತ್ತು ಗುಜರಾತ್ ನ ಇತರ ನಗರಗಳಿಂದ ಸತತವಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುತ್ತದೆ. ರಾಜ್ ಕೋಟ್ ನೊಳಗಡೆ ರಾಜ್ ಕೋಟ್ ಮಹಾನಗರ ಪಾಲಿಕೆ(ಆರ್ ಎಂಸಿ) ಬಸ್ ಸೇವೆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ.
ಬಸ್ ಗಳನ್ನು ಹೊರತುಪಡಿಸಿ ಆಟೋಗಳ ಮೂಲಕ ಪ್ರಯಾಣಿಸಬಹುದು. ಈ ಎಲ್ಲಾ ಬಸ್ ಮತ್ತು ರಿಕ್ಷಾಗಳು ಸಿಎನ್ ಜಿಯಿಂದ ಚಲಿಸಲ್ಪಡುವ ಕಾರಣ ವಾಯುಮಾಲಿನ್ಯವು ಕಡಿಮೆ. ರಾಜ್ ಕೋಟ್ ನಗರದ ಮಧ್ಯಭಾಗದಲ್ಲಿ ಸಣ್ಣ ವಿಮಾನ ನಿಲ್ದಾಣವಿದೆ. ಈ ವಿಮಾನ ನಿಲ್ದಾಣವು ಅಹ್ಮದಾಬಾದ್, ಮುಂಬಯಿ, ಭಾವನಗರ ಮತ್ತು ಸೂರತ್ ಮೊದಲಾದ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.