ತಮಿಳುನಾಡಿನಲ್ಲಿರುವ ನಾಗರಕೋಯಿಲ್ ಕನ್ಯಾಕುಮಾರಿಗೆ ಸಮೀಪದಲ್ಲಿದೆ. ಇದು ಇಂಡಿಯನ್ ಪೆನಿನ್ಸುಲಾದ ತುತ್ತತುದಿಯಲ್ಲಿದೆ. ಈ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯ ಮತ್ತು ಅರಣ್ಯಗಳಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಐತಿಹ್ಯಗಳ ಪ್ರಕಾರ ಈ ಸ್ಥಳಕ್ಕೆ ಈ ಹೆಸರು ಬರಲು ಕಾರಣವಾದದ್ದು ಇಲ್ಲಿ ನಗರದ ಕೇಂದ್ರಭಾಗದಲ್ಲಿರುವ ನಾಗರಾಜನ ದೇವಾಲಯ. ಈ ದೇವಾಲಯವು ಹಿಂದೂಗಳ ಪ್ರಮುಖ ದೇವಾಲಯಗಳಲ್ಲಿ ಒಂದು. ಈ ದೇವಾಲಯವು ಪ್ರತಿವರ್ಷವೂ ಸಾವಿರಾರು ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ. ಕೆಲವರ ನಂಬಿಕೆಯ ಪ್ರಕಾರ ಇದೇ ಸ್ಥಳದಲ್ಲಿ ಒಂದು ಕಾಲದಲ್ಲಿ ಜೈನದೇವಾಲಯವಿತ್ತು.
ಇಲ್ಲಿನ ಜನ ತಮ್ಮ ಸ್ಥಳದ ಐತಿಹಾಸಿಕ ವೈಭವ ಮತ್ತು ಶೌರ್ಯದ ಬಗ್ಗೆ ಅಭಿಮಾನವುಳ್ಳವರು. ಇತಿಹಾಸದಲ್ಲಿರುವಂತೆ ಈ ನಗರವು ಭಾರತವು 1947ರಲ್ಲಿ ಸ್ವತಂತ್ರವಾದ ನಂತರ ಸುಮಾರು 10 ವರ್ಷಗಳವರೆಗೆ ತಿರವಾಂಕೂರಿನ ಭಾಗವಾಗಿತ್ತು. 1956ರಲ್ಲಿ ಕನ್ಯಾಕುಮಾರಿ ಮತ್ತು ನಾಗರಕೋಯಿಲ್ ತಮಿಳುನಾಡಿಗೆ ಸೇರಿತು. ಆ ದಿನಗಳಲ್ಲಿ ಈ ಪ್ರದೇಶವು ನಂಜಿಲನಾಡು ಎಂದು ಪ್ರಸಿದ್ಧವಾಗಿತ್ತು. ಈ ಸ್ಥಳವನ್ನು ಹಲವು ರಾಜವಂಶಗಳವರು ಆಳಿದ್ದಾರೆ. ಚೇರರು, ಚೋಳರು ಮತ್ತು ಪಾಂಡ್ಯರು ಈ ನಗರವನ್ನು ಆಳಿದ್ದಾರೆ. ಈ ಸ್ಥಳದ ಫಲವತ್ತತೆ ಮತ್ತು ನೀರಾವರಿ ಸೌಲಭ್ಯದ ಕಾರಣದಿಂದಾಗಿಯೇ ಈ ಪ್ರದೇಶವನ್ನು ತಮ್ಮ ಕೈವಶ ಮಾಡಿಕೊಳ್ಳಲು ಹಲವು ರಾಜವಂಶಗಳವರು ಹೋರಾಡಿದ್ದಾರೆ.
ಇಂದು ನಾಗರಕೋಯಿಲ್ ತಮಿಳುನಾಡಿನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಈ ಪ್ರದೇಶವು ಒಂದು ಕಡೆ ಅರೆಬಿಯನ್ ಸಮುದ್ರ ಮತ್ತೊಂದೆಡೆ ಪಶ್ಚಿಮ ಘಟ್ಟಗಳ ನಡುವೆ ನೆಲೆಗೊಂಡಿದೆ. ಬೆಟ್ಟಗಳ ಇಳಿಜಾರು, ಹುಲ್ಲುಹಾಸಿದ ಭೂಮಿ ಮತ್ತು ನೀಲಿ ಸಮುದ್ರ ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಕನ್ಯಾಕುಮಾರಿ ಅಥವ ನಾಗರಕೊಯಿಲ್ ಸಮೀಪದ ಸ್ಥಳಕ್ಕೆ ಬಂದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡದೆ ಹಿಂತಿರುಗುವುದಿಲ್ಲ. ಈ ಸ್ಥಳವು ತನ್ನ ಪ್ರಕೃತಿ ಸೌಂದರ್ಯದಿಂದಾಗಿಯೇ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿನ ಪ್ರಮುಖ ಆಕರ್ಷಣೆ ಒಲಕರುವಿ ಜಲಪಾತ.
ಇಲ್ಲಿನ ಜನ ಶಾಂತಿಪ್ರಿಯರು. ಪ್ರವಾಸಿಗರನ್ನು ಪ್ರೀತಿ ವಿಶ್ವಾಸಗಳಿಂದ ಆದರಿಸುತ್ತಾರೆ. ಇದೊಂದು ಸುರಕ್ಷಿತ ಸ್ಥಳವಾಗಿದೆ. ಇಲ್ಲಿ ಅಪರಾಧಗಳ ಸಂಖ್ಯೆ ತೀರ ಕಡಮೆ. ತಮ್ಮ ನಡುವಿನ ಜಗಳಗಳನ್ನು ಕೂಡ ನ್ಯಾಯಾಲಯದ ಮೆಟ್ಟಿಲು ಹತ್ತದೆಯೇ ಈ ಜನ ಬಗೆಹರಿಸಿಕೊಳ್ಳುತ್ತಾರೆ.
ಸ್ವಾತಂತ್ರ ಪೂರ್ವದಲ್ಲಿ ಇಲ್ಲಿ ನೆಲೆಸಿದ್ದ ಬ್ರಿಟೀಷರಿಂದಾಗಿ ಇಂದಿಗೂ ಇಲ್ಲಿ ಲವಂಗ ಮತ್ತು ಏಲಕ್ಕಿ ತೋಟಗಳನ್ನು ಕಾಣಬಹುದಾಗಿದೆ. ಬ್ರಿಟೀಷರ ವಂಶಕ್ಕೆ ಸೇರಿದ ಹಲವು ಮಂದಿ ಇಂದಿಗೂ ಇಲ್ಲಿ ಎಸ್ಟೇಟ್ಗಳನ್ನು ಹೊಂದಿರುವುದನ್ನು ಕಾಣಬಹುದಾಗಿದೆ. ಏಲಕ್ಕಿ ಸುಗಂಧ ಈ ಪ್ರದೇಶದ ಗಾಳಿಯಲ್ಲಿ ಬೆರೆತು ಹೋಗಿದೆ.
ನಾಗರಕೊಯಿಲ್ನಲ್ಲಿ ಪಾಶ್ಚಾತ್ಯ ಮತ್ತು ಪೌರಾತ್ಯ ಸಂಸ್ಕೃತಿಗಳ ಸಂಗಮವನ್ನು ಕಾಣಬಹುದಾಗಿದೆ. ಈ ಪಟ್ಟಣವು ಪೂರ್ವ ಮತ್ತು ಪಶ್ಚಿಮ ರೈಲ್ವೇ ಲೈನುಗಳು ಪರಸ್ಪರ ಹಾದುಹೋಗುವ ಕೇಂದ್ರಬಿಂದು. ಕೇರಳದಿಂದ ಹೊರಟ ಮಾರ್ಗ ಕೊಂಕಣದ ಕಡೆ ಹಾದು ಹೋದರೆ ಮತ್ತೊಂದು ತಮಿಳುನಾಡಿನ ಮೂಲಕ ತಿರುನೆಲ್ವೇಲಿ ಕಡೆ ಹೋಗುತ್ತದೆ.
ತಲುಪುವುದು ಹೇಗೆ?
ಈ ಪಟ್ಟಣವನ್ನು ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ರಸ್ತೆ ಮತ್ತು ರೈಲು ಸೌಲಭ್ಯಗಳು ಉತ್ತಮವಾಗಿವೆ. ಈ ಪಟ್ಟಣದಲ್ಲಿ ಬೇಸಿಗೆಯಲ್ಲಿ ಹೆಚ್ಚು ಉಷ್ಣತೆಯಿರುತ್ತದೆ ಮತ್ತು ಚಳಿಗಾಲಗಳು ತಂಪಾಗಿರುತ್ತದೆ. ಇದಕ್ಕೆ ಕಾರಣ ಈ ಪಟ್ಟಣದ ಭೌಗೋಳಿಕತೆ. ಬೇಸಿಗೆಯಲ್ಲಿ ಇಲ್ಲಿಗೆ ಪ್ರವಾಸಕ್ಕೆ ಹೋಗುವುದು ಸರಿಯಲ್ಲ. ಚಳಿಗಾಲಗಳು ತಂಪಾಗಿ ಮತ್ತು ಆಹ್ಲಾದಕರವಾಗಿರುತ್ತದೆ. ಆದ್ದರಿಂದ ಪ್ರವಾಸಿಗರು ಡಿಸಂಬರ್ ಮತ್ತು ಜನವರಿಗಳಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ.