ದಕ್ಷಿಣ ಭಾರತದ ಆಂಧ್ರ ಪ್ರದೇಶದಲ್ಲಿರುವ ನಾಗರ್ಜುನಸಾಗರವೆಂಬ ಸಣ್ಣ ಪಟ್ಟಣವು ಪ್ರಪಂಚದಾದ್ಯಂತ ಬೌದ್ಧರ ಪವಿತ್ರ ಕ್ಷೇತ್ರವಾಗಿದೆ. ಯಾತ್ರಾಸ್ಥಳದ ಹೊರತಾಗಿಯೂ ಇದು ಒಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು ಮನಸೆಳೆಯುತ್ತದೆ.
ಪುರಾತನ ದಿನಗಳಲ್ಲಿ ಈ ಪಟ್ಟಣವನ್ನು ವಿಜಯಪುರಿ ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಈ ಪಟ್ಟಣಕ್ಕೆ ಭಗವಾನ ಬುದ್ಧನ ಭಕ್ತನಾದ ನಾಗಾರ್ಜುನನ ಹೆಸರನ್ನು ಇರಿಸಲಾಯಿತು. ಈತನು ಬುದ್ಧದೇವನ ಉತ್ಕಟ ಭಕ್ತನಷ್ಟೇ ಅಲ್ಲದೇ ಪಟ್ಟಣದ ಜನರಿಂದ ಸನ್ಮಾನಿತನೂ ಆಗಿದ್ದನು. ಅಲ್ಲದೇ ಕ್ರಿಸ್ತಶಕ 1 ನೇ ಶತಮಾನದ ಅಂತ್ಯದ ವೇಳೆಯಲ್ಲಿ ಸುಮಾರು 60 ವರ್ಷಗಳ ಕಾಲ ಭಾರತದಲ್ಲಿ ಬೌದ್ಧ ಸಂಘದ ನಾಯಕನೂ ಆಗಿದ್ದನು. ಈ ಎಲ್ಲ ಘಟನಾವಳಿಗಳನ್ನು ಅವಲೋಕಿಸಿದಾಗ ಹಿಂದಿನ ಸಹಸ್ರಮಾನದ ಆರಂಭದಲ್ಲಿ ದಕ್ಷಿಣ ಭಾರತವು ಒಂದು ಪ್ರಮುಖ ಬೌದ್ಧ ಕೇಂದ್ರವಾಗಿತ್ತು ಎಂದು ಸ್ಪಷ್ಟವಾಗುತ್ತದೆ.
ಈ ಸ್ಥಳದಲ್ಲಿನ ಉತ್ಖನನದ ಸಂದರ್ಭದಲ್ಲಿ, ಹಿಂದೊಮ್ಮೆ ಈ ಪ್ರದೇಶದಲ್ಲಿ ಬೌದ್ಧ ಧರ್ಮವು ಅಭಿವೃದ್ಧಿ ಹೊಂದಿದ್ದರ ಬಗೆಗಿನ ಅನೇಕ ಪುರಾವೆಗಳು ಕಂಡುಬಂದಿವೆ. ಈ ವಸ್ತುಗಳು ಮುಖ್ಯವಾಗಿ ಶಿಲ್ಪಗಳು ಮತ್ತು ಸ್ತೂಪಗಳ ರೂಪದಲ್ಲಿದ್ದು ಭಗವಾನ ಬುದ್ಧನ ಜೀವನ ಮತ್ತು ಅವನ ಬೋಧನೆಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಈ ಎಲ್ಲ ಸಾಕ್ಷ್ಯಾಧಾರಗಳಿಂದಾಗಿ ನಾಗರ್ಜುನಸಾಗರವು ಪುರಾತತ್ವ ದೃಷ್ಟಿಕೋನದಿಂದ ಒಂದು ಗಮನಾರ್ಹ ಪ್ರದೇಶವಾಗಿ ಮಾರ್ಪಟ್ಟಿದೆ.
ನಾಗರ್ಜುನಸಾಗರವು ಪ್ರಸಿದ್ಧ ನಾಗರ್ಜುನಸಾಗರ ಅಣೆಕಟ್ಟು, ಎಥಿಪೋಥಲ್ ಜಲಪಾತ ಮತ್ತು ನಾಗಾರ್ಜುನಕೊಂಡ ಸೇರಿದಂತೆ ಕೆಲವು ಕುತೂಹಲಕಾರಿ ಸ್ಥಳಗಳನ್ನು ಹೊಂದಿದೆ. ಪಟ್ಟಣವು ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದನಿಂದ ಸುಮಾರು 150 ಕಿ.ಮೀ ಗಳಷ್ಟು ದೂರದಲ್ಲಿದ್ದು ಹೈದರಾಬಾದ್ ನಿಂದ ಸುಲಭವಾಗಿ ರಸ್ತೆಯ ಮೂಲಕ ತಲುಪಬಹುದು. ರಾಜ್ಯದ ಪ್ರಮುಖ ಪಟ್ಟಣಗಳು ಹಾಗೂ ನಗರಗಳಿಂದ ನಾಗರ್ಜುನಸಾಗರಕ್ಕೆ ಅನೇಕ ಬಸ್ಸುಗಳು ಸಂಚರಿಸುತ್ತವೆ. ಇಲ್ಲಿ ಯಾವುದೇ ರೈಲು ನಿಲ್ದಾಣ ಅಥವಾ ವಿಮಾನ ನಿಲ್ದಾಣಗಳಿಲ್ಲದ ಕಾರಣ ರಸ್ತೆ ಮಾರ್ಗವಾಗಿ ಪಟ್ಟಣ ತಲುಪುವುದು ಉತ್ತಮ.
ಚಳಿಗಾಲವೇ ನಾಗರ್ಜುನಸಾಗರಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಏಕೆಂದರೆ ಉಷ್ಣವಲಯದ ಹವಾಮಾನ ಸ್ಥಿತಿಯಿಂದಾಗಿ ಪಟ್ಟಣವು ಬೇಸಿಗೆಯಲ್ಲಿ ಅತ್ಯಂತ ಬಿಸಿಯನ್ನೂ ಅನುಭವಿಸುತ್ತಿದ್ದು ಚಳಿಗಾಲದಲ್ಲಿ ಕಡಿಮೆ ಪ್ರಮಾಣದ ಚಳಿಯನ್ನು ಅನುಭವಿಸುತ್ತದೆ.