ಉತ್ತರಪ್ರದೇಶ ರಾಜ್ಯದಲ್ಲಿರುವ ಮುಜಫರ್ ನಗರವು ಧಾರ್ಮಿಕ ಕ್ಷೇತ್ರಗಳು ಹಾಗೂ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಈ ಪಟ್ಟಣವು ಮೊಘಲರ ಆಳ್ವಿಕೆಯ ಅವಧಿಯಲ್ಲಿ ಸಯ್ಯದ್ ಜಾಗಿರ್ದರ್ ನಿಂದ ಸ್ಥಾಪಿಸಲ್ಪಟ್ಟಿತು. ತರುವಾಯ, ಆತನ ತಂದೆ ಮುಜಫರ್ ಅಲಿ ಖಾನ್ ನ ಗೌರವಾರ್ಥ ಮುಜಫರ್ ನಗರ್ ಎಂದು ನಾಮಾಂಕಿತವಾಯಿತು. ದೆಹಲಿ ಮತ್ತು ಡೆಹ್ರಾಡೂನ್ ಗಳನ್ನು ಸಂಪರ್ಕಿಸುವ ಹೆದ್ದಾರಿ ಮಾರ್ಗದಲ್ಲಿ ಯೋಜನಾಬದ್ಧವಾಗಿ ರೂಪುಗೊಂಡಿರುವ ಈ ಪಟ್ಟಣವು, ನೊಯ್ಡಾಗೆ ಸಮೀಪದಲ್ಲಿರುವ, ಅತಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ.
ಇತಿಹಾಸ
ಪುರಾತನ ಸಾಕ್ಷ್ಯಾಧಾರಗಳ ಪ್ರಕಾರ, ನಾಗರೀಕತೆಯು ಈ ಪಟ್ಟಣದಲ್ಲಿ, ಹರಪ್ಪನ್ ನಾಗರಿಕತೆಯೊಂದಿಗೆ ಉದಯವಾಯಿತು. ಮಹಾಭಾರತದಲ್ಲಿಯೂ ಕೂಡ ಈ ಪಟ್ಟಣದ ಕುರಿತಾದ ಉಲ್ಲೇಖವಿದೆ. ಇಲ್ಲಿನ ಸ್ಥಳೀಯ ಪುರಾಣದ ಪ್ರಕಾರ, ಪೌರಾಣಿಕ ಮಹಾಯುಧ್ಧವು ಇಲ್ಲಿನ 'ಪಚೆಂದ' ಎಂಬ ಗ್ರಾಮದ ಗದ್ದೆಗಳಲ್ಲಿ ನಡೆಯಿತು. ಮಾತ್ರವಲ್ಲದೆ, ಎರಡು ಪಾಳಯಗಳ ಸೇನಾಪಡೆಗಳು ಇಲ್ಲಿಯೇ ಬೀಡುಬಿಟ್ಟಿದ್ದವು. ಈ ಸ್ಥಳಗಳೇ ಇಂದು 'ಕೌರವಾಲಿ' (ಕೌರವ ಪಡೆ) ಮತ್ತು 'ಪಾಂಡವಾಲಿ' (ಪಾಂಡವ ಪಡೆ) ಎಂದು ಪ್ರಸಿದ್ದವಾಗಿವೆ.
ವಾಸ್ತವವಾಗಿ, ಮುಜಫರ್ ನಗರವು ಹಸ್ತಿನಾಪುರ ಮತ್ತು ಕುರುಕ್ಷೇತ್ರಗಳಿಗೆ ಅತಿ ಸಮೀಪದಲ್ಲಿದೆ ಹಾಗೂ ಈ ಎರಡೂ ಸ್ಥಳಗಳು ಮಹಾಯುದ್ದದೊಂದಿಗೆ ಅತಿ ನಿಕಟ ಸಹಯೋಗವನ್ನು ಹೊಂದಿವೆ. ಮೊಘಲರ ಆಳ್ವಿಕೆಯ ಕಾಲದಲ್ಲಿ, ಸಯ್ಯದ್ ಜಾಗಿರ್ದಾರನು ಈ ಪಟ್ಟಣವನ್ನು ಪುನರ್ ನಿರ್ಮಿಸಿ, ತನ್ನ ತಂದೆಯ ಹೆಸರಿನ ತರುವಾಯ ನಾಮಕರಣಗೊಳಿಸಿದನಂತರ ಈ ಪಟ್ಟಣವು ಪುನಃ ತನ್ನ ಮಹತ್ವವನ್ನು ಪಡೆದುಕೊಂಡಿತು.
ಮುಜಫರ್ ನಗರವು ಇಂದು ಅತಿ ಚಟುವಟಿಕೆಯ ಪಟ್ಟಣವಾಗಿದ್ದು, ಮೀರತ್ ಮತ್ತು ನೋಯ್ಡಾ ಪಟ್ಟಣಗಳಿಗೆ ಕಠಿಣ ಸ್ಪರ್ಧೆಯನ್ನೊಡ್ಡುತ್ತಿದೆ. ಇಷ್ಟು ಮಾತ್ರವಲ್ಲದೇ ಈ ಪಟ್ಟಣವು ಇಂದು ಭೂ ವ್ಯವಹಾರ (ರಿಯಲ್ ಎಸ್ಟೇಟ್) ಮತ್ತು ಇತರ ಉದ್ಯಮಗಳ ಹೂಡಿಕೆದಾರರ ಮಹತ್ತರ ಕೇಂದ್ರಸ್ಥಾನವಾಗಿ ಹೊರಹೊಮ್ಮುತ್ತಿದೆ. ಈ ಪಟ್ಟಣದಲ್ಲಿ ಭೈರೋ ಎಂಬ ದೇವಾಲಯವಿದ್ದು, ಲಕ್ಷಾಂತರ ಭಕ್ತಾಧಿಗಳನ್ನು, ವಿಶೇಷವಾಗಿ ಹಬ್ಬದ ದಿನಗಳಲ್ಲಿ ಆಕರ್ಷಿಸುತ್ತದೆ.
ಮುಜಫರ್ ನಗರದ ಸುತ್ತಮುತ್ತಲ ಪ್ರವಾಸೀ ತಾಣಗಳು
ಮೇಲೆ ಸೂಚಿಸಿರುವಂತೆ, ಈ ಪಟ್ಟಣದ ಪ್ರಮುಖ ಆಕರ್ಷಣೆಯೆಂದರೆ, ಭೈರೋ ಕಾ ಮಂದಿರ್. ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳು, ಇತರ ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಾದ ಗಣೇಶ್ ಧಾಮ್, ದುರ್ಗಾ ಧಾಮ್, ಹನುಮಾನ್ ಧಾಮ್, ಮತ್ತು ಕಾಳಿ ನದಿ ಮಂದಿರಗಳಿಗೂ ಕೂಡ ಅವಶ್ಯ ಭೇಟಿ ನೀಡುತ್ತಾರೆ. ಈ ಪಟ್ಟಣದಿಂದ ಅನತಿ ಮೈಲುಗಳ ದೂರದಲ್ಲಿರುವ ಶಿವ್ ಚೌಕ್ ಎಂಬಲ್ಲಿ ಇನ್ನೂ ಹಲವು ಪ್ರಸಿದ್ಧ ಮಂದಿರಗಳಿವೆ. ಈ ಚೌಕದಲ್ಲಿ ಅಕ್ಷಯ ವಟ್ ವೃಕ್ಷ್ ಎಂಬ ಪ್ರಾಚೀನವಾದ ವೃಕ್ಷವೊಂದಿದ್ದು ಇದು ಹಿಂದುಗಳಿಗೆ ಪವಿತ್ರವಾದುದಾಗಿದೆ. ದರ್ಗಾ ಹರ್ ಶ್ರೀನಾಥ್, ಸುಪ್ರಸಿದ್ಧ ಸೂಫಿ ಸಂತನೋರ್ವನ ಗೋರಿಯು ಇದಾಗಿದ್ದು, ಇದೂ ಸಹ ಮುಜಫರ್ ನಗರದಲ್ಲಿದೆ. ಇಲ್ಲಿ ಒಂದು ಸಂಕೀರ್ತನ್ ಭವನವೂ ಇದ್ದು, ಇಲ್ಲಿ ಪ್ರತಿದಿನ ಸಂಜೆ ಕೀರ್ತನೆ ನಡೆಯುತ್ತದೆ.
ವಹೇಲ್ನ ಎಂಬುದು ಮುಜಫರ್ ನಗರದ ಸಮೀಪದಲ್ಲಿರುವ ಪ್ರಕೃತಿ ರಮ್ಯ ಗ್ರಾಮವಾಗಿದ್ದು, ಇಲ್ಲಿ ವಹೇಲ್ನ ಜೈನ ಮಂದಿರ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಶ್ರೀ 1008 ಪಾರ್ಶ್ವನಾಥ ದಿಗಂಬರ್ ಜೈನ ಅತಿಶ್ಯೇ ಕ್ಷೇತ್ರವಿದೆ. ಇದು ಉತ್ತರ ಭಾರತದ ಅತಿ ಮಹತ್ತರವಾದ ಐತಿಹಾಸಿಕ ಯಾತ್ರಾಸ್ಥಳವಾಗಿದೆ.
ಕೇವಲ ಧಾರ್ಮಿಕ ಕ್ಷೇತ್ರಗಳಲ್ಲದೇ, ಮುಜಫರ್ ನಗರವು ಅನೇಕ ವಸ್ತು ಸಂಗ್ರಹಾಲಯಗಳು ಮತ್ತು ಪ್ರಾಣಿಶಾಸ್ತ್ರ ವಸ್ತು ಸಂಗ್ರಹಾಲಯ ಹಾಗೂ ಸರಕಾರೀ ಶೈಕ್ಷಣಿಕ ವಸ್ತುಸಂಗ್ರಹಾಲಯವೂ ಸೇರಿದಂತೆ ಅನೇಕ ಶೈಕ್ಷಣಿಕ ಸಂಸ್ಥೆಗಳ ತಾಣವಾಗಿದೆ. ಇಲ್ಲಿರುವ ಕಮ್ಲ ನೆಹ್ರು ವಾಟಿಕ ಗಿಜಿಗುಟ್ಟುವ ನಗರದಿಂದ ದೂರದಲ್ಲಿದ್ದು, ಇಲ್ಲಿ ನೀವು ಕೆಲವು ಪ್ರಶಾಂತ ಕ್ಷಣಗಳನ್ನು ಕಳೆಯಬಹುದಾಗಿದೆ.
ಇಲ್ಲಿರುವ ಶುಕ್ರಾತಲವೆಂಬ ಧಾರ್ಮಿಕ ಸ್ಥಳಕ್ಕೂ ನೀವು ಭೇಟಿ ನೀಡಬಹುದಾಗಿದ್ದು, ಪುರಾಣಗಳ ಪ್ರಕಾರ ಋಷಿ ಸುಖನು ಪರೀಕ್ಷಿತ ಮಹಾರಾಜನಿಗೆ 7 ದಿನಗಳ ಕಾಲ ಭಗವತ್ ಪುರಾಣವನ್ನು ಭೋಧಿಸಿದನು ಹಾಗೂ ತದನಂತರ ಪರೀಕ್ಷಿತನು ಆ ಸ್ಥಳದಲ್ಲಿ ಹಾವಿನಿಂದ ಕಚ್ಚಲ್ಪಟ್ಟು ಕೊಲ್ಲಲ್ಪಟ್ಟನು.
ಮುಜಫರ್ ನಗರದ ಹವಾಮಾನ
ಮುಜಫರ್ ನಗರವು ನವೆಂಬರ್ ನಿಂದ ಏಪ್ರಿಲ್ ನವರೆಗೆ ಹಿತಕರವಾದ, ನವಿರಾದ ವಾತಾವರಣವನ್ನು ಅನುಭವಿಸುತ್ತದೆ. ಅದ್ದರಿಂದ ಈ ಕಾಲಾವಧಿಯು ಇಲ್ಲಿಗೆ ಭೇಟಿ ನೀಡುವವರಿಗೆ ಪ್ರಶಸ್ತವಾಗಿದೆ. ಏನೇ ಆದರೂ ಕೂಡ ಇಲ್ಲಿನ ಧಾರ್ಮಿಕ ಸ್ಥಳಗಳು ಹಾಗೂ ದೇವಾಲಯಗಳು ಸಂದರ್ಶಕರನ್ನು ವರ್ಷವಿಡೀ ಆಕರ್ಷಿಸುತ್ತದೆ.
ಮುಜಫರ್ ನಗರವನ್ನು ತಲುಪುವುದು ಹೇಗೆ ?
ಮುಜಫರ್ ನಗರವನ್ನು ವಿಮಾನ, ರೈಲು, ಮತ್ತು ಹೆದ್ದಾರಿಯ ಮೂಲಕ ತಲುಪಬಹುದು.