ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ. ಈ ಹೆಸರು ಬರಲು ಕಾರಣವೇನೆಂದರೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ಇಲ್ಲೆ ತನ್ನ ಬಾಲ್ಯದ ದಿನಗಳನ್ನು ಗೋಪಿಕಾ ಸ್ತ್ರೀಯರ ಜೊತೆ ತುಂಟಾತವಾಡುತ್ತ, ನಕ್ಕು ನಲಿಯುತ್ತ ಕಳೆದಿದ್ದು. ಶ್ರೀಕೃಷ್ಣನ ರಾಸಲೀಲೆಗಳು ಹಿಂದೂ ಭಕ್ತರ ಮನದಲ್ಲಿ ಇಂದಿಗೂ ಅಚ್ಚಳಿಯದೆ ಶಾಶ್ವತವಾಗಿ ನೆಲೆಸಿವೆ. ಶ್ರೀಕೃಷ್ಣನ ಲೀಲೆಗಳು ಇಂದಿಗೂ ಸಹ ಭಜನೆಗಳಲ್ಲಿ, ಚಿತ್ರಕಲೆಗಳಲ್ಲಿ ಎದ್ದು ಕಾಣುವುದನ್ನು ನೋಡಬಹುದು. ಹಿಂದೂಗಳ ಹಲವಾರು ಬಗೆಯ ಕಲೆಗಳು ಇದರಿಂದಲೇ ಜನ್ಮತಾಳಿದ್ದು ಎಂದರೆ ತಪ್ಪಾಗಲಾರದು. 16ನೇ ಶತಮಾನದಲ್ಲಿ ಈ ಪಟ್ಟಣವನ್ನು ಮರುಶೋಧಿಸುವವರೆಗೆ ಕಾಲ್ಪನಿಕ ಕಥೆಯ ಭಾಗವೆಂದೇ ಪರಿಗಣಿಸಲಾಗುತ್ತಿತ್ತು.
ಮಥುರಾ ಪಟ್ಟಣದ ಒಂದು ಹಿನ್ನೋಟ
ಇಂದು ಮಥುರಾ ಪಟ್ಟಣ ಹಿಂದೂಳ ಹಲವಾರು ಪವಿತ್ರ ಕ್ಷೇತ್ರಗಳಲ್ಲಿ ಅತ್ಯಂತ ಮುಖ್ಯವಾದದ್ದಾಗಿದೆ. ಇಲ್ಲಿ ಭಗವಾನ್ ಶ್ರೀಕೃಷ್ಣನ ಹಾಗು ರಾಧೆಯ ಅನೇಕ ಮಂದಿರಗಳಿವೆ. 8ನೇ ಶತಮಾನಕ್ಕೂ ಮುನ್ನ ಈ ಪಟ್ಟಣವು ಬೌದ್ಧ ಧರ್ಮದ ನೆಲೆಯಾಗಿತ್ತು. ಸುಮಾರು 3,000ಕ್ಕೂ ಅಧಿಕ ಬೌದ್ಧ ಧರ್ಮಿಯರಿಗೆ ಈ ಪಟ್ಟಣ ಮನೆಯಾಗಿತ್ತು. ಅಫ್ಘನ್ ದೊರೆ ಮುಹಮ್ಮದ್ ಘಜನಿಯ ದಾಳಿಗೆ ಅನೇಕ ಬೌದ್ಧ ಧಾಮಗಳು ನಾಶವಾದವು. ಇವನ ತರುವಾಯ 16ನೇ ಶತಮಾನದಲ್ಲಿ ಔರಂಗಜೇಬ್ ಅನೇಕ ಮಂದಿರಗಳನ್ನು ನೆಲಸಮ ಮಾಡಿ, ಮಸೀದಿಗಳನ್ನು ಕಟ್ಟಿಸಿದ. ಇಂತಹ ನಾಶವಾದ ಮಂದಿರಗಳಲ್ಲಿ ಕೇಶವ ದೇವ್ ಮಂದಿರವೂ ಸಹ ಒಂದಾಗಿತ್ತು.
ಈ ಪವಿತ್ರ ಪಟ್ಟಣಕ್ಕೆ ಇಡಿ ವರ್ಷ ಭಕ್ತ ಸಾಗರವೇ ಹರಿದು ಬರುತ್ತದೆ. ವಿಶೇಷವಾಗಿ ಹೋಳಿ ಹಬ್ಬ ಹಾಗು ಕೃಷ್ಣ ಜನ್ಮಾಷ್ಟಮಿಯ ಹಬ್ಬಗಳ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಕೃಷ್ಣಾಷ್ಟಮಿಯ ದಿನ ಶ್ರೀಕೃಷ್ಣನು ಜನ್ಮತಾಳಿದ್ದ ದಿನ. ಇದು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತದೆ.
ಮಥುರಾ ಸುತ್ತಲಿನ ಪ್ರವಾಸಿ ತಾಣಗಳು
ಯಮುನಾ ನದಿಯ ತಟದಲ್ಲಿ ನೆಲೆಸಿರುವ ಮಥುರಾ ಪಟ್ಟಣ ಭಾರತೀಯ ಸಂಸ್ಕೃತಿ ಹಾಗು ನಾಗರಿಕ ಸಮಾಜದ ಸ್ಥಾಪನೆಗೆ ಮಥುರಾ ಪಟ್ಟಣವು ತವರೂರು ಎಂದರೆ ತಪ್ಪಾಗಲಾರದು. ಆಧ್ಯಾತ್ಮಿಕ ಸಾಧಕರಿಗೆ ಭಾರತ ದೇಶ ಒಂದು ಗಮ್ಯಸ್ಥಾನವಾಗಿದೆ. ಶಾಂತಿ ಮತ್ತು ಜ್ಞಾನೋದಯದ ಹುಡುಕಾಟದಲ್ಲಿರುವ ಭಕ್ತರು, ಆಧ್ಯಾತ್ಮ ಸಾಧಕರು ಈ ಪಟ್ಟಣಕ್ಕೆ ಆಗಮಿಸಿ ಇಲ್ಲಿನ ಆಶ್ರಮಗಳಲ್ಲಿ ಹಾಗು ಮಂದಿರಗಳಲ್ಲಿ ಕಾಲ ಕಳೆಯುತ್ತಾರೆ. ಬೌದ್ಧ, ಜೈನ ಹಾಗು ಹಿಂದೂಗಳು ಈ ಮಥುರಾ ಪಟ್ಟಣವನ್ನು ಒಂದು ಪವಿತ್ರ ಸ್ಥಳ ಎಂದೇ ಪರಿಗಣಿಸುತ್ತಾರೆ.
ಶ್ರೀಕೃಷ್ಣ ಜನ್ಮಭೂಮಿ ಮಂದಿರ, ಇಲ್ಲಿ ಉಪಸ್ಥಿತವಿರುವ ಅನೇಕ ಪವಿತ್ರ ಮಂದಿರಗಳಲ್ಲಿ ಮುಖ್ಯವಾದದ್ದು. ನಿಜ ಹೇಳಬೇಕೆಂದರೆ, ಮಥುರಾ ಪಟ್ಟಣದಲ್ಲಿರುವ ಪ್ರತಿಯೊಂದು ಆಕರ್ಷಣೆಯೂ ಶ್ರೀಕೃಷ್ಣನಿಗೆ ಸಂಬಂಧ ಪಟ್ಟಿದ್ದಾಗಿರುತ್ತದೆ. ಮತ್ತೊಂದು ವಿಶೇಷವೆಂದರೆ, ಇಲ್ಲಿರುವ ವಿಶ್ರಾಮ್ ಘಾಟ್.
ಶ್ರೀಕೃಷ್ಣನು ತನ್ನ ಕ್ರೂರ ಮಾವನಾದ ಕಂಸನನ್ನು ಸದೆಬಡೆಯುವ ಮುನ್ನ ಇದೇ ಸ್ಥಳದಲ್ಲಿ ವಿಶ್ರಮಿಸಿಕೊಂಡಿದ್ದ ಎಂಬ ಪ್ರತೀತಿಯಿದೆ. ದ್ವಾರಕಾಧೀಶ ಮಂದಿರ ಮತ್ತೊಂದು ಮುಖ್ಯ ತಾಣವಾಗಿದ್ದು, ಹಬ್ಬಹರಿದಿನಗಳಲ್ಲಿ ಅಂದರೆ ವಿಶೇಷವಾಗಿ ಜನ್ಮಾಷ್ಟಮಿಯ ದಿನಗಳಲ್ಲಿ ಅತ್ಯಂತ ವೈಭವದಿಂದ ಅಲಂಕೃತಗೊಂಡಿರುತ್ತದೆ. ಪಟ್ಟಣದ ಹೊರವಲಯದಲ್ಲಿರುವ ಗೀತಾಮಂದಿರ ಶಿಲ್ಪಕಲೆ ಮತ್ತು ಚಿತ್ರಕಲೆಯ ಮೆರಗನ್ನು ಪ್ರದರ್ಶಿಸುತ್ತದೆ. 1661ನೇ ಇಸ್ವಿಯಲ್ಲಿ ಕಟ್ಟಿಸಿದ ಜಾಮಾ ಮಸೀದಿ ಮುಸ್ಲಿಂ ಬಂಧುಗಳ ಇರುವಿಕೆಯ ಕುರುಹಾಗಿದೆ.
ಡ್ಯಾಂಪಿಯರ್ ಪಾರ್ಕ್ ಬಳಿ ಇರುವ ಸರಕಾರಿ ಮ್ಯೂಸಿಯಂನಲ್ಲಿ ಕುಶಾನರ ಹಾಗು ಗುಪ್ತರ ಕಾಲದಿಂದಲೂ (ಕ್ರಿ.ಪೂ. 400ರಿಂದ ಕ್ರಿ.ಶ. 1200) ಕಲೆ ಹಾಕಿರುವ ಅನೇಕ ಪ್ರಾಚೀನ ವಸ್ತುಗಳು ಪ್ರದರ್ಶನಕ್ಕಿವೆ. ಇದರ ಜೊತೆಗೆ ಮಥುರೆಯ ಉಳಿದ ಆಕರ್ಷಣೆಗಳೆಂದರೆ, ಕಂಸ ಕಿಲ್ಲಾ, ಪೋಟರ ಕುಂಡ್, ಘಾಟ್ಸ್ ಆಫ್ ಮಥುರಾ. ಮಥುರಾ ಪಟ್ಟಣಕ್ಕೆ ಭೇಟಿ ನೀಡಿದರೆ ಸಮೀಪದಲ್ಲಿರುವ ವೃಂದಾವನದ ಪ್ರವಾಸಕ್ಕೂ ಎಣೆ ಮಾಡಿಕೊಡುತ್ತದೆ.
ಮಥುರಾ ತಲುಪುವ ಬಗೆ
ಮಥುರಾ ಪಟ್ಟಣವನ್ನು ತಲುಪಲು ಬಸ್, ರೈಲು ಹಾಗು ವಾಯುಯಾನದ ಉತ್ತಮ ಸಂಪರ್ಕವಿದೆ. ಈ ಪಟ್ಟಣಕ್ಕೆ ಅತ್ಯಂತ ಕನಿಷ್ಠ ಅಂತರವಿರುವ ಸ್ಥಳವೆಂದರೆ ದಿಲ್ಲಿ ವಿಮಾನ ನಿಲ್ದಾಣ.
ಮಥುರೆಗೆ ಭೇಟಿ ನೀಡಲು ಸೂಕ್ತ ಸಮಯ
ವಿಶೇಷವಾದ ಹಬ್ಬದ ಆಚರಣೆಗಳು ವರ್ಷವಿಡೀ ಇರುವುದರಿಂದ ಯಾವುದೇ ಕಾಲದಲ್ಲಿ ಪ್ರವಾಸಿಗ ಇಲ್ಲಿಗೆ ಪ್ರಯಾಣ ಕೈಗೊಳ್ಳಬಹುದಾಗಿದೆ.