ಮನಿಕರನ್ ಎಂಬುದು ಹಿಮಾಚಲ್ ಪ್ರದೇಶದಲ್ಲಿರುವ ಕುಲ್ಲುವಿನಿಂದ 45 ಕಿ.ಮೀ ದೂರದಲ್ಲಿರುವ ಸಿಖ್ಖರ ಮತ್ತು ಹಿಂದೂಗಳ ಪವಿತ್ರ ಯಾತ್ರಾಸ್ಥಳವಾಗಿದೆ. ಇದು ಸಮುದ್ರ ಮಟ್ಟದಿಂದ 1737 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ’ಮನಿಕರನ್’ ಎಂದರೆ ಆಭರಣ ಎಂದರ್ಥ. ದಂತಕಥೆಗಳ ಪ್ರಕಾರ, ಪರಮಶಿವನ ಸತಿಯಾದ ಪಾರ್ವತಿ ದೇವಿಯು ಇಲ್ಲಿನ ನೀರಿನ ತಾಣದಲ್ಲಿ ತನ್ನ ಅಮೂಲ್ಯವಾದ ಆಭರಣವನ್ನು ಕಳೆದುಕೊಂಡಳಂತೆ. ಆಗ ಪಾರ್ವತಿ ದೇವಿಯು ಈಶ್ವರನನ್ನು ಆ ಆಭರಣ ಹುಡುಕಿಕೊಡುವಂತೆ ಕೇಳಿದಾಗ, ಶಿವನು ಅದನ್ನು ಹುಡುಕುವಂತೆ ತನ್ನ ಅನುಚರರಿಗೆ ಹೇಳಿದನಂತೆ. ಆದರೆ ಅವರು ಅದನ್ನು ಹುಡುಕಲು ವಿಫಲರಾದಾಗ ಕೋಪಗೊಂಡ ಶಿವನು ತನ್ನ ಮೂರನೆಯ ಕಣ್ಣನ್ನು ತೆಗೆದನಂತೆ. ಇದರಿಂದ ಭೂಮಿಯ ಮೇಲೆ ಅಲ್ಲೋಲ ಕಲ್ಲೋಲವಾಯಿತಂತೆ. ಇದರಿಂದ ಭೂಮಿಯಲ್ಲಿ ಹಲವಾರು ಅಮೂಲ್ಯ ರತ್ನ ಮತ್ತು ಹರಳುಗಳು ಉತ್ಪತಿಯಾದವಂತೆ.
ಶ್ರೀ ಗುರುನಾನಕ್ ದೇವಿ ಗುರುದ್ವಾರವು ಮನಿಕರನ್ನಲ್ಲಿರುವ ಮತ್ತೊಂದು ಆಕರ್ಷಣೆಯಾಗಿದೆ. ಇಲ್ಲಿನ ಜನರ ನಂಬಿಕೆಯಂತೆ, ಸಿಖ್ ಧರ್ಮದ ಸ್ಥಾಪಕರಾದ ಗುರುನಾನಕರು ತಮ್ಮ ಐದು ಜನ ಅನುಯಾಯಿಗಳೊಂದಿಗೆ ಇಲ್ಲಿಗೆ ಆಗಮಿಸಿದ್ದರಂತೆ.
ಗುರುದ್ವಾರದ ಆವರಣದಲ್ಲಿರುವ ಝರಿಯು ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರನ್ನು ಆಕರ್ಷಿಸುತ್ತಿರುತ್ತದೆ. ಇಲ್ಲಿರುವ ಶಿವನ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಸೇರಿದೆ. 1905 ರಲ್ಲಿ ಈ ಪ್ರಾಂತ್ಯದಲ್ಲಿ ಸಂಭವಿಸಿದ 8.0 ಪ್ರಮಾಣದ ಭೀಕರ ಭೂಕಂಪದ ಕಾರಣದಿಂದಾಗಿ ಈ ದೇವಾಲಯ ಸ್ವಲ್ಪ ಮಟ್ಟಿಗೆ ವಾಲಿದೆ. ಇದು ಈ ದೇವಾಲಯದ ಅಸಾಮಾನ್ಯ ಲಕ್ಷಣವಾಗಿದೆ.
ಮನಿಕರನ್ ಶ್ರೀ ರಾಮಚಂದ್ರ ದೇವಾಲಯ ಮತ್ತು ಕುಲಂತ್ ಪೀಠಗಳ ಕಾರಣದಿಂದಾಗಿ ಹಿಂದೂ ಭಕ್ತಾದಿಗಳ ವಲಯದಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಹರಿಂಧರ್ ಪರ್ವತ ಮತ್ತು ಪಾರ್ವತಿ ನದಿ, ಶೋಜ, ಮಲಾನಾ ಮತ್ತು ಖಿರ್ ಗಂಗದಲ್ಲಿ ಪ್ರವಾಸಿಗರು ಚಾರಣವನ್ನು ಕೈಗೊಳ್ಳಬಹುದು. ಈ ಎಲ್ಲ ಸ್ಥಳಗಳು ಇಲ್ಲಿರುವ ಇನ್ನಿತರ ಆಕರ್ಷಣೆಗಳಲ್ಲಿ ಸೇರಿವೆ.
ಮನಿಕರನ್ಗೆ ಬರಬೇಕೆನ್ನುವ ಪ್ರವಾಸಿಗರು ವಿಮಾನ, ರೈಲು ಮತ್ತು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ಬಂದು ಸೇರಬಹುದು. ಏಪ್ರಿಲ್ ನಿಂದ ಜೂನ್ ನಡುವಿನ ಅವಧಿಯು ಇಲ್ಲಿಗೆ ಭೇಟಿಕೊಡಲು ಅತ್ಯುತ್ತಮ ಅವಧಿಯಾಗಿದೆ.