ಮಾಂಡು, ಮಂದವ್ ಘರ್ ಅಥವಾ ಶದೈಬಾದ್ ಎಂತೆಲ್ಲಾ ಕರೆಯಲ್ಪಡುವ ಈ ನಗರಿಗೆ ಒಂದು ಕಾಲದಲ್ಲಿ "ಸುಖದ ನಾಡು", "ಸಂತಸಗಳ ಬೀಡು" ಗಳೆಂಬ ಉಪಮಾನಗಳಿದ್ದವು. ತನ್ನ ಪ್ರಾಚೀನ ವೈಭವವನ್ನು ಕಳೆದು ಕೊಂಡು ಬರಿದಾಗಿದ್ದ ಮಾಂಡುವನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆ, ಮತ್ತೊಮ್ಮೆ ಸಿಂಗರಿಸಿದೆ. ದಾಲ್ - ಬಾತಿ, ಮಾಲ್ ಪೋವಾ ಗಳಂತಹ ಸಾಂಪ್ರದಾಯಿಕ ಮಾಳವಾ ಖಾದ್ಯಗಳು ಹಾಗು ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆ ಆಯೋಜಿಸುವ ಮಾಳವಾ ಉತ್ಸವಗಳು ಪ್ರವಾಸಿಗರಲ್ಲಿ ಗತಪ್ರಾಚೀನ ವೈಭವ ಮರುಕಳಿಸಿದ ಅನುಭವ ನೀಡುತ್ತವೆ.
ಮಧ್ಯಪ್ರದೇಶ ರಾಜ್ಯದ ಪಶ್ಚಿಮದಲ್ಲಿ, ಇಂದೋರ್ ನಿಂದ ಕೇವಲ 90 ಕಿ.ಮಿ ದೂರದಲ್ಲಿದೆ ಈ ಆನಂದ ನಗರಿ. ಧಾರ್( ಧಾರ್ ದಿಂದ 35 ಕಿ ಮಿ ದೂರ ) ಜಿಲ್ಲೆಯಲ್ಲಿರುವ ಇದು, ವಿಂಧ್ಯ ಪರ್ವತ ಶ್ರೇಣಿಗಳ ಮಧ್ಯದಲ್ಲಿದೆ. ಅಲ್ಲದೆ ಸುಮಾರು 13 ಕಿ.ಮಿ ಗಳಷ್ಟು ದೂರದವರೆಗೆ ಈ ಶ್ರೇಣಿಗಳೊಂದಿಗೆ ಕೈ ಜೋಡಿಸಿ ಇಲ್ಲಿನ ಅದ್ಭುತ ವನ ಸಿರಿಯನ್ನು ಸವಿಯುತ್ತಾ ಸಾಗುತ್ತದೆ. ಸಮುದ್ರ ಮಟ್ಟದಿಂದ ಸುಮಾರು 2079 ಅಡಿ ( 633 ಮೀ ) ಎತ್ತರದಲ್ಲಿರುವ ಮಾಂಡು ಪ್ರದೇಶವು ತನ್ನ ಉತ್ತರದಲ್ಲಿ ಮಾಳವಾ ಪ್ರಸ್ಥಭೂಮಿ ಹಾಗೂ ದಕ್ಷಿಣದಲ್ಲಿ ನರ್ಮದಾ ನದಿಯ ಕಣಿವೆಯಿಂದ ಸುತ್ತುವರೆದಿದೆ. ತನ್ನ ಭೌಗೋಳಿಕ ವಿನ್ಯಾಸದಿಂದಾಗಿ ನೈಸರ್ಗಿಕ ಕೋಟೆಯಂತಿರುವ ಮಾಂಡು, ಮಾಳವಾದ ರಜಪೂತ್ ಪರಮಾರರ ರಾಜಧಾನಿಯಾಗಿತ್ತು.
ಮಾಂಡುವಿನ ಸುತ್ತ-ಮುತ್ತ ನೋಡಲು ಏನೇನಿದೆ ?
ಮಾಂಡುವಿನ ಭೂದೃಶ್ಯಾವಳಿಗಳು ಪ್ರವಾಸಿಗರನ್ನು ಐತಿಹ್ಯದ ಬಾಗಿಲಿಗೆ ಕೊಂಡೊಯ್ಯುವುದರಲ್ಲಿ ಎರಡು ಮಾತಿಲ್ಲ. ಪಟ್ಟಣದ ಇಕ್ಕೆಲಗಳು ದರ್ವಾಜಾ, ಮಸೀದಿ ಮತ್ತು ಮಹಲುಗಳಂತಹ ವಾಸ್ತುಶಿಲ್ಪಗಳಿಂದ ತುಂಬಿದ್ದು, ಮಾಂಡುವಿನ ಇತಿಹಾಸವನ್ನು ಇನ್ನೂ ಜೀವಂತವಾಗಿಟ್ಟಿವೆ. ಪ್ರೀತಿ, ಸಾಹಸಗಳ ಸಹಯೋಗದೊಂದಿಗೆ ನಿರ್ಮಿತವಾದ ರಾಣಿ ರೂಪಮತಿಯ ಭದ್ರಕೋಟೆ ಹಾಗು ಅದರ ಹೆಬ್ಬಾಗಿಲುಗಳು ನಿಜಕ್ಕೂ ನೋಡತಕ್ಕಂತವು. ಈ ಕೋಟೆಯ ಹೆಬ್ಬಾಗಿಲುಗಳು ಮಾಂಡುವಿನಲ್ಲಿರುವ ಐತಿಹಾಸಿಕ ನಗರಿಯ ಪ್ರವೇಶದ್ವಾರವಾಗಿವೆ. ಇಲ್ಲಿರುವ ಹೋಶಂಗ್ ನ ಸಮಾಧಿಯು ಭಾರತದಲ್ಲೇ ಪ್ರಥಮ ಅಮೃತಶಿಲೆಯ ರಚನೆಯಾಗಿದೆ. ಪ್ರಸಿದ್ಧ ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿಯಾಗಿತ್ತೆಂಬುವುದು ಈ ಸಮಾಧಿಯ ಹೆಗ್ಗಳಿಕೆ.
ಇತಿಹಾಸ
ಮಾಂಡು ಮೊದಲು ಅಫಘಾನ್ ಆಡಳಿತಗಾರನಾದ ದಿಲಾವರ್ ಖಾನ್ ನಿಂದ ಸ್ಥಾಪಿತವಾದ ಸಣ್ಣ ಸಾಮ್ರಾಜ್ಯವಾಗಿತ್ತು. ನಂತರ ಇದು ದಿಲಾವರ್ ಖಾನ್ ನ ಮಗ ಹೋಶಂಗ್ ಷಾನ ಆಳ್ವಿಕೆಯಲ್ಲಿ ಉಚ್ಚಾಯ ಸ್ಥಿತಿಯನ್ನು ತಲುಪಿತು. ನಂತರ ಕಾಲಾನುಕ್ರಮದಲ್ಲಿ ಖಿಲ್ಜಿಗಳು, ಮೊಘಲರು , ಬಹದ್ದೂರ ಷಾ ಹಾಗು ಕೊನೆಯಲ್ಲಿ ಮರಾಠರು ಈ ಪ್ರಾಂತ್ಯವನ್ನು ಆಳಿದರು.
ಐತಿಹಾಸಿಕ ಪುಟಗಳಲ್ಲಿ ಮಾಂಡು
ಕ್ರಿ.ಪೂ. 6 ನೇ ಶತಮಾನದಲ್ಲಿಯೇ ಮಾಂಡುವು ಒಂದು ಬೃಹತ್ ನಗರವಾಗಿತ್ತೆಂದು ಕ್ರಿ.ಶ. 555 ರಲ್ಲಿಯ ಸಂಸೃತ ಶಿಲಾಶಾಸನಗಳಿಂದ ತಿಳಿದು ಬರುತ್ತದೆ. ಆದರೆ 10 ಮತ್ತು 11ನೇ ಶತಮಾನದಲ್ಲಿ, ಪರಮಾರರ ಆಡಳಿತದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಿತು. ಈಗಿನ ಮಾಂಡುವಿಗೆ ಮಂದವ್ ಘರ್ ಎಂದು ನಾಮಕರಣ ಮಾಡಿದವರೂ ಪರಮಾರರೆ. ಮುಂದೆ 1305 ರಲ್ಲಿ ಈ ಪ್ರಾಂತ್ಯವನ್ನು ಖಿಲ್ಜಿಗಳು ವಶಪಡಿಸಿಕೊಂಡರು. ಅಲ್ಲಾವುದ್ಧೀನ್ ಖಿಲ್ಜಿಯು ಈ ನಗರದ ಸೌಂದರ್ಯಕ್ಕೆ ಮಾರುಹೋಗಿ ಇದನ್ನು "ಶದೈಬಾದ್" ಅಂದರೆ "ಆನಂದ ನಗರಿ" ಎಂದು ಕರೆದನು. 11ನೇ ಶತಮಾನದ ಅಂತ್ಯದದಲ್ಲಿ ಈ ಆನಂದ ನಗರಿಯು ತರಂಗ ಸಾಮ್ರಾಜ್ಯದ ಕೈಸೇರಿತು.
1531 ರ ಹೊತ್ತಿಗೆ ಮಾಂಡು, ಗುಜರಾತಿನ ಬಹದ್ದೂರ್ ಶಾಹ್ ನ ಆಳ್ವಿಕೆಯಲ್ಲಿತ್ತು. 1534 ರಲ್ಲಿ ಮೊಘಲ್ ದೊರೆ ಹುಮಾಯೂನ್ ನನು ಬಹದ್ದೂರ್ ಶಾಹ್ ನನ್ನು ಸೋಲಿಸಿ ಮಾಂಡುವನ್ನು ವಶಪಡಿಸಿಕೊಂಡನು. ನಂತರದ ಅವಧಿಯಲ್ಲಿ ಮಾಂಡು ಬಜ್ ಬಹದ್ದೂರ್, ಅಕ್ಬರ್ ಕೊನೆಗೆ 1732 ರಲ್ಲಿ ಮರಾಠರ ಪೇಶ್ವೆ ಬಾಜೀ ರಾವ್ ನ ಕೈ ಸೇರಿತು. ಮಹಾರಾಜಾ ಪವಾರನ ಕಾಲದಲ್ಲಿ ಮಾಳವಾದ ರಾಜಧಾನಿಯನ್ನು ಮತ್ತೆ ಮಾಂಡುನಿಂದ ಧಾರ್ ಗೆ ಬದಲಾಯಿಸಲಾಯಿತು.
ಮಾಂಡುವಿನಲ್ಲಿ ಸುವರ್ಣ ಯುಗದ ಸ್ಥಾಪನೆ 1401 ರಲ್ಲಿ ತೈಮೂರನು ದೆಹಲಿಯನ್ನು ವಶಪಡಿಸಿ ಕೊಂಡಾಗ, ಮಾಳವಾದ ಗವರ್ನರ್ ಆಗಿದ್ದ ಅಫ್ಘನ್ ನ ದಿಲಾವರ್ ಖಾನ್ ನು ಒಂದು ಪುಟ್ಟ ಪ್ರಾಂತ್ಯದಲ್ಲಿ ತನ್ನದೇ ಆದ ಸಣ್ಣ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಈ ಮೂಲಕ ಪ್ರವರ್ಧಮಾನಕ್ಕೆ ಬಂದ ಘುರಿ ಸಂತತಿಯು ಮಾಂಡುವಿನಲ್ಲಿ ಸುವರ್ಣ ಯುಗದ ಸ್ಥಾಪನೆಗೆ ನಾಂದಿಯಾಯಿತು. ದಿಲಾವರ್ ಖಾನನ ಮಗ ಹೊಶಂಗ್ ಶಾಹ್, ತನ್ನ ರಾಜಧಾನಿಯನ್ನು ಧಾರ್ ದಿಂದ ಮಾಂಡುಗೆ ಬದಲಾಯಿಸುವ ಮೂಲಕ ಮಾಂಡುಗೆ ಹೊಸ ಮೆರಗನ್ನು ನೀಡಿದ.
ಮಾಂಡುವನ್ನು ತಲುಪುವುದು ಹೇಗೆ
ಮಾಂಡು, ಉತ್ತಮ ರಸ್ತೆ ಮಾರ್ಗ, ವಾಯು ಮಾರ್ಗ ಮತ್ತು ರೈಲು ಸಂಪರ್ಕ ಹೊಂದಿರುವದರಿಂದ ಇಲ್ಲಿಗೆ ಬರುವುದು ತುಂಬಾ ಸುಲಭ.
ಮಾಂಡು ಭೇಟಿಗೆ ಅತ್ಯುತ್ತಮ ಸಮಯ ಮಳೆಗಾಲದಲ್ಲಿ ಇಲ್ಲಿ ಆಹ್ಲಾದಕರ ವಾತಾವರಣ ಮತ್ತು ಆಗಾಗ ಸುರಿಯುವ ತುಂತುರು ಮಳೆ ಪ್ರವಾಸಿಗರಲ್ಲಿ ಉಲ್ಲಾಸ ತುಂಬುವದರಿಂದ, ಮಳೆಗಾಲದಲ್ಲಿ ರಜಾದಿನಗಳನ್ನು ಕಳೆಯಲು ಇದು ಉತ್ತಮ ತಾಣವಾಗಿದೆ.