ಕರ್ನೂಲ್- ಆಂಧ್ರಪ್ರದೇಶ ರಾಜ್ಯದ ಆಡಳಿತ ಹೊಂದಿರುವ ದೊಡ್ಡ ನಗರವಾಗಿದ್ದು ಆಂಧ್ರಪ್ರದೇಶದಲ್ಲಿಯೇ ಏಳನೇ ಪ್ರಸಿದ್ದ ನಗರ. 1953 ರಿಂದ 1956 ರವರೆಗೆ ಕರ್ನೂಲ್ ಆಂಧ್ರಪ್ರದೇಶದ ರಾಜಧಾನಿಯಾಗಿತ್ತು. ಹಂದ್ರಿ ಮತ್ತು ತುಂಗಭದ್ರ ನದಿಯ ದಕ್ಷಿಣ ದಂಡೆಯ ಮೇಲೆ ಕರ್ನೂಲ್ ನಗರವಿದ್ದು, ಆಂಧ್ರಪ್ರದೇಶದ ದೊಡ್ಡ ಜಿಲ್ಲೆ ಎಂಬ ಖ್ಯಾತಿ ಹೊಂದಿದೆ. ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನಿಂದ ಕರ್ನೂಲ್ 212 ಕಿಲೋ ಮೀಟರ್ ದೂರದಲ್ಲಿದೆ. ಹೈದರಾಬಾದ್ ನಿಂದ ಕಡಪ, ಚಿತ್ತೋರ್, ಅನಂತಪುರ ಜಿಲ್ಲೆಗಳನ್ನು ತಲುಪಲು ಕರ್ನೂಲ್ ಮೂಲಕವೇ ಹಾದುಹೋಗಬೇಕು. ಹೀಗಾಗಿ ಕರ್ನೂಲ್ ರಾಯಲಸೀಮಾ ಪ್ರಾಂತ್ಯದ ಹೆಬ್ಬಾಗಿಲೆಂದೇ ಹೆಸರು ಪಡೆದುಕೊಂಡಿದೆ. ತನ್ನ ನಗರ ಸೌಂದರ್ಯದ ಶೋಭೆ ಮತ್ತು ಆತಿಥ್ಯದಿಂದ ಕರ್ನೂಲ್ ಪ್ರವಾಸಿಗರಿಗೆ ಹಿತಕರ ಭಾವನೆ ಉಂಟು ಮಾಡುತ್ತದೆ. ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯದಿಂದ ಕರ್ನೂಲ್ ಜಿಲ್ಲೆ ಅಧ್ಬುತ ಪ್ರವಾಸಿ ತಾಣ.
ಐತಿಹಾಸಿಕ ಪರಿಗಣನೆ:
ಕರ್ನೂಲ್ ಎಂಬ ಹೆಸರು ಬಂದಿದ್ದು ಪ್ರಾಚೀನ ಸಾಹಿತ್ಯ ಮತ್ತು ಶಾಸನಗಳಲ್ಲಿ ಉಲ್ಲೇಖಗೊಂಡಿರುವ ತೆಲುಗು ಹೆಸರಾದ ಕೊಂಡನ್ವೋಲು ಮೂಲಕ. ಕರ್ನೂಲಿನ ಇತಿಹಾಸ ಸಾವಿರಾರು ವರ್ಷಗಳಷ್ಟು ಹಳೆಯದು. ಕರ್ನೂಲ್ ನಿಂದ 18 ಕಿಲೋ ಮೀಟರ್ ದೂರದಲ್ಲಿರುವ ಕೇತಾವರಂ ಪ್ರದೇಶದಲ್ಲಿ ಶಿಲಾಯುಗದ ಪೂರ್ವ ಕಾಲದ ಕಲ್ಲಿನ ವರ್ಣಚಿತ್ರಗಳು ದೊರಕಿವೆ. ಜುರೇರು ಕಣಿವೆ, ಕಟಾವಣಿ ಕುಂಟ ಮತ್ತು ಯಗಂತಿಯಲ್ಲಿ ದೊರಕಿರುವ ಕಲ್ಲಿನ ಚಿತ್ರಗಳು 35,000 ದಿಂದ 40,000 ವರ್ಷಗಳಷ್ಟು ಹಳೆಯದು. ಮಧ್ಯಯುಗದ ಸಮಯದಲ್ಲಿ ಕರಾಚಿಗೆ ಪ್ರಯಾಣಿಸುವ ಮಧ್ಯೆ ಕರ್ನೂಲನ್ನು ದಾಟಿದ್ದಾಗಿ ಚೀನಾ ಪ್ರವಾಸಿಗ ಕ್ಸೂಅನ್ ಜಾಂಗ್ ದಾಖಲಿಸಿದ್ದಾನೆ. ಏಳನೇ ಶತಮಾನದಲ್ಲಿ ಕರ್ನೂಲ್ ಪ್ರದೇಶ ಬಿಜಾಪುರದ ಸುಲ್ತಾನರ ಆಳ್ವಿಕೆಯಲ್ಲಿತ್ತು. ಇದಕ್ಕೂ ಮುಂಚೆ ಕರ್ನೂಲನ್ನು ರಾಜಾ ಶ್ರೀ ಕೃಷ್ಣ ದೇವರಾಯ ಆಳಿದ್ದ. 1687 ರಲ್ಲಿ ಮೊಘಲ್ ದೊರೆ ಔರಂಗಜೇಬ ಕರ್ನೂಲನ್ನು ಗೆದ್ದುಕೊಂಡ ನಂತರ ಆಂಧ್ರಪ್ರದೇಶದ ಕರ್ನೂಲು ನವಾಬರ ನಿಯಂತ್ರಣಕ್ಕೆ ಬಂತು. ನಂತರ, ಕರ್ನೂಲನ್ನು ನವಾಬರು ಸ್ವತಂತ್ರ ಪ್ರದೇಶವೆಂದು ಘೋಷಿಸಿ ಸುಮಾರು 200 ವರ್ಷಗಳ ಕಾಲ ಆಳಿದರು. 18 ನೇ ಶತಮಾನದಲ್ಲಿ ನವಾಬರು ಬ್ರಿಟೀಷರ ವಿರುದ್ದ ಹೋರಾಡಿದರು.
ಪ್ರಾಚೀನ ಶಿಲ್ಪಕಲೆ ಮತ್ತು ದೇವಸ್ಥಾನಗಳ ನಗರ:
ಪ್ರಾಚೀನ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಸ್ಮಾರಕಗಳ ಬಗ್ಗೆ ಆಸಕ್ತಿ ಇರುವ ಪ್ರವಾಸಿಗರಿಗೆ ಕರ್ನೂಲ್ ವ್ಯಾಪಕವಾದ ಇಂಥ ದೃಶ್ಯಗಳನ್ನು ತೆರೆದಿಡುತ್ತದೆ. ಮಧ್ಯಯುಗದ ಕಾಲದಲ್ಲಿ ವಿಜಯನಗರದ ರಾಜರಿಂದ ಕಟ್ಟಲ್ಪಟ್ಟಿದ್ದ ಕೋಟೆಯ ಅವಶೇಷಗಳಲ್ಲಿ ಪ್ರಾಚೀನ ಕಾಲದ ಅರೇಬಿಕ್ ಮತ್ತು ಪರ್ಷಿಯನ್ ಶಾಸನಗಳು ಲಭ್ಯವಾಗಿವೆ. ಈ ಕೋಟೆಯನ್ನು ಅವಶ್ಯಕವಾಗಿ ನೋಡಲೇಬೇಕು. ಕೊಂಡ ರೆಡ್ಡಿ ಬುರುಜು ಮತ್ತು ಅಬ್ದುಲ್ ವಹಾಬ್ ಗುಮ್ಮಟಗಳು ಭೇಟಿ ನೀಡಬೇಕಾದ ಆಕರ್ಷಕ ತಾಣಗಳು. ಕರ್ನೂಲ್ ದೊರೆಗಳ ಬೇಸಿಗೆಯರಮನೆ, ಪ್ರವಾಹ ತಡೆಗೋಡೆ, ಪೇಟ ಆಂಜನೇಯ ಸ್ವಾಮಿ ದೇವಸ್ಥಾನ, ನಾಗರೇಶ್ವರ ಸ್ವಾಮಿ ದೇವಸ್ಥಾನ, ವೇಣುಗೋಪಾಲ ಸ್ವಾಮಿ ದೇವಸ್ಥಾನ ಮತ್ತು ಶಿರಡಿ ಸಾಯಿ ಬಾಬಾ ದೇವಸ್ಥಾನಗಳೂ ಕೂಡ ನೋಡಲು ಯೋಗ್ಯವಾದ ಕರ್ನೂಲಿನ ಇತರೆ ಸ್ಥಳಗಳು. ಕರ್ನೂಲಿನಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 8 ದಿನಗಳ ಕಾಲ ಶ್ರೀ ಆಂಜನೇಯ ಸ್ವಾಮಿಗೆ ಅರ್ಪಣೆಯ ರೂಪದಲ್ಲಿ ಪ್ರಸಿದ್ದವಾದ ಕಾರ್ ಫೆಸ್ಟಿವಲ್ ನಡೆಯುತ್ತದೆ.
ನಗರಕ್ಕೆ ಪ್ರಯಾಣ:
ಕರ್ನೂಲ್ ನಗರಕ್ಕೆ ಪ್ರಯಾಣಿಸುವುದು ಅತ್ಯಂತ ಸುಲಭ ಮತ್ತು ಹಿತಕರವಾದ ಪ್ರಯಾಣ. ಹೈದರಾಬಾದ್ ರಾಜೀವ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕರ್ನೂಲಿಗೆ ಹತ್ತಿರದಲ್ಲಿದೆ. ಕರ್ನೂಲ್ ನಗರದಿಂದ ವಿಮಾನ ನಿಲ್ದಾಣಕ್ಕೆ ಸುಮಾರು ಮೂರುವರೆ ತಾಸಿನ ಪ್ರಯಾಣ. ಭಾರತದ ಪ್ರಮುಖ ನಗರಗಳನ್ನು ಸೇರಿಸುವ ನಾಲ್ಕು ರೈಲ್ವೇ ನಿಲ್ದಾಣಗಳನ್ನು ಕರ್ನೂಲ್ ಹೊಂದಿದೆ:ಅವು- ಕರ್ನೂಲ್ ನಗರ, ಅಡೋಣಿ, ನಂದ್ಯಾಲ ಮತ್ತು ಧೋನೆ ಜಂಕ್ಷನ್. ಆಂಧ್ರಪ್ರದೇಶದ ಉಳಿದ ನಗರಗಳು ಮತ್ತು ಬೆಂಗಳೂರು, ಚೆನ್ನೈಗಳಿಂದಲೂ ಕರ್ನೂಲಿಗೆ ಬಸ್ ಸೌಕರ್ಯವಿದೆ. ಬೇಸಿಗೆಯ ದಿನಗಳು ಇಲ್ಲಿ ಹೆಚ್ಚು ಬಿಸಿತಾಪಮಾನವಿದ್ದು ಅಹಿತಕರವಾಗಿರುತ್ತವೆ. ಮಳೆಯ ಅಬ್ಬರವೂ ಜಾಸ್ತಿಯಿದೆ. ಹೀಗಾಗಿ ಕರ್ನೂಲಿಗೆ ಭೇಟಿ ನೀಡಲು ಮಾನ್ಸೂನ್ ಮಳೆಯ ನಂತರದ ಚಳಿಗಾಲ ಅಂದರೆ ಅಕ್ಟೋಬರ್ ನಿಂದ ಮಾರ್ಚ್ ತಿಂಗಳು ಉತ್ತಮ. ಈ ಸಮಯದಲ್ಲಿ ವಾತಾವರಣದಲ್ಲಿ ಬದಲಾವಣೆ ಇರುತ್ತದೆ ಮತ್ತು ತಂಪಾದ, ಹಿತಕರವಾದ ಹವೆಯಿಂದಾಗಿ ಪ್ರವಾಸಿ ಚಟುವಟಿಕೆಗಳಿಗೆ ಒಳ್ಳೆಯ ಅವಕಾಶವೂ ಲಭಿಸುತ್ತದೆ.