ಕೊಟ್ಟಾಯಂ, ಕೇರಳಾ ರಾಜ್ಯದ ಬಹು ಪುರಾತನ ನಗರ. ದೇವರ ಸ್ವಂತ ನಗರ ಎಂದೇ ಕರೆಸಿಕೊಳ್ಳುವ ಕೊಟ್ಟಾಯಂ ಇಲ್ಲಿನ ಜಿಲ್ಲಾ ಕೇಂದ್ರವೂ ಹೌದು. ಶಿಕ್ಷಣ ಹಾಗೂ ಮುದ್ರಣ ಮಾಧ್ಯಮಕ್ಕೆ ಈ ನಗರ ಅಪಾರ ಕೊಡುಗೆ ನೀಡಿರುವುದರಿಂದ ಇಂದು ಈ ನಗರವನ್ನು 'ಅಕ್ಷರ ನಗರ' ಅಥವಾ 'ಸಿಟಿ ಆಫ್ ಲೆಟರ್ಸ್' ಎಂದು ಕರೆಯುತ್ತಾರೆ. ಮಲಯಾಳಂ ಪದ 'ಕೊಟ್ಟ' ಅಂದರೆ ಕೋಟೆ ಹಾಗೂ 'ಅಕ್ಕಂ' ಎಂದರೆ ಒಳಭಾಗ ಎಂಬ ಅರ್ಥ ನೀಡುತ್ತದೆ. ಈ ಎರಡು ಪದಗಳು ಸೇರಿ ಕೊಟ್ಟಾಯಂ ಎಂಬ ಹೆಸರು ಬಂದಿದ್ದು ಇದರ ಸಂಪೂರ್ಣ ಅರ್ಥ 'ಕೋಟೆಯ ಒಳಭಾಗ'ಎಂದಾಗಿದೆ.
ಬೆಟ್ಟದ ಮೇಲ್ಭಾಗದಲ್ಲಿರುವ ಕೊಟ್ಟಾಯಂ ನಗರದ ಹಳೆ ಪ್ರದೇಶವನ್ನು ಕುನ್ನುಂಪುರಂ ಎಂದು ಕರೆಯುತ್ತಾರೆ. ತೇಕುಂಕೂರ್ ನ ರಾಜ ನಿರ್ಮಿಸಿದ ತಾಳಿಯಿಲ್ ಕೊಟ್ಟ ಎಂಬ ಕೋಟೆಯಿಂದಾಗಿ ಈ ನಗರಕ್ಕೆ ಮೇಲಿನ ಹೆಸರು ಬಂದಿದೆ. ಕೋಟೆಯ ಒಳಭಾಗದಲ್ಲೇ ಗ್ರಾಮ ಬೆಳೆದು ಅದಕ್ಕೆ ಕೊಟ್ಟಾಯಂ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಸುಂದರವಾದ ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ಈ ನಗರದ ಪಶ್ಚಿಮಕ್ಕೆ ವೆಂಬನಾದ್ ಸರೋವರ ಅತ್ಯಂತ ಮೋಹಕವಾಗಿ ಕಂಗೊಳಿಸುತ್ತದೆ. ಇಲ್ಲಿನ ನಿಸರ್ಗದ ಅದ್ಭುತ ಸೌಂದರ್ಯ ಎಂಥವರನ್ನಾದರು ಮೂಕರನ್ನಾಗಿಸುತ್ತದೆ. ನೀವು ಯಾವ ದಿಕ್ಕಿಗೆ ಕಣ್ಣಾಯಿಸಿದರೂ ಹಚ್ಚ ಹಸಿರಾದ ಭೂದೇವಿಯ ಸೌಂದರ್ಯ ಸಿರಿ ಕಾಣುವಿರಿ. ಎತ್ತರವಾದ ಪ್ರದೇಶಗಳು ಹಾಗೂ ನಿರ್ಮಲ ಪ್ರಕೃತಿ ಸೌಂದರ್ಯ ನೋಡಿ ನೀವು ದಿಗ್ಭ್ರಾಂತರಾದರೆ ಆಶ್ಚರ್ಯವಿಲ್ಲ.
ಅಲ್ಲಿನ ರಬ್ಬರ್ ಮರಗಳಷ್ಟೇ ಶಿಕ್ಷಣವೂ ಉನ್ನತವಾದ ಸ್ಥಿತಿಯಲ್ಲಿದ್ದು, ಆಕರ್ಷಕ ಸರೋವರಗಳನ್ನೂ ಸಹ ಕಾಣಬಹುದು. ಇವೆಲ್ಲವು ಸೇರಿ ಒಟ್ಟಾರೆಯಾಗಿ ಕೊಟ್ಟಾಯಂಗೆ 'ಅಕ್ಷರ ಭೂಮಿ, ಪುರಾತನ ನಾಡು, ನದಿ ಸರೋವರಗಳ ಬೀಡು' ಎಂಬ ಹೆಸರು ತಂದುಕೊಟ್ಟಿದೆ. ಕೊಟ್ಟಾಯಂ ನಗರ ಅನೇಕ ವಿಭಿನ್ನವಾದ ಜಾತಿಯ ಪ್ರಾಣಿಪಕ್ಷಿಗಳು ಹಾಗೂ ರಬ್ಬರ್ ನಂಥ ವಾಣಿಜ್ಯ ಬೆಳೆಗೆ ಹೆಸರುವಾಸಿಯಾಗಿದೆ. ರಬ್ಬರ್ ಬೋಟ್ ನ ಪ್ರಧಾನ ಕಛೇರಿ ಇಲ್ಲಿದ್ದು ಭಾರತದಲ್ಲಿ ಉತ್ತಮವಾದ ರಬ್ಬರ್ ಈ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ನಗರ ಅನೇಕ ಮುದ್ರಣ ಮಾಧ್ಯಮಗಳ ತವರೂರಾಗಿದ್ದು ಮಲಿಯಾಳಿ ಮನೋರಮಾ ಎಂಬ ದಿನ ಪತ್ರಿಕೆ, ಮಂಗಳಂ ಹಾಗೂ ದೀಪಿಕಾ ಎಂಬ ಪತ್ರಿಕೆಗಳಲ್ಲದೆ ಅನೇಕ ಪುಸ್ತಕಗಳು ಇಲ್ಲಿ ಮುದ್ರಣಗೊಂಡು ಬಿಡುಗಡೆ ಕಾಣುತ್ತಿವೆ. ಕೊಟ್ಟಾಯಂ ಭಾರತದಲ್ಲೇ ಶೇಖಡ 100 ರಷ್ಟು ಸುಶಿಕ್ಷಿತರು ಹೊಂದಿರುವ ನಗರವಾಗಿದೆ. ಜೊತೆಗೆ ತಂಬಾಕನ್ನು ರದ್ದು ಮಾಡಿದ ಭಾರತದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಭಾರತದಲ್ಲೇ ಮೊದಲು 'ಇಕೋ ಸಿಟಿ' ಎಂಬ ಬಿರುದನ್ನ ಪಡೆದ ನಗರ ಇದಾಗಿದೆ. ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಕೊಟ್ಟಾಯಂ ಪಾರಂಪರಿಕ ಸಂಸ್ಕೃತಿಯನ್ನೂ ಹೊಂದಿದೆ. ಕೊಟ್ಟಾಯಂ ಜನಪ್ರಿಯ ಪ್ರವಾಸಿ ತಾಣವಾಗಿದ್ದು ಪ್ರತೀ ವರ್ಷ ಇಲ್ಲಿನ ಸಾಂಸ್ಕೃತಿಕ ಮೌಲ್ಯಗಳಿಗೆ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಮನ ಸೋತ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಕೇರಳಾ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದೆ ಎನ್ನುವುದಕ್ಕೆ ಇಲ್ಲಿನ ಪೂಂಜಾರ್ ಅರಮನೆಯೇ ಸಾಕ್ಷಿ. ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಕೇರಳ ಸೂಕ್ತ ಪ್ರದೇಶವಾಗಿದೆ. ತಿರುಣಾಕರ ಮಹದೇವ ದೇವಾಲಯ, ಪಿಳೈಪುರಾಟ್ಟು ಕಾವು, ತಿರುವೀರ್ಪು ದೇವಾಲಯ ಹಾಗೂ ಸರಸ್ವತಿ ದೇವಾಲಯ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಕೆಲವು ದೇವಾಲಯ ಕೇರಳದಲ್ಲಿ ಜನಪ್ರಿಯವಾದವುಗಳು. ಪುರಾತನ ತಾಜಾತಂಗಡಿ ಜುಮಾ ಮಸೀದಿ ಹಾಗೂ ಹಳೆಯ ಸೇಂಟ್ ಮೇರಿ ಆರ್ಥೊಡಾಕ್ಸ್ ಚರ್ಚ್ ಕೊಟ್ಟಾತವಾಲಂಗೆ ಅನೇಕ ಭಕ್ತರು ಪ್ರತಿ ನಿತ್ಯ ಭೇಟಿ ನೀಡಿ ಪ್ರಾರ್ಥಿಸುತ್ತಾರೆ. ಕೊಟ್ಟಾತವಾಲಂನ ಗುಹೆ ಪ್ರವಾಸಿಗರ ಮತ್ತೊಂದು ಆಕರ್ಷಣೀಯ ಪ್ರದೇಶ. ಸಮೀಪದ ನಾಟಕಂ ಹಾಗೂ ಪಂಚಿಕಾಡು ಪ್ರದೇಶಕ್ಕೂ ಭೇಟಿ ನೀಡುವುದು ಸೂಕ್ತ. ಈ ಪ್ರದೇಶ ಮನಸ್ಸಿಗೆ ಹಾಗೂ ಶರೀರಕ್ಕೆ ಉತ್ತಮ ಆಹ್ಲಾದಕರವಾದ ಭಾವನೆಯನ್ನುಂಟು ಮಾಡುವ ಪ್ರದೇಶವಾಗಿದೆ. ಇಳವೀಜಾಪೂಂಚಿರ ಎಂಬ ಗುಡ್ಡಗಾಡು ಪ್ರದೇಶಕ್ಕೆ ಹೋಗುವುದನ್ನು ಮರೆಯಬೇಡಿ. ಕೊಟ್ಟಾಯಂನ ಸಮೀಪದ ಪ್ರವಾಸಿ ತಾಣಗಳಾದ ಮೂನ್ನಾರ್, ಎರ್ನಾಕುಲಂ, ಪೀರ್ಮೇಡ್, ತೆಕ್ಕಡಿ, ಮದುರೈ, ವೈಕೋಂ, ಶಬರಿಮಲೆ, ಇಟ್ಟುಮನೂರ್ ಮುಂತಾದ ಅನೇಕ ಪ್ರದೇಶಗಳಿವೆ. ಕೊಟ್ಟಾಯಂ ಪ್ರವಾಸಿ ನಿಮ್ಮ ಮನಸ್ಸಿಗೆ ನಿಜಕ್ಕೂ ಹರ್ಷ ತರುತ್ತದೆ ಹಾಗೂ ಇದೊಂದು ಮರೆಯಲಾಗದ ಪ್ರವಾಸವಾಗುತ್ತದೆ. ಟ್ರೆಕ್ಕಿಂಗ್ ಹಾಗೂ ಜಲಕ್ರೀಡೆಗಳಾದ ಬೋಟಿಂಗ್, ಸ್ವಿಮಿಂಗ್, ಹಾಗೂ ಫಿಶಿಂಗ್ ಹಾಗೂ ಫೋಟೋಗ್ರಾಫಿಗೆ ಹೇಳಿ ಮಾಡಿಸಿದ ಸ್ಥಳ.
ಕೇರಳಾದ ಎಲ್ಲಾ ಪ್ರಮುಖ ನಗರಗಳಿಂದ ಕೊಟ್ಟಾಯಂಗೆ ಸಾರಿಗೆ ಸೌಕರ್ಯವಿದೆ. ರಸ್ತೆ, ವಿಮಾನ ಹಾಗೂ ರೇಲು ಮಾರ್ಗದ ಮೂಲಕ ಮಾತ್ರವಲ್ಲದೆ ಸಮುದ್ರ ಮಾರ್ಗವಾಗಿಯೂ ಕೊಟ್ಟಾಯಂಗೆ ಹೋಗಬಹುದು.ವರ್ಷದ ಯಾವುದೇ ಕಾಲದಲ್ಲಿ ಕೊಟ್ಟಾಯಂ ಭೇಟಿ ನೀಡಬಹುದು. ಆದರೂ ಚಳಿಗಾಲದಲ್ಲಿ ಇಲ್ಲಿಗ ಭೇಟಿ ನೀಡುವುದು ಉತ್ತಮ.