ಉತ್ತರಪ್ರದೇಶ ರಾಜ್ಯದ ದೊಡ್ಡ ಪಟ್ಟಣವಾದ ಕಾನ್ಪುರ ಗಂಗಾ ನದಿಯ ತಟದಲ್ಲಿ ತಲೆ ಎತ್ತಿ ನಿಂತಿದೆ. ಪುರಾಣ ಕಥೆಯ ಪ್ರಕಾರ ಮಹಾಭಾರತದ ಕಾಲದಲ್ಲಿ ದುರ್ಯೋಧನನು ಈ ಭೂಭಾಗವನ್ನು ತನ್ನ ಆಪ್ತ ಗೆಳೆಯನಾದ ಕರ್ಣನಿಗೆ, ಅರ್ಜುನನ ಎದಿರು ಆತ ತೋರಿದ ಧೈರ್ಯಕ್ಕೆ ಪ್ರತಿಯಾಗಿ ಈ ನಗರವನ್ನು ಉಡುಗೊರೆಯಾಗಿ ಕೊಟ್ಟಿದ್ದ ಎಂದು ಪ್ರತೀತಿ. ಮೊದಲಿಗೆ ಈ ಪ್ರದೇಶ ಕರ್ಣಪುರ ಎಂದು ಕರೆಯಲ್ಪಡುತ್ತಿತ್ತು. ಕಾಲಾಂತರದಲ್ಲಿ ಕಾನ್ಪುರವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗುತ್ತದೆ. ಮತ್ತೊಂದು ಕಥೆಯ ಪ್ರಕಾರ, ಮೊದಲಿಗೆ ಈ ಪ್ರದೇಶವನ್ನು ಕೃಷ್ಣನ ಹೆಸರಿನಿಂದ, ಅಂದರೆ ಕನೈಯಾಪುರ ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಈಗಿರುವ ಹೆಸರು ಉಳಿದುಕೊಂಡಿದೆ.
ಇದರ ಪೌರಾಣಿಕ ಹಿನ್ನೆಲೆ ಹೊರತುಪಡಿಸಿದರೆ, ಬ್ರಿಟಿಷರ ಕಾಲದಲ್ಲಿ ಅವಧ್ನ ನವಾಬ್ ಈ ಪಟ್ಟಣವನ್ನು ಬ್ರಿಟಿಷರಿಗೆ ಹಸ್ತಾಂತರಿಸಿದ ನಂತರ ಇದು ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಯಿತು. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಈ ನಗರ ಹಲವಾರು ಹತ್ಯಾಕಾಂಡಗಳಿಗೆ ಸಾಕ್ಷಿಯಾಯಿತು.
ಇಂದು ಕಾನ್ಪುರ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಮ್ಮೆಯ ಕೇಂದ್ರವಾಗಿದ್ದು, ಅನೇಕ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ತವರೂರಾಗಿದೆ. ಅವುಗಳಲ್ಲಿ ಪ್ರಮುಖವಾಗಿರುವುದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ. ಇನ್ನಿತರ ಸಂಸ್ಥೆಗಳೆಂದರೆ, ಯುನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಸಿಎಸ್ಜೆಎಮ್ ಯುನಿವರ್ಸಿಟಿ, ಹರಕೋರ್ಟ್ ಬಟ್ಲರ್ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ (ಎಚ್ಬಿಟಿಐ), ಜಿಎಸ್ವಿಎಮ್ ಮೆಡಿಕಲ್ ಕಾಲೇಜ್ ಮತ್ತು ಡಾ. ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಐಟಿಎಮ್). ಕೈಗಾರಿಕಾ ಕ್ಷೇತ್ರದಲ್ಲಿ ಕೂಡ ಕಾನ್ಪುರ ಚರ್ಮ ಹಾಗು ನೂಲು ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದು, ದೇಶ ವಿದೇಶಗಳ ವ್ಯಾವಾರಿಗಳನ್ನು ಸೆಳೆಯುತ್ತಿದೆ.
ಕಾನ್ಪುರ ಹಾಗು ಸುತ್ತಮುತ್ತಲಿನ ಪ್ರವಾಸಿ ತಾಣಗಳು
ಮೊದಲ ನೋಟಕ್ಕೆ ಕಾನ್ಪುರ ಇತರೆ ಭಾರತೀಯ ನಗರಗಳಂತೆ. ಅಂದರೆ ಸದ್ದುಗದ್ದಲ, ಗಜಿಬಿಜಿ, ಯಾವಾಗಲೂ ಚಟುವಟಿಕೆಗಳಿಂದ ಕೂಡಿರುವ ಪಟ್ಟಣದಂತೆ. ಮೇಲ್ನೋಟಕ್ಕೆ ಈ ನಗರ ಗೌಜುಗದ್ದಲದಿಂದ ಕೂಡಿದ್ದರೂ, ಇಲ್ಲಿ ನೋಡಲು ಹಾಗು ತಿಳಿದುಕೊಳ್ಳಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಕಾನ್ಪುರ ಪ್ರವಾಸೋದ್ಯಮ ಸಾಕಷ್ಟು ಸುಂದರವಾದ ಮಂದಿರಗಳನ್ನು ಭೇಟಿ ಮಾಡಲು ಎಡೆಮಾಡಿಕೊಡುತ್ತದೆ. ಅವುಗಳಲ್ಲಿ ರಾಧಾಕೃಷ್ಣ ಮಂದಿರ, ಭೀತರ್ ಗಾಂವ್ ಮಂದಿರ ಮತ್ತು ದ್ವಾರಕಾಧೀಶ ಮಂದಿರ ಮುಖ್ಯವಾದವು. ಭಾರತದ ಶ್ರೀಮಂತ ಸಂಸ್ಕೃತಿ ಹಾಗು ಧಾರ್ಮಿಕ ವೈವಿಧ್ಯತೆಯನ್ನು ಕಾನ್ಪುರ ಎತ್ತಿ ಹಿಡಿಯುತ್ತದೆ. ಹಿಂದೂ ಧರ್ಮ ಮಾತ್ರವಲ್ಲ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀಯರನ್ನೂ ಈ ನಗರ ಪ್ರತಿನಿಧಿಸುತ್ತದೆ. ಪ್ರಸ್ತಾಪಿಸಲಾರ್ಹ ಪೂಜಾಸ್ಥಳಗಳೆಂದರೆ, ಜಾಮಾ ಮಸೀದಿ, ಕಾನ್ಪುರ ಮೆಮೋರಿಯಲ್ ಚರ್ಚ್ ಮತ್ತು ಜೈನ್ ಗ್ಲಾಸ್ ಟೆಂಪಲ್. ಈ ಜೈನ್ ಗ್ಲಾಸ್ ಟೆಂಪಲ್ ಪ್ರಾಚೀನ ಶೈಲಿಯ ಕಟ್ಟಡವನ್ನು ಹೊಂದಿದ್ದು, ಹೆಸರೇ ಹೇಳುವಂತೆ ಗಾಜಿನಿಂದ ಅಲಂಕೃತಗೊಂಡಿದೆ.
ನಗರದ ಗಜಿಬಿಜಿಯ ನೋಟ ಮತ್ತು ಗೌಜುಗದ್ದಲದಿಂದ ಬೇಸರವಾಗಿದ್ದರೆ, ಗ್ರೀನ್ ಪಾರ್ಕ್, ನಾನಾರಾವ್ ಪಾರ್ಕ್, ಮೋತಿ ಝೀಲ್ ಮತ್ತು ಫೂಲ್ ಬಾಗ್ ಗಳಲ್ಲಿ ಶಾಂತಿಯನ್ನು ಅರಸಿ ಹೋಗಬಹುದು. ಫೂಲ್ ಬಾಗ್ ಅಂದರೆ ಹೂತೋಟ ಅಂತಿದ್ದರೂ, ಈ ಪಾರ್ಕ್ 1857ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಡೆದ ಹತ್ಯಾಕಾಂಡದ ದುರಂತಮಯ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಜನರು ಈ ಉದ್ಯಾನಗಳಿಗೆ ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಬಂದು ಕಾಲ ಕಳೆದು ಹೋಗುತ್ತಾರೆ.
ಕಾನ್ಪುರ ಪ್ರಸಿದ್ಧ ಅಲೆನ್ ಮೃಗಾಲಯಕ್ಕೆ ಹೆಸರುವಾಸಿಯಾಗಿದೆ. ಇದು ನಗರದ ಅತ್ಯಂತ ದೊಡ್ಡ ಮೃಗಾಲಯವಾಗಿದ್ದು, ಉತ್ತರ ಪ್ರದೇಶದಲ್ಲಿ ಅತ್ಯುತ್ತಮ ಮೃಗಾಲಯವೆಂದು ಹೆಸರು ಪಡೆದಿದೆ. ಈ ಮೃಗಾಲಯದ ವಿಶೇಷವೆಂದರೆ, ಅನ್ಯ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ನಾವು ಪಂಜರಗಳಲ್ಲಿ ಹಿಡಿದಿಟ್ಟಿರುವುದನ್ನು ಕಂಡರೆ, ಇಲ್ಲಿ ಪ್ರಾಣಿಪಕ್ಷಿಗಳು ಸಹಜವಾಗಿ ಜೀವಿಸುತ್ತಿರುವುದನ್ನು ಕಾಣಬಹುದು.
ಕಾನ್ಪುರದಲ್ಲಿ ಭೋಜನ
ಭಾರತೀಯ ಆಹಾರ ಪದ್ಧತಿ ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ. ಯಾವುದೇ ನಗರಕ್ಕೆ ಪ್ರಯಾಣಿಸಿದರೂ ಅಲ್ಲಿ ಏನಾದರೂ ನಾಲಿಗೆ ರುಚಿಸುವಂತಹ ವಿಶೇಷವಾದ ತಿನಿಸು ಇದ್ದೇ ಇರುತ್ತದೆ. ಕಾನ್ಪುರ ಪ್ರವಾಸೋದ್ಯಮದ ಪ್ರಮುಖವಾದ ಅಂಶವೆಂದರೆ, ಅದು ಪ್ರಸ್ತುತಪಡಿಸುವ ಸ್ವಾದಿಷ್ಟಕರವಾದ ಆಹಾರ. ಫಾಸ್ಟ್ ಫುಡ್ ನಿಂದ ಹಿಡಿದು ಐಷಾರಾಮಿ ಹೋಟೆಲ್ಗಳವರೆಗೆ, ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲ ಬಗೆಯ ಜನರ ನಾಲಿಗೆ ರುಚಿಸುವಂತಹ ವೈವಿಧ್ಯಮಯ ಈಟ್ ಔಟ್ ಗಳು ಇಲ್ಲಿವೆ. ಮತ್ಥಾ ಪಾಂಡೆಯ ಥಗ್ಗು ಕಾ ಲಡ್ಡು ಬಡಾ ಚೌರಾಹದಲ್ಲಿದೆ ಹಾಗು ಬಾದಾಮ್ ಕುಲ್ಫಿ ಸಿವಿಲ್ ಲೈನ್ ನಲ್ಲಿ ಸವಿಯಬಹುದು.
ಕಾನ್ಪುರ ತಲುಪುವ ಬಗೆ
ಕಾನ್ಪುರಕ್ಕೆ ನಾವು ರಸ್ತೆ ಮಾರ್ಗವಾಗಿ, ರೈಲು ಮಾರ್ಗವಾಗಿ ಅಥವಾ ವಿಮಾನ ಮಾರ್ಗವಾಗಿ ತಲುಪಬಹುದು.
ಕಾನ್ಪುರಕ್ಕೆ ಭೇಟಿ ಕೊಡಲು ಸೂಕ್ತ ಸಮಯ
ಈ ನಗರಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ.