ಕಂಗ್ರಾ ಎಂಬುದು ಹಿಮಾಚಲ್ ಪ್ರದೇಶದ ಮಂಝಿ ಮತ್ತು ಬೆನೆರ್ ಝರಿಗಳ ನಡುವೆ ಇರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಧೌಲಾಧರ್ ಮತ್ತು ಶಿವಾಲಿಕ್ ಶ್ರೇಣಿಗಳ ನಡುವೆ ಇರುವ ಕಂಗ್ರಾ ಕಣಿವೆಯ ನಡುವೆ ನೆಲೆಗೊಂಡಿರುವ ಈ ಸುಂದರ ನಗರದಿಂದ ಬಂಗಾಂಗ ಹೊಳೆಯನ್ನು ವೀಕ್ಷಿಸಬಹುದು. ಈ ಪ್ರದೇಶವು ದೇವ ಭೂಮಿ ಎಂದೆ ಖ್ಯಾತಿ ಪಡೆದಿದೆ. ವೇದಗಳ ಪ್ರಕಾರ, ಆರ್ಯರು ಬರುವ ಮೊದಲು ಇಲ್ಲಿ ಅನಾರ್ಯರಾದ ಬುಡಕಟ್ಟು ಜನರು ಇಲ್ಲಿ ವಾಸಿಸುತ್ತಿದ್ದರಂತೆ. ಮಹಾಭಾರತ ಮಹಾಕಾವ್ಯದಲ್ಲಿ ಈ ಸ್ಥಳವನ್ನು ತ್ರಿಗರ್ತ ರಾಜ್ಯವೆಂದು ಕರೆಯಲಾಗಿದೆ.
ಕಂಗ್ರಾ ನಗರವು 10 ನೇ ಶತಮಾನದಲ್ಲಿ ಮಹಮ್ಮದ್ ಘಜಿನಿಯ ದಾಳಿಗೆ ಒಳಗಾಯಿತು. ಆನಂತರ ಇದು ಮುಸ್ಲಿಂ ರಾಜರ ಆಡಳಿತದ ಸುಪರ್ದಿಗೆ ಎಂದರೆ ಕಟೋಚ್ ಸಾಮ್ರಾಜ್ಯದ ವಶಕ್ಕೆ ಬಂದಿತು. ಇದು ಈ ಪ್ರಕಾರದಲ್ಲಿನ ಅತ್ಯಂತ ಹಳೆಯ ರಾಜ ಮನೆತನವಾಗಿದೆ. 1846 ರಲ್ಲಿ ಮೊದಲ ಆಂಗ್ಲೋ-ಸಿಖ್ ಯುದ್ಧದ ನಂತರ ಈ ಪ್ರದೇಶವು ಬ್ರಿಟೀಷರ ವಶಕ್ಕೆ ಒಳಪಟ್ಟಿತು. ಅವರು ಇದನ್ನು ಭಾರತ ವಸಾಹತುವಿನ ಒಂದು ಜಿಲ್ಲೆಯಾಗಿ ಮಾರ್ಪಾಡುಗೊಳಿಸಿದರು. 1947ರಲ್ಲಿ ಭಾರತ ವಿಭಜನೆಯಾದ ನಂತರ ಇದು ಪಂಜಾಬ್ ಪ್ರಾಂತ್ಯಕ್ಕೆ ಸೇರಿತು. ಆದರೆ ನಂತರ 1966 ರಲ್ಲಿ ಇದನ್ನು ಹಿಮಾಚಲ್ ಪ್ರದೇಶಕ್ಕೆ ಹಸ್ತಾಂತರಿಸಲಾಯಿತು.
ಪ್ರವಾಸಿಗರು ಕಂಗ್ರಾದಲ್ಲಿ ಅನುಪಮವಾದ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಅವುಗಳಲ್ಲಿ ಕಯೆರಿ ಕೆರೆ, ಬಾಗಲಮುಖಿ ದೇವಾಲಯ ಮತ್ತು ಕಾಲೇಶ್ವರ ಮಹಾದೇವ್ ದೇವಾಲಯಗಳು ಪ್ರಮುಖವಾಗಿ ಸೇರಿವೆ. ಸಮುದ್ರ ಮಟ್ಟದಿಂದ 2934 ಮೀಟರ್ ಎತ್ತರದಲ್ಲಿರುವ ಕಯೆರಿ ಕೆರೆಯ ಭವ್ಯನೋಟವನ್ನು ನೋಡುವುದೆ ಒಂದು ಭಾಗ್ಯ. ಈ ಕೆರೆಗೆ ಚಾರಣದ ಮೂಲಕ ತಲುಪಬಹುದು. ಧೌಲಾಧರ್ ಶ್ರೇಣಿಯ ಬೆಟ್ಟಗಳ ಶಿಖರದಲ್ಲಿರುವ ಹಿಮವು ಕರಗಿದ ನಂತರ ಬರುವ ನೀರಿನಿಂದ ಈ ಕೆರೆ ನಿರ್ಮಾಣಗೊಂಡಿದೆ. ಕಾಲೇಶ್ವರ್ ಮಹಾದೇವ್ ದೇವಾಲಯ ಮತ್ತು ಲಿಂಗವನ್ನು ಇಲ್ಲಿ ನೆಲಮಟ್ಟದಲ್ಲಿ ನಿರ್ಮಿಸಲಾಗಿದೆ. ಇದು ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರನ್ನು ಸಹಸ್ರಾರು ಸಂಖ್ಯೆಯಲ್ಲಿ ತನ್ನತ್ತ ಆಕರ್ಷಿಸುತ್ತಿದೆ.
ಹರಿಪುರ್-ಗುಲೆರ್ ಗಳು ಇಲ್ಲಿ ಗುಲೆರ್ ರಿಯಾಸತ್ನ ಪರಂಪರೆಯನ್ನು ಪ್ರತಿನಿಧಿಸುತ್ತ ನಿಂತಿವೆ. ಅಲ್ಲದೆ ಬ್ರಜೇಶ್ವರಿ ದೇವಾಲಯವು ಕಂಗ್ರಾದ ಅತ್ಯಂತ ಜನಾಕರ್ಷಕ ತಾಣಗಳಲ್ಲಿ ಒಂದಾಗಿದೆ. ಕೊನೆಯ ಯಾತ್ರಾಸ್ಥಳಕ್ಕೆ ಪ್ರತಿದಿನ ಹಲವಾರು ಭಕ್ತಾಧಿಗಳು ಬಂದು ಹೋಗುತ್ತಿರುತ್ತಾರೆ. ರಾಮ್ ಸಾಗರ್ ಕನ್ವೆನ್ಷನ್ನಲ್ಲಿರುವ ಮಹಾರಾಣ ಪ್ರತಾಪ್ ಸಾಗರ್ ತನ್ನಲ್ಲಿ ಹಲವಾರು ವಲಸೆ ಹಕ್ಕಿ ಪ್ರಭೇದಗಳಿಗೆ ಆಶ್ರಯವನ್ನು ಒದಗಿಸಿದೆ. ಹೀಗಾಗಿ ಇದು ಹಲವಾರು ಪಕ್ಷಿ ವೀಕ್ಷಕರನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ.
ಕೋಟ್ಲಾ ಕೋಟೆಯು ಶಹಪುರ್ ಮತ್ತು ನುರ್ಪುರ್ ಹೆದ್ದಾರಿಯಲ್ಲಿ ನೆಲೆಗೊಂಡಿದ್ದು, ಕಂಗ್ರಾಗೆ ಭೇಟಿಕೊಡುವ ಹಲವಾರು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ಕೋಟೆಯು ಒಂದು ದಿಬ್ಬದ ಮೇಲೆ ನೆಲೆಗೊಂಡಿದ್ದು, ಸುತ್ತ ಮುತ್ತಲಿನ ಭವ್ಯವಾದ ವಿಹಂಗಮ ನೋಟವನ್ನು ಮತ್ತು ಆಳವಾದ ಕಣಿವೆಗಳ ದೃಶ್ಯವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಈ ಕೋಟೆಯನ್ನು ಗುಲೆರ್ ರಾಜರು ನಿರ್ಮಿಸಿದ್ದರು. ಬಾಗುಲಮುಖಿ ದೇವಾಲಯವು ಕೋಟೆಯ ಮುಖ್ಯದ್ವಾರದಲ್ಲಿ ನೆಲೆಗೊಂಡಿದೆ. ಇದು ಸಹ ಪ್ರವಾಸಿಗರನ್ನು ಕಂಗ್ರಾದತ್ತ ಬರಲು ಕಾರಣೀಭೂತವಾಗಿದೆ.
ಕಂಗ್ರಾದ ದಕ್ಷಿಣಕ್ಕೆ 15 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಮರ್ಸೂರ್ ದೇವಾಲಯ ಸಂಕೀರ್ಣವು ಕಂಗ್ರಾದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಏಕಶಿಲೆಯಲ್ಲಿ ಕೆತ್ತಲಾಗಿರುವ ಹತ್ತನೆ ಶತಮಾನದ ದೇವಾಲಯವು ಇಂಡೋ-ಆರ್ಯನ್ ಶೈಲಿಯಲ್ಲಿದ್ದು, ನೋಡಲು ಅಜಂತಾ-ಎಲ್ಲೋರಾ ದೇವಾಲಯಗಳ ಮಾದರಿಯಲ್ಲಿದೆ. ಈ ಸಂಕೀರ್ಣವು 15 ದೇವಾಲಯಗಳನ್ನು ಹೊಂದಿದೆ. ಮುಖ್ಯ ದೇವಾಲಯದಲ್ಲಿ ಶ್ರೀ ರಾಮ, ಸೀತಾ ಮತ್ತು ಶಿವನ ಮೂರ್ತಿಗಳನ್ನು ಕಾಣಬಹುದು.
ಕಂಗ್ರಾದ ಇನ್ನಿತರ ಆಕರ್ಷಣೆಗಳೆಂದರೆ ಧೌಲಾಧರ್ ಶ್ರೇಣಿ, ಬ್ರಜೇಶ್ವರಿ ದೇವಾಲಯ, ನದೌನ್, ಕಠ್ಘಢ್, ಜವಲಿ ಜೀ ದೇವಾಲಯ, ಕಂಗ್ರಾ ಕಲಾ ಶಾಲೆ, ಸುಜನ್ಪುರ್ ಕೋಟೆ, ಜಡ್ಜಸ್ ಕೋಟೆ ಮತ್ತು ಶಿವನ ದೇವಾಲಯಗಳಾಗಿವೆ. ಇವುಗಳ ಜೊತೆಗೆ ಧರ್ಮಶಾಲ, ಬೆಹ್ನ ಮಹಾದೇವ್, ಪೊಂಗ್ ಕೆರೆ ವನ್ಯಧಾಮ, ಸಿದ್ಧನಾಥ ದೇವಾಲಯ, ಮ್ಯಾಕ್ಲಿಯೋಡ್ ಗಂಜ್, ತಾರಾಘಡ್ ಅರಮನೆ ಮತ್ತು ನಾಗರ್ ಕೋಟ್ ಕೋಟೆಗಳು ಈ ಪ್ರಾಂತ್ಯದ ಆಕರ್ಷಣೆಗಳಲ್ಲಿ ಸ್ಥಾನ ಪಡೆದಿವೆ.
ಡಿಸೆಂಬರ್ ನಲ್ಲಿ ಇಲ್ಲಿ ಆಯೋಜಿಸಲಾಗುವ ಅಂತಾರಾಷ್ಟ್ರೀಯ ಹಿಮಾಲಯನ್ ಉತ್ಸವವು ಈ ಪ್ರಾಂತ್ಯದ ಪ್ರಮುಖ ಜನಾಕರ್ಷಣೆಯ ಉತ್ಸವವಾಗಿದೆ. ಈ ಉತ್ಸವವನ್ನು ದಲಾಯಿ ಲಾಮಾರವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ದೊರೆತದ್ದನ್ನು ಸ್ಮರಿಸುವ ಸಲುವಾಗಿ ವಾರ್ಷಿಕವಾಗಿ ಆಚರಿಸಲಾಗುತ್ತದೆ. ಈ ಉತ್ಸವದ ಪ್ರಮುಖ ಉದ್ದೇಶ ಟಿಬೇಟಿಯನ್ನರಲ್ಲಿ ಐಕ್ಯತೆಯನ್ನು ವೃದ್ಧಿಸುವ ಸಲುವಾಗಿ ಆಯೋಜಿಸಲಾಗುತ್ತದೆ.
ಕಂಗ್ರಾದಲ್ಲಿ ಸ್ಥಳವೀಕ್ಷಣೆಯ ಜೊತೆಗೆ ಪ್ರವಾಸಿಗರು ಚಾರಣ ಮಾಡುತ್ತ ಈ ಪ್ರದೇಶದ ಪ್ರಕೃತಿ ವೈಭವವನ್ನು ಸವಿಯಬಹುದು. ಈ ಪ್ರಾಂತ್ಯದಲ್ಲಿ ಕಯೆರಿ ಕೆರೆ ಮತ್ತು ಮರಸೂರ್ ದೇವಾಲಯಗಳಿಗೆ ಸಾಗುವ ಸವಾಲೆನಿಸುವ ಚಾರಣದ ಮಾರ್ಗಗಳು ಇವೆ. ಇದರೊಂದಿಗೆ ಪ್ರವಾಸಿಗರು ಚಂಬಾ ಕಣಿವೆಯ ಸುಂದರ ನೋಟವನ್ನು ನೋಡಲು ಸಹ ಚಾರಣ ಕೈಗೊಳ್ಳಬಹುದು. ಇಡೀ ಪ್ರಾಂತ್ಯದಲ್ಲಿಯೆ ಲಾಕಾ ಪಾಸ್ ಅಥವಾ ಇಂದೆರ್ ಹರ ಪಾಸ್ ಮತ್ತು ಮಿನ್ಕಿಯಾನಿ ಪಾಸ್ಗಳು ಅತ್ಯಂತ ಪ್ರಸಿದ್ಧ ಚಾರಣ ಮಾರ್ಗಗಳಾಗಿವೆ. ಕಂಗ್ರಾ ಕಣಿವೆಯಲ್ಲಿ ಐದು ಚಾರಣದ ಮಾರ್ಗಗಳಿವೆ. ಅವುಗಳ ಹೆಸರು ಕ್ರಮವಾಗಿ ಧರ್ಮಶಾಲಾ - ಲಾಕಾ ಪಾಸ್, ಮ್ಯಾಕ್ಲಿಯೋಡ್ಗಂಜ್-ಮಿನಿಕನಿ ಪಾಸ್-ಚಂಬಾ, ಧರ್ಮಶಾಲ-ತಲಂಗ್ ಪಾಸ್, ಬೈಜಿನಾಥ್-ಪಾರೈ ಜೊಟ್ ಮತ್ತು ಭೀಮ್ ಗಸುತ್ರಿ ಪಾಸ್ ಎಂದು ಹೆಸರಿಸಬಹುದು.
ಕಂಗ್ರಾಗೆ ವಿಮಾನ, ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಈ ಸ್ಥಳಕ್ಕೆ ಭೇಟಿಕೊಡಲು ಬೇಸಿಗೆಯು ಹೇಳಿ ಮಾಡಿಸಿದ ಸಮಯವಾಗಿದೆ. ಈ ಕಾಲವು ಇಲ್ಲಿ ಮಾರ್ಚ್ ನಲ್ಲಿ ಪ್ರಾರಂಭವಾಗಿ ಜೂನ್ವರೆಗೆ ವಿಸ್ತರಿಸಿರುತ್ತದೆ. ಪ್ರವಾಸಿಗರು ಮಳೆಗಾಲದಲ್ಲಿ ಸಹ ಇಲ್ಲಿಗೆ ಭೇಟಿಕೊಡಬಹುದು. ಏಕೆಂದರೆ ಆಗಲು ಸಹ ಈ ಸ್ಥಳವು ಹೊರಾಂಗಣ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಸಮಯವಾಗಿರುತ್ತದೆ.