ದಕ್ಷಿಣ ಭಾರತದ ಪ್ರಮುಖ ರಾಜ್ಯ ಆಂಧ್ರಪ್ರದೇಶದ ದಕ್ಷಿಣ - ಕೇಂದ್ರ ವಲಯದಲ್ಲಿ ಬರುವ ರಾಯಲ್ಸೀಮಾ ಪ್ರದೇಶದ ಒಂದು ಮುನ್ಸಿಪಲ್ ನಗರ ಕಡಪಾ. ಈ ಊರಿನ ಹೆಸರಿನ ತೆಲುಗು ಅರ್ಥ 'ಗಡಪಾ' ಎಂದಾಗುತ್ತದೆ. ಇದರ ಭಾವಾನುವಾದ ಗೇಟ್ ಅಥವಾ ದ್ವಾರ ಎಂದಾಗುತ್ತದೆ. ಕಡಪಾದ ಪಶ್ಚಿಮ ಭಾಗದಲ್ಲಿರುವ ತಿರುಮಲ ಬೆಟ್ಟಕ್ಕೆ ಈ ಊರು ಪ್ರವೇಶದ್ವಾರವಾಗಿದೆ. ಈ ಕಾರಣದಿಂದ ಈ ಊರಿಗೆ ಕಡಪಾ ಎಂಬ ಹೆಸರು ಬಂದಿದೆ. ಈ ಪಟ್ಟಣಕ್ಕೆ 'ಕಡ್ಡಫಾ' ಅಂತಿದ್ದ ಹೆಸರನ್ನು 2010 ರಲ್ಲಿ 'ಕಡಪಾ' ಎಂದು ಸರಳವಾಗಿ ಬದಲಿಸಲಾಗಿದೆ.
ಆಂಧ್ರಪ್ರದೇಶದ ರಾಜಧಾನಿ ಹೈದ್ರಾಬಾದ್ನಿಂದ ಕಡಪಾಗೆ 412 ಕಿ.ಮೀ. ದೂರದ ಅಂತರವಿದೆ. ಕಡಪಾ ಪಟ್ಟಣ ಪೆನ್ನಾ ನದಿಗೆ ಅತ್ಯಂತ ನಿಕಟವಾಗಿದೆ. ಇಲ್ಲಿನ ನಿಲಂಬಲಾ ಹಾಗೂ ಪಲಕೊಂಡಾದಿಂದ ನದಿ ತಲುಪಲು ಕೇವಲ ಎರಡು ನಿಮಿಷದ ದಾರಿ ಸವೆಸಬೇಕಷ್ಟೆ.
ಕಡಪಾವು11 ಹಾಗೂ 14ನೇ ಶತಮಾನದ ನಡುವೆ ನಡೆದ ಚೋಳರ ಚಕ್ರಾಧಿಪತ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿತ್ತು. ಪ್ರಾಧಾನ್ಯತೆ ಹೊಂದಿತ್ತು. 14ನೇ ಶತಮಾನದ ಅಂತ್ಯದ ಹೊತ್ತಿಗೆ ಈ ಭಾಗವನ್ನು ವಿಜಯನಗರ ಅರಸರು ವಶಪಡಿಸಿಕೊಂಡು ರಾಜ್ಯಭಾರ ನಡೆಸಿದರು. ಮುಂದಿನ ಎರಡು ದಶಕಗಳ ಕಾಲ ವಿಜಯನಗರ ಅಧಿಪತ್ಯ ಇಲ್ಲಿ ಗಂಡಿಕೋಟಾ ನಾಯಕರ ಮೂಲಕ ನಡೆಯಿತು. ವಿಜಯನಗರ ಸಾಮ್ರಾಜ್ಯದ ಗವರ್ನರ್ಗಳಾಗಿ ನಾಯಕರು ಆಳ್ವಿಕೆ ನಡೆಸಿದರು.
1565 ರ ಹೊತ್ತಿಗೆ ಗೋಲ್ಕೊಂಡಾ ಮುಸ್ಲಿಂ ರಾಜರು ಈ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದರು. ಅಲ್ಲಿಗೆ ಕಡಪಾ ಮೀರ್ ಜುಲ್ಮಾ ವಶಕ್ಕೆ ಬಂತು. ಈ ಮೀರ್ ಜುಲ್ಮಾ ಅಂದು ಆಳ್ವಿಕೆ ನಡೆಸುತ್ತಿದ್ದ ರಾಜಾ ಚಿನ್ನ ತಿಮ್ಮ ನಾಯ್ಡುವನ್ನು ವಿಶ್ವಾಸಘಾತುಕತನದಿಂದ ಸೋಲಿಸಿ ಗಂಡಿಕೋಟಾ ಕೋಟೆಯನ್ನು ತನ್ನ ವಶಕ್ಕೆ ಪಡೆದುಕೊಂಡ. ನಂತರ ಕುತುಬ್ಶಾಹಿ ಆಡಳಿತಗಾರ ನಿಕಂ ಖಾನ್ ಅಧಿಕಾರಕ್ಕೆ ಬಂದು ಕಡಪಾದ ವ್ಯಾಪ್ತಿಯನ್ನು ವಿಸ್ತರಿಸಿದ. ಅದಕ್ಕೆ ಆತ 'ನಿಕುಂಬಾದ್' ಎಂದು ಹೆಸರಿಟ್ಟ. ಈ ಸಂದರ್ಭದ ಆಡಳಿತವನ್ನು ಇತಿಹಾಸಕಾರರು 'ನಿಜಾಮ್ಸ್ ಆಫ್ ಕಡಪಾ' ಅಥವಾ 'ನಿಜಾಮ್ಸ್ ಆಫ್ ನಿಕುಂಬಾದ್' ಅಂತ ಉಲ್ಲೇಖಿಸಿದ್ದಾರೆ. ಇತಿಹಾಸದಲ್ಲಿ ಇದನ್ನು ನಮೂದಿಸುವಾಗ ಈ ರೀತಿಯಲ್ಲಿಯೇ ವ್ಯಾಖ್ಯಾನಿಸಿದ್ದಾರೆ. ಈ ಸಮಯದಲ್ಲಿ ಪಟ್ಟಣದ ಕಲೆ ಹಾಗೂ ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆಯನ್ನು ನವಾಬರು ನೀಡಿದ್ದಾರೆ. ಅದರೊಂದಿಗೆ ಹೆಚ್ಚಿನ ಮಸೀದಿ ಹಾಗೂ ದರ್ಗಾಗಳನ್ನು ನಿರ್ಮಿಸಿದ್ದಾರೆ.
1800 ರಲ್ಲಿ ಕಡಪಾವನ್ನು ಬ್ರಿಟಿಷರು ವಶಪಡಿಸಿಕೊಂಡರು. ತಮ್ಮ ಪ್ರಮುಖ ನಾಲ್ಕು ಉಪ ಕಲೆಕ್ಟರೇಟ್ಗಳಲ್ಲಿ ಇದನ್ನು ಒಂದು ಕೇಂದ್ರಸ್ಥಾನವನ್ನಾಗಿಸಿಕೊಂಡರು. ಈ ಉಪ ಕೇಂದ್ರವನ್ನು ಶ್ರೀ ಥಾಮಸ್ ಮುನ್ರೊ ಮುನ್ನಡೆಸುತ್ತಿದ್ದು, ಇಲ್ಲಿನ ಪ್ರಮುಖ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿದ. ಕಡಪಾದಲ್ಲಿನ ಪ್ರಮುಖ ಮೂರು ಚರ್ಚ್ ಗಳನ್ನು ನಿರ್ಮಿಸುವ ಮೂಲಕ ಕ್ರೈಸ್ತ ಧರ್ಮಕ್ಕೂ ಸಾಕಷ್ಟು ಪ್ರಾಧಾನ್ಯ ಕಲ್ಪಿಸಿದರು. ಸ್ವಾತಂತ್ರ್ಯ ಪೂರ್ವ ಸಮಯದಲ್ಲೇ ಇದನ್ನೊಂದು ನಗರಪಾಲಿಕೆಯಾಗಿ ರೂಪಿಸುವ ಕಾರ್ಯ ಇವರು ಮಾಡಿದ್ದರು.
ಕಿಶ್ಕಿಂದಾ ಕಾಂಡದ ಪುರಾಣ
ಹಿಂದು ಧರ್ಮದ ಮಹಾಗ್ರಂಥ ರಾಮಾಯಣದ ಏಳು ಕಾಂಡಗಳಲ್ಲಿ ಒಂದಾದ ಕಿಷ್ಕಿಂದಾಕಾಂಡ ಅಧ್ಯಾಯದಲ್ಲಿ ಈ ಊರಿನ ಹೆಸರು ಪ್ರಸ್ತಾಪವಾಗಿದೆ. ವೊಂಟಿಮಿತ್ತಾ ಎಂಬ ಸ್ಥಳ ಕಡಪಾ ಜಿಲ್ಲೆಯಲ್ಲಿ ಇತ್ತು ಎಂದು ಹೇಳಲಾಗಿದೆ. ಈ ವೊಂಟಿಮಿತ್ತಾವು ಈಗಿನ ಕಡಪಾ ನಗರದಿಂದ 20 ಕಿ.ಮೀ. ದೂರದಲ್ಲಿದೆ. ಗಾಂಧಿ ಹಳ್ಳಿ ಇಲ್ಲಿಗೆ ಅತ್ಯಂತ ಸಮೀಪವಾಗಿದೆ. ಇಲ್ಲಿರುವ ಆಂಜನೇಯ ಸ್ವಾಮಿ ದೇವಾಲಯ ಅತ್ಯಂತ ಪ್ರಸಿದ್ಧ ತಾಣ. ಈ ದೇವಾಲಯದಲ್ಲಿ ಸ್ವಾಮಿ ಹನುಮಂತ ನೆಲೆಸಿದ್ದಾನೆ. ಗಾಂಧಿ ಹಳ್ಳಿಯಲ್ಲಿರುವ ಹನುಮಾನ್ ದೇವಾಲಯದಲ್ಲಿನ ಮಾರುತಿಯ ವಿಗ್ರಹವನ್ನು ಖುದ್ದು ಶ್ರೀರಾಮಚಂದ್ರನೇ ಪ್ರತಿಷ್ಠಾಪಿಸಿದ್ದಾನೆ ಎಂದು ಭಕ್ತರು ನಂಬಿದ್ದಾರೆ. ಕಲ್ಲಿನಲ್ಲಿ ಕೆತ್ತಿರುವ ಹನುಮಂತನ ಈ ವಿಗ್ರಹವನ್ನು ಶ್ರೀರಾಮ ತನ್ನ ಬಾಣದಿಂದ ಕೆತ್ತಿ ಸಿದ್ಧಪಡಿಸಿದ್ದಾನೆ ಎಂದು ಪುರಾಣದಲ್ಲಿ ಹೇಳಲಾಗುತ್ತದೆ. ಸಿದ್ಧರೂಪದ ಮೂರ್ತಿಯನ್ನು ಶ್ರೀರಾಮಚಂದ್ರ ಸೀತಾದೇವಿ ಸಮ್ಮುಖದಲ್ಲಿಯೇ ಹನುಮಂತನಿಗೆ ಗೌರವಪೂರ್ವಕವಾಗಿ ನೀಡಿದ ಎನ್ನಲಾಗುತ್ತದೆ.
ಇಂದು ಕಡಪಾ ಜಿಲ್ಲೆಯು ಆಂಧ್ರಪ್ರದೇಶದ ಉತ್ತಮ ಪ್ರವಾಸಿ ತಾಣವಾಗಿ ಜನಪ್ರಿಯವಾಗಿದೆ. ಇಲ್ಲಿ ನೋಡಲು ಸಾಕಷ್ಟು ವಿಶಿಷ್ಟ ತಾಣಗಳಿವೆ. ಅವುಗಳಲ್ಲಿ ಅಮೀನ್ ಪೀರ್ ದರ್ಗಾ, ಭಗವಾನ್ ಮಹಾವೀರ್ ಮ್ಯೂಸಿಯಂ, ಚಾಂದ್ ಪೀರ್ ಗುಂಬದ್, ದೇವುನೀಕಡಪಾ ಹಾಗೂ ಮಸ್ಜಿದ್ ಇ ಅಜಮ್ ಪ್ರಮುಖವಾದವು.ಇಲ್ಲಿನ ವಾತಾವರಣವೂ ವಿಶಿಷ್ಟವಾಗಿದೆ. ಸ್ಥಳವನ್ನು ವೀಕ್ಷಿಸಲು ಅನುಕೂಲಕರವಾಗಿದೆ. ಅತ್ಯಂತ ತೀವ್ರವಾದ ಬಿಸಿಲು ಹಾಗೂ ಸಾಮಾನ್ಯ ಚಳಿಯ ವಾತಾವರಣವನ್ನು ಪ್ರದೇಶ ಹೊಂದಿದೆ. ಇಲ್ಲಿ ಮಳೆಗಾಲ ಮಧ್ಯಮ ರೀತಿಯಲ್ಲಿ ಮಲೆ ಸುರಿಸುತ್ತದೆ. ಮೂರು ತಿಂಗಳು ಇಲ್ಲಿ ಮಳೆಗಾಲ ಇರುತ್ತದೆ. ರಸ್ತೆ, ರೈಲು ಹಾಗೂ ವಾಯು ಮಾರ್ಗ ಕಡಪಾಗೆ ಉತ್ತಮವಾಗಿದೆ. ನಗರವು ಸ್ವಂತದ್ದಾದ ಡೊಮೆಸ್ಟಿಕ್ ವಿಮಾನ ನಿಲ್ದಾಣ ಹೊಂದಿದೆ. ನಗರ ಕೇಂದ್ರದಿಂದ ಇದು ಸುಮಾರು ಎಂಟು ಕಿ.ಮೀ. ದೂರದಲ್ಲಿದೆ. ಇದಕ್ಕೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೈದ್ರಾಬಾದ್ ಆಗಿದೆ. ಮುಂಬಯಿ ಹಾಗೂ ಚೆನ್ನೈ ನಡುವೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಕೂಡ ಕಡಪಾ ಮೂಲಕವೇ ಹಾದು ಹೋಗಿದೆ. ಇದರಿಂದ ಉತ್ತಮ ರೈಲು ಸಂಪರ್ಕ ಕಡಪಾಗೆ ಲಭಿಸಿದೆ. ನಿರಂತರವಾಗಿ ನಾನಾ ನಗರಗಳಿಂದ ಈ ಮೂಲಕ ರೈಲುಗಳು ಹಾದು ಹೋಗುತ್ತವೆ. ಉತ್ತಮ ರಸ್ತೆ ಸಂಪರ್ಕ ಇಲ್ಲಿಗಿದೆ. ಇತರೆ ಪಟ್ಟಣ, ನಗರಗಳಿಂದ ಸಾಕಷ್ಟು ವಾಹನಗಳು ಇಲ್ಲಿ ಬರುತ್ತವೆ. ಉತ್ತಮ ರಸ್ತೆ ಇದಕ್ಕೆ ಪೂರಕವಾಗಿದೆ. ಬಸ್, ಕ್ಯಾಬ್ ಮತ್ತಿತರವು ಇಲ್ಲಿಗೆ ಬರುತ್ತವೆ.