’ಸುವರ್ಣನಗರ’ ಜೈಸಲ್ಮೇರ್ ನಗರವು ಮರುಭೂಮಿಯ ಮೋಡಿಯನ್ನು, ಅರಮನೆಗಳ ಅಂದವನ್ನು ಮತ್ತು ಒಂಟೆಗಳ ಹೊಡೆದಾಟಗಳಿಂದ ಕೂಡಿ ಇಡೀ ರಾಜಸ್ಥಾನದ ಒಂದು ಸಂಕ್ಷಿಪ್ತ ರೂಪವೆಂಬಂತೆ ಕಾಣುತ್ತದೆ. ಈ ವಿಶ್ವವಿಖ್ಯಾತ ಪ್ರವಾಸಿ ಸ್ಥಳವು ಥಾರ್ ಮರುಭೂಮಿಯ ನಟ್ಟ ನಡುವೆ ನೆಲೆಸಿದೆ. ಜೈಸಲ್ಮೇರ್ ಜಿಲ್ಲೆಯ ಜಿಲ್ಲಾಕೇಂದ್ರವಾಗಿರುವ ಈ ನಗರವು ಪಾಕಿಸ್ತಾನ್, ಬಿಕನೇರ್, ಬರ್ಮರ್ ಮತ್ತು ಜೋಧ್ ಪುರ್ ಗಳ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಈ ಸುವರ್ಣನಗರವು ರಾಜ್ಯದ ರಾಜಧಾನಿಯಾದ ಜೈಪುರದಿಂದ ಕೇವಲ 575 ಕಿ.ಮೀ ಗಳಷ್ಟು ದೂರದಲ್ಲಿದೆ. ಪ್ರವಾಸೋದ್ಯಮವು ಈ ನಗರದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನುವಹಿಸಿದೆ. 12ನೇ ಶತಮಾನದಲ್ಲಿ ಆಳಿದ್ದ ರಾಜ ಜೈಸಲ್ ಈ ನಗರವನ್ನು ನಿರ್ಮಿಸಿದನು. ಹೀಗಾಗಿ ಈ ನಗರವು ಆತನ ನೆನಪಿನಾರ್ಥವಾಗಿ ಜೈಸಲ್ಮೇರ್ ಎಂಬ ಹೆಸರನ್ನು ಪಡೆಯಿತು.
ಈ ಸುವರ್ಣನಗರಿಯು ರಾಜಸ್ಥಾನದ ಅಪ್ಪಟ ಜನಪದ ಸಂಗೀತ ಮತ್ತು ನೃತ್ಯಕ್ಕೆ ವಿಶ್ವ ಮಟ್ಟದಲ್ಲಿ ಖ್ಯಾತಿಪಡೆದಿದೆ. ’ಕಲ್ಬೇಲಿಯ’ ಎನ್ನವ ಈ ಸಂಗೀತ ನೃತ್ಯ ಪ್ರಕಾರವನ್ನು ಸ್ಯಾಮ್ ಸ್ಯಾಂಡ್ ಡ್ಯೂನ್ಸ್ ನಲ್ಲಿ ನಡೆಯುವ ಮರುಭೂಮಿ ಉತ್ಸವದಲ್ಲಿ ಇಲ್ಲಿನ ಮೂಲ ಬುಡಕಟ್ಟು ಜನರು ನಡೆಸಿಕೊಡುತ್ತಾರೆ. ಇದೊಂದು ಮೂರು ದಿನಗಳ ವಾರ್ಷಿಕ ಉತ್ಸವವಾಗಿದ್ದು, ಪ್ರತಿ ವರ್ಷ ಫೆಬ್ರವರಿ ಯಲ್ಲಿ ಜರುಗುತ್ತದೆ. ಇಲ್ಲಿ ನಡೆಯುವ ಒಂಟೆ ಓಟ, ಪೇಟ ಕಟ್ಟಿಕೊಳ್ಳುವ ಸ್ಪರ್ಧೆ ಮತ್ತು ಅತ್ಯುತ್ತಮ ಮೀಸೆ ಸ್ಪರ್ಧೆಗಳು ದೂರ ದೂರದಿಂದ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ. ಅಲ್ಲದೆ ಜೈಸಲ್ಮೇರ್ ಗೆ ಭೇಟಿಕೊಡುವ ಪ್ರವಾಸಿಗರಿಗೆ ಥಾರ್ ಮರುಭೂಮಿಯಲ್ಲಿ ಶಿಬಿರಗಳಲ್ಲಿ ಕಾಲ ಕಳೆಯಲು, ಶಿಬಿರಾಗ್ನಿ ಹಾಕಲು ಮತ್ತು ಒಂಟೆ ಸಫಾರಿ ಮಾಡುತ್ತ ಮರುಭೂಮಿಯಲ್ಲಿ ಸುತ್ತುವ ಮೂಲಕ ಮರೆಯಲಾಗದ ಅನುಭವಗಳನ್ನು ಪಡೆಯುವಂತಹ ಅನೇಕ ಅವಕಾಶಗಳು ಖಂಡಿತವಾಗಿ ದೊರೆಯುತ್ತವೆ.
ಬಾಯಿಯಲ್ಲಿ ನೀರೂರಿಸುವಂತಹ ಸಾಂಪ್ರದಾಯಿಕ ತಿನಿಸುಗಳ
ರಾಜಸ್ಥಾನದ ಜೈಸಲ್ಮೇರ್ ನಗರಕ್ಕೆ ರಜಾದಿನಗಳನ್ನು ಕಳೆಯಲು ಹೋಗುವ ಪ್ರತಿಯೊಬ್ಬರು ಇಲ್ಲಿನ ಸ್ವಾದಿಷ್ಟವಾದ ರಾಜಸ್ಥಾನಿ ಅಡುಗೆಗಳ ಸವಿಯನ್ನು ನೋಡಲೆ ಬೇಕು. ಬಾಯಿಯಲ್ಲಿ ನೀರೂರಿಸುವ ಮುರ್ಗ್ – ಇ – ಸುಬ್ಜ್ ( ರಸವತ್ತಾದ, ಮೂಳೆರಹಿತ ಕೋಳಿ ಮಾಂಸದ ತುಣುಕುಗಳನ್ನು ತರಕಾರಿಗಳ ಜೊತೆಗೆ ಹುರಿದು ಮಾಡುವ ಖಾದ್ಯ) ಇಲ್ಲಿನ ತಿನಿಸುಗಳಲ್ಲಿ ಪ್ರವಾಸಿಗರ ಮೆಚ್ಚಿನ ತಿನಿಸಾಗಿದೆ. ಜೈಸಲ್ಮೇರ್ ನ ಪ್ರತ್ಯೇಕ ಖಾದ್ಯವಾದ ರುಚಿಕರವಾದ ಕೆರ್ ಸಂಗ್ರಿ ( ಮರುಭೂಮಿಯ ಹುರುಳಿ ಮತ್ತು ಕ್ಯಾಪರ್ಸ್ ), ಆಸಕ್ತ ಪ್ರವಾಸಿಗರು ಇಲ್ಲಿನ ಉಪಾಹಾರ ಗೃಹಗಳಲ್ಲಿ ಸಾಮಾನ್ಯವಾಗಿ ದೊರೆಯುವ ಭಾನೊನ್ ಆಲೂ ( ಆಲೂಗಡ್ಡೆಗಳನ್ನು ಶುಂಠಿಯ ಪೇಸ್ಟ್ ನಲ್ಲಿ ಸೇರಿಸಿ ಹದವಾಗಿ ಮಾಡುವ ಸಾರು ) ಮತ್ತು ಕಡಿ ಪಕೋರ ( ಹಿಟ್ಟನ್ನು ಯೋಗರ್ಥದ ಸಾಸ್ ನಲ್ಲಿ ಸೇರಿಸಿ ಮಾಡುವ ಪಕೋಡ ) ಗಳ ರುಚಿಯನ್ನು ಸವಿಯಬಹುದು.
ಸ್ಥಳ ವೀಕ್ಷಣೆಗಿಂತ ಮಿಗಿಲಾದುದು
ರಾಜಸ್ಥಾನದ ಇತರೆ ಮರುಭೂಮಿ ನಗರಗಳಂತೆ ಜೈಸಲ್ಮೇರ್ ಸಹ ರಾಜ ವೈಭವದ ಕೋಟೆಗಳಿಗೆ, ಹವೇಲಿಗಳಿಗೆ, ಅರಮನೆಗಳಿಗೆ, ವಸ್ತು ಸಂಗ್ರಹಾಲಯಗಳಿಗೆ ಮತ್ತು ದೇವಾಲಯಗಳಿಗೆ ಖ್ಯಾತಿ ಪಡೆದಿದೆ. ’ಜೈಸಲ್ಮೇರ್ ನ ಹೆಮ್ಮೆ’ ಎಂದೆ ಪರಿಗಣಿಸಲ್ಪಟ್ಟಿರುವ ಜೈಸಲ್ಮೇರ್ ಕೋಟೆಯು ಸುವರ್ಣನಗರಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಹಳದಿ ಬಣ್ಣದ ಮರಳುಕಲ್ಲುಗಳನ್ನು ಹೊಂದಿರುವ ಈ ಕೋಟೆಗೆ ಸೂರ್ಯಾಸ್ತವು ಬಂಗಾರದ ಮೆರುಗನ್ನು ಒದಗಿಸುವುದರಿಂದಾಗಿ ಈ ಕೋಟೆಗೆ ’ ಸೋನಾರ್ ಕಿಲಾ’ ಅಥವಾ ’ ಬಂಗಾರದ ಕೋಟೆ – ಸುವರ್ಣ ಕೋಟೆ( ಗೋಲ್ಡನ್ ಫೊರ್ಟ್)’ ಎಂದು ಸಹ ಕರೆಯಲಾಗುತ್ತದೆ. ಈ ಕೋಟೆಗೆ ಅಖೈಪೊಲ್, ಹವಾ ಪೊಲ್, ಸೂರಜ್ ಪೊಲ್ ಮತ್ತು ಗಣೇಶ್ ಪೊಲ್ ಎಂಬ ದ್ವಾರಗಳಿವೆ. ಈ ಕೋಟೆಯು ರಜಪೂತರ ಮತ್ತು ಮೊಘಲ್ ವಾಸ್ತುಶಿಲ್ಪಕಲೆಯ ಮಿಶ್ರ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಪ್ರವಾಸಿಗರು ಇಲ್ಲಿ ಹಲವಾರು ಅರಮನೆಗಳನ್ನು, ಏಳೂ ಜೈನ ದೇವಾಲಯಗಳನ್ನು ಮತ್ತು ಹಲವಾರು ಬಾವಿಗಳನ್ನು ಕಾಣಬಹುದು. ಇಲ್ಲಿರುವ ಜೈನ ದೇವಾಲಯಗಳಲ್ಲಿ ಶಾಂತಿನಾಥ ದೇವಾಲಯ, ಚಂದ್ರಪ್ರಭು ದೇವಾಲಯ ಮತ್ತು ಶೀತಲ್ ನಾಥ್ ದೇವಾಲಯಗಳು ಅತ್ಯಂತ ಜನಪ್ರಿಯವಾಗಿವೆ.
ಈ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಜೈಸಲ್ಮೇರ್ ಕೋಟೆಯ ಸಂಕೀರ್ಣದಲ್ಲಿ ಮಹಾರಾಜ ಅರಮನೆ ಅಥವಾ ಜೈಸಲ್ಮೇರ್ ಫೋರ್ಟ್ ಅರಮನೆ ವಸ್ತು ಸಂಗ್ರಹಾಲಯ ಮತ್ತು ಹೆರಿಟೇಜ್ ಸೆಂಟರ್ ಗಳು ಇವೆ. ಪ್ರವಾಸಿಗರು ಈ ಅರಮನೆಯ ಮೇಲ್ಛಾವಣಿಯ ಮೇಲಿನಿಂದ ನಗರದ ಪಕ್ಷಿನೋಟವನ್ನು ನೋಡಿ ಆನಂದಿಸಬಹುದು. ಈ ಅರಮನೆಯಲ್ಲಿ ರಾಜ ಪರಿವಾರದ ರಜತ ಖಚಿತವಾದ ಸಿಂಹಾಸನ, ಹಾಸಿಗೆ, ಪಾತ್ರೆ ಪಗಡೆಗಳು, ಸ್ಥಳೀಯ ಮುದ್ರೆಗಳು, ಬ್ಯಾಂಕ್ ನೋಟುಗಳು ಮತ್ತು ಶಿಲಾ ಪ್ರತಿಮೆಗಳು ಪ್ರಮುಖ ಆಕರ್ಷಣೆಗಳಾಗಿವೆ.
180 ವರ್ಷಗಳಷ್ಟು ಹಳೆಯದಾದ ಅಕಲ್ ಮರದ ಪಳೆಯುಳಿಕೆಗಳ ಉದ್ಯಾನವನವು ಜೈಸಲ್ಮೇರ್ ಜನಪ್ರಿಯ ತಾಣಗಳಲ್ಲಿ ಒಂದಾಗಿದ್ದು ನೋಡಲೆ ಬೇಕಾದ ಸ್ಥಳವಾಗಿದೆ. ಬೃಹತ್ತಾದ ಮರದ ಪಳೆಯುಳಿಕೆಗಳು ಮತ್ತು ಪುರಾತನ ಕಾಲದ ಕಪ್ಪೆ ಚಿಪ್ಪುಗಳು ಈ ಉದ್ಯಾನವನದ ಪ್ರಮುಖ ಆಕರ್ಷಣೆಗಳಾಗಿವೆ. ಪ್ರವಾಸಿಗರು ಜೈಸಲ್ಮೇರ್ ನ ಮರುಭೂಮಿ ರಾಷ್ಟ್ರೀಯ ಉದ್ಯಾನವನದಲ್ಲಿ ಡೇಗೆಗಳನ್ನು , ಚುಕ್ಕಿಗಳಿರುವ ಹದ್ದುಗಳನ್ನು,ರಣಹದ್ದುಗಳನ್ನು, ಬುಝಾರ್ಡ್ಸ್(ರಣಹದ್ದು ಜಾತಿಗೆ ಸೇರಿದ ಪಕ್ಷಿ), ಸಣ್ಣ ಪಾದದ ಹದ್ದುಗಳನ್ನು, ಗಿಡುಗಗಳನ್ನು, ಕೆಸ್ಟ್ರೆಲ್ ( ನೋಡಲು ಗೂಬೆಯಂತಿರುವ ಹದ್ದಿನ ಜಾತಿಯ ಪಕ್ಷಿ) , ದೊಡ್ಡ ಫಾಲ್ಕನ್ ( ಚೂಪು ರೆಕ್ಕೆಯ ಗಿಡುಗಗಳು) ಮತ್ತು ಮರಳುವಕ್ಕಿಗಳನ್ನು ಕಾಣಬಹುದು. ಈ ಅನುಪಮವಾದ ಉದ್ಯಾನವನವು ಅಳಿವಿನಂಚಿನಲ್ಲಿರುವ ರಾಜಸ್ಥಾನ ರಾಜ್ಯದ ಅಧಿಕೃತ ಪಕ್ಷಿಯಾದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಗಳ ಸ್ವಾಭಾವಿಕವಾದ ಆವಾಸ ತಾಣವಾಗಿದೆ. ನವೆಂಬರ್ ನಿಂದ ಜನವರಿಯವರೆಗಿನ ಅವಧಿಯು ಈ ಉದ್ಯಾನವನಕ್ಕೆ ಭೇಟಿಕೊಡಲು ಅತ್ಯುತ್ತಮ ಅವಧಿಯಾಗಿದೆ.
ಇಲ್ಲಿರುವ ನಾಥಮಲ್ಜಿ- ಕಿ- ಹವೇಲಿ, ಸಲೀಂ ಸಿಂಗ್- ಕಿ- ಹವೇಲಿ, ಪಟ್ವೊಂ- ಕಿ – ಹವೇಲಿ, ಹವೇಲಿ ಶ್ರೀನಾಥ್, ಮನಕ್ ಚೌಕ್ ಮತ್ತು ಹವೇಲಿಗಳು ತಮ್ಮ ಅನುಪಮವಾದ ವಾಸ್ತುಶಿಲ್ಪ ಶೈಲಿಗಳಿಗೆ ಹೆಸರುವಾಸಿಯಾಗಿದೆ. ಜೈಸಲ್ಮೇರ್ ಗೆ ಭೇಟಿಕೊಡುವ ಪ್ರವಾಸಿಗರು ಮೂಲ್ ಸಾಗರ್, ಗೋಪ ಚೌಕ್, ಜೈಸಲ್ಮೇರ್ ಜನಪದ ವಸ್ತು ಸಂಗ್ರಹಾಲಯ, ತಾಝಿಯ ಸ್ತಂಭ, ಗಡ್ಸಿಸರ್ ಕೆರೆ, ಬಡಾ ಬಾಗ್, ಖುರಿ ಸ್ಯಾಂಡ್ ಡ್ಯೂನ್ಸ್ , ಸ್ಯಾಮ್ ಸ್ಯಾಂಡ್ ಡ್ಯೂನ್ಸ್ ಮತ್ತು ಖುಲ್ದಾರಗಳಿಗೆ ಭೇಟಿಕೊಡುತ್ತಾರೆ.
ಜೈಸಲ್ಮೇರ್ ನ ಅಮರ್ ಸಿಂಗ್ ಕೆರೆಯ ದಂಡೆಯ ಮೇಲಿರುವ ಅಮರ್ ಸಿಂಗ್ ಅರಮನೆಯು ಒಂದು ಅದ್ವಿತೀಯವಾದ ಅರಮನೆಯಾಗಿದೆ. ಈ ಅರಮನೆಯನ್ನು 17ನೇ ಶತಮಾನದಲ್ಲಿ ರಾಜ ಮಹರವಾಲ್ ಅಖಹೈ ಸಿಂಗ್ ನಿರ್ಮಿಸಿದನು. ಗೋಡೆಗಳ ಮೇಲಿರುವ ಸುಂದರವಾದ ಚಿತ್ರಕಲೆಯು ಅರಮನೆಯ ಅಂದವನ್ನು ದ್ವಿಗುಣಗೊಳಿಸಿದೆ. ಇದರೊಂದಿಗೆ ಜೈಸಲ್ಮೇರ್ ನಗರದಲ್ಲಿ ಮಂತ್ರ ಮುಗ್ಧಗೊಳಿಸುವ ಅರಮನೆಗಳು ಮತ್ತು ಕೆಲವು ವಸ್ತು ಸಂಗ್ರಹಾಲಯಗಳು ಇವೆ. ಐತಿಹಾಸಿಕ ಗೃಹೋಪಯೋಗಿ ವಸ್ತುಗಳನ್ನು, ಕಲ್ಲಿನಲ್ಲಿ ಕೆತ್ತಿ ನಿರ್ಮಿಸಲಾದ ಪಾತ್ರೆಗಳನ್ನು ಮತ್ತು ಆಭರಣಗಳನ್ನು ನೋಡುವ ಅವಕಾಶವನ್ನು ಇಲ್ಲಿರುವ ಮರುಭೂಮಿ ಸಾಂಸ್ಕೃತಿಕ ಕೇಂದ್ರ ಮತ್ತು ವಸ್ತು ಸಂಗ್ರಹಾಲಯವು ಒದಗಿಸುತ್ತದೆ. ಇದು ಸರ್ಕಾರಿ ವಸ್ತು ಸಂಗ್ರಹಾಲಯದ ಹೊರತಾಗಿ ವಿವಿಧ ಬಗೆಯ ಸಾಂಪ್ರದಾಯಿಕ ವಸ್ತುಗಳನ್ನು, ಅಪರೂಪದ ಪಳಯುಳಿಕೆಗಳನ್ನು , ಪುರಾತನ ಬರಹಗಳನ್ನು , ಮಧ್ಯಕಾಲೀನ ನಾಣ್ಯಗಳನ್ನು ಮತ್ತು ಸಾಂಪ್ರದಾಯಿಕ ಕುಶಲ ಕಲೆಯ ವಸ್ತುಗಳನ್ನು ಪ್ರದರ್ಶಿಸುತ್ತಿದೆ.
ಜೈಸಲ್ಮೇರಿಗೆ ತಲುಪುವುದು ಹೇಗೆ
ಜೈಸಲ್ಮೇರಿಗೆ ವಾಯು, ರೈಲು ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಜೋಧ್ ಪುರ್ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ದೇಶೀಯ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ನವ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದು, ನಿಯಮಿತವಾಗಿ ವಿಮಾನಗಳ ಹಾರಾಟ ವ್ಯವಸ್ಥೆಯನ್ನು ಹೊಂದಿದೆ. ಜೋಧ್ ಪುರದಿಂದ ಜೈಸಲ್ಮೇರಿಗೆ ತಲುಪಲು ಪೂರ್ವ ಪಾವತಿ ಟ್ಯಾಕ್ಸಿಗಳು ನಿಮಗೆ ದೊರೆಯುತ್ತವೆ. ಪ್ರವಾಸಿಗರು ಈ ಸ್ಥಳಕ್ಕೆ ರೈಲಿನ ಮೂಲಕ ಸಹ ತಲುಪಬಹುದು. ಜೈಸಲ್ಮೇರಿನ ರೈಲು ನಿಲ್ದಾಣವು ಜೋಧ್ ಪುರ್ ಮತ್ತು ಭಾರತದ ಇತರ ನಗರಗಳೊಂದಿಗೆ ನಿಯಮಿತ ರೈಲು ಸಂಚಾರದ ವ್ಯವಸ್ಥೆಯನ್ನು ಹೊಂದಿದೆ. ಜೈಸಲ್ಮೇರಿಗೆ ಜೈಪುರ್, ಅಜ್ಮೀರ್, ಬಿಕನೇರ್ ಮತ್ತು ದೆಹಲಿಗಳಿಂದ ಸುವಿಹಾರಿ- ಅರೆ ಸುವಿಹಾರಿ ಬಸ್ಸುಗಳು ಲಭ್ಯವಿದೆ.
ಸುವರ್ಣ ನಗರಿ ಜೈಸಲ್ಮೇರ್ ವರ್ಷ ಪೂರ್ತಿ ಒಣ ಮತ್ತು ಬಿಸಿಲಿನಿಂದ ಕೂಡಿದ ಹವಾಗುಣವನ್ನು ಹೊಂದಿರುತ್ತದೆ. ಇಲ್ಲಿ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲಗಳೆಂಬ ಋತುಗಳಿವೆ. ಇಲ್ಲಿಗೆ ಭೇಟಿ ಕೊಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿ ಅತ್ಯುತ್ತಮ ಅವಧಿಯಾಗಿದೆ.