ಇಗತ್ಪುರಿಯು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿದ್ದು, ಅತ್ಯಾಕರ್ಷಕ ಪೃಕೃತಿ ಸೌಂದರ್ಯ ಒಳಗೊಂಡ ಗಿರಿಧಾಮ ಪ್ರದೇಶವಾಗಿದೆ. ಮಹಾರಾಷ್ಟ್ರ ರಾಜ್ಯದ ನಾಶಿಕ್ ಜಿಲ್ಲೆಗೆ ಸೇರಿರುವ ಈ ತಾಣ ಆಕರ್ಷಣೀಯ ಪರ್ವತ ಹೊಂದಿದ ಜನಪ್ರಿಯ ಗಿರಿಧಾಮವಾಗಿ ಬೆಳೆದಿದೆ.
ಇಗತ್ಪುರಿಗೆ ತೆರಳಿದಾಗ ನೋಡಲು ಮರೆಯದಿರಿ ಈ ತಾಣ
ಇಗತ್ಪುರಿ ಪ್ರಮುಖವಾಗಿ ಗುರುತಿಸಿಕೊಂಡಿರುವುದು ಅನೇಕ ಅಪರೂಪದ ಧಾರ್ಮಿಕ ತಾಣಗಳ ಮೂಲಕ. ಇದರಲ್ಲಿ ಒಂದು ಗೀತಾದೇವಿ ದೇವಾಲಯ. ಇಗತ್ಪುರಿಯ ಪ್ರಾಮುಖ್ಯವನ್ನು ಹೆಚ್ಚಿಸಿದ ಪ್ರಮುಖ ತಾಣ ಇದಾಗಿದೆ. ದೇವತೆ ಗೀತಾದೇವಿಗೆ ಈ ದೇವಾಲಯ ಮೀಸಲಾಗಿದೆ. ಈ ಪರ್ವತ ಶ್ರೇಣಿ ತಾಣವನ್ನು ಈ ದೇವತೆಯೇ ಕಾಯುತ್ತಿದ್ದಾಳೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಈ ತಾಣವು ಧಾರ್ಮಿಕ ಸಾಮರಸ್ಯ ಬೀರುವ ತಾಣವಾಗಿದೆ. ಇದರೊಂದಿಗೆ ಸಹ್ಯಾದ್ರಿ ಪರ್ವತ ಶ್ರೇಣಿಯ ಅನೇಕ ಕಣಿವೆ ಪ್ರದೇಶದ ಅತ್ಯಾಕರ್ಷಕ ನೋಟ ಸವಿಯುವವರಿಗೆ ಹಾಗೂ ತುತ್ತ ತುದಿಯನ್ನು ದರ್ಶಿಸುವ ಕಾರ್ಯಕ್ಕೂ ಅವಕಾಶ ಮಾಡಿಕೊಟ್ಟಿದೆ. ನೀವಲ್ಲಿದ್ದಾಗ ಒಮ್ಮೆ ವಿಪಾಸನಾ ಕೇಂದ್ರಕ್ಕೂ ಭೇಟಿ ಕೊಡಿ. ಇದೊಂದು ಅಪರೂಪದ ಧ್ಯಾನ ಕೇಂದ್ರವಾಗಿದ್ದು, ಸಂಪೂರ್ಣ ಧ್ಯಾನ ವಿಧಾನವನ್ನು ಕಲಿಸಿಕೊಡಲಾಗುತ್ತದೆ. ವಯಸ್ಸಿಗೆ ತಕ್ಕಂತೆ ಯಾವ ಮಾದರಿಯ ಧ್ಯಾನ ಸೂಕ್ತ ಎನ್ನುವುದನ್ನೂ ಇಲ್ಲಿ ತಿಳಿಸಿಕೊಡಲಾಗುತ್ತದೆ.
ನೀವು ಇತಿಹಾಸ ಹಾಗೂ ವಾಸ್ತುಶಿಲ್ಪ ಪ್ರೇಮಿಗಳು, ಆಸಕ್ತರು ಆಗಿದ್ದರೆ ಇಲ್ಲಿನ ತಿರಂಗಲವಾಡಿ ಕೋಟೆ ಅತ್ಯುತ್ತಮ ತಾಣ. ನೀವು ನೋಡಬೇಕೆಂದು ಸಿದ್ಧಪಡಿಸಿಕೊಂಡ ಟಿಪ್ಪಣೆ ಪಟ್ಟಿಯಲ್ಲಿ ಇದನ್ನು ಖಂಡಿತ ಮರೆಯದೇ ನಮೂದಿಸಿಕೊಳ್ಳಿ. ಇಲ್ಲಿ ಬಂದಾಗ ನೋಡಲೇಬೇಕಾದ ತಾಣವಿದು. ಈ ವಿಶೇಷ ತಾಣವು ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿ ಎತ್ತರದಲ್ಲಿದ್ದು, ಮೇಲಿಂದ ನೋಡಿದಾಗ ಉಸಿರುಕಟ್ಟುವ ಅನುಭವವಾಗುತ್ತದೆ. ಇಲ್ಲಿ ನಿಂತು ವೀಕ್ಷಿಸಿದಾಗ ಇಗತ್ಪುರಿ ಪಟ್ಟಣದ ವಿಹಂಗಮ ನೋಟ ಕೂಡ ಕಣ್ಣಿಗೆ ಲಭಿಸುತ್ತದೆ. ಅಲ್ಲದೆ, ಸಹ್ಯಾದ್ರಿ ಪರ್ವತ ಶ್ರೇಣಿಯ ಆಕರ್ಷಕ ನೋಟವೂ ಗೋಚರಿಸುತ್ತದೆ. ಕೋಟೆ ವೀಕ್ಷಣೆಗೆ ತೆರಳಿದ್ದಾಗ ಇದೆ ಆವರಣದಲ್ಲಿರುವ ಹನುಮಂತ ದೇವಾಲಯವನ್ನೂ ನೋಡಿ ಬನ್ನಿ. ಈ ಪ್ರದೇಶ ಆಕರ್ಷಕವಾಗಿದ್ದು, ಮನಸ್ಸಿಗೆ ನೆಮ್ಮದಿ ನೀಡುವ ತಾಣ. ಇಲ್ಲಿನ ವಾಲ್ವಾಕರ್ ಮ್ಯೂಸಿಯಂ ಒಂದು ಅಪರೂಪದ ವಸ್ತುಸಂಗ್ರಹಾಲಯವಾಗಿದೆ. ಶಿವಾಜಿ ಮಹಾರಾಜರ ಜೀವನ ಚಿತ್ರಣ ಕಟ್ಟಿಕೊಡುವ ಈ ತಾಣ ಕಣ್ಣಿಗೆ ಹಬ್ಬದೂಟ ಉಣಬಡಿಸುತ್ತದೆ. ಇನ್ನೊಂದು ಮುಖ್ಯವಾದ ವಿಚಾರ.. ಇಲ್ಲಿ ಬಂದು ವಡಾಪಾವ್ ತಿನ್ನದೇ ತೆರಳಿದರೆ ಪ್ರವಾಸ ಅಪೂರ್ಣ. ಅಷ್ಟು ಜನಪ್ರಿಯ ಇಲ್ಲಿನ ವಡಾಪಾವ್.
ಇಗತ್ಪುರಿ - ಅತ್ಯುತ್ತಮ ನಿಸರ್ಗ ರಮಣೀಯ ತಾಣ
ಸಮುದ್ರ ಮಟ್ಟದಿಂದ ಸರಿಸುಮಾರು 1,900 ಅಡಿ ಎತ್ತರದಲ್ಲಿರುವ ಈ ಪ್ರದೇಶ ಸಹಜ ನಿಸರ್ಗ ಸೌಂದರ್ಯದಿಂದ ಕಂಗೊಳಿಸುತ್ತದೆ. ನಿಸರ್ಗ ಪ್ರಿಯರಿಗೆ ಇದು ಅತ್ಯಂತ ಅಪ್ಯಾಯಮಾನವಾದ ತಾಣ. ರಮಣೀಯವಾದ ಜಲಪಾತ ಹಾಗೂ ಹಸಿರು ಕಣಿವೆಗಳು, ಮರಗಳಿಂದ ಸಮೃದ್ಧವಾಗಿರುವ ದಟ್ಟಾರಣ್ಯ ಎಲ್ಲವನ್ನು ಒಳಗೊಂಡಿದೆ. ಒಟ್ಟಾರೆ ಇದೊಂದು ಆಕರ್ಷಕ ನೋಡುಗ ತಾಣವನ್ನು ಒಳಗೊಂಡು ಸುಂದರ ಪ್ರವಾಸಿ ತಾಣವಾಗಿ ಜನಪ್ರಿಯವಾಗಿದೆ.ಕಳಶಪ್ರಾಯವಾದ ಗಿರಿತಾಣಗಳು ಅತ್ಯುತ್ತಮ ಹಾಗೂ ಶುದ್ಧ ಗಾಳಿ ಬೀಸುವ ತಾಣಗಳಾಗಿದ್ದು, ನಗರೀಕರಣದಿಂದ ಬಲು ದೂರ ಉಳಿದು ಸಹಜ ಆಕರ್ಷಣೆ ಹೆಚ್ಚಿಸಿಕೊಂಡಿವೆ. ಸಾಕಷ್ಟು ಪ್ರವಾಸಿಗರು ಇಲ್ಲಿ ಸದಾ ತುಂಬಿಕೊಂಡಿರುತ್ತಾರೆ. ಈ ತಾಣ ಎಲ್ಲಾ ರೀತಿಯಲ್ಲೂ ಪ್ರವಾಸಿಗರ ಒತ್ತಡವನ್ನು ಮರೆಸುತ್ತದೆ, ನಿರಾಳವಾಗಿಸುತ್ತದೆ ಎನ್ನುವುದನ್ನು ನಿಸ್ಸಂಶಯವಾಗಿ ಹೇಳಬಹುದು. ನಗರ ಒತ್ತಡ ಹಾಗೂ ಅಸಹನೀಯ ವಾತಾವರಣದಿಂದ ಮುಕ್ತಿ ನೀಡುವ ಈ ತಾಣ ಉದ್ಯೋಗಿಗಳ ಪಾಲಿಗೆ, ಸದಾ ಒತ್ತಡದಲ್ಲಿರುವವರ ಪಾಲಿಗೆ ನಿಜವಾದ ಸ್ವರ್ಗವಾಗಿ ಮಾರ್ಪಡುತ್ತದೆ. ತ್ರಿಂಗಲವಾಡಿ ಕೆರೆ ಇಲ್ಲಿನ ಇನ್ನೊಂದು ಆಕರ್ಷಣೆ. ಇದು ತ್ರಿಂಗಲವಾಡಿ ಕೋಟೆ ಸಮೀಪವೇ ಇದೆ. ಸಂಜೆಯ ಆಕರ್ಷಕ ಸಮಯ ಕಳೆಯಲು ಇದು ಹೇಳಿ ಮಾಡಿಸಿದ ತಾಣ. ಕುಟುಂಬ ಸಮೇತರಾಗಿ ಆಗಮಿಸುವ ಪ್ರವಾಸಿಗರು ಇಲ್ಲಿ ಸುಂದರ ಸಂಜೆಯನ್ನು ಸುಮಧುರವಾಗಿ ಕಳೆಯುತ್ತಾರೆ. ನಿಸರ್ಗಪ್ರಿಯರು ಇಲ್ಲಿ ತಮ್ಮನ್ನೇ ತಾವು ಮರೆತುಬಿಡುತ್ತಾರೆ. ಸಮೃದ್ಧ ಹಸಿರು ವಾತಾವರಣದಲ್ಲಿ ಹತ್ತು ಹಲವು ವಿಧದ ಪಕ್ಷಿಗಳು, ಸಸ್ಯಗಳು ಕಾಣಸಿಗುತ್ತವೆ. ಸಾಕಷ್ಟು ಮಾದರಿಯ ಪಕ್ಷಿಗಳನ್ನು ನೋಡಲೆಂದೇ ಇಲ್ಲಿಗೆ ಬರುವವರೂ ಇದ್ದಾರೆ. ಟ್ರೆಕ್ಕಿಂಗ್ ಪ್ರಿಯರು ಇಲ್ಲಿ ಬರಲು ಹಾತೊರೆಯುತ್ತಾರೆ. ಗುಡ್ಡ ಪ್ರದೇಶ ಆಗಿರುವುದರಿಂದ ಹತ್ತಿ, ಇಳಿಯಲು ಸಾಕಷ್ಟು ಸಾಹಸಕಾರಿ ತಾಣಗಳಿವೆ.
ಬಸಾರಾ ನದಿ ಕಣಿವೆ ಪ್ರದೇಶ ಮತ್ತೊಂದು ಆಕರ್ಷಣೆಯ ತಾಣ. ಪ್ರವಾಸಿಗರು ಇಲ್ಲಿಗೆ ಹುಡುಕಿಕೊಂಡು ಬರುತ್ತಾರೆ. ಕೆಲ ಕಾಲ ವಿಹರಿಸಲು, ಮನಸ್ಸನ್ನು ಹಗುರಾಗಿಸಿಕೊಳ್ಳಲು ಇದು ಪ್ರಶಸ್ತ ನೆಲೆ. ಇಲ್ಲಿನ ವೈತರಣ ಆಣೆಕಟ್ಟೆ ಸಹಜ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಇದೊಂದು ಮುಂಬಯಿ ನಗರಕ್ಕೆ ನೀರು ಪೂರೈಸುವ ಪ್ರಮುಖ ತಾಣ ಮಾತ್ರವಲ್ಲ, ವೀಕ್ಷಕರಿಗೆ ಮುದ ನೀಡುವ ಸುಂದರ ಪ್ರವಾಸಿ ತಾಣವೂ ಹೌದು. ಇಲ್ಲಿ ಸಾಕಷ್ಟು ಆಧುನಿಕ ಚಟುವಟಿಕೆಗಳು ಕೂಡ ನಿರಂತರವಾಗಿ ನಡೆಯುತ್ತಿದ್ದು, ನದಿಯಲ್ಲಿ ಬೋಟಿಂಗ್ ಹಾಗೂ ಕ್ರಾಸಿಂಗ್ಗೆ ವಿಫುಲ ಅವಕಾಶ ಇದೆ.
ಸಮಾಲೋಚನೆ, ನದಿ ವೀಕ್ಷಣೆ, ಸೂರ್ಯಾಸ್ತ ಆಸ್ವಾದಿಸುವುದು ಮತ್ತಿತರ ಬಹುಮುಖಿ ಅವಕಾಶ ಇಲ್ಲಿದ್ದು, ಸ್ಥಳೀಯರು ಸಾಕಷ್ಟು ಸಂಖ್ಯೆಯಲ್ಲಿ ನಿತ್ಯ ಇಲ್ಲಿ ಸೇರುತ್ತಾರೆ. ಟ್ರೆಕ್ಕಿಂಗ್, ನದಿಯಲ್ಲಿ ಬೋಟಿಂಗ್ ಸೇರಿದಂತೆ ಹಲವು ಸಾಹಸಿ ಕಾರ್ಯಕ್ಕೂ ಇಲ್ಲಿ ಉತ್ತಮ ಅವಕಾಶವಿದೆ. ಎಲ್ಲಕ್ಕೂ ಒಂದು ಸಮ್ಮಿಲಿತ ತಾಣವಾಗಿ ಇದು ಲಭಿಸಿದೆ.
ಇನ್ನಷ್ಟು ಸತ್ಯಗಳ ಸೇರ್ಪಡೆ
ವರ್ಷದ ಎಲ್ಲಾ ಅವಧಿಯಲ್ಲೂ ಇಲ್ಲಿನ ವಾತಾವರಣ ಸಹನೀಯವಾಗಿರುತ್ತದೆ. ಬೇಸಿಗೆಯ ಒಂದಿಷ್ಟು ಸಮಯ ಕೊಂಚ ಬಿಸಿಲು ಹಾಗೂ ಸೆಖೆ ಇರುತ್ತದೆ. ಬೇಸಿಗೆ ಸಂದರ್ಭದಲ್ಲಿಯೇ ಇತ್ತ ಪ್ರವಾಸ ಹಮ್ಮಿಕೊಳ್ಳುವುದು ಪೂರ್ಣ ಸರಿಯಲ್ಲ. ಮಳೆಗಾಲದಲ್ಲಿ ಇಲ್ಲಿಗೆ ಬರಬಹುದು. ಬಿಸಿಯನ್ನು ಕಡಿಮೆ ಮಾಡುವ ಈ ವಾತಾವರಣ ತುಂಬಾ ಆಹ್ಲಾದಮಯವಾಗಿರುತ್ತದೆ. ಸುರಿಯುವ ಮಳೆ ನೋಡುವುದೇ ಒಂದು ಮಜವಾದ ಅನುಭವ. ಹಚ್ಚ ಹಸಿರಿನ ವಾತಾವರಣದ ಜತೆ ತುಂಬಿ ಹಾಲಿನ ನೊರೆಯಂತೆ ಉಕ್ಕಿ ಬೀಳುವ ಜಲಪಾತಗಳ ನೋಟ ಕಣ್ಣಿಗೆ ಹಬ್ಬ. ಸ್ಥಳ ವೀಕ್ಷಣೆಗೆ ಇದು ಹೇಳಿ ಮಾಡಿಸಿದ ಸಂದರ್ಭ. ಟ್ರೆಕ್ಕಿಂಗ್, ಸ್ಥಳ ವೀಕ್ಷಣೆ ಹಾಗೂ ವಿಹಾರಕ್ಕೆ ಚಳಿಗಾಲವೂ ಉತ್ತಮವೇ. ತಂಪು ಹವಾಮಾನ ಆಹ್ಲಾದಮಯವಾಗಿದ್ದು, ವೀಕ್ಷಕರಿಗೆ ಉತ್ತಮ ಬೆಂಬಲ ನೀಡುತ್ತದೆ.
ವಾಯು ಮಾರ್ಗದಲ್ಲಿ ಇಲ್ಲಿಗೆ ಬರಲು ಬಯಸುವವರಿಗೆ ಮುಂಬಯಿಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ ಸೂಕ್ತ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿದ್ದು, ಇಗತ್ಪುರಿಯಿಂದ ಕೇವಲ 140 ಕಿ.ಮೀ. ದೂರದಲ್ಲಿದೆ. ನಾಶಿಕ್ನಲ್ಲಿ ಡೊಮೆಸ್ಟಿಕ್ ವಿಮಾನ ನಿಲ್ದಾಣವಿದೆ. ಇದು ಇಲ್ಲಿಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಕೂಡ ಹೌದು. ದೇಶದ ಎಲ್ಲೆಡೆಯಿಂದ ಇಲ್ಲಿಗೆ ಉತ್ತಮ ಸಂಪರ್ಕ ಇದೆ. ಇಲ್ಲಿಗೆ ರೈಲು ಸಂಪರ್ಕ ಉತ್ತಮವಾಗಿದೆ. ದೇಶದ ವಿವಿಧೆಡೆಯಿಂದ ನಿರಂತರವಾಗಿ ರೈಲು ಆಗಮಿಸುತ್ತವೆ. ಅಲ್ಲದೆ ಮಹಾರಾಷ್ಟ್ರದ ಒಳ ಹೊರ ಭಾಗದಿಂದ ಇಲ್ಲಿಗೆ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ. ಸ್ಥಳೀಯ ರೈಲು ವ್ಯವಸ್ಥೆ ಇದಕ್ಕೆ ಸಮೀಪದ ಕಸರಾವರೆಗೂ ಲಭ್ಯವಿದೆ. ಇಲ್ಲಿಳಿದು ಬಸ್ ಮೂಲಕ ಆಗಮಿಸಬಹುದು. ನೀವಿಲ್ಲಿ ತಲುಪಿದಿರೆಂದರೆ ಗುಡ್ಡದ ಮೇಲೇರಲು ಯಾವುದೇ ಅನ್ಯ ವ್ಯವಸ್ಥೆ ಇಲ್ಲ. ಬಸ್ ಅಥವಾ ಖಾಸಗಿ ವಾಹನಗಳೇ ಆಧಾರ. ರಸ್ತೆ ಮಾರ್ಗದಲ್ಲಿ ತೆರಳುವವರಿಗೆ ಅತ್ಯಾಕರ್ಷಕ ಪರಿಸರ ವೀಕ್ಷಿಸುವ ಅವಕಾಶ ಕೂಡ ಲಭಿಸುತ್ತದೆ. ಘಟ್ಟ ಪ್ರದೇಶದಲ್ಲಿ ಸುತ್ತುತ್ತಾ ಸಾಗುವಾಗ ಸುತ್ತಲೂ ಕಾಣುವ ಪ್ರಕೃತಿ ಸೌಂದರ್ಯ ವೀಕ್ಷಿಸುವುದು ಕಣ್ಣಿಗೆ ಹಬ್ಬ. ಇದು ಕೊಂಚ ಸವಾಲಿನ ಮಾರ್ಗವಾದರೂ ಮಜಾ ಕೊಡುತ್ತದೆ. ಕಡಿಮೆ ಮೊತ್ತ ಪಾವತಿಸಿ ಘಟ್ಟ ಏರಲು ಅನುಕೂಲಕರವಾದ ವಾಹನ ವ್ಯವಸ್ಥೆ ಇಲ್ಲಿದೆ. ಹಿಂತಿರುಗುವಾಗಿನ ಅನುಭವವಂತೂ ಅತ್ಯಾಕರ್ಷಕ.
ವಾರಾಂತ್ಯದ ಪ್ರವಾಸಕ್ಕೆ ಇದು ಹೇಳಿ ಮಾಡಿಸಿದ ಸ್ಥಳ. ವಾರವಿಡೀ ಕಷ್ಟಪಟ್ಟು, ಕೊನೆಯ ಎರಡು ದಿನ ನಿರಾಳರಾಗಲು ಉತ್ತಮ ಸ್ಥಳ. ಒತ್ತಡ ನಿವಾರಿಸಿಕೊಂಡು ಮುಂದಿನ ವಾರದ ಕೆಲಸಕ್ಕೆ ಅಣಿಯಾಗಲು ಇದು ಉತ್ತಮ ಹಾಗೂ ಪೂರಕ ವಾತಾವರಣ ಹೊಂದಿದೆ. ಕಿಕ್ಕಿರಿದ ನಗರ ಒತ್ತಡ, ವಾತಾವರಣದಿಂದ ಮುಕ್ತಿ ನೀಡಿ ಮನಸ್ಸು ನಿರಾಳವಾಗುವಂತೆ ಮಾಡುತ್ತದೆ. ಮಕ್ಕಳೊಂದಿಗೆ ಬಂದರೆ ಅವರು ಅಪಾರ ಸಂತಸ ಪಟ್ಟುಕೊಳ್ಳುವಲ್ಲಿ ಸಂಶಯವಿಲ್ಲ. ಬೇಸಿಗೆ ರಜೆಗೆ ಅವರನ್ನು ಇಲ್ಲೇ ಕರೆತರಬಹುದು. ಅತಿ ಚಿಕ್ಕ ತಾಣ ಆದರೆ ಅಪಾರ ಪ್ರಮಾಣದ ನವೋಲ್ಲಾಸವನ್ನು ತಂಬಿಕೊಡುವಲ್ಲಿ ಸಂಶಯವಿಲ್ಲ.