ವಾರದ ರಜೆಯಲ್ಲಿ ಎಲ್ಲಿಗೆ ಹೋಗುವುದು? ಹತ್ತಿರದ ಅದೇ ಪಾರ್ಕ್ಗಳನ್ನು ಸುತ್ತಿ ಸುತ್ತಿ ಬೇಸರವಾಗಿದೆ... ಬೆಂಗಳೂರಿಗೆ ಹತ್ತಿರ ಇರುವ ಹೊಸ ಜಾಗ ಯಾವುದಿದೆ ಎನ್ನುವ ಹುಡುಕಾಟದಲ್ಲಿರುವವರಿಗೆ ಈ ಜಾಗ ಹೆಚ್ಚು ಖುಷಿ ಹಾಗೂ ಸಂತೋಷವನ್ನು ನೀಡಬಲ್ಲದು. ಅರೇ! ಅದ್ಯಾವ ತಾಣ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಅದೇ ಮಂಚನಬೆಲೆ ಜಲಾಶಯ.
ಮಂಚಿನಬೆಲೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನಿಂದ 40 ಕಿ.ಮೀ. ದೂರದಲ್ಲಿರುವ ಅರ್ಕಾವತಿ ನದಿಯ ಹಿನ್ನೀರಿನ ಈ ಜಲಾಶಯ ವಿಹಾರ ತಾಣಕ್ಕೆ ಸೂಕ್ತ ಸ್ಥಳ. ನೀರಾವರಿ ಯೋಜನೆಯ ಉದ್ದೇಶಕ್ಕಾಗಿ ಅಣೆಕಟ್ಟು ನಿರ್ಮಿಸಲಾಗಿದ್ದು, ಇಲ್ಲಿರುವ ಹಿನ್ನೀರಿನ ಪ್ರದೇಶ ಪ್ರವಾಸ ತಾಣವಾಗಿ ಹೊರ ಹೊಮ್ಮಿದೆ. ಈ ವಿಚಾರ ತಿಳಿದ ನಾವು ಒಂದು ರವಿವಾರ ಇಲ್ಲಿಗೆ ಪ್ರವಾಸ ಹೋಗಿದ್ದೆವು. ಅನುಭವ ಅದ್ಭುತವಾಗಿದ್ದುದರಿಂದ ನಿಮಗೂ ಹೇಳುತ್ತಿದ್ದೇನೆ...
PC: wikipedia.org
ನಾವು ನಾಲ್ಕು ಕುಟುಂಬದವರು, ಒಟ್ಟು ಎಂಟು ಜನ. ಮುಂಜಾನೆ 6 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದೆವು. ಟ್ರಾಫಿಕ್ ಸಮಸ್ಯೆ ಇಲ್ಲದೆ, ತಂಪಾದ ಗಾಳಿಯ ಅನುಭವ ಪಡೆಯುತ್ತಾ ಸಾಗಿದೆವು. ಬೆಳಗ್ಗೆಯ ತಿಂಡಿ ಹಾಗೂ ಮಧ್ಯಾಹ್ನದ ಊಟವನ್ನು ಮನೆಯಿಂದಲೇ ತಯಾರಿಸಿಕೊಂಡು ಹೋಗಿರುವುದರಿಂದ ಊಟ ತಿಂಡಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಒಂದಿಷ್ಟು ಹಣ್ಣುಗಳು, ನೀರು ಎಲ್ಲವೂ ನಮ್ಮ ಬಳಿ ಇತ್ತು...
ಸವನದುರ್ಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಷ್ಟ-ಸುಖಗಳನ್ನು ಮಾತನಾಡಿಕೊಳ್ಳುತ್ತಾ ಸಾಗುತ್ತಿದ್ದ ನಮಗೆ ಜಲಾಶಯಕ್ಕೆ ಬಂದಿದ್ದೇ ಅರಿವಾಗಲಿಲ್ಲ. ಸರಿಯಾಗಿ 8.30ಕ್ಕೆಲ್ಲಾ ನಮ್ಮ ತಾಣಕ್ಕೆ ತಲುಪಿದ್ದೆವು. ಜಲಾಶಯದ ಸೊಬಗು, ತಂಪಾದ ಗಾಳಿ, ಸುಂದರವಾದ ನೀರಿನ ಹರಿವು, ಸುತ್ತಲು ಹಸಿರು ಸಿರಿ ಮನಸ್ಸಿಗೊಂದಿಷ್ಟು ನಿರಾಳ ಅನುಭವ ನೀಡಿತ್ತು. ಎರಡು ಗಂಟೆಯ ಪ್ರಯಾಣದಿಂದ ಸ್ವಲ್ಪ ಆಯಸವಾಗಿದ್ದುದ್ದರಿಂದ ತಂದ ತಿಂಡಿಯನ್ನು ಅಲ್ಲೇ ನೆರಳಿನಲ್ಲಿ ಕುಳಿತು ಸವಿದೆವು.
PC: wikipedia.org
ಬಹುಶಃ ಒಂದು ಅರ್ಧ ಗಂಟೆಯ ನಂತರ ಹತ್ತಿರದ ಬೆಟ್ಟಕ್ಕೆ ಚಾರಣ ಹೊರೆಟೆವು. ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದಂತೆ ಎಲ್ಲರಿಗೂ ನಾವು ಮೊದಲೇ ಇಲ್ಲಿಗೆ ಬರಬೇಕಿತ್ತು, ಆಮೇಲೆ ತಿಂಡಿ ಮುಗಿಸಬೇಕಿತ್ತು ಎನ್ನುವ ವಿಚಾರ ಅರಿವಿಗೆ ಬಂತು. ಆದರೂ ಸ್ವಲ್ಪ ದೂರ ಚಾರಣ ಮುಗಿಸಿ ಬಂದೆವು...
ಬಂದೊಂದು ಗಳಿಗೆ ಕುಳಿತು ಚೆಸ್, ಹಾವು ಏಣಿ ಆಟ ಆಡಿದೆವು. ದಣಿವಾರಿದ ಮೇಲೆ ಸ್ವಲ್ಪ ಹೊಟ್ಟೆಗೆ ಏನಾದರೂ ಬೇಕು ಎನ್ನುವ ಸಂವೇದನೆ ಎಲ್ಲರಿಗೂ ಆರಂಭವಾಗಿತ್ತು. ಅವರವರ ಮನೆಯಿಂದ ತಂದ ವಿಶೇಷ ಭೋಜನಗಳನ್ನು ಸವಿಯುತ್ತ ಕುಳಿತೆವು... ಹಾಗೇ ಸ್ವಲ್ಪ ಸಮಯ ಅಲ್ಲೇ ಹಸಿರು ಹುಲ್ಲಿನ ಮೇಲೆ ವಿಶ್ರಾಂತಿ ಪಡೆದೆವು...
PC: wikipedia.org
ಸಮಯ 2.30 ಆಗುತ್ತಿದ್ದಂತೆ ಹುಡುಗರೆಲ್ಲಾ ವಾಲಿಬಾಲ್, ಚಿನ್ನಿ ದಾಂಡು ಆಡಲು ಪ್ರಾರಂಭಿಸಿದರು. ಅವರಿಗೂ ಆಡುತ್ತ ಸಮಯ ಕಳೆದದ್ದೇ ಅರಿವಾಗಲಿಲ್ಲ. ಆಗಲೇ ಸಂಜೆ 4.30. ಎಲ್ಲರೂ ಇನ್ನು ಹೊರಡಬೇಕು ಎಂದು ತಂದ ವಸ್ತುಗಳು ಹಾಗೂ ಬೇಡದ ಪೇಪರ್ -ಕವರ್ ಗಳನ್ನು ಪುನಃ ಬ್ಯಾಗ್ಗಳಲ್ಲಿ ತುಂಬಿಕೊಂಡು ಬೆಂಗಳೂರಿಗೆ ಹಿಂತಿರುಗಿದೆವು... ಸಂಜೆ 7 ಗಂಟೆಗೆಲ್ಲಾ ಮನೆಯ ದೀಪ ಬೆಳಗಿತು. ವಾರದ ರಜೆಯೂ ಸಾರ್ಥಕವಾಯಿತು... ಎಲ್ಲರೊಡನೆ ಕುಳಿತು ಹೊಸ ಜಾಗದ ಸವಿ ಸವಿದಿದ್ದು ಒಂದು ಅದ್ಭುತ ಅನುಭವವನ್ನು ನೀಡಿತ್ತು...
ಗಮನದಲ್ಲಿ ಇರಬೇಕು
ನಿಷೇಧಿಸಿದ ಸ್ಥಳಗಳಿಗೆ, ನೀರಿನಲ್ಲಿ ಧುಮುಕುವ ಗೋಜಿಗೆ ಹೋಗುವಂತಿಲ್ಲ. ತ್ಯಾಜ್ಯಗಳನ್ನು ಅಲ್ಲಲ್ಲಿಯೇ ಬಿಸಾಡಿ ಮಾಲಿನ್ಯವುಂಟು ಮಾಡಬಾರದು.