ತುಂಗಾ ನದಿ ತಟದಲ್ಲಿ ನೆಲೆಸಿರುವ ಶಿವಮೊಗ್ಗವನ್ನು "ಮಲೆನಾಡಿನ ಹೆಬ್ಬಾಗಿಲು" ಎಂದೆ ಸಂಭೋದಿಸಲಾಗುತ್ತದೆ. ಅದರಂತೆ ಹಾಸನ ಜಿಲ್ಲೆಯನ್ನು ಹೊಯ್ಸಳ ವಾಸ್ತುಕಲೆಯ ಹೆಗ್ಗುರುತು ಎಂದು ಕರೆಯಲಾಗುತ್ತದೆ. ಇವೆರಡು ಜಿಲ್ಲೆಗಳ ಮಧ್ಯೆ ಇರುವ ಅಂತರ ಸುಮಾರು 155 ಕಿ.ಮೀ ಗಳಷ್ಟು. ಈ ಎರಡು ಜಿಲ್ಲೆಗಳು ತಮ್ಮದೆ ಆದ ವಿಶೇಷತೆಯನ್ನು ಹೊಂದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪುರಾತನವಾದ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಕಂಡುಬರುವ ಪ್ರತಿಯೊಂದು ದೇವಾಲಯಗಳು ವಾಸ್ತುಶಿಲ್ಪದ ದೃಷ್ಟಿಯಿಂದ ಪ್ರಖ್ಯಾತಿಯನ್ನು ಪಡೆದಿರುವುದು ಅಲ್ಲದೆ ಶೈಕ್ಷಣಿಕ ಪ್ರವಾಸಕ್ಕಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿವೆ.
ಪುರಾತನ ಕಾಲದ ಕುಶಲ ಕರ್ಮಿಗಳ ನೈಪುಣ್ಯತೆ, ಶಿಲ್ಪಿಗಳ ಕಲಾತ್ಮಕತೆ, ಆ ಕಾಲದಲ್ಲಿ ನಮ್ಮ ನಾಡನ್ನಾಳುತ್ತಿದ್ದ ಅರಸರ ಕಲಾಸಕ್ತಿ ಇವೆಲ್ಲವನ್ನು ಹಿಡಿ ಹಿಡಿಯಾಗಿ ಬಿಡಿಸಿಡುತ್ತವೆ ಈ ದೇವಾಲಯಗಳು. ಅಲ್ಲದೆ ಇಂದಿಗೂ ಸಹ ಕಾಣಬಹುದಾದ ಈ ದೇವಾಲಯಗಳ ರಚನೆಯ ಹಿಂದಿನ ಸದೃಢತೆ ಪ್ರಶಂಸನಾರ್ಹವಾಗಿದೆ. ನೀವು ವಾಸ್ತುಶಿಲ್ಪ ಪ್ರಿಯ ಪ್ರವಾಸಿಗರಾಗಿದ್ದರೆ ಒಂದೊಮ್ಮೆ ಈ ಎರಡೂ ಜಿಲ್ಲೆಗಳಿಗೆ ಪ್ರವಾಸ ಮಾಡಿ ಇಲ್ಲಿರುವ ಆ ಅದ್ಭುತ ದೇವಾಲಯಗಳನ್ನು ನಿಮ್ಮ ಕಣ್ಣಾರೆ ನೋಡಿ ಮನ ತುಂಬಿಕೊಳ್ಳಿ.
ಕೇದಾರೇಶ್ವರ ದೇವಸ್ಥಾನ, ಬಳ್ಳಿಗಾವಿ:
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳಿಗಾವಿ ಎಂಬಲ್ಲಿದೆ ಈ ಪುರಾತನ ಕೇದಾರೇಶ್ವರ ದೇವಸ್ಥಾನ. ಶಿವನಿಗೆ ಮುಡಿಪಾದ ಈ ದೇವಸ್ಥಾನದಲ್ಲಿ ವಿಷ್ಣುವಿನ ವಿಗ್ರಹವನ್ನೂ ಸಹ ಕಾಣಬಹುದು. ಕೆಲವು ಉಲ್ಲೇಖಗಳ ಪ್ರಕಾರ, ಈ ದೇವಾಲಯದ ಸಂಬಂಧ ಅಸುರ ರಾಜ ಬಲಿ ಚಕ್ರವರ್ತಿಯೊಂದಿಗಿದೆ ಎನ್ನಲಾಗಿದೆ. ಅಂದಿನ ಸಮಯದಲ್ಲಿ ಇದು ಬಹುವಾಗಿ ಜನರನ್ನು ಆಕರ್ಷಿಸುತ್ತಿತ್ತು. ಅದರಲ್ಲೂ ಪ್ರಮುಖವಾಗಿ ಶೈವ ಸಮುದಾಯದ ಕಾಲಾಮುಖ ಪಂಗಡದವರು ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
ಚಿತ್ರಕೃಪೆ: Pawaskar Vinayak
ಕೇದಾರೇಶ್ವರ ದೇವಸ್ಥಾನ:
ಕೇದಾರೇಶ್ವರನ ದೇವಸ್ಥಾನ ಹಿಂದಿನ ಬದಿಯಿಂದ. ಇಲ್ಲಿ ನಾಲ್ಕು ಮುಖಗಳುಳ್ಳ ಬ್ರಹ್ಮನ ವಿಗ್ರಹವನ್ನೂ ಸಹ ದೇವಾಲಯ ಆವರಣದಲ್ಲಿ ಕಾಣಬಹುದಾಗಿದೆ.
ಚಿತ್ರಕೃಪೆ: Dineshkannambadi
ಕೇದಾರೇಶ್ವರ ದೇವಸ್ಥಾನ:
ದೇವಾಲಯ ಆವರಣದಲ್ಲಿ ಕಂಡುಬರುವ ಚತುರ್ಮುಖ ಬ್ರಹ್ಮನ ವಿಗ್ರಹ.
ಚಿತ್ರಕೃಪೆ: Pawaskar Vinayak
ಕೈತಾಭೇಶ್ವರ ದೇವಸ್ಥಾನ, ಕುಬತೂರ್:
ಶಿವಮೊಗ್ಗದ ಸೊರಬ ತಾಲೂಕಿನಲ್ಲಿರುವ ಅನವಟ್ಟಿ ಎಂಬ ಹಳ್ಳಿಯ ಬಳಿಯಿರುವ ಕುಬತೂರ್ ಎಂಬ ಗ್ರಾಮದಲ್ಲಿ ಈ ದೇವಸ್ಥಾನವಿದೆ. ಸುಮಾರು 1100 ರಲ್ಲಿ ಈ ದೇವಸ್ಥಾನದ ನಿರ್ಮಾಣವಾಗಿದೆ. ಶಿವನಿಗೆ ಮುಡಿಪಾದ ದೇವಸ್ಥಾನ ಇದಾಗಿದೆ.
ಚಿತ್ರಕೃಪೆ: Dineshkannambadi
ರಾಮೇಶ್ವರ ದೇವಸ್ಥಾನ, ಕೂಡ್ಲಿ:
ಶಿವಮೊಗ್ಗ ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಕೂಡ್ಲಿಯು ರಾಮೇಶ್ವರ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿದೆ. ಅಲ್ಲದೆ ಈ ಸ್ಥಳದಲ್ಲಿಯೆ ಎರಡು ನದಿಗಳಾದ ತುಂಗಾ ಹಾಗೂ ಭದ್ರಾ ಸಂಗಮಹೊಂದಿ ಮುಂದೆ ತುಂಗಭದ್ರಾ ನದಿಯಾಗಿ ಹರಿಯುತ್ತದೆ. ಗರ್ಭಗೃಹಕ್ಕೆ ಅಭಿಮುಖವಾಗಿ ನಿಂತಿರುವ ನಂದಿ ವಿಗ್ರಹ.
ಚಿತ್ರಕೃಪೆ: Dineshkannambadi
ರಾಮೇಶ್ವರ ದೇವಸ್ಥಾನ:
ತುಂಗಾ ಹಾಗೂ ಭದ್ರಾ ನದಿಗಳು ಸಂಗಮ ಹೊಂದುವ ಸರಿಯಾದ ಸ್ಥಳದಲ್ಲಿ ನಿರ್ಮಿಸಲಾಗಿರುವ ಚಿಕ್ಕ ಹರಿ ಹರನ ದೇವಸ್ಥಾನ.
ಚಿತ್ರಕೃಪೆ: HPN
ರಾಮೇಶ್ವರ ದೇವಸ್ಥಾನ:
ಕೂಡ್ಲಿ ರಾಮೇಶ್ವರ ದೇವಸ್ಥಾನದ ಇನ್ನೊಂದು ನೋಟ.
ರಾಮಮಂಟಪ, ತೀರ್ಥಹಳ್ಳಿ:
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ತುಂಗಾ ನದಿ ಹರಿದಿರುವ ರಾಮತೀರ್ಥವನ್ನು ನೋಡಬಹುದು. ದಂತಕಥೆಯ ಪ್ರಕಾರ ಪರಶುರಾಮನು ತನ್ನ ಕೊಡಲಿಗೆ ಮೆತ್ತಿದ್ದ ಒಂದು ಹನಿ ರಕ್ತದ ಕಲೆಯನ್ನು ಎಲ್ಲೂ ಹೋಗಲಾಡಿಸಲಾರದೆ ಕೊನೆಗೆ ಇಲ್ಲಿನ ನದಿಯಲ್ಲಿ ತೊಳೆದಾಗ ಅದು ಮಾಯವಾಯಿತು. ಆದ್ದರಿಂದ ಇದನ್ನು ಪವಿತ್ರ ದೇಗುಲವನ್ನಾಗಿ ಪರಿಗಣಿಸಲಾಗಿದೆ.
ಚಿತ್ರಕೃಪೆ: Manjeshpv
ಸೀತಾರಾಮಾಂಜನೇಯ ದೇವಸ್ಥಾನ, ಶಿವಮೊಗ್ಗ:
ಶಿವಮೊಗ್ಗ ನಗರದಲ್ಲೆ ರಾಮ, ಸೀತಾ ಹಾಗೂ ಆಂಜನೇಯನಿಗೆ ಮುಡಿಪಾದ ಈ ದೇವಸ್ಥಾನವನ್ನು ಕಾಣಬಹುದು.
ಚಿತ್ರಕೃಪೆ: Chidambara
ಸೀತಾರಾಮಾಂಜನೇಯ ದೇವಸ್ಥಾನ:
ದೇವಸ್ಥಾನದಲ್ಲಿರುವ ಸಿತಾ ರಾಮರ ಮೂಲ ವಿಗ್ರಹಗಳು.
ಚಿತ್ರಕೃಪೆ: Chidambara
ಸೀತಾರಾಮಾಂಜನೇಯ ದೇವಸ್ಥಾನ:
ದೇವಸ್ಥಾನದಲ್ಲಿರುವ ಆಂಜನೇಯನ ಮೂಲ ವಿಗ್ರಹ.
ಚಿತ್ರಕೃಪೆ: Chidambara
ಸಿದ್ಧೇಶ್ವರ ದೇವಸ್ಥಾನ, ತೀರ್ಥಹಳ್ಳಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ಸಿದ್ಧೇಶ್ವರ ಗುಡ್ಡವು ಒಂದು ಪ್ರವಾಸಿ ಆಕರ್ಷಣೆಯಾಗಿದೆ. ಈ ಗುಡ್ಡದ ತುದಿಯಲ್ಲಿ ಪುಟ್ಟದಾದ ಸಿದ್ಧೇಶ್ವರ ದೇವಸ್ಥಾನವನ್ನು ಕಾಣಬಹುದು. ಈ ಗುಡ್ಡದ ತುದಿಯ ಮೇಲಿಂದ ತೀರ್ಥಹಳ್ಳಿಯ ಸುತ್ತಮುತ್ತಲಿನ ಪರಿಸರದ ವಿಹಂಗಮ ನೋಟವನ್ನು ಸವಿಯಬಹುದು.
ಚಿತ್ರಕೃಪೆ: Manjeshpv
ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ, ಭದ್ರಾವತಿ:
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಶ್ರೀ ಲಕ್ಷ್ಮಿನರಸಿಂಹರ ಈ ದೇವಸ್ಥಾನವನ್ನು ಕಾಣಬಹುದು.
ಚಿತ್ರಕೃಪೆ: Primejyothi
ಶ್ರೀಧರ ಸ್ವಾಮಿ ಮಠ, ವರದಪುರ:
ಶಿವಮೊಗ್ಗದ ಸಾಗರ ತಾಲೂಕಿನ ವರದಪುರ ಎಂಬ ಗ್ರಾಮದಲ್ಲಿ ಶ್ರೀಧರ ಸ್ವಾಮಿಗಳ ಈ ಆಶ್ರಮವಿದೆ. ಇಲ್ಲೊಂದು ಪವಿತ್ರ ನೀರಿನ ತೊರೆ ಹರಿದಿದ್ದು ಅದರಲ್ಲಿ ತೀರ್ಥಸ್ನಾನ ಮಾಡಲು ಭಕ್ತಾದಿಗಳು ಬರುತ್ತಿರುತ್ತಾರೆ. ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಚರ್ಮ ವ್ಯಾಧಿಗಳು ಹಾಗೂ ಮಾಡಿದ ಪಾಪ ಕರ್ಮಗಳು ನಾಶ ಹೊಂದುತ್ತವೆ ಎಂದು ನಂಬಲಾಗಿದೆ.
ಚಿತ್ರಕೃಪೆ: Vpsmiles
ಬುಚೇಶ್ವರ ದೇವಸ್ಥಾನ, ಕೊರವಂಗ್ಲ:
ಹೊಯ್ಸಳ ವಾಸ್ತುಶಿಲ್ಪದ ಸರಳ ಹಾಗು ಅತ್ಯದ್ಭುತ ಶೈಲಿ ಹೊಂದಿರುವ ಹನ್ನೆರಡನೇಯ ಶತಮಾನದ ಬುಚೇಶ್ವರ ದೇವಸ್ಥಾನವು ಹಾಸನ ನಗರದಿಂದ ಹತ್ತು ಕಿ.ಮೀ ದೂರದಲ್ಲಿರುವ ಕೊರವಂಗ್ಲ ಎಂಬ ಹಳ್ಳಿಯಲ್ಲಿದೆ. 1173 ರಲ್ಲಿ ನಿರ್ಮಾಣವಾದ ಈ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆಯಿಂದ ರಾಷ್ಟ್ರೀಯ ಮಹತ್ವವಿರುವ ಸ್ಮಾರಕವಾಗಿ ರಕ್ಷಿಸಲಾಗಿದೆ.
ಚಿತ್ರಕೃಪೆ: HoysalaPhotos
ಈಶ್ವರ ದೇವಸ್ಥಾನ, ಅರಸೀಕೆರೆ:
ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿದೆ ಶಿವನಿಗೆ ಮುಡಿಪಾದ ಈ ಸುಂದರ ದೇವಸ್ಥಾನ. ಹೊಯ್ಸಳ ಶೈಲಿಯಲ್ಲಿ ನಿರ್ಮಾಣವಾದ ಈ ಪುರಾತನ ದೇವಸ್ಥಾನವು 16 ನಕ್ಷತ್ರಾಕಾರದ ಮಂಟಪಗಳನ್ನು ಹೊಂದಿದೆ ಹಾಗೂ ನೋಡಲು ಆಕರ್ಷಣೀಯವಾಗಿದೆ.
ಚಿತ್ರಕೃಪೆ: Dineshkannambadi
ಕೇದಾರೇಶ್ವರ ದೇವಸ್ಥಾನ, ಹಳೇಬೀಡು:
ಹೊಯ್ಸಳ ಶೈಲಿಯ ಕೇದಾರೇಶ್ವರ ದೇವಸ್ಥಾನವು ಹಾಸನ ಜಿಲ್ಲೆಯ ಐತಿಹಾಸಿಕ ನಗರ ಹಳೇಬೀಡುವಿನಲ್ಲಿದೆ. 11 ರಿಂದ 12 ನೇಯ ಶತಮಾನದ ಮಧ್ಯದಲ್ಲಿ ನಿರ್ಮಾಣವಾದ ಈ ದೇವಾಲಯವು ಶಿವನಿಗೆ ಮುಡಿಪಾಗಿದೆ.
ಚಿತ್ರಕೃಪೆ: Ankush Manuja
ಲಕ್ಷ್ಮಿ ದೇವಿ ದೇವಾಲಯ, ದೊಡ್ಡಗದ್ದವಳ್ಳಿ:
ಹಾಸನ ಜಿಲ್ಲೆಯ ದೊಡ್ಡಗದ್ದವನಳ್ಳಿ ಎಂಬ ಹಳ್ಳಿಯಲ್ಲಿ ಲಕ್ಷ್ಮಿ ದೇವಿಗೆ ಮುಡಿಪಾದ ಈ ದೇವಾಲಯವಿದೆ. ಹಾಸನ ನಗರದಿಂದ ಕೇವಲ 16 ಕಿ.ಮೀ ದೂರದಲ್ಲಿ ಈ ಹಳ್ಳಿಯಿದೆ. ಹೊಯ್ಸಳ ದೊರೆ ವಿಷ್ಣುವರ್ಧನನಿಂದ 1114 ರಲ್ಲಿ ಈ ದೇವಾಲಯ ನಿರ್ಮಾಣವಾಗಿದೆ.
ಚಿತ್ರಕೃಪೆ: Shriram Swaminathan
ಲಕ್ಷ್ಮಿ ದೇವಿ ದೇವಾಲಯ, ದೊಡ್ಡಗದ್ದವಳ್ಳಿ:
ಅತಿ ಸುಂದರ ಕಲಾತ್ಮಕತೆಯಿಂದ ಕೂಡಿರುವ ಲಕ್ಷ್ಮಿ ದೇವಿ ದೇವಾಲಯದ ಒಳಭಾಗ.
ಚಿತ್ರಕೃಪೆ: Dineshkannambadi
ಲಕ್ಷ್ಮಿ ನರಸಿಂಹ ದೇವಾಲಯ, ನುಗ್ಗೆಹಳ್ಳಿ:
ಹೊಯ್ಸಳ ಸಾಮ್ರಾಜ್ಯದ ದಂಡನಾಯಕನಾಗಿದ್ದ ಬೊಮ್ಮಣ್ಣನಿಂದ 1246 ರಲ್ಲಿ ಈ ದೇವಸ್ಥಾನದ ನಿರ್ಮಾಣವಾಗಿದೆ. ಹಾಸನ ನಗರದಿಂದ 50 ಕಿ.ಮೀ ದೂರದಲ್ಲಿರುವ ನುಗ್ಗೆಹಳ್ಳಿ ಎಂಬಲ್ಲಿ ಈ ದೇವಸ್ಥಾನವಿದೆ.
ಚಿತ್ರಕೃಪೆ: Dineshkannambadi
ಲಕ್ಷ್ಮಿ ನರಸಿಂಹ ದೇವಾಲಯ, ಹಾರ್ನಹಳ್ಳಿ:
ಹಾಸನ ನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಹಾರ್ನಹಳ್ಳಿ ಎಂಬಲ್ಲಿ ಈ ದೇವಾಲಯವಿದೆ. ವಿಷ್ಣು ದೇವರಿಗೆ ಮುಡಿಪಾದ ಈ ದೇವಸ್ಥಾನವು ಹೊಯ್ಸಳ ಶೈಲಿಯಲ್ಲಿದ್ದು ಹೊಯ್ಸಳ ದೊರೆ ವೀರ ಸೋಮೇಶ್ವರನಿಂದ ಸುಮಾರು 1235 ರಲ್ಲಿ ನಿರ್ಮಾಣವಾಗಿದೆ.
ಚಿತ್ರಕೃಪೆ: Dineshkannambadi
ಲಕ್ಷ್ಮಿ ನರಸಿಂಹ ದೇವಾಲಯ, ಹಾರ್ನಹಳ್ಳಿ:
ದೇವಸ್ಥಾನದಲ್ಲಿ ಕಂಡುಬರುವ ಸೂಕ್ಷ್ಮವಾಗಿ ಕೆತ್ತಲಾದ ಸುಂದರ ಶಿಲ್ಪ ಕಲಾಕೃತಿಗಳು.
ಚಿತ್ರಕೃಪೆ: Benjamín Preciado
ಲಕ್ಷ್ಮಿ ನರಸಿಂಹ ದೇವಾಲಯ, ಜಾವಗಲ್:
ಹಾಸನ ಪಟ್ಟಣದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಜಾವಗಲ್ ಎಂಬ ಸ್ಥಳದಲ್ಲಿ ವಿಷ್ಣುವಿಗೆ ಮುಡಿಪಾದ ಈ ಪುರಾತನ ದೇವಸ್ಥಾನವಿದೆ. 1250 ರಲ್ಲಿ ಹೊಯ್ಸಳ ದೊರೆ ವೀರ ಸೋಮೇಶ್ವರನಿಂದ ಈ ದೇವಾಲಯ ನಿರ್ಮಿಸಲಾಗಿದೆ.
ಚಿತ್ರಕೃಪೆ: Dineshkannambadi
ಸದಾಶಿವ ದೇವಸ್ಥಾನ, ನುಗ್ಗೆಹಳ್ಳಿ:
ಹಾಸನ ಜಿಲ್ಲೆಯ ನುಗ್ಗೆಹಳ್ಳಿಯಲ್ಲಿರುವ ಪ್ರಸಿದ್ಧ ಲಕ್ಷ್ಮಿ ನರಸಿಂಹ ದೇವಸ್ಥಾನದ ಜೊತೆ ಜೊತೆಯಲ್ಲೆ ಸದಾಶಿವನ ಈ ದೇವಸ್ಥಾನವು ಕಲೆಯ ದೃಷ್ಟಿಯಿಂದ ಆಸಕ್ತಿಕರ ದೇವಸ್ಥಾನವಾಗಿದೆ. ಹೊಯ್ಸಳ ಸಾಮ್ರಾಜ್ಯದ ದಂಡನಾಯಕ ಬೊಮ್ಮಣ್ಣನಿಂದ ಈ ದೇವಾಲಯವು 1249 ರಲ್ಲಿ ನಿರ್ಮಾಣವಾಗಿದೆ.
ಚಿತ್ರಕೃಪೆ: HoysalaPhotos
ಚೆನ್ನಕೇಶವ ದೇವಾಲಯ, ಬೇಲೂರು:
ಮೂಲತಃ ವಿಜಯನಾರಾಯಣ ದೇವಸ್ಥಾನ ಎಂದು ಕರೆಯಲ್ಪಡುತ್ತಿದ್ದ ಚೆನ್ನಕೇಶವ ದೇವಸ್ಥಾನವು ಯಗಚಿ ನದಿಯ ದಂಡೆಯ ಮೇಲೆ ನಿರ್ಮಾಣಗೊಂಡಿದ್ದು, ಹಾಸನದಿಂದ 40 ಕಿ.ಮೀ ದೂರವಿರುವ ಬೇಲೂರು ಪಟ್ಟಣದಲ್ಲಿದೆ. ಶಿಲ್ಪ ಕಲೆಗಳ ಅಗಾಧ ಭಂಡಾರವನ್ನು ಇಲ್ಲಿ ಸವಿಯಬಹುದಾಗಿದೆ. ಒಂದಕ್ಕಿಂತ ಒಂದು ಶಿಲ್ಪ ಕಲೆಗಳು ಸೂಕ್ಷ್ಮವಾಗಿ ರಚಿಸಲ್ಪಟ್ಟಿದ್ದು ಚುಂಬಕದಂತೆ ಸೆಳೆಯುತ್ತವೆ. ಶಿಲ್ಪಿಗಳ ಅಗಾಧ ನೈಪುಣ್ಯತೆಯನ್ನು ಇಲ್ಲಿನ ಶಿಲ್ಪ ಕಲೆಗಳು ಅನಾವರಣಗೊಳಿಸುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನುಗಳಿಸಿವೆ ಇಲ್ಲಿನ ಶಿಲ್ಪ ಕಲಾಕೃತಿಗಳು. ವಿಷ್ಣುವಿಗೆ ಮುಡಿಪಾದ ಈ ದೇವಸ್ಥಾನ ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡಿದೆ.
ಚಿತ್ರಕೃಪೆ: Dineshkannambadi
ಚೆನ್ನಕೇಶವ ದೇವಾಲಯ, ಬೇಲೂರು:
ಖಂಬಗಳ ಮೇಲೆ ಅತ್ಯದ್ಭುತವಾಗಿ ಕೆತ್ತಲಾದ ಶಿಲಾ ಬಾಲಿಕೆಯ ಕಲಾಕೃತಿ. ಇದರ ಸೂಕ್ಷ್ಮತೆ ಕಂಡು ಬೆರಗಾಗದೆ ಇರಲಾರೆವು.
ಚಿತ್ರಕೃಪೆ: Redtigerxyz
ಚೆನ್ನಕೇಶವ ದೇವಾಲಯ, ಬೇಲೂರು:
ಜಯ ಹಾಗೂ ವಿಜಯ ದ್ವಾರಪಾಲಕರನ್ನು ಹೊಂದಿರುವ ಅತಿ ಸುಂದರವಾಗಿ ರಚಿಸಲ್ಪಟ್ಟ ದೇವಾಲಯದ ಒಳಭಾಗ.
ಚಿತ್ರಕೃಪೆ: Charles Haynes
ಚೆನ್ನಕೇಶವ ದೇವಾಲಯ, ಬೇಲೂರು:
ಅತ್ಯದ್ಭುತವಾಗಿ ಕಡಿಯಲಾದ ಹೊಯ್ಸಳರ ಲಾಂಛನ.
ಚಿತ್ರಕೃಪೆ: Dineshkannambadi
ಚೆನ್ನಕೇಶವ ದೇವಾಲಯ, ಬೇಲೂರು:
ಒಂದಕ್ಕಿಂತ ಒಂದು ವಿಭಿನ್ನ ಖಂಬಗಳು.....ಅತ್ಯದ್ಭುತ ಶಿಲ್ಪಕಲೆ.
ಚಿತ್ರಕೃಪೆ: Redtigerxyz
ಚೆನ್ನಕೇಶವ ದೇವಾಲಯ, ಬೇಲೂರು:
ಶಿವನು ಗಜಾಸುರ ಎಂಬ ರಕ್ಕಸನನ್ನು ಸಂಹರಿಸುವ ಪ್ರಸಂಗವಾದ ಗಜಾಸುರಸಂಹಾರವನ್ನು ಅತ್ಯದ್ಭುತವಾಗಿ ಕೆತ್ತಲಾದ ರೀತಿ.
ಚಿತ್ರಕೃಪೆ: Sarvagnya