ಭಾರತ ಅತ್ಯಂತ ಹೆಸರುವಾಸಿಯಾಗಿದ್ದು, ಜನಪ್ರಿಯವೆನಿಸಿದ್ದು ಅದರ ಧಾರ್ಮಿಕ ನಂಬುಗೆಗಳಿಂದಾಗಿ ಹಾಗೂ ಧಾರ್ಮಿಕ ಕ್ಷೇತ್ರಗಳಿಂದಾಗಿ! ಏಕೆಂದರೆ ನಮ್ಮಲ್ಲಿ ಇರುವಷ್ಟು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದೇಶ ಇನ್ನೊಂದಿಲ್ಲ. ಇಲ್ಲಿನ ಪ್ರತಿಯೊಂದು ಭಾಗವೂ ಒಂದಿಲ್ಲೊಂದು ಅದ್ಭುತಗಳನ್ನು ಒಳಗೊಂಡಿದೆ. ಇದಕ್ಕೆ ಹರಿದ್ವಾರವೂ ಹೊರತಲ್ಲ.
ಹೆಸರೇ ಸೂಚಿಸುವಂತೆ ಹರಿದ್ವಾರ ವಿಷ್ಣು ಹಾಗೂ ಶಿವನ ಪೂಜ್ಯ ಸ್ಥಾನ. ಇಲ್ಲಿನ ಹಲವಾರು ದೇವಾಲಯಗಳು, ಗಮ್ಯತಾಣಗಳು ಪ್ರವಾಸಿಗರನ್ನು, ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತವೆ. ಇಲ್ಲಿನ ದೇವಾಲಯದ ಸೊಬಗು ನಮ್ಮನ್ನು ಪೌರಾಣಿಕ ಯುಗಗಳಿಗೆ ಕೊಂಡೊಯ್ಯುತ್ತವೆ. ಇಲ್ಲಿನ ಪವಿತ್ರ ಪಾಪನಾಶಿನಿ ಗಂಗಾ ನದಿ ಅತ್ಯಂತ ಪ್ರಸಿದ್ಧ. ಇನ್ನೇಕೆ ತಡ, ಪ್ರಕೃತಿಯ ಸ್ವರ್ಗಕ್ಕೆ ಬರಲು ನೀವು ಸಿದ್ಧರಾಗಿ. ಈ ಸ್ಥಳದ ಬಗ್ಗೆ ಕೊಂಚ ಮಾಹಿತಿ ಇಲ್ಲಿದೆ : ಹರಿದ್ವಾರ (ಅಥವಾ ಹರದ್ವಾರ್), ಇದರ ಅಕ್ಷರಶಃ ಅರ್ಥ 'ಗಾಡ್ಸ್ ಗೇಟ್ವೇ'/ ’ದೇವರ ಮಹಾದ್ವಾರ’ ಎಂಬುದು. ಇದೊಂದು ಬಹುಮುಖ್ಯ ಯಾತ್ರಾ ಕೇಂದ್ರವಾಗಿದ್ದು, ಸುಂದರ ಪರ್ವತ ರಾಜ್ಯವಾದ ಉತ್ತರಖಂಡದಲ್ಲಿ ಸ್ಥಿತವಾಗಿದೆ. ಈ ಪವಿತ್ರ ನಗರ 'ಸಪ್ತ-ಪೂರಿಗಳು' ಅಂದರೆ ಭಾರತದ ಏಳು ಪವಿತ್ರ ನಗರಗಳಲ್ಲಿ ಒಂದು. ಜೊತೆಗೆ, ಈ ಸ್ಥಳವು ಉತ್ತರಖಂಡದ ಉಳಿದ ಮೂರು ಪವಿತ್ರ ಯಾತ್ರಾ ಸ್ಥಳಗಳಾದ ಹೃಷಿಕೇಶ, ಕೇದಾರನಾಥ್ ಮತ್ತು ಬದರೀನಾಥ್ ಗಳಿಗೆ ಹೆಬ್ಬಾಗಿಲಾಗಿದೆ.
ಹರಿದ್ವಾರ ನಗರವನ್ನು ಮಯಪುರಿ, ಕಪಿಲ, ಮೋಕ್ಷ ದ್ವಾರ ಮತ್ತು ಗಂಗಾ ದ್ವಾರ ಎಂದೂ ಸಹ ಕರೆಯಲಾಗುತ್ತದೆ ಮತ್ತು ಹಲವಾರು ಪ್ರಾಚೀನ ಹಿಂದೂ ಮಹಾಕಾವ್ಯಗಳಲ್ಲಿ ಈ ಸ್ಥಳದ ಉಲ್ಲೇಖವೂ ಆಗಿದೆ. ಈ ಪವಿತ್ರ ಸ್ಥಳದ ಇತಿಹಾಸವು ಸುಪ್ರಸಿದ್ಧ ರಾಜ ವಿಕ್ರಮಾದಿತ್ಯನ ಕಾಲದ್ದು ಎಂದು ಹೇಳಲಾಗುತ್ತದೆ. ಈ ಗಮ್ಯಸ್ಥಾನ ಪ್ರಪಂಚದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ಆಕರ್ಷಣೆಗಳಲ್ಲಿ ಒಂದು ಎಂದು ಹೆಸರುವಾಸಿಯಾಗಿದೆ. ಇಲ್ಲಿನ ಯಾತ್ರಿ ತಾಣಗಳು ಅತ್ಯಂತ ಪವಿತ್ರ ಎಂದು ನಂಬಲಾಗುವ ಗಂಗಾ ನದಿ ತೀರದಲ್ಲಿ ಸ್ಥಿತವಾಗಿವೆ.
ಬ್ರಹ್ಮ ಕುಂಡ್ ಎಂದೇ ಜನಪ್ರಿಯವಾಗಿ ಕರೆಯಲಾಗುವ ಹರ್ ಕೀ ಪೌರಿ ಇಲ್ಲಿಯ ಪ್ರಮುಖ ಮತ್ತು ಶೃದ್ಧಾಭಕ್ತಿಯ ಸ್ಥಳ, ಈ ಸ್ಥಳವು ಗಂಗಾ ನದಿಯು ಎಲ್ಲಿ ಹುಟ್ಟಿ ಆನಂತರ ಎಲ್ಲಿ ಬಯಲು ಪ್ರದೇಶವನ್ನು ಪ್ರವೇಶಿಸುತ್ತದೇಯೋ ಆ ಪರ್ವತದ ಬಿಂದುವಾಗಿದೆ ಈ ಸ್ಥಳ! ಈ ಘಟ್ಟಗಳಲ್ಲಿರುವ ಹೆಜ್ಜೆಗುರುತುಗಳನ್ನು ಹಿಂದೂ ಭಗವಾನ್ ವಿಷ್ಣುವಿನ ಹೆಜ್ಜೆಗಳು ಎಂದು ನಂಬಲಾಗಿದೆ. ಅನೇಕ ಭಕ್ತರು ’ಮುಂಡನ್’ (ತಲೆಯನ್ನು ಬೋಳಿಸಿಕೊಳ್ಳುವುದು) ಮತ್ತು 'ಅಸ್ಥಿ ವಿಸರ್ಜನ್' (ನದಿಗೆ ಮೃತರ ಚಿತಾಭಸ್ಮವನ್ನು ಹಾಕುವುದು) ಇಂತಹ ಹಲವು ವಿವಿಧ ಆಚರಣೆಗಳನ್ನು ನಿರ್ವಹಿಸಲು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಪ್ರತಿ 12 ವರ್ಷಗಳ ನಂತರ ನಡೆಯುವ 'ಕುಂಭ ಮೇಳ'ವನ್ನು ಇಲ್ಲಿ ಆಯೋಜಿಸಲಾಗುತ್ತದೆ ಮತ್ತು ಪ್ರಪಂಚದ ಎಲ್ಲಾ ಭಾಗಗಳಿಂದ ಭಕ್ತರು ಈ ಭವ್ಯ ಧಾರ್ಮಿಕ ಉತ್ಸವದಲ್ಲಿ ಭಾಗವಹಿಸಲು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ.
ಇಲ್ಲಿನ ಕೆಲವು ಜನಪ್ರಿಯ ಧಾರ್ಮಿಕ ತಾಣಗಳ ಜೊತೆಗೆ ಮಾಯಾ ದೇವಿ, ಮಾನಸ ದೇವಿ ಮತ್ತು ಚಂಡಿ ದೇವಿಯ ದೇವಾಲಯಗಳು ಕೂಡಾ ಸೇರಿವೆ. ಈ ಮೂರು ದೇವಾಲಯಗಳನ್ನು ಭಾರತದ 52 ಶಕ್ತಿ ಪೀಠಗಳಲ್ಲಿ ಪರಿಗಣಿಸಲಾಗಿದೆ. ಶಕ್ತಿ ಪೀಠಗಳು ಹಿಂದೂ ದೇವತೆ ಸತಿ ಹಾಗೂ ಶಕ್ತಿ ದೇವತೆಯ ಪವಿತ್ರ ಪೂಜಾ ಸ್ಥಳಗಳಾಗಿವೆ.
ಪುರಾಣದ ಪ್ರಕಾರ, ದೇವತೆ ಸತಿಯ ಪತಿ ಶಿವನನ್ನು ಆಕೆಯ ತಂದೆ ಅವಮಾನಿಸಿದ ನಂತರ ಆಕೆ ತನ್ನ ಜೀವವನ್ನು ತ್ಯಾಗ ಮಾಡಿದಳು. ಸತಿ ತೀರಿಕೊಂಡ ನಂತರ ಆಘಾತಗೊಂಡ ಶಿವ ಆಕೆಯ ದೇಹವನ್ನು ಕೈಲಾಶ ಪರ್ವತಕ್ಕೆ ಕೊಂಡೊಯ್ಯಲು ನಿರ್ಧರಿಸುತ್ತಾನೆ. ಹೀಗೆ ಮಾಡುವಾಗ, ಆಕೆಯ ದೇಹದ ಭಾಗಗಳು ನಿಡಿ ಬಿಡಿಯಾಗಿ ಹಲವಾರು ಸ್ಥಳಗಳಲ್ಲಿ ಕುಸಿಯಿತು. ಹೀಗೆ ಸತಿ ದೇವಿಯ ಹೃದಯ ಬಿದ್ದ ಸ್ಥಳದಲ್ಲಿ ಮಾಯಾ ದೇವಿ ದೇವಾಲಯ ನಿರ್ಮಿಸಲಾಯಿತು ಎಂದು ನಂಬಲಾಗಿದೆ.
ವೈಷ್ಣೋ ದೇವಿ ದೇವಸ್ಥಾನ, ಭಾರತ ಮಾತಾ ದೇವಾಲಯ ಮತ್ತು ಪಿರನ್ ಕೈಲರ್ ಮುಂತಾದವು ಇಲ್ಲಿರುವ ಇತರ ಧಾರ್ಮಿಕ ತಾಣಗಳಲ್ಲಿ ಕೆಲವು. ಹಲವು ಜನರಿಗೆ ಹರಿದ್ವಾರದಲ್ಲಿ ಹೊಸದಾಗಿ ನಿರ್ಮಿಸಿದ ದೇವಾಲಯ ವೈಷ್ಣೋ ದೇವಿ ದೇವಾಲಯವು, ಜಮ್ಮುವಿನ ಪ್ರಖ್ಯಾತ ವೈಷ್ಣೋ ದೇವಿ ದೇವಸ್ಥಾನದ ಒಂದು ಅನುಕರಣೆಯಾಗಿದೆ ಎಂಬುದು ತಿಳಿದಿಲ್ಲ. ಈ ದೇವಾಲಯದ ಕಡೆಗೆ ಹೋಗುವ ಹಾದಿಯಲ್ಲಿ ಜಮ್ಮುವಿನಲ್ಲಿರುವ ವೈಷ್ಣೋ ದೇವಿ ದೇವಾಲಯ ಮಾರ್ಗವನ್ನು ಹೋಲುವಂತಹ ಸುರಂಗಗಳು ಮತ್ತು ಗುಹೆಗಳು ತುಂಬಿವೆ.
ಭಾರತ್ ಮಾತಾ ದೇವಾಲಯ ಭಾರತ ಮಾತೆಗೆ ಸಮರ್ಪಿತವಾಗಿದೆ ಮತ್ತು ಇದು ಹರಿದ್ವಾರದಲ್ಲಿನ ಹೆಸರಾಂತ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೇವಾಲಯವು ಮಹಾನ್ ಧಾರ್ಮಿಕ ಗುರು, ಸ್ವಾಮಿ ಸತ್ಯಮಿತ್ರಾನಂದ್ ಗಿರಿಯವರಿಂದ ನಿರ್ಮಿಸ್ಪಟ್ಟಿದ್ದು, ಎಂಟು ಮಹಡಿಗಳನ್ನು ಹೊಂದಿದೆ ಮತ್ತು ಒಂದೊಂದು ಮಹಡಿಗಳೂ ವಿವಿಧ ಹಿಂದೂ ದೇವತೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗ ಮೀಸಲಾಗಿದೆ. ಪ್ರತಿಯೊಬ್ಬ ಪ್ರವಾಸಿಗನು, ಇಲ್ಲಿ ಮಹಾತ್ಮ ಗಾಂಧಿ ಸೇರಿದಂತೆ ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್ ಮತ್ತು ಸುಭಾಷ್ ಚಂದ್ರ ಬೋಸ್ ಮೊದಲಾದವರ ವಿಗ್ರಹಗಳನ್ನು ನೋಡಬಹದು. ಈ ದೇವಾಲಯಗಳನ್ನು ಹೊರತುಪಡಿಸಿ ಸಪ್ತ ಋಷಿ ಆಶ್ರಮ, ಶ್ರವಂತಜಿ ದೇವಾಲಯ, ಚಿಲ್ಲಾ ವನ್ಯಮೃಗ ಅಭಯಾರಣ್ಯ, ದಕ್ಷ ಮಹಾದೇವ ದೇವಸ್ಥಾನ ಮತ್ತು ಗೌ ಘಾಟ್ ಮುಂತಾದವು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ.
ಸಪ್ತ ಋಷಿ ಆಶ್ರಮವು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದು ಜನಪ್ರಿಯವಾಗಿದೆ. ಹಿಂದೂ ಪುರಾಣದ ಪ್ರಕಾರ, ಈ ಆಶ್ರಮವನ್ನು ಸಪ್ತರ್ಷಿಗಳು ಅಥವಾ ಏಳು ದೊಡ್ಡ ಋಷಿಗಳಾದ, ಅತ್ರಿ, ಕಷ್ಯಪ, ಜಮದಗ್ನಿ, ಭಾರದ್ವಾಜ, ವಸಿಷ್ಠ, ವಿಶ್ವಾಮಿತ್ರ, ಮತ್ತು ಗೌತಮ ಋಷಿ ಮುನಿಗಳು ಧ್ಯಾನ ಮಾಡುತ್ತಿದ್ದ ಸ್ಥಳದಲ್ಲಿ ಕಟ್ಟಲಾಗಿದೆ.
ಹರಿದ್ವಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಮನವಮಿ, ಬುದ್ಧ ಪೂರ್ಣಿಮಾ, ಕನ್ವರ್ ಮೇಳ ಮತ್ತು ದೀಪಾವಳಿ ಸೇರಿದಂತೆ ವಿವಿಧ ಉತ್ಸವಗಳಲ್ಲಿ ಪ್ರವಾಸಿಗರು ಭಾಗವಹಿಸಬಹುದು. ಪ್ರತಿ ವರ್ಷ, ಕನ್ವರ್ ಮೇಳ ಆಯೋಜಿಸುವ ಸಮಯದಲ್ಲಿ ಹರಿದ್ವಾರಕ್ಕೆ 3 ದಶಲಕ್ಷಕ್ಕೂ ಹೆಚ್ಚು ಜನರು ಗುಂಪುಗುಂಪಾಗಿ ಆಗಮಿಸುತ್ತಾರೆ.
ಒಂದು ಪ್ರಖ್ಯಾತ ಧಾರ್ಮಿಕ ತಾಣಗಳ ಹೊರತಾಗಿ, ಈ ಸ್ಥಳ ಭಾರತದ ಬೃಹತ್ ಕೈಗಾರಿಕೆ ಎಂದು ಕರೆಯಲ್ಪಡುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಇಂಡಿಯಾ ಲಿಮಿಟೆಡ್ (BHEL) ಇರುವಿಕೆಗೆ ಕಾರಣವಾಗಿದೆ. ಇಲ್ಲಿ ಭಾರತದ ಮೊದಲ ತಾಂತ್ರಿಕ ಸಂಸ್ಥೆ, ರೂರ್ಕಿ ಅಥವಾ ಐಐಟಿ ರೂರ್ಕಿ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿದೆ.
ಪ್ರಯಾಣಿಕರು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಹರಿದ್ವಾರವನ್ನು ತಲುಪಬಹುದು. ಈ ಸ್ಥಳಕ್ಕೆ ಹತ್ತಿರದ ದೇಶೀಯ ವಿಮಾನ ಸುಮಾರು 20 ಕಿ. ಮೀ ದೂರದಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ. ಇದು ವಿಮಾನದ ಮೂಲಕ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಹೊಂದಿದೆ. ಸ್ಥಳಕ್ಕೆ ಹತ್ತಿರವಾದ ರೈಲುತುದಿಯಾದ, ಅಲ್ಲದೇ ಭಾರತದ ಪ್ರಮುಖ ಬಹುತೇಕ ಸ್ಥಳಗಳಿಗೆ ಸಂಪರ್ಕವನ್ನು ಹೊಂದಿರುವ ಹರಿದ್ವಾರ ರೈಲ್ವೆ ಸ್ಟೇಷನ್ ಹತ್ತಿರದ ರೈಲು ನಿಲ್ದಾಣವಾಗಿದೆ. ದೇಶದ ವಿವಿಧ ಭಾಗಗಳಿಂದ ಈ ಸ್ಥಳಕ್ಕೆ ಬಸ್ ಮೂಲಕವೂ ಕೂಡಾ ತಲುಪಬಹುದು. ಜೊತೆಗೆ, ಹರಿದ್ವಾರಕ್ಕೆ ದೆಹಲಿಯಿಂದ ಆಗಾಗ್ಗೆ ಹಲವಾರು ಡೀಲಕ್ಸ್ ಬಸ್ ಗಳೂ ಕೂಡಾ ಲಭ್ಯವಿದೆ.
ಇಲ್ಲಿ ಬೇಸಿಗೆ, ಬಿಸಿಲಿನ ವಾತಾವರಣ ನಿರ್ಮಿಸುತ್ತವೆ, ಚಳಿಗಾಲ ಬಹಳ ತಂಪು ಹಾಗೂ ಮಾನ್ಸೂನ್ ಹರಿದ್ವಾರದಲ್ಲಿ ಆರ್ದ್ರತೆಯಿಂದ ಕೂಡಿರುತ್ತದೆ. ಮಳೆಗಾಲದ ಸಮಯದಲ್ಲಿ ಹವಾಮಾನವು ಅಹಿತಕರವಾಗಿರುತ್ತವೆ. ಆದ್ದರಿಂದ ಈ ಸ್ಥಳಕ್ಕೆ ಭೇಟಿ ನೀಡಲು ಮಳೆಗಾಲ ಉತ್ತಮ ಸಮಯ ಅಲ್ಲ. ಹರಿದ್ವಾರಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಸೆಪ್ಟೆಂಬರ್ ಮತ್ತು ಜೂನ್ ತಿಂಗಳುಗಳ ನಡುವಿನ ಅವಧಿ. ಈ ಸಮಯದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ.