ಗುವಾಹಾಟಿಯು ಅಸ್ಸಾ೦ನ ಒ೦ದು ಅತೀ ದೊಡ್ಡ ನಗರವಾಗಿದ್ದು, ಇದು ದೇಶದ ಈಶಾನ್ಯ ಭಾಗದಲ್ಲಿದೆ. ಬ್ರಹ್ಮಪುತ್ರ ನದಿ ದ೦ಡೆಯ ಮೇಲಿರುವ ಗುವಾಹಾಟಿಯು, ಬರೀ ಅಸ್ಸಾ೦ ರಾಜ್ಯ ಮಾತ್ರವಲ್ಲದೇ, ಪ್ರಾದೇಶಿಕ ನೆಲೆಯಲ್ಲಿಯೂ ಸಹ ವೈವಿಧ್ಯತೆಯ ನೈಜ ಪ್ರತಿಬಿ೦ಬವಾಗಿದ್ದು, ಮ೦ತ್ರಮುಗ್ಧಗೊಳಿಸುವ ನಗರವಾಗಿದೆ. ಗುವಾಹಾಟಿಯು ಸಾಂಸ್ಕೃತಿಕ, ವಾಣಿಜ್ಯ, ಮತ್ತು ಧಾರ್ಮಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದು, ವರ್ಣರಂಜಿತವಾಗಿದೆ. ಬೇರೆ ಬೇರೆ ಕುಲ, ಧರ್ಮ, ಮತ್ತು ಪ್ರದೇಶಗಳಿಗೆ ಸೇರಿದ ಜನರು ಗುವಾಹಟಿಯಲ್ಲಿ ದಶಕಗಳಿಂದ ವಾಸಿಸುತ್ತಿದ್ದು, ಈ ಸ್ಥಳವನ್ನು ಮತ್ತಷ್ಟು ದೇದೀಪ್ಯಮಾನ ಮತ್ತು ವರ್ಣರಂಜಿತವನ್ನಾಗಿಸಿದ್ದಾರೆ.
ಐತಿಹಾಸಿಕವಾಗಿ ಸಮೃದ್ಧವಾಗಿರುವ ಗುವಾಹಾಟಿ
ಗುವಾಹಾಟಿಯು ಐತಿಹಾಸಿಕವಾಗಿ ಪ್ರಜ್ಯೋತಿಶ್ಪುರ್ ಎಂದು ಕರೆಯಲ್ಪಡುತ್ತಿದ್ದು, ಇದರ ಭಾವಾರ್ಥವು 'ಪೂರ್ವದ ಬೆಳಕು' ಎಂದಾಗಿದೆ. ಈ ನಗರವು ಇತಿಹಾಸ ಕಾಲಕ್ಕೆ ಸೇರಿದುದಾಗಿದೆ. ಈ ಪ್ರಜ್ಯೋತಿಶ್ಪುರ್, ರಕ್ಕಸನಾದ ನರಕಾಸುರನ ರಾಜಧಾನಿಯಾಗಿತ್ತೆಂದು ಮಹಾಭಾರತದಲ್ಲಿ ಉಲ್ಲೇಖಿತವಾಗಿದೆ. ಮೊಗಲರು ಅಸ್ಸಾಂ ಅನ್ನು ಅತಿಕ್ರಮಿಸಲು ಅನೇಕ ಬಾರಿ ಪ್ರಯತ್ನಿಸಿದ್ದರು ಹಾಗೂ ಪ್ರತೀ ಬಾರಿ ಹೀಗೆ ಮಾಡುವಾಗಲೂ ಸಹ, ಗುವಾಹಾಟಿಯನ್ನು ಪ್ರವೇಶಿಸುವಾಗ ಪರಾಜಿತರಾಗುತ್ತಿದ್ದರು.
ಗುವಾಹಾಟಿ ಪ್ರವಾಸವನ್ನು ನೆನಪಿಸುವಂತೆ ಮಾಡುವ ಗುವಾಹಾಟಿಯ ಪ್ರವಾಸೀ ತಾಣಗಳು
ಸೂಕ್ಷ್ಮಸಂವೇದಿಯಾದ ಪ್ರವಾಸಿಗರಿಗೆ, ಗುವಾಹಾಟಿ ಪ್ರವಾಸೋದ್ಯಮವು ವಿಪುಲವಾದ ಪ್ರವಾಸೀ ತಾಣಗಳನ್ನು ಒದಗಿಸುತ್ತದೆ. ಕಾಮಾಕ್ಯ ದೇವಳದ ಸಂದರ್ಶನವನ್ನು ಮಾಡದೇ ಇದ್ದಲ್ಲಿ, ಗುವಾಹಾಟಿಯ ನಿಮ್ಮ ಪ್ರವಾಸವು ಖಂಡಿತವಾಗಿಯೂ ಕೂಡ ಪರಿಪೂರ್ಣವಾಗುವುದಿಲ್ಲ. ಪ್ರವಾಸಿಗರು ಅತೀ ಉದ್ದವಾದ, ಸರಿಯಾಘತ್ (Sariaghat) ಸೇತುವೆಯ ರಮ್ಯ ನೋಟವನ್ನು, ಬ್ರಹ್ಮಪುತ್ರ ನದಿಯ ದಡದ ಮೇಲೆ ನಿಂತು ಸೆರೆಹಿಡಿಯಬಹುದು. ಪ್ರವಾಸಿಗರು ಅಸ್ಸಾಂ ರಾಜ್ಯ ವಸ್ತುಸಂಗ್ರಹಾಲಯ, ಗುವಾಹಾಟಿ ತಾರಾಲಯ, ಮತ್ತು ನಗರದಲ್ಲಿರುವ, ಕಲಶಪ್ರಾಯವಾದ ಅನೇಕ ಪ್ರಸಿದ್ಧ ದೇವಸ್ಥಾನಗಳನ್ನು ಖಂಡಿತವಾಗಿಯೂ ಸಂದರ್ಶಿಸಲೇಬೇಕು.
ಗುವಾಹಾಟಿ ಪ್ರವಾಸೋದ್ಯಮ - ಶ್ರೀಮಂತ ನಗರದತ್ತ ಒಂದು ಇಣುಕು ನೋಟ
ಗುವಾಹಾಟಿ ನಗರವು ಈಶಾನ್ಯ ಭಾರತದ ಕೇಂದ್ರ ಬಿಂದುವಾಗಿರುವುದರಿಂದ, ಇದು ವಾಣಿಜ್ಯ ದೃಷ್ಟಿಯಿಂದಲೂ ಕೂಡ ಮೈನವಿರೇಳಿಸುವ ನಗರವಾಗಿದೆ. ಅತಿ ದೊಡ್ಡ ರೈಲ್ವೆ ನಿಲ್ದಾಣದಿಂದ ಆರಂಭಿಸಿ, ಏಕಮಾತ್ರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿರುವುದರೊಂದಿಗೆ, ಗುವಾಹಾಟಿಯು ಎಲ್ಲವನ್ನೂ ಒಳಗೊಂಡಿದೆ. ಗುವಾಹಾಟಿಯು ತನ್ನ ಸಮೀಪದಲ್ಲಿರುವ ಮೇಘಾಲಯದಂತಹ ರಾಜ್ಯವನ್ನು ಸಂಪರ್ಕಿಸುವ ನಗರವೂ ಹೌದು.
ತನ್ನದೇ ಅದ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಹೊಂದಿರುವ ಗುವಾಹಾಟಿಯು, ಶೈಕ್ಷಣಿಕವಾಗಿಯೂ ಸಹ ಭಾರತೀಯ ಶೈಕ್ಷಣಿಕ ನಕ್ಷೆಯಲ್ಲಿ ಸ್ಥಾನಮಾನವನ್ನು ಪಡೆದಿದೆ. ಇತ್ತೀಚೆಗೆ, ನಗರದಲ್ಲಿ ಟಾಟಾದವರು ಸಾಮಾಜಿಕ ವಿಜ್ಞಾನಗಳ ಸಂಸ್ಥೆಯ ಈಶಾನ್ಯ ಶಾಖೆಯೊಂದನ್ನು ತೆರೆದಿದ್ದಾರೆ. ಅಂತರಾಷ್ಟ್ರೀಯ ಶಾಲೆಗಳು ಮತ್ತು ಹೆಸರಾಂತ ಮಹಾ ವಿದ್ಯಾಲಯಗಳು, ರಾಜ್ಯದ ಶೈಕ್ಷಣಿಕ ಸ್ಥಿತಿಗತಿಯನ್ನು ಮತ್ತಷ್ಟು ಸಮೃದ್ಧಗೊಳಿಸಿದೆ. ಸಾಂಸ್ಕೃತಿಕವಾಗಿಯೂ ಕೂಡ, ನಗರವು ಅನವರತಾ ಹೆಮ್ಮೆಯಿಂದಲೇ ತನ್ನ ಹೆಸರು ಬೆಳಗುವಂತೆ ಮಾಡಿದೆ. ಶ್ರೀಮಂತ ಶಂಕರದೇವ ಕಲಾಕ್ಷೇತ್ರವು ನಗರದ ಸಾಂಸ್ಕೃತಿಕ ಕೇಂದ್ರವಾಗಿದ್ದು, ಇದು ಬಿಹು ಮತ್ತು ಇತರೆ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತದೆ.
ಗುವಾಹಾಟಿಯನ್ನು ತಲುಪುವುದು ಹೇಗೆ?
ಗುವಾಹಾಟಿಯು ದೇಶದ ಇತರ ಭಾಗಗಳೊಂದಿಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. ಭಾರತದ ಈಶಾನ್ಯ ಭಾಗದ ಅತೀ ದೊಡ್ಡ ರೈಲ್ವೆ ನಿಲ್ದಾಣವನ್ನು ಇದು ಹೊಂದಿದ್ದು, ಲೋಕಪ್ರಿಯ ಗೋಪಿನಾಥ್ ಬೋರ್ಡೊಲೋ (Lokpriya Gopinath Bordoloi) ಅಂತರರಾಷ್ಟ್ರೀಯ ವಿಮಾನನಿಲ್ದಾಣವು ಪ್ರಮುಖ ವಿಮಾನ ನಿಲ್ದಾಣವಾಗಿದೆ. ಹೆದ್ದಾರಿಗಳ ಮೂಲಕವೂ ಸಹ ಗುವಾಹಾಟಿಯು ದೇಶದ ಇತರೆ ಭಾಗಗಳೊಂದಿಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ.
ಗುವಾಹಾಟಿಯ ಹವಾಮಾನ
ಗುವಾಹಾಟಿಯು ವರ್ಷವಿಡೀ ಹಿತಮಿತವಾದ ಹವಾಮಾನವನ್ನು ಅನುಭವಿಸುತ್ತದೆ ಹಾಗೂ ಸರಾಸರಿ ಉಷ್ಣತೆಯು ಸುಮಾರು 30 ಡಿಗ್ರಿ ಸೆಲ್ಷಿಯಸ್ ನಿಂದ 19 ಡಿಗ್ರಿ ಸೆಲ್ಷಿಯಸ್ ನವರೆಗೆ ವ್ಯತ್ಯಯಗೊಳ್ಳುತ್ತದೆ. ನಗರವು 3 ಪ್ರತ್ಯೇಕ ಕಾಲಾವಧಿಯನ್ನು ಹೊಂದಿದೆ - ಬೇಸಿಗೆ, ಮಳೆಗಾಲ, ಚಳಿಗಾಲ.