ಭಾರತದಲ್ಲಿ ಧರ್ಮ ಹಾಗೂ ನಂಬಿಕೆಗಳಿಗೆ ಕೊರತೆಯಿಲ್ಲ. ಅದಕ್ಕೆ ತಕ್ಕಂತೆ ದೆವಾಲಯಗಳು, ಚರ್ಚ್, ಮಸೀದಿಗಳೂ ಸಾಕಷ್ಟಿವೆ. ಇಲ್ಲಿಗೆ ಬರುವ ಭಕ್ತಾದಿಗಳೂ ಅಧಿಕವೆ. ಆದರೆ ಎಲ್ಲಾ ಧರ್ಮಗಳ ಪುಣ್ಯ ಕ್ಷೇತ್ರವನ್ನು ಒಂದೇ ಕಡೆಗೆ ನೋಡಬೇಕೆಂದರೆ ನೀವು ಕೇರಳ ರಾಜ್ಯದ ಗುರುವಾಯೂರಿಗೆ ಬರಲೆ ಬೇಕು. ಅನೇಕ ವೈಚಿತ್ರ್ಯಗಳನ್ನು ಹೊತ್ತು ನಿಂತ ದೇವಾಲಯಗಳೇ ಇಲ್ಲಿನ ಪ್ರಮುಖ ಆಕರ್ಷಣೆ. ಈ ಪವಿತ್ರ ಗುರುವಾಯುರು ಪಟ್ಟಣದ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ತ್ರಿಸ್ಸೂರ್ ಜಿಲ್ಲೆಯಲ್ಲಿರುವ ಕಳೆ ತುಂಬಿದ ಪಟ್ಟಣ ಗುರುವಾಯೂರ್. ಗುರುವಾಯೂರು ಸ್ಥಳವು ಭಗವಂತನಾದ ಶ್ರೀ ಕೃಷ್ಣ ಪರಮಾತ್ಮನ ಹಾಗೂ ಭಗವಾನ್ ಶ್ರೀ ಮಹಾ ವಿಷ್ಣುವಿನ ತವರು ಎಂದೇ ಗುರುತಿಸಲ್ಪಟ್ಟಿದೆ, ಕೇರಳದಲ್ಲಿ ಹಲವಾರು ಯಾತ್ರಾಸ್ಥಳಗಳಿದ್ದು ಅವುಗಳಲ್ಲಿ ಗುರುವಾಯೂರು ಕೂಡಾ ಅತ್ಯಂತ ಪ್ರಸಿದ್ಧವಾದ ಯಾತ್ರಾಸ್ಥಳ ಎನಿಸಿದೆ. ಇಲ್ಲಿ ಭಕ್ತಾದಿಗಳ ಮಹಾಪೂರವೇ ಹರಿದುಬರುತ್ತದೆ.
ಗುರುವಾಯೂರು ಎಂಬ ಹೆಸರು ಮೂರು ಶಬ್ದಗಳ ಸಂಯೋಜನೆ ಯಾಗಿದ್ದು ಮೂರು ಅರ್ಥಗಳಿಂದ ಕೂಡಿದೆ. ’ಗುರು’ ಎಂದರೆ ಗುರು ಬೃಹಸ್ಪತಿ, ’ವಾಯು’ ಈ ಪದವು ಗಾಳಿ ದೇವತೆ ಎಂಬ ಅರ್ಥವನ್ನು ಹೊಂದಿದ್ದು ಇನ್ನು ’ಉರ್’ ಎಂದರೆ ಮಲಯಾಳಂ ನಲ್ಲಿ ಭೂಮಿ, ವಸುಂಧರೆ ಎಂಬ ಅರ್ಥವನ್ನು ಕೊಡುತ್ತದೆ. ಈ ಸ್ಥಳವು ಪುರಾಣದ ಹೆಸರನ್ನು ಹೊಂದಿದೆ. ಪುರಾಣ ಕಾಲದ ಕಥೆಗಳಲ್ಲಿ ದೇವಾಲಯದ ಬಗ್ಗೆ ಉಲ್ಲೇಖಿಸಲಾಗಿದೆ. ಇಂದು ಕಥೆಯಂತೆ, ಬೃಹಸ್ಪತಿಯು ಕಲಿಯುಗದ ಆರಂಭದಲ್ಲಿ , ಮೊದಲ ಬಾರಿಗೆ ಭಗವಾನ್ ಕೃಷ್ಣವ ವಿಗ್ರಹವನ್ನು ಇಲ್ಲಿ ನೋಡಿದನಂತೆ. ಗುರು, ಗಾಳಿ ದೇವ ಈ ವಿಗ್ರಹಗಳು ಒಂದೇ ಸ್ಥಳದಲ್ಲಿ ಕಂಡುಬಂದಿದ್ದರಿಂದ ಈ ಸ್ಥಳಕ್ಕೆ ಗುರುವಾಯೂರು ಎಂದು ಕರೆಯಲಾಯಿತು.
ಶ್ರೀ ಕೃಷ್ಣ ಪರನಾತ್ಮನ ಸುಂದರ ವಿಗ್ರಹವು ಗುರುವಾಯೂರಪ್ಪನ್ ದೇವಾಲಯದ ಪ್ರಮುಖ ಆಕರ್ಷಣೆ. ಈ ಮೂರ್ತಿಯಲ್ಲಿ ಕೃಷ್ಣನು ನಾಲ್ಕು ಕರಗಳನ್ನು ಹೊಂದಿದ್ದು, ಶಂಖ, ಸುದರ್ಶನ ಚಕ್ರ, ಕುಮುದಕಿ ಹಾಗೂ ಕಮಲವನ್ನು ತನ್ನ ನಾಲ್ಕು ತೋಳುಗಳಲ್ಲಿ ಹಿಡಿದಿರುವುದನ್ನು ಕಾಣಬಹುದು. ಇಲ್ಲಿಗೆ ಪ್ರತಿ ನಿತ್ಯ ಬರುವ ಭಕ್ತಾದಿಗಳ ಸಂಖ್ಯೆ ಅಪಾರ. ಇದರ ಆಧಾರದ ಮೇಲೆ ಗುರುವಾಯೂರು ದೇವಾಲಯವನ್ನು ಭಾರತದ ನಾಲ್ಕನೆಯ ಅತೀ ದೊಡ್ಡ ದೇವಾಲಯ ಎಂದು ಪರಿಗಣಿಸಲಾಗಿದೆ. ಈ ದೇವಾಲಯವು ’ ಭೂಲೋಕ ವೈಕುಂಟಂ’ ಅಂದರೆ ಭೂಮಿಯ ಮೇಲೆ ಮಹಾ ವಿಷ್ಣುವಿನ ನೆಲೆ ಎಂಬ ಅರ್ಥದಲ್ಲಿ ಕೂಡಾ ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯದ ಒಳಗೆ ಹಿಂದೂಗಳಲ್ಲದ ಬೇರೆ ಧರ್ಮದವರನ್ನು ನಿಷೇಧಿಸಲಾಗಿತ್ತು. ಇತರರು ದೇವಾಲಯದ ಹೊರಗಡೆ ಮಾತ್ರ ನೋಡುವ ಅವಕಾಶ ನೀಡಲಾಗಿತ್ತು.
ಗುರುವಾಯೂರಪ್ಪನ್ ದೇವಾಲಯದ ಕಾಂಪೌಂಡಿನ ಹೊರವಲಯಗಳಲ್ಲಿ ಸಾಕಷ್ಟು ಅಂಗಡಿಗಳನ್ನು ಕಾಣಬಹುದು. ಈ ಅಂಗಡಿಗಳಲ್ಲಿ ಮುಖ್ಯವಾಗಿ ಪೂಜೆಗೆ ಬೇಕಾದ ಸಾಂಪ್ರದಾಯಿಕ ವಸ್ತುಗಳಾದ, ಧೂಪದ್ರವ್ಯಗಳು, ಮಣ್ಣಿನ ದೀಪ, ತೆಂಗಿನ ಕಾಯಿ, ಹಾಗೂ ಹೂವುಗಳನ್ನು ಮಾರಾಟ ಮಾಡಲಾಗುತ್ತದೆ. ಅಲ್ಲದೆ ಈ ಭಾಗದಲ್ಲಿರುವ ಅಂಗಡಿಗಳಲ್ಲಿ ನಾನಾ ವಿಧದ ಗೊಂಬೆಗಳು, ಆಟಿಕೆಗಳು, ಪ್ರಾಚೀನ ವಸ್ತುಗಳನ್ನು, ಎಲೆಕ್ಟ್ರಾನಿಕ್ (ವಿದ್ಯುನ್ಮಾನ) ವಸ್ತುಗಳು, ಚಿತ್ರಗಳು, ಹಾಗೂ ನಾನಾ ಬಗೆಯ ತಿಂಡಿ ತಿನಿಸುಗಳೂ ಇಲ್ಲಿ ಲಭ್ಯ. ಅಲ್ಲದೇ ಇಲ್ಲಿನ ಕೆಲವು ಅಂಗಡಿಗಳಲ್ಲಿ ಕರಕುಶಲ ಕಸೂತಿಗಳಿಂದ ಮಾಡಿದ ಕರ್ಚೀಫ್ ಗಳು, ಕೇರಳದ ಜನಾಂಗೀಯ ಉಡುಪುಗಳು, ಕೇರಳದ ಸಾಂಪ್ರದಾಯಿಕ ಆಭರಣಗಳು ಹಾಗೂ ಭಿತ್ತಿ ಚಿತ್ರಗಳು ದೊರಕುತ್ತವೆ. ನೀವು ಇಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದರೆ ಅವರು ಹೇಳಿದ ಬೆಲೆಯನ್ನೇ ಕೊಡದೆ ಬೆಲೆಯಲ್ಲಿ ಚೌಕಾಸಿ ಮಾಡುವುದನ್ನು ಮರೆಯಬೇಡಿ . ಇಲ್ಲವಾದರೆ ಅವರು ಹೇಳಿದ ಹಣಕ್ಕೆ ವಸ್ತುಗಳನ್ನು ಕೊಂಡು ಮೋಸ ಹೋಗುತ್ತೀರಿ. ನಿಮಗೂ ಸ್ವಲ್ಪ ಚೌಕಾಸಿ ಮಾಡುವ ಚಾಲಾಕಿ ತನ ವಿದ್ದರೆ ಒಳ್ಳೆಯ ಹಾಗೂ ಪ್ರವಾಸದ ನೆನಪಿಗೋಸ್ಕರ ಸಾಕಷ್ಟು ವಸ್ತುಗಳನ್ನು ಇಲ್ಲಿಂದ ಹೊತ್ತು ತರಬಹುದು ಹಾಗೆಯೇ ನಿಮ್ಮ ಮಕ್ಕಳಿಗೂ ಖುಷಿ ಎನಿಸಬಹುದು ಏನಂತೀರಿ?
ಈ ಅಂಗಡಿಗಳು ಮಾತ್ರವಲ್ಲದೇ ಪ್ರಸಿದ್ಧ ಗುರುವಾಯೂರಪ್ಪ ದೇವಾಲಯವಾದ ಪೂರ್ವದ ಗೇಟ್ ಕಡೆಗೆ ಹೋಗುವಾಗ ಪ್ರವಾಸಿಗರಿಗೆಂದೇ ನಿರ್ಮಿಸಲಾದ ಹೋಟೆಲ್ ಗಳು, ವಸತಿಗಳನ್ನು ಕಾಣಬಹುದು. ಈ ದೇವಾಲಯದಿಂದ ಅಂಗಂಡಿಗಳ ಮಾರ್ಗವಾಗಿ ದಿನದ ಯಾವುದೇ ಸಮಯದಲ್ಲಿ ಅಥವಾ ತಡರಾತ್ರಿ ಈ ಹೋಟೆಲ ಅಥವಾ ವಸತಿ ಗೃಹಗಳಿಗೆ ಹೋಗಬಹುದು. ಅಲ್ಲದೇ ಅಂಗಡಿಗಳೂ ಕೂಡಾ ತೆರೆದಿರುತ್ತವೆ !
ಗುರುವಾಯೂರ್ ಪಟ್ಟಣವು ಇಲ್ಲಿಗೆ ಬರುವ ಅತಿಥಿಗಳಿಗಾಗಿ ಗುರುವಾಯೂರಪ್ಪ ದೇವಸ್ಥಾನ ಮಾತ್ರವಲ್ಲದೇ ಇನ್ನೂ ಹಲವಾರು ವಿಷಯಗಳನ್ನು ಒದಗಿಸುತ್ತದೆ. ಐ.ಎಸ್.ಕೆ.ಓ.ಎನ್ / ಇಸ್ನಾನ್ ISKON ಸೆಂಟರ್/ ಕೇಂದ್ರ, ಮಮ್ಮಿಯೂರ್ (Mammiyur) ಮಹಾದೇವ ದೇವಾಲಯಗಳು ಪ್ರವಾಸಿಗರು ಹಣ ಕೊಟ್ಟು ಬಂದಿದ್ದಕ್ಕೂ ಸಾರ್ಥಕತೆಯನ್ನು ಕೊಡುವಂತಹ ಸ್ಥಳಗಳು. ಅಲ್ಲದೇ ಈ ಪಟ್ಟಣದಲ್ಲಿರುವ ಇತರ ಪ್ರಮುಖ ದೇವಾಲಯಗಳೆಂದರೆ, ಪಾರ್ಥ ಸಾರಥಿ ದೇವಾಲಯ, ಚಾಮುಂಡೇಶ್ವರೀ ದೇವಾಲಯ, ಚೌಲೂರು ಶಿವ ದೇವಸ್ಥಾನ, ಹರಿಕನ್ಯಕ ದೇವಾಲಯ ಹಾಗೂ ವೆಂಕಟ ಚಲಪತಿ ದೇವಾಲಯ ಮೊದಲಾದವುಗಳು. ಈ ದೇವಾಲಯಗಳ ನಡುವೆ ಪಲಯೂರ್ ಚರ್ಚ್ ನ್ನು ಕೂಡಾ ಕಾಣಬಹುದು. ಗುರುವಾಯೂರಿನಲ್ಲಿರುವ ಈ ಚರ್ಚ್ ಪ್ರವಾಸಿಗರನ್ನು ಅತೀ ಹೆಚ್ಚು ಆಕರ್ಷಿಸುವ ಸ್ಥಳವಾಗಿದೆ. ಈ ಚರ್ಚ್ ನಲ್ಲಿರುವ ಅಪೂರ್ವವಾದ ವಾಸ್ತು ಶಿಲ್ಪ ಕೆತ್ತನೆಗಳು ಜನರ ಮನಸ್ಸನ್ನು ಸೂರೆಗೊಳ್ಳುತ್ತವೆ.ಗುರುವಾಯೂರು ಪಟ್ಟಣದಲ್ಲಿ ಪಣ್ಣತ್ತುರ್ ಕೊಟ್ಟಾ (Punnathur Kotta) ಆನೆಯ ಕ್ಯಾಂಪ್ ಕೂಡಾ ಇದೆ. ಇದು ಗುರುವಾಯೂರಿವ ಇನ್ನೊಂದು ಪ್ರಮುಖ ಆಕರ್ಷಣೆ. ಅಲ್ಲದೇ ನೀವು ಪ್ರವಾಸಕ್ಕಾಗಿ ಇಲ್ಲಿಗೆ ಬಂದಾಗ ಚೊವ್ವಲೂರ್ (Chowallur) ಬೀಚ್ ನ ದಂಡೆಯ ಮೇಲೆ ಅಲ್ಲಿನ ತಂಪಾದ ಗಾಳಿಯನ್ನು ಸೇವಿಸುತ್ತ ಅಲ್ಲಿನ ಮನಮೋಹಕ ನೈಸರ್ಗಿಕ ಪರಿಸರದ ಆನಂದವನ್ನು ಪಡೆಯಬಹುದು. ಗುರುವಾಯೂರಿನಲ್ಲಿ ನೀವು ನಿಮ್ಮ ರಜೆಯನ್ನು ಕಳೆಯಲು ಹೋದರೆ ನೋಡಲೇ ಬೇಕಾದ ಇನ್ನೊಂದು ಸ್ಥಳವೆಂದರೆ ಅದೇ, ದೇವಾಸ್ವಮ್ ವಸ್ತು ಸಂಗ್ರಹಾಲಯ. ಮ್ಯೂರಲ್ (ಭಿತ್ತಿ ಚಿತ್ರ) ಚಿತ್ರಕಲಾ ಸಂಸ್ಥೆ, ಇದು ಚಿತ್ರ ಕಲೆಗೆ ಸಂಬಂಧಿಸಿದ ಕೋರ್ಸ್ (ತರಗತಿ) ಗಳಾದ ಸೌಂದರ್ಯ ಶಾಸ್ತ್ರ, ಶಿಲ್ಪ ಹಾಗೂ ಕಲೆ ಮೊದಲಾದವುಗಳಲ್ಲಿ ಆಸಕ್ತರಿಗೆ ತರಬೇತಿಯನ್ನು ನೀಡುವ ಸಂಸ್ಥೆಯಾಗಿದೆ. ಈ ಸಂಸ್ಥೆಯೂ ಕೂಡಾ ಗುರುವಾಯೂರಿನಲ್ಲೇ ಇದ್ದು ನೋಡಲೇ ಬೇಕಾದ ಸ್ಥಳ.
ಗುರುವಾಯೂರು ಪಟ್ಟಣದಲ್ಲಿ ಅತ್ಯಂತ ಖುಷಿ ಹಾಗೂ ಉಲ್ಲಾಸದಿಂದ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಹಿಂದೂ ತಿಂಗಳಾದ ಕುಂಬ ಮಾಸದಲ್ಲಿ ಉತ್ಸವಂ’ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಸುವ ಹಬ್ಬವಾಗಿದೆ. ’ವಿಶು’ ಕೇರಳಿಗರಿಗೆ ಹೊಸ ವರ್ಷದ ಮೊದಲ ದಿನ. ಹೊಸ ವರ್ಷವನ್ನು ಸ್ವಾಗತಿಸುವುದು ಶುಭಾಷಯ ಹೇಳುವುದು ಮಂಗಳಕರ ಎಂದು ಗುರುವಾಯೂರಿನ ಜನರ ನಂಬಿಕೆಯಾಗಿದೆ. ಎಪ್ರೀಲ್ ತಿಂಗಳ ಮಧ್ಯಭಾಗದಲ್ಲಿ ವಿಶುವನ್ನು ಆಚರಿಸಲಾಗುತ್ತಿದ್ದು ಆ ದಿನ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಗುರುವಾಯೂರಿಗೆ ಭೇಟಿ ನೀಡುತ್ತಾರೆ. ’ಅಷ್ಟಮಿ ರೋಹಿಣಿ’ ಇದು ಇನ್ನೊಂದು ಪ್ರಮುಖ ಹಬ್ಬ. ಶ್ರೀ ಕೃಷ್ಣನ ಹುಟ್ಟಿದ ದಿನದ ಅಂಗವಾಗಿ ಸ್ಥಳೀಯ ಹಾಗೂ ಪ್ರವಾಸಿ ಭಕ್ತಾದಿಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ’ಜನ್ಮಾಷ್ಟಮಿ’ ಎಂದೂ ಕರೆಯಲಾಗುತ್ತದೆ. ಗುರುವಾಯೂರಿನಲ್ಲಿ ಕಂಡುಬರುವ ಇನ್ನಿತರ ಕೆಲವು ಹಬ್ಬಗಳೆಂದರೆ, ಮಂಡಲಂ, ಕುಚೇಲನ ದಿನ, ಚೆಂಬಾಯ್ ಸಂಗೀತ ಹಬ್ಬ, ಏಕಾದಶಿ, ವೈಶಾಖ ಹಾಗೂ ನಾರಾಯಣೀಯಂ ದಿನ. ಈ ಎಲ್ಲಾ ಹಬ್ಬಗಳನ್ನು ಅತ್ಯಂತ ಸಾಂಪ್ರದಾಯಿಕ ಶೈಲಿಯಲ್ಲಿ ಆಚರಿಸಲಾಗುತ್ತಿದ್ದು ಇಲ್ಲಿ ಬರುವ ಭಕ್ತಾದಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇರಳದಲ್ಲಿ ಸಾಕಷ್ಟು ಪೌರಾಣಿಕ ಕಥೆಗಳಿರುವಂತೆ ಅದಕ್ಕೆ ತಕ್ಕಂತೆ ಹಲವಾರು ಹಬ್ಬ ಹರಿದಿನಗಳ ಆಚರಣೆಗಳನ್ನೂ ಮಾಡಲಾಗುತ್ತದೆ. ಈ ಹಬ್ಬಗಳ ಅದ್ಧೂರಿಯನ್ನು ನೋಡಲೆಂದೆ ದೇಶದ ಮೂಲೆ ಮೂಲೆಗಳಿಂದ ಜನ ಇಲ್ಲಿಗ ಧಾವಿಸುತ್ತಾರೆ.
ಗುರುವಾಯೂರು ಪ್ರದೇಶದ ಸಾಮಾನ್ಯ ಹವಾಗುಣದ ಬಗ್ಗೆ ಹೇಳುವುದಾದರೆ, ಇಲ್ಲಿ ವರ್ಷ ಪೂರ್ತಿ ಉಷ್ಣ ಹಾಗೂ ಶುಷ್ಕ ಹವಾಗುಣವಿದ್ದರೂ ವರ್ಷದ ಯಾವುದೇ ಸಮಯದಲ್ಲಾದರೂ ಗುರುವಾಯೂರಿಗೆ ಪ್ರವಾಸಕ್ಕಾಗಿ ಆಗಮಿಸಬಹುದು. ಆದರೆ ಇಲ್ಲಿ ನಡೆಯುವ ಹಬ್ಬಗಳ ಆಚರಣೆಗಳನ್ನು ನೋಡಬೇಕು, ಪಾಲ್ಗೋಳ್ಳಬೇಕು ಎಂದಿದ್ದರೆ ನೀವು ನಿಮ್ಮ ,ಪ್ರವಾಸಕ್ಕಾಗಿ ಅಗಸ್ಟ್ ತಿಂಗಳ ಆರಂಭದಿಂದ ನವೆಂಬರ್ ತಿಂಗಳುಗಳಲ್ಲಿ ಇಲ್ಲಿಗೆ ಬರಬಹುದು. ಇಲ್ಲವಾದರೆ ಎಲ್ಲದಕ್ಕೂ ಸೂಕ್ತವಾದ ಚಳಿಗಾಲದಲ್ಲಿ ನಿಮ್ಮ ಪ್ರವಾಸದ ಯೋಜನೆಯನ್ನು ಹಾಕಿಕೊಳ್ಳುವುದು ಉತ್ತಮ. ಏಕೆಂದರೆ ಚಳಿಗಾಲದ ವಾತಾವರಣ ಆಹ್ಲಾದಕರವಾಗಿದ್ದು ಪ್ರಯಾಣಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಾಗಿದೆ.