ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಪುಟ್ಟ ಪಟ್ಟಣ ಗುಹಾಘರ್, ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲಯಲ್ಲಿದೆ. ಸ್ಥಳೀಯ ಭಾಷೆಯ ಪ್ರಕಾರ, ಗುಹಾಘರ್ ಎಂದರೆ ಗುಹೆಯ ಮನೆ. ಒಂದು ಬದಿ ಅರಬ್ಬೀ ಸಮುದ್ರ ಹಾಗೂ ಇನ್ನೊಂದು ಬದಿಯಿಂದ ಸಹ್ಯಾದ್ರಿ ಪರ್ವತದಿಂದ ಆವೃತ್ತವಾಗಿರುವ ಈ ಪಟ್ಟಣ ನೋಡಲು ರಮಣೀಯವಾಗಿದೆ.
ದೇವಾಲಯಗಳ ನಗರ
ಗುಹಾಘರ್ ತನ್ನಲ್ಲಿರುವ ಹೆಚ್ಚಿನ ಸಂಖ್ಯೆಯ ಹಿಂದೂ ದೇಸ್ಥಾನಗಳ ಕಾರಣದಿಂದ 'ದೇವಾಲಯಗಳ ನಗರ' ಎಂದೆ ಹೆಸರುವಾಸಿಯಾಗಿದೆ. ಬಾಲಕೇಶ್ವರ ದೇವಾಲಯ, ಉದಾಲೇಶ್ವರ ದೇವಾಲಯ, ವೈದೇಶ್ವರ ದೇವಾಲಯ, ವೆಲ್ನೇಶ್ವರ ದೇವಾಲಯ ಮತ್ತು ತಾಳಕೇಶ್ವರ ದೇವಾಲಯ ಹೀಗೆ ಶಿವನ ವಿವಿಧ ಅವತಾರಗಳಿಗೆ ಕಟ್ಟಿರುವ ಹಲವಾರು ದೇವಾಲಯಗಳು ಇಲ್ಲಿವೆ.
ಹೆಸರುವಾಸಿಯಾಗಿರುವ ಚಂಡಿಕಾ ಮಂದಿರ ದೇವಾಲಯಗಳ ನಗರದ ಮತ್ತೊಂದು ಪ್ರಮುಖ ದೇವಾಲಯ. ಗುಹಾಘರ್ ಕಡಲ ತಡಿಯಲ್ಲಿರುವ ಉಫ್ರತಾ ಗಣಪತಿ ದೇವಾಲಯವೂ ಬಹಳ ಪ್ರಸಿದ್ಧವಾಗಿದೆ. ಶ್ರೀ ದಶಭುಜ ಲಕ್ಷ್ಮೀ ಗಣೇಶ ದೇವಾಲಯ ಮತ್ತು ಉಮಾ ಮಹೇಶ್ವರ ದೇವಾಲಯಗಳು ಇಲ್ಲಿರುವ ಇನ್ನಿತರ ಪ್ರಸಿದ್ಧ ದೇವಾಲಯಗಳು.
ಪ್ರತಿ ವರ್ಷವೂ ಇಲ್ಲಿ ಶಿವನ ಭಕ್ತರು ಮತ್ತು ಇತರ ದೇವರ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಅದರಲ್ಲೂ ಮಹಾಶಿವರಾತ್ರಿಯ ಸಂದರ್ಭದಲ್ಲಂತೂ ವರ್ಷದ ಅತಿ ಹೆಚ್ಚಿನ ಭಕ್ತ ಸಮೂಹವನ್ನು ಇಲ್ಲಿ ಕಾಣಬಹುದಾಗಿದೆ. ಇದೆ ಅವಧಿಯಲ್ಲಿ ಇಲ್ಲಿ ಉತ್ಸವವನ್ನೂ ಆಯೋಜಿಸಲಾಗುತ್ತದೆ.
ಕಡಲ ತೀರದಿ ಉತ್ಸಾಹ..ಹುಮ್ಮಸ್ಸು..
ಗುಹಾಘರ್ ಕಡಲತಡಿಯಲ್ಲಿ ಕಾಣುವ ರಮಣೀಯ ಸೂರ್ಯಾಸ್ತ, ಇಲ್ಲಿನ ನಯವಾದ ಮರಳಿನ ಕಡಲ ತಡಿ ಹಾಗೂ ಇಲ್ಲಿರುವ ಹಲವಾರು ಸಮುದ್ರ ನೀರಿನ ಆಟಗಳು ದಿನವಿಡಿ ಬೀಚ್ ನಲ್ಲಿ ಕಳೆಯುವವರಿಗೆ ಒಂದು ಸೂಕ್ತವಾದ ತಾಣವಾಗಿದೆ.
ದೇವಾಲಯಗಳ ನಗರ ಎಂದು ಹೆಸರು ಬರಲು ಕಾರಣವಾದ ಇಲ್ಲಿನ ಹಲವಾರು ದೇವಾಲಯಗಳ ಜೊತೆಗೆ ಇಲ್ಲಿರುವ ವಿಶಾಲವಾದ ಕಡಲ ತಡಿಗಳು ಜನರನ್ನು ಆಕರ್ಷಿಸುತ್ತವೆ. ಕೆಲವೊಂದು ಬೀಚ್ ಗಳು 6 ಕಿ.ಮೀ ಗಿಂತಲೂ ಉದ್ದವಾಗಿವೆ. ಇಲ್ಲಿನ ಕಡಲ ತೀರಗಳು, ಮರಗಳು ಅದರಲ್ಲೂ ತೆಂಗು, ಅಡಿಕೆ ಮತ್ತು ಆಲ್ಫಾನ್ಸೋ ಮಾವಿನ ಹಣ್ಣುಗಳ ತೋಪುಗಳೊಂದಿಗೆ ಸುಂದರವಾಗಿವೆ. ಇದು ಕೊಂಕಣ ಸಂಸ್ಕೃತಿಯ ಪಡಿಯಚ್ಚಿನಂತಿದೆ.
ಬುಧಾಲ್ ಇಲ್ಲಿನ ಇನ್ನೊಂದು ಪ್ರಶಾಂತವಾದ ಮತ್ತು ನೆಮ್ಮದಿ ನೀಡುವ ಕಡಲ ಕಿನಾರೆಯಾಗಿದ್ದು ಇಲ್ಲಿರುವ ಬಂಡೆಗಲ್ಲುಗಳು ಪ್ರಶಾಂತವಾದ ಅನುಭವವನ್ನು ನೀಡುತ್ತವೆ. ಇಲ್ಲಿನ ಕಡಲ ಕಿನಾರೆಗಳು ಮಲಿನವಾಗದೇ, ಆಧುನಿಕತೆಗೆ ಒಳಗಾಗದೇ ಇರುವ ಕಾರಣ ನಿಸರ್ಗದ ಮಡಿಲಲ್ಲಿ ಸಹಜ ಸೌಂದರ್ಯವನ್ನು ಸವಿಯುವ ಅವಕಾಶವನ್ನು ನೀಡುತ್ತವೆ.
ಇದರ ಜೊತೆಗೆ ಸದಾ ಹಸಿರಾಗಿರುವ ಬೆಟ್ಟಗಳು ಮತ್ತು ಹಚ್ಚ ಹಸಿರಿನ ತರಕಾರಿ ತೋಟಗಳು ಗುಹಾಘರ್ ಕಡಲ ಕಿನಾರೆಯನ್ನು ನೀವು ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಮೊದಲಿಗೆ ಇಡುತ್ತದೆ.
ಯಾವಾಗ ಮತ್ತು ಹೇಗೆ ಹೋಗಬೇಕು
ಗುಹಾಘರ್ ಸಮಾನ್ಯವಾಗಿ ಕಡಲ ತೀರದ ಹವಾಮಾನವನ್ನು ಹೊಂದಿದೆ ಮತ್ತು ಅರಬ್ಬೀ ಸಮುದ್ರದ ತಟದಲ್ಲಿದೆ. ಸೆಪ್ಟೆಂಬರ್ ನಂತರ ಮೇ ತನಕದ ಅವಧಿ ಇಲ್ಲವೆ ಮಾನ್ಸೂನ್ ನಂತರದ ಚಳಿಗಾಲದ ಅವಧಿ ಗುಹಾಘರ್ ಭೇಟಿಗೆ ಹೇಳಿ ಮಾಡಿಸಿದ ಸಮಯವಾಗಿದೆ. ನಿಸರ್ಗದ ಸೌಂದರ್ಯದ ಜೊತೆಗೆ ಇಲ್ಲಿನ ಹವಾಮಾನ ನಿಮ್ಮ ಭೇಟಿಯನ್ನು ಮತ್ತಷ್ಟು ನೆನಪಿನಲ್ಲಿರಿಸುವಂತೆ ಮಾಡುತ್ತದೆ. ವಾರ್ಷಿಕ ಉಷ್ಣತೆ 39 ಡಿಗ್ರಿ ಸೆಲ್ಶಿಯಸ್ ಗಿಂತ ಹೆಚ್ಚಾಗುವುದಿಲ್ಲ ಮತ್ತು 18 ಡಿಗ್ರಿಗಿಂತ ಕಡಿಮೆಯಾಗುವುದಿಲ್ಲ. ಮೇ ತಿಂಗಳು ಹೆಚ್ಚು ಬಿಸಿಯಾಗಿರುವುದರಿಂದ ಭೇಟಿಗೆ ಆಯ್ಕೆ ಮಾಡದಿರುವುದೇ ಒಳಿತು.
ಗುಹಾಘರ್ ಉಷ್ಣವಲಯದ ಹವಾಮಾನದಲ್ಲಿ ಬೆಳೆಯುವ ತೆಂಗು, ಆಲ್ಫಾನ್ಸೋ ಮಾವಿನ ಹಣ್ಣು, ಗೇರು ಬೀಜ ಮತ್ತು ಹಲಸಿನ ಹಣ್ಣುಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿಗೆ ಭೇಟಿ ನೀಡಿದಾಗ ಬಾಯಲ್ಲಿ ನೀರು ತರಿಸುವ ಕಡಲ ಜೀವಿಗಳ ಆಹಾರವನ್ನು ತಿನ್ನಲು ಮರೆಯದಿರಿ. ನೀವು ಪಕ್ಕಾ ಸಸ್ಯಾಹಾರಿಯಾಗಿದ್ದರೂ ಆಹಾರದ ವಿಷಯದಲ್ಲಿ ಚಿಂತಿಸದಿರಿ. ಅತ್ಯುತ್ತಮ ಮಾಂಸಾಹಾರಿ ಮತ್ತು ಪರಿಶುದ್ಧವಾದ ಸಸ್ಯಾಹಾರಿ ಆಹಾರ ಸಿಗುವ ಅತಿ ಕಡಿಮೆ ತಾಣಗಳಲ್ಲಿ ಇದೂ ಒಂದು.
ಗುಹಾಘರ್ ಅನ್ನು ರಸ್ತೆ ಮಾರ್ಗ, ರೈಲು ಮಾರ್ಗ ಮತ್ತು ವಿಮಾನ ಮಾರ್ಗವಾಗಿ ಸುಲಭವಾಗಿ ತಲುಪಬಹುದಾಗಿದೆ. ಇದೇ ಕಾರಣದಿಂದಾಗಿ ಈ ತಾಣವನ್ನು ತಕ್ಷಣದ ರಜಾ ಕಳೆಯಲು ಹೆಚ್ಚಿನ ಜನರು ಇಷ್ಟ ಪಡುತ್ತಾರೆ. ನೀವು ವಿಮಾನ ಮಾರ್ಗದ ಮೂಲಕ ತಲುಪಲು ಯೋಚಿಸುತ್ತಿದ್ದೀರಿ ಎಂದಾದರೆ ಛತ್ರಪತಿ ಶಿವಾಜಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ಚಿಪ್ಲೂನ್ ರೈಲ್ವೆ ನಿಲ್ದಾಣ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ನೀವು ರಸ್ತೆ ಮಾರ್ಗವಾಗಿ ತಲುಪಲು ನಿರ್ಧರಿಸಿದ್ದಾದರೆ ರಾಜ್ಯ ರಸ್ತೆ ಸಾರಿಗೆ ಅಥವಾ ಖಾಸಗಿ ಬಸ್ಸುಗಳ ಮಧ್ಯದಲ್ಲಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ಯ್ರ ನಿಮ್ಮಲ್ಲಿರುತ್ತದೆ.
ಪುರಾತನ ದೇವಾಲಯಗಳು, ಸುತ್ತಮುತ್ತಲಿನಲ್ಲಿರುವ ಜಲಪಾತಗಳು, ಸುಂದರವಾದ ಕಡಲ ಕಿನಾರೆಗಳು ಮತ್ತು ಹಚ್ಚ ಹಸಿರಿನ ಹೊದಿಕೆಗಳು ಗುಹಾಘರ್ ಭೇಟಿಯನ್ನು ಅತಿ ಸುಂದರವನ್ನಾಗಿಸುತ್ತದೆ ಮತ್ತು ಬದುಕಲ್ಲಿ ನೀವೆಂದೂ ಮರೆಯಲಾಗದ ಭೇಟಿಗಳಲ್ಲಿ ಒಂದಾಗಿಸುವುದು ಖಂಡಿತ.