ನವ ದೆಹಲಿಯಲ್ಲಿರುವ ಪ್ರಸಿದ್ಧ ವೈಷ್ಣವ ದೇವಾಲಯ ಇಸ್ಕಾನ್ ದೇವಾಲಯವಾಗಿದೆ. ಈ ದೇವಾಲಯವನ್ನು ಪೂಜ್ಯನೀಯ ದೇವತೆಗಳಾದ ಶ್ರೀ ಕೃಷ್ಣ ಹಾಗೂ ರಾಧಾ ದೇವತೆಗೆ ಮೀಸಲಾಗಿಡಲಾಗಿದ್ದು ಶ್ರೀ ರಾಧಾ ಪಾರ್ಥಸಾರಥಿ ಮಂದಿರ ಎಂದೇ ಕರೆಯಲಾಗುತ್ತದೆ. ಈ ದೇವಾಲಯವು ದೆಹಲಿಯ ಕೈಲಾಶ್ ಪ್ರದೇಶದ ಪೂರ್ವ ಕಡೆಗೆ ಸುಂದರ ಹಸಿರು ತುಂಬಿದ ಹರೇ ಕೃಷ್ಣ ಎಂಬ ಬೆಟ್ಟದ ಮೇಲಿದೆ. ಈ ದೇವಸ್ಥಾನವನ್ನು 1998 ರಲ್ಲಿ ಸ್ಥಾಪನೆ ಮಾಡಲಾಯಿತು.
ಶ್ರೀ ರಾಧಾ ಪಾರ್ಥಸಾರಥಿ ಮಂದಿರವು ಅಚ್ಯುತ ಕನ್ವಿಂಧೆ ಎನ್ನುವವನಿಂದ ವಿನ್ಯಾಸಗೊಂಡು ನಿರ್ಮಿಸಲ್ಪಟ್ಟಿದೆ. ಈ ವಿಶಿಷ್ಟ ದೇವಾಲಯವು ದೇಶದ ಅತ್ಯಂತ ದೊಡ್ಡ ದೇವಾಲಯ ಸಂಕೀರ್ಣ ಎಂದು ಗುರುತಿಸಲ್ಪಟ್ಟಿದೆ. ದೇವಾಲಯವನ್ನು ನಾಲ್ಕು ಪ್ರಮುಖ ಭಾಗಗಳನ್ನಾಗಿ ಮಾಡಲಾಗಿದ್ದು, ಇಲ್ಲಿನ ಕೆಲವು ಕೋಣೆಗಳು ಆಡಳಿತಾತ್ಮಕ ಉದ್ಧೇಶಗಳಿಗಾಗಿ ಹಾಗೂ ಇನ್ನೂ ಕೆಲವು ಕೋಣೆಗಳು ದೇವಾಲಯದ ಅರ್ಚಕರಿಗಾಗಿ ಹಾಗೂ ಸೇವೆ ಸಲ್ಲಿಸುವುದಕ್ಕಾಗಿ ಬಳಸಲಾಗುತ್ತದೆ.
ಎಲ್ಲಾ ಇಸ್ಕಾನ್ ದೇವಾಲಯಗಳು ಉತ್ತಮ ಗುಣಮಟ್ಟದ ಪೂಜಾ ವಿಧಾನಗಳನ್ನು ಅನುಸರಿಸುತ್ತ ಜೊತೆಗೆ ಕೆಲವು ಆಚರಣೆಗಳನ್ನು ದಿನ ನಿತ್ಯದ ಕಾರ್ಯವನ್ನಾಗಿ ನೆರವೇರಿಸಲಾಗುತ್ತದೆ. ಅವುಗಳಲ್ಲಿ ಕೆಲವು ಆಧ್ಯಾತ್ಮಿಕ ನಿಯಮದ ಪ್ರಕಾರ, ಆರು ವಿವಿಧ ಬಗೆಯ ಆರತಿ, ದೇವತೆಗಳಿಗೆ ಆರು ವಿಧದ ಭೋಗ ಅಥವಾ ಅರ್ಪಣೆಗಳು, ಮತ್ತು ಪುರೋಹಿತರ ಮೂಲಕ ದೇವರಿಗೆ ಕಟ್ಟು ನಿಟ್ಟಾದ ಪೂಜಾ ಸೇವೆ ಸಲ್ಲಿಸುವುದು ಇತ್ಯಾದಿಗಳನ್ನು ಪ್ರತಿದಿನವೂ ನೆರವೇರಿಸಲಾಗುತ್ತದೆ. ಜೊತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ, ಗುರು ಪೂರ್ಣಿಮಾ, ರಾಮ ನವಮಿ, ಗೋವರ್ಧನ ಪೂಜಾ ಮತ್ತು ರಾಧಾಷ್ಟಮಿ ಮೊದಲಾದ ಹಬ್ಬಗಳನ್ನು ಇಲ್ಲಿನ ಎಲ್ಲಾ ಇಸ್ಕಾನ್ ದೇವಾಲಯಗಳಲ್ಲಿಯೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಈ ದೇವಾಲಯಕ್ಕೆ ದೆಹಲಿಯ ಯಾವುದೇ ಭಾಗದಿಂದ ಆಗಮಿಸಬಹುದಾಗಿದ್ದು, ದೇವಾಲಯವು ಮುಂಜಾನೆ 4.30 ರಿಂದ ರಾತ್ರಿ 9.15 ರವರೆಗೆ ತೆರೆದಿರುತ್ತಿದ್ದು ಸಾರ್ವಜನಿಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.