ನೀವು ಪ್ರಕೃತಿ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವವಿರುವಂತಹ ಸ್ಥಳಕ್ಕೆ ಪ್ರವಾಸ ಹೋಗಬೇಕು ಎಂದುಕೊಂಡಿದ್ದಲ್ಲಿ ದಮನ್ ಮತ್ತು ದೀವ್ ಸೂಕ್ತ ಆಯ್ಕೆ. ಭಾರತ ಸ್ವತಂತ್ರವಾಗುವುದಕ್ಕೂ ಮುನ್ನ ಈ ಜಿಲ್ಲೆಗಳು 450 ವರ್ಷಗಳ ಕಾಲ ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು. ಗೋವಾದೊಂದಿಗೆ ಇವು ಕೂಡ ಭಾರತಕ್ಕೆ ಸೇರಿದ್ದು 19ನೇ ಡಿಸೆಂಬರ್ 1961ರಲ್ಲಿ. ಇತಿಹಾಸದ ಪ್ರಕಾರ, ದಮನ್ ಮತ್ತು ದೀವ್ ಹಲವು ಯುದ್ಧಗಳಿಗೆ ಸಾಕ್ಷಿಯಾಗಿದೆ. ಈ ಎರಡೂ ರಾಜ್ಯಗಳಲ್ಲಿ ಇಂಗ್ಲೀಷ್, ಹಿಂದಿ, ಗುಜರಾತಿ, ಪೋರ್ಚುಗೀಸ್ ಮತ್ತು ಮರಾಠಿ ಭಾಷೆಗಳು ಬಳಕೆಯಲ್ಲಿವೆ.
ದಮನ್ ಪ್ರವಾಸೋದ್ಯಮ- ಸಂಕ್ಷಿಪ್ತ ಇತಿಹಾಸ
'ದಮನ್ ಗಂಗಾ' ನದಿ ದಂಡೆಯ ಮೇಲೆ ದಮನ್ ಜಿಲ್ಲೆಯಿದೆ. ಪ್ರಪಂಚದ ಎಲ್ಲ ಭಾಗದ ಪ್ರವಾಸಿಗರನ್ನು ಇಲ್ಲಿನ ಪ್ರಕೃತಿ ಸೌಂದರ್ಯ ಸೆಳೆದಿದೆ. ಇಲ್ಲಿ ವಿಭಿನ್ನ ಸಂಸ್ಕೃತಿಗಳ ವಿಭಿನ್ನ ಜನಾಂಗಗಳ ಜನ ಸೌಹಾರ್ದಯುತವಾಗಿ ಬಾಳ್ವೆ ನಡೆಸುತ್ತಿದ್ದಾರೆ. ದಮನ್ ಜಿಲ್ಲೆಯು ಪೋರ್ಚುಗೀಸ್ ವಾಸ್ತುಶೈಲಿ, ಚರ್ಚುಗಳು ಮತ್ತು ಸಮುದ್ರತೀರಗಳಿಗೆ ಹೆಸರುವಾಸಿಯಾಗಿದೆ. ಇದು ಮೊದಲು ಕಲಾನ ಪಾವ್ರಿ ಅಥವ ಲೋಟಸ್ ಆಫ್ ಮಾರ್ಶಲ್ಯಾಂಡ್ಸ್ ಎಂದು ಹೆಸರು ಪಡೆದಿತ್ತು.
ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ದಮನ್ಗಂಗಾ ನದಿಯು ದಮನ್ ಜಿಲ್ಲೆಯನ್ನು ಎರಡು ಸಣ್ಣ ಪಟ್ಟಣಗಳಾಗಿ ವಿಭಜಿಸುತ್ತದೆ. ಇವುಗಳ ಹೆಸರು ನಾನಿ ದಮನ್ ಮತ್ತು ಮೋತಿ ದಮನ್.
ದಮನ್- ಸಾಂಸ್ಕೃತಿಕ ವೈವಿಧ್ಯತೆ
ದಮನ್ನ ಸಂಸ್ಕೃತಿ ಬುಡಕಟ್ಟು, ನಗರ, ಯುರೋಪಿಯನ್ ಮತ್ತು ಭಾರತೀಯ ಸಂಪ್ರದಾಯಗಳ ಸುಂದರ ಹೆಣಿಗೆ. ಈ ಜಿಲ್ಲೆಯ ನಿವಾಸಿಗಳು ನೃತ್ಯ ಮತ್ತು ಸಂಗೀತಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇಲ್ಲಿನ ಸಮುದ್ರತೀರಗಳಲ್ಲಿ ಸುಂದರ ದೃಶ್ಯಗಳನ್ನು ಸವಿಯುತ್ತಾ ಸೂರ್ಯ ಸ್ನಾನವನ್ನು ಆಸ್ವಾದಿಸಬಹುದು. ಇದಲ್ಲದೆ ದಮನ್ನಲ್ಲಿ ಪ್ರವಾಸಿಗರ ಬಾಯಲ್ಲಿ ನೀರೂರಿಸುವಂತಹ ರುಚಿಕರವಾದ ಸಮುದ್ರದ ಆಹಾರಗಳು ಕೂಡ ಸಿಗುತ್ತವೆ.
ಹವಾಮಾನವರ್ಷಪೂರ್ತಿ ಇಲ್ಲಿ ಆಹ್ಲಾದಕರ ವಾತಾವರಣವಿದ್ದು ಪ್ರವಾಸಿಗರು ವರ್ಷದ 365 ದಿನಗಳಲ್ಲಿ ಯಾವಾಗ ಬೇಕಾದರೂ ಇಲ್ಲಿಗೆ ಬರಬಹುದು. ಇಲ್ಲಿನ ಉಷ್ಣಾಂಶವು ಗರಿಷ್ಟ 39 ಡಿಗ್ರಿ ಮತ್ತು ಕನಿಷ್ಟ 11 ಡಿಗ್ರಿ ಸೆಂಟಿಗ್ರೇಡ್ನಷ್ಟಿರುತ್ತದೆ. ಬೇಸಿಗೆಯ ಕಾಲದಲ್ಲಿ ಕೂಡ ಇಲ್ಲಿ ತಣ್ಣನೆಯ ಗಾಳಿ ಬೀಸುತ್ತಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ ಸೆಪ್ಟಂಬರ್ನಿಂದ ಮೇವರೆಗೆ.
ನೋಡಲೇಬೇಕಾದ ಸ್ಥಳಗಳು
ದಮನ್ನಲ್ಲಿ ನೋಡಬೇಕಾದ ಕೆಲವು ಸ್ಥಳಗಳೆಂದರೆ: ಜಂಪೊರ್ ಸಮುದ್ರತೀರ, ದೇವ್ಕ ಸಮುದ್ರತೀರ, ಬೊಂ ಜೀಸಸ್ನ ಚರ್ಚ್, ವೈಭವ್ ವಾಟರ್ ವರ್ಲ್ಡ್ , ಸೆಂಟ್ ಜೆರೊಮೆ ಕೋಟೆ ಇತ್ಯಾದಿ.
ದೀವ್ ಪ್ರವಾಸೋದ್ಯಮ- ಇತಿಹಾಸದಲ್ಲೊಂದು ಇಣುಕುನೋಟ
ಕುತೂಹಲಕಾರಿ ಇತಿಹಾಸ ಮತ್ತು ಶಾಂತಿಯುತ ವಾತಾವರಣದ ದೀವ್ ಜಿಲ್ಲೆ ಅರಬ್ಬಿ ಸಮುದ್ರದಿಂದ ಸುತ್ತುವರೆದಿದ್ದು ಗುಜರಾತ್ನ ಸೌರಾಷ್ಟ್ರ (ಖಾತೆವಾಡ್)ದ ದಕ್ಷಿಣತುದಿಯಲ್ಲಿದೆ. ದಮನ್ನಂತೆ ದೀವ್ ಕೂಡ 1961ರವರೆಗೆ ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು. ದೀವ್ ಮಧ್ಯಕಾಲೀನ ಮತ್ತು ಇತಿಹಾಸ ಪೂರ್ವ ದಿನಗಳಲ್ಲಿ ಹಲವು ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ದೀವ್ ದ್ವೀಪ ಮತ್ತು ತೀರದ ನಡುವೆ ಒಂದು ನೇರವಾದ ಕಾಲುವೆಯಿದ್ದು ಇದು ಇವೆರಡರ ನಡುವೆ ವಿಭಜನೆಯನ್ನು ಮಾಡಿದೆ. ಈ ಜಿಲ್ಲೆಯು ಭಾರತದ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ 9 ಜಿಲ್ಲೆಗಳಲ್ಲಿ ಒಂದು.
ಹವಾಮಾನ
ಇಲ್ಲಿ ಗಾಳಿ ಹೆಚ್ಚಾಗಿ ಬೀಸುತ್ತಿರುತ್ತದೆ. ಇದು ಪ್ರವಾಸಿಗರಿಗೆ ವಿಶ್ರಮಿಸಲು ಸೂಕ್ತವಾದ ಸ್ಥಳ. ವರ್ಷ ಪೂರ್ತಿ ಇಲ್ಲಿ ಇದೇ ಬಗೆಯ ಆಹ್ಲಾದಕರ ವಾತಾವರಣವಿರುವುದರಿಂದ ಪ್ರವಾಸಿಗರು ಯಾವಾಗ ಬೇಕಾದರೂ ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿನ ಸಮುದ್ರ ತೀರಗಳು ಪ್ರವಾಸಿಗರಿಗೆ ಅವಿಸ್ಮರಣೀಯ ಅನುಭವವನ್ನು ಕಟ್ಟಿಕೊಡುತ್ತದೆ.
ದೀವ್- ಸಾಂಸ್ಕೃತಿಕ ವೈವಿಧ್ಯತೆ
ಇಲ್ಲಿ ಖಾತೈವಾಡಿ ಅಥವ ಸೌರಾಷ್ಟ್ರ ಸಂಪ್ರದಾಯ ಮತ್ತು ಪೋರ್ಚುಗೀಸ್ ಸಂಸ್ಕೃತಿಯ ಸೊಗಡನ್ನು ಕಾಣಬಹುದು. ಇಲ್ಲಿನ ವಾಸ್ತುಶೈಲಿಯ ಮೇಲೆ ಪೋರ್ಚುಗೀಸರ ಪ್ರಭಾವವನ್ನು ಕಾಣಬಹುದು. ಇಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಕಾಣಬಹುದು. ದೀವ್ಗೆ ಮುಖ್ಯ ನಗರಗಳಾದ ಅಹಮದಬಾದ್, ರಾಜ್ಕೋಟ್, ಭವನ್ನಗರ್ ಮತ್ತು ವಡೋದ್ರಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವಿದೆ. ಆದ್ದರಿಂದ ಇಲ್ಲಿಗೆ ಬರುವುದು ಸುಲಭ.ಪ್ರವಾಸಿಗರು ಇಲ್ಲಿ ತಪ್ಪದೆ ನೋಡಬೇಕಾದ ತಾಣಗಳೆಂದರೆ: ನಗೋವ ಸಮುದ್ರತೀರ, ಘೋಗ್ಲಾ ಸಮುದ್ರತೀರ, ಜಲಂದರ್ ಸಮುದ್ರತೀರ, ಗಂಗೇಶ್ವರ ದೇವಾಲಯ, ಸೆಂಟ್ ಪೌಲ್ ಚರ್ಚ್, ಕಪ್ಪೆಚಿಪ್ಪಿನ ವಸ್ತುಸಂಗ್ರಹಾಲಯ, ದೀವ್ ಕೋಟೆ ಇತ್ಯಾದಿ.ಕಣ್ಣಿಗೆ ಮುದನೀಡುವ ವಾಸ್ತುಶೈಲಿ, ಶುಭ್ರ ವಾತಾವರಣ, ಸಮುದ್ರತೀರಗಳು ಮತ್ತು ಹಸಿರು ಪ್ರಕೃತಿಗಳಿಂದಾಗಿ ದಮನ್ ಮತ್ತು ದೀವ್ ಪ್ರವಾಸಪ್ರಿಯರಿಗೆ ಸೂಕ್ತ ಪ್ರವಾಸ ಸ್ಥಳವಾಗಿದೆ.