ಕರ್ನಾಟಕದಲ್ಲಿ ಕೂರ್ಗ್ ಅಥವಾ ಕೊಡಗು ಒಂದು ಜನಪ್ರಿಯ ಪ್ರವಾಸಿ ತಾಣ. ಕರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಇದು ಸಮುದ್ರ ಮಟ್ಟದಿಂದ ಸುಮಾರು ೯೦೦ ಮೀಟರಿನಿಂದ ೧೭೧೫ ಮೀಟರು ಎತ್ತರಕ್ಕಿದೆ.
ಕೊಡಗನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ ಹಾಗೂ ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ಮಂಜಿನ ಗುಡ್ಡಗಳು, ವಕ್ರವಕ್ರವಾಗಿರುವ ಕಾಫಿ ತೋಟಗಳು, ಟೀ ಎಸ್ಟೇಟ್ಗಳು, ಕಿತ್ತಳೆ ತೋಟಗಳು, ಅತ್ಯುತ್ತಮ ಇಳುವರಿ ಮತ್ತು ವೇಗವಾಗಿ ಹರಿಯುವ ಪ್ರವಾಹಗಳಿಂದಾಗಿ ತುಂಬಾ ಜನಪ್ರಿಯವಾಗಿದೆ. ದಕ್ಣಿಣ ಭಾರತದಲ್ಲೇ ಇದು ತುಂಬಾ ಜನಪ್ರಿಯ ವಾರದ ರಜಾ ಕಳೆಯುವ ತಾಣ ಕೂಡ ಹೌದು. ವಿಶೇಷವಾಗಿ ಕರ್ನಾಟಕದ ನೆರೆಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಹಾಸನ ಮತ್ತು ಮೈಸೂರಿನವರಿಗೆ ಮತ್ತು ಕೇರಳದ ಕಣ್ಣೂರು, ವಯನಾಡು ಜಿಲ್ಲೆಗಳ ಜನರಿಗೆ ಇದು ತುಂಬಾ ಅಚ್ಚುಮೆಚ್ಚಿನ ತಾಣ.
ಕೊಡಗು, ಒಂದು ಅತ್ಯುತ್ತಮವಾದ ಹಳೆಯ ನಗರದ ಮೆರುಗನ್ನು ಹೊಂದಿದೆ. ಕೊಡಗಿಗೆ ಹೋಗುವ ಪ್ರವಾಸಿಗರು ಪ್ರಶಾಂತವಾದ ಮತ್ತು ರಿಲ್ಯಾಕ್ಸ್ ಆದ ಅನುಭವವನ್ನು ನೀಡುತ್ತದೆ ಮತ್ತು ಸುತ್ತಮುತ್ತಲಿನ ಪರಿಸರದಿಂದಾಗಿ ನಿಧಾನವಾದ ಜೀವನ ಸಾಗುವಿಕೆಯನ್ನು ಅನುಭವಕ್ಕೆ ತರುತ್ತದೆ. ಪಶ್ಚಿಮ ಘಟ್ಟಗಳ ಪಶ್ಚಿಮ ಮತ್ತು ಪೂರ್ವ ಭಾಗದ ಗುಡ್ಡಗಳ ಇಳಿಜಾರುಗಳ ಅದ್ಭುತ ರಮ್ಯ ನೋಟವು ನಮಗೆ ಇಲ್ಲಿ ಸಿಗುತ್ತದೆ.
ಕೊಡಗು ಹೆಸರು ಮತ್ತು ಇತಿಹಾಸದತ್ತ ಒಂದು ನೋಟ
"ಕೊಡಗು" ಎಂಬ ಹೆಸರಿನ ಮೂಲದ ಬಗ್ಗೆ ಹಲವು ಸಿದ್ಧಾಂತಗಳಿವೆ. ಕೆಲವರು ಹೇಳುತ್ತಾರೆ, ಕೊಡಗು ಎಂಬುದು ಕ್ರೊಡದೇಶ – ಕೊಡವರ ನಾಡು ಎಂಬಲ್ಲಿಂದ ಉದ್ಭವವಾಯಿತು ಎಂದು. ಇನ್ನೂ ಕೆಲವರು ಹೇಳುತ್ತಾರೆ ಕೊಡಗು ಮೂಲ ಶಬ್ದವು ಕೊಡವ ಎಂಬ ಶಬ್ದದಿಂದ ಬಂತು ಎಂದು. ಕೊಡವ ಎಂದರೆ ಕೊಡ (ಕೊಡು) ಮತ್ತು ಅವ್ವ(ತಾಯಿ) ಅಂದರೆ ತಾಯಿ ಕಾವೇರಿ ಎಂಬುದರಿಂದ ಉದ್ಭವವಾಯಿತು ಎಂದು ಹೇಳಲಾಗುತ್ತದೆ. ನಂತರದಲ್ಲಿ ಕೊಡಗು ಎಂಬುದು ಆಂಗ್ಲಭಾಷೆಯಲ್ಲಿ ಕೂರ್ಗ್ ಎಂದಾಯಿತು.
ಕೊಡಗಿನ ಇತಿಹಾಸ ದಾಖಲೆಗಳು ನಮ್ಮನ್ನು 8ನೇ ಶತಮಾನಕ್ಕೂ ಹಿಂದೆ ಕರೆದುಕೊಂಡುಹೋಗುತ್ತವೆ. ಆಗ ಇದು ಗಂಗರ ಆಡಳಿತಕ್ಕೆ ಒಳಪಟ್ಟಿತ್ತು. ಕೊಡಗು ನಂತರದಲ್ಲಿ ಪಾಂಡ್ಯರು, ಚೋಳತು, ಕದಂಬರು, ಚಾಲುಕ್ಯರು ಮತ್ತು ಚಂಗಾಳ್ವರಂತಹ ಹಲವು ಆಡಳಿತಗಾರರ ಕೈಯಿಂದ ಹಸ್ತಾಂತರಗೊಳ್ಳುತ್ತಲೇ ಹೋಯಿತು, ಹೊಯ್ಸಳರು ಕೊಡಗನ್ನು 1174ನೇ ಇಸವಿಯಲ್ಲಿ ವಶಪಡಿಸಿಕೊಂಡರು, ಆದರೆ ವಿಜಯನಗರ ಅರಸರಿಂದ 14ನೇ ಶತಮಾನದ ಮಧ್ಯದಲ್ಲಿ ವಶಪಡಿಸಿಕೊಳ್ಳಲ್ಪಟ್ಟಿತು, ಅದರ ನಂತರದಲ್ಲಿ ಸ್ಥಳೀಯ ಆಡಳಿತಗಾರರಾದ ನಾಯಕರಿಂದ ಆಳಲ್ಪಟ್ಟಿತು. ಹಾಲೇರಿ ವಶಂವು ಅಥವಾ ಲಿಂಗಾಯತ ರಾಜರು ಕೊಡಗನ್ನು 16ನೇ ಶತಮಾನದಿಂದ 19ನೇ ಶತಮನಾದವರೆಗೂ ಆಳಿದರು.
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ಬ್ರಿಟಿಷರ ಆಳ್ವಿಕೆಯಲ್ಲಿ ಕೊಡಗು ಇತ್ತು. ಆನಂತರದಲ್ಲಿ 1950ರಲ್ಲಿ ಸ್ವತಂತ್ರ ರಾಜ್ಯವಾಯಿತು. 1956ರಲ್ಲಿ ರಾಜ್ಯಗಳ ಮರುಹೊಂದಾಣಿಕೆಯಲ್ಲಿ ಕೊಡಗನ್ನು ಇಂದಿನ ಕರ್ನಾಟಕದ ಜೊತೆ ಸೇರಿಸಲಾಯಿತು. ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ಎಂಬ ಮೂರು ತಾಲೂಕುಗಳನ್ನು ಹೊಂದುವ ಮೂಲಕ ಕರ್ನಾಟಕದಲ್ಲೇ ಅತಿ ಸಣ್ಣ ಜಿಲ್ಲೆಯಾಗಿದೆ. ಕೊಡಗು ಜಿಲ್ಲೆಯ ಕೇಂದ್ರ ಮಡಿಕೇರಿಯಾಗಿದೆ.
ಪ್ರವಾಸಿಗರ ಸ್ವರ್ಗ
ಐತಿಹಾಸಿಕ ಸ್ಮಾರಕಗಳು, ಅರಮನೆಗಳು, ಕೋಟೆಗಳು, ಪುರಾತನ ದೇವಸ್ಥಾನಗಳು, ಪಾರ್ಕ್ಗಳು, ಜಲಪಾತಗಳು ಮತ್ತು ಅಭಯಾರಣ್ಯಗಳಂತಹ ಆಕರ್ಷಕ ಸ್ಥಳಗಳು ಕೊಡಗಿನಲ್ಲಿವೆ. ಇಲ್ಲಿಗೆ ಪ್ರವಾಸಿಗರು ನಿರಂತರವಾಗಿ ಭೇಟಿ ನೀಡುತ್ತಲೇ ಇರುತ್ತಾರೆ. ಕೊಡಗಿನ ಪ್ರಮುಖ ಆಕರ್ಷಣೆಯೆಂದರೆ ಅಬ್ಬಿ ಜಲಪಾತ, ಇರ್ಪು ಜಲಪಾತ, ಮಳ್ಳಳ್ಳಿ ಜಲಪಾತ, ಮಡಿಕೇರಿ ಕೋಟೆ, ರಾಜಾ ಸೀಟ್, ನಾಲ್ಕ್ನಾಡ್ ಅರಮನೆ ಮತ್ತು ಗದ್ದಿಗೆ (ರಾಜರ ಸಮಾಧಿ).
ಕೊಡಗಿನಲ್ಲಿ ತುಂಬಾ ಜನಪ್ರಿಯವಾದ ಧಾರ್ಮಿಕ ಸ್ಥಳವೆಂದರೆ ಭಾಗಮಂಡಲ, ಟಿಬೆಟಿಯನ್ ಗೋಲ್ಡನ್ ಟೆಂಪಲ್, ಓಂಕಾರೇಶ್ವರ ದೇವಸ್ಥಾನ ಮತ್ತು ತಲಕಾವೇರಿ.
ಕೊಡಗಿನಲ್ಲಿ ಚೆಲವಾರ ಜಲಪಾತ, ಹಾರಂಗಿ ಡ್ಯಾಮ್, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್, ಹೊನ್ನಮ್ಮನ ಕೆರೆ ಮತ್ತು ಮಂಡಲಪಟ್ಟಿ ಪ್ರದೇಶಗಳಂತ ನಿಸರ್ಗ ತಾಣಗಳನ್ನು ನೋಡಬಹುದು. ಅಳಿವಿನಂಚಿನ ಪ್ರಾಣಿಗಳನ್ನು ನೋಡುವಲ್ಲಿ ಆಸಕ್ತಿಯಿರುವವರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು ಮತ್ತು ಬಂಡೀಪುರ ರಾಷ್ಟ್ರೀಯ ಪಾರ್ಕ್ ಕೂಡಾ ನಿಸರ್ಗಪ್ರಿಯ ಪ್ರವಾಸಿಗರಿಗೆ ಭೇಟಿ ನೀಡಲು ಸೂಕ್ತ ಸ್ಥಳ.
ಚಾರಣ, ಗಾಲ್ಫ್, ಆಂಗ್ಲಿಂಗ್ ಮತ್ತು ದೋಣಿಯಲ್ಲಿ ತೇಲುವಂತಹ ಹೊರಾಂಗಣ ಚಟುವಟಿಕೆಗೆ ಇದು ಉತ್ತಮ ಸ್ಥಳ ಮತ್ತು ಕೊಡಗಿನಲ್ಲಿ ನಡೆಯುವ ಬಹುತೇಕ ಚಾರಣವು ಪಶ್ಚಿಮ ಘಟ್ಟದ ಬ್ರಹ್ಮಗಿರಿ ಗುಡ್ಡದಲ್ಲಿ ನಡೆಯುತ್ತದೆ. ಪುಷ್ಪಗಿರಿ ಗುಡ್ಡ, ಕೋಟೆಬೆಟ್ಟ, ಇಗ್ಗುತಪ್ಪ, ನಿಶಾನಿ ಮೊಟ್ಟೆ ಮತ್ತು ತಡಿಯಂಡಮೋಲ್ಗಳು ಕೂಡಾ ಚಾರಣಕ್ಕೆ ಉತ್ತಮ ಸ್ಥಳಗಳು.
ಮೇಲಿನ ಬರಪೊಳೆ ನದಿಯು ಬ್ರಹ್ಮಗಿರಿ ಗುಡ್ಡದಲ್ಲಿದ್ದು, ದಕ್ಷಿಣ ಕೊಡಗಿನ ಕಡೆ ಹರಿಯುತ್ತದೆ. ಇದು ನೀರಿನಲ್ಲಿ ಖುಷಿ ಪಡುವುದಕ್ಕೆ ಉತ್ತಮವಾದ ಸ್ಥಳ. ವಲನೂರ್, ಇದು ಕಾವೇರಿಯ ಹಿನ್ನೀರಾಗಿದ್ದು ಆಂಗ್ಲರುಗಳಿಗೆ ಅಚ್ಚುಮೆಚ್ಚಿನ ಸ್ಥಳವಾಗಿತ್ತು.
ಸ್ಥಳೀಯ ಸಂಸ್ಕೃತಿ ಹಾಗೂ ಇನ್ನಷ್ಟು...
ಸುಂದರ ಘಟ್ಟಪ್ರದೇಶದ ಕೊಡಗು ತನ್ನ ವಿಶಿಷ್ಟ ಸಂಸ್ಕೃತಿಯಿಂದಲೂ ತುಂಬಾ ಜನಪ್ರಿಯ. ಹುತ್ತರಿ, ಮಡಿಕೇರಿ ದಸರಾ, ಕೈಲ್ ಪೊದು (ಕೈಲ್ ಮುಹೂರ್ತ ಅಥವಾ ಕೈಗಳ ಹಬ್ಬ) ಮತ್ತು ಕಾವೇರಿ ಸಂಕ್ರಮಣ ಅಥವಾ ತುಲಾ ಸಂಕ್ರಮಣಗಳು ಕೊಡಗಿನ ಕೆಲವು ಪ್ರಮುಖ ಹಬ್ಬಗಳು. ಸ್ಥಳೀಯ ಅಡುಗೆಯು, ಅದರಲ್ಲೂ ವಿಶೇಷವಾಗಿ ಮಾಂಸಾಹಾರವು ದಕ್ಷಿಣ ಭಾರತದಲ್ಲೇ ಅತ್ಯಂತ ಜನಪ್ರಿಯವಾಗಿದೆ.
ಕೊಡಗಿನಲ್ಲಿ ಕೊಡವರು, ತುಳುವರು, ಗೌಡರು, ಕುಡಿಯರು ಮತ್ತು ಬಂಟರು ಮುಂತಾದ ಸಮುದಾಯಗಳು ವಾಸಿಸುತ್ತಿವೆ. ಇಲ್ಲಿ ಬಹುಸಂಖ್ಯೆಯಲ್ಲಿರುವವರು ಕೊಡವರು (ಕೊಡವರು ಅಥವಾ ಕೂರ್ಗಿಗಳು). ಇವರು ತಮ್ಮ ಆತಿಥ್ಯಕ್ಕೆ ಮತ್ತು ಶೌರ್ಯಕ್ಕೆ ಹೆಸರಾದವರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗು ಕಾಫಿ ಉತ್ಪನ್ನಗಳಿಗೆ ಹೆಸರಾಗಿದೆ ಮತ್ತು ಇಲ್ಲಿ ಸಾಮಾನ್ಯವಾಗಿ ತಂಪಾದ ವಾತಾವರಣ ಇರುತ್ತದೆ. ಕೊಡಗಿನಲ್ಲಿ ಬ್ರಿಟಿಷರು ಕಾಫಿಯನ್ನು ಪರಿಚಯಿಸಿದರು. ಅರೇಬಿಕಾ ಮತ್ತು ರೋಬಸ್ಟಾಗಳು ಇಲ್ಲಿ ಬೆಳೆಯುವ ಪ್ರಮುಖ ಕಾಫಿ ತಳಿಗಳು. ಅಲ್ಲದೇ ಈ ಪ್ರದೇಶವು ಜೇನು, ಏಲಕ್ಕಿ, ಮೆಣಸು ಮತ್ತು ಕಿತ್ತಳೆ ಉತ್ಪಾದನೆಗೆ ಕೂಡಾ ಜನಪ್ರಿಯವಾಗಿದೆ.
ಕೊಡಗಿಗೆ ಭೇಟಿ ನೀಡಲು ನವೆಂಬರಿನಿಂದ ಏಪ್ರಿಲ್ ತನಕ ಉತ್ತಮವಾದ ಕಾಲ. ಕೊಡಗಿಗೆ ರಸ್ತೆಯ ಮೂಲಕ ಮಾತ್ರ ಹೋಗಬಹುದು, ಈ ಪ್ರದೇಶವು ಮಂಗಳೂರು, ಹಾಸನ, ಮೈಸೂರು, ಬೆಂಗಳೂರು , ಕಣ್ಣೂರು ಮತ್ತು ವಯನಾಡು ಮೂಲಕ ಸಂಪರ್ಕವನ್ನು ಹೊಂದಿದೆ.
ಕೊಡಗಿಗೆ ಸಮೀಪದ ರೈಲ್ವೇ ಸ್ಟೇಷನ್ ಎಂದರೆ, ಮೈಸೂರಾಗಿದ್ದು ಇದು ಸುಮಾರು 146 ಕಿ.ಮೀ ದೂರದಲ್ಲಿದೆ. ಸಮೀಪದ ವಿಮಾನ ನಿಲ್ದಾಣವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸಾಮಾನ್ಯ ವಿಮಾನಗಳು ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸುತ್ತವೆ.