ವಿಶ್ವಪ್ರಸಿದ್ಧ ವಾಸ್ತುಶಿಲ್ಪಿ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ ಚಿಕ್ಕಬಳ್ಳಾಪುರ ಪಟ್ಟಣವು ಇತ್ತೀಚೆಗೆ ಜಿಲ್ಲೆಯಾಗಿ ಘೋಷಿಸಲ್ಪಟ್ಟಿದೆ. ಈ ಮೊದಲು ಕೋಲಾರ ಜಿಲ್ಲೆಯೊಂದಿಗಿದ್ದ ಚಿಕ್ಕಬಳ್ಳಾಪುರವನ್ನು ಹೊಸ ಜಿಲ್ಲೆಯನ್ನಾಗಿ ವಿಭಜಿಸಲಾಗಿದೆ.
ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿರುವ ಚಿಕ್ಕಬಳ್ಳಾಪುರವು ಹಲವಾರು ಪ್ರೇಕ್ಷಣೀಯ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರವಾಸಿ ಕೇಂದ್ರಗಳನ್ನು ಒಳಗೊಂಡಿದೆ.ವಿಶ್ವೇಶ್ವರಯ್ಯನವರ ಜನ್ಮಸ್ಥಳವಾಗಿರುವುದರಿಂದ ಇಂದು ಪ್ರಮುಖ ವಿದ್ಯಾಕೇಂದ್ರವಾಗಿಯೂ ಚಿಕ್ಕಬಳ್ಳಾಪುರ ಬೆಳೆದಿದೆ. ಸ್ಥಳೀಯ ಮುದ್ದೇನಹಳ್ಳಿಯಲ್ಲಿ ಐಐಟಿ ಕೇಂದ್ರ, ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ, ಸತ್ಯಸಾಯಿ ಬಾಬಾ ವಿಶ್ವವಿದ್ಯಾಲಯ ಕೂಡ ಇಲ್ಲಿವೆ.
ಪಟ್ಟಣದಲ್ಲಿನ ಆಕರ್ಷಣೆಗಳು
ಚಿಕ್ಕಬಳ್ಳಾಪುರ ಪಟ್ಟಣದ ಸುತ್ತಮುತ್ತಲೂ ಹಲವಾರು ಪ್ರಾಕೃತಿಕ, ಐತಿಹಾಸಿಕ ಮತ್ತು ಮಾನವ ನಿರ್ಮಿತ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರಸಿದ್ಧ ನಂದಿ ಬೆಟ್ಟದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನಕ್ಕೆ ಹಲವಾರು ಭಕ್ತರು ಮತ್ತು ಪ್ರವಾಸಿಗರು ಬರುತ್ತಾರೆ. ಅಲ್ಲದೇ ಇಲ್ಲಿರುವ ಯೋಗ ನಂದೀಶ್ವರ ದೇವಸ್ಥಾನಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಚಿಕ್ಕಬಳ್ಳಾಪುರ ಪಟ್ಟಣದಿಂದ 12 ಕಿ.ಮೀ. ದೂರದಲ್ಲಿರುವ ವಿವೇಕಾನಂದ ಜಲಪಾತ ಮಳೆಗಾಲದಲ್ಲಿ ಮೈದುಂಬಿಕೊಂಡು ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಜಯನಗರ ಕಾಲದ ವಾಸ್ತುಶೈಲಿಯಲ್ಲಿ ನಿರ್ಮಾಣಗೊಮಡ ರಂಗಸ್ಥಳದಲ್ಲಿರುವ ಭಗವಾನ್ ವಿಷ್ಣು ದೇವಸ್ಥಾನವಿದೆ. ಕಪ್ಪು ಕಲ್ಲಿನಲ್ಲಿ ವಿಶೇಷ ಚಿತ್ರಗಳೊಂದಿಗೆ ಕೆತ್ತಲ್ಪಟ್ಟ ಈ ದೇವಸ್ಥಾನವು ವಿಶೇಷವಾಗಿದೆ.
ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವ ಮುದ್ದೇನಹಳ್ಳಿ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ. ಇಲ್ಲಿ ವಿಶ್ವೇಶ್ವರಯ್ಯನವರು ವಾಸಿಸುತ್ತಿದ್ದ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ.
ಚಿತ್ರಾವತಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ, ಎಲ್ಲೋಡೆ ಶ್ರೀ ಲಕ್ಷ್ಮೀ ಆದಿನಾರಾಯಣ ದೇವಸ್ಥಾನ ಮತ್ತು ಕಂದಾವರ ಕೆರೆ ಇಲ್ಲಿರುವ ಇನ್ನಿತರ ಸುಂದರ ತಾಣಗಳು.
ಇಲ್ಲಿರುವ ಬೆಟ್ಟಗಳಲ್ಲಿ ಸಾಹಸಿಗಳು ರಾಕ್ ಕ್ಲೈಂಬಿಂಗ್ ಮೌಂಟೇನಯರಿಂಗ್ ಮುಂತಾದ ಸಾಹಸಕ್ರೀಡೆಗಳಲ್ಲಿ ತೊಡಗಿಕೊಳ್ಳಬಹುದು. ಕರ್ನಾಟಕದ ರಾಜಧಾನಿ ಬೆಂಗಳೂರು ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವುದರಿಂದ ರೈಲು ಮತ್ತು ರಸ್ತೆ ಮೂಲಕ ಬರುವ ಪ್ರವಾಸಿಗರಿಗೆ ತುಂಬಾ ಅನುಕೂಲಕರವಾಗಿದೆ.