ಭಾರತದ ಒಂದೊಂದು ರಾಜ್ಯಗಳು ವಿವಿಧ ಸಂಸ್ಕೃತಿ ಹಾಗೂ ಪ್ರಕೃತಿ ಸೊಬಗನ್ನು ಶೃಂಗರಿಸಿಕೊಂಡು ನಿಂತಿದೆ. ಕೆಲವು ನೆರೆಯ ರಾಷ್ಟ್ರಗಳನ್ನು ಅಂಟಿಕೊಂಡಿರುವ ಈಶಾನ್ಯ ರಾಜ್ಯಗಳ ಸೌಂದರ್ಯವನ್ನು ಅಲ್ಲಿಗೆ ಹೋಗಿಯೇ ಅನುಭವಿಸಬೇಕು. ಈಶಾನ್ಯ ಭಾರತದ ರಾಜ್ಯಗಳಲ್ಲಿ ಒಂದಾಗಿರುವ ಮಣಿಪುರದ 9 ಜಿಲ್ಲೆಗಳಲ್ಲಿ ಚಾಂದೇಲ್ ಜನಪ್ರಿಯ. ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಚಾಂದೇಲ್ ನೆರೆಯ ರಾಷ್ಟ್ರಕ್ಕೆ ಪ್ರವೇಶದ್ವಾರ ಮತ್ತು ಜಿಲ್ಲಾ ಕಚೇರಿಯೂ ಚಾಂದೇಲ್ ನಲ್ಲಿಯೇ ಇದೆ. ಮೊರೆಹ, ಚಾಕ್ಪಿಕರೊಂಗ್ ಚಾಂದೇಲ್ ಹಾಗೂ ಮಂಚಿ ಇದರ ಉಪ ವಿಭಾಗಗಳು. ಚಾಂದೇಲ್ ಜಿಲ್ಲೆಯ ದಕ್ಷಿಣದಲ್ಲಿ ಮ್ಯಾನ್ಮಾರ್, ಪೂರ್ವದಲ್ಲಿ ಉಖ್ರುಲ್, ಪಶ್ಚಿಮದಲ್ಲಿ ಚುರಚಂದಪುರ್ ಮತ್ತು ಉತ್ತರದಲ್ಲಿ ತೌಬಾಲ್ ಇದೆ. 1983ರಲ್ಲಿ ಜಿಲ್ಲೆ ರಚಿಸಲ್ಪಟ್ಟಾಗ ಇದನ್ನು ತೆಂಗನೌಪಾಲ್ ಎಂದು ಕರೆಯಲಾಗುತ್ತಿತ್ತು. 1983ರಲ್ಲಿ ಈ ಜಿಲ್ಲೆಯನ್ನು ಚಾಂದೇಲ್ ಎಂದು ಮರುನಾಮಕರಣ ಮಾಡಲಾಯಿತು. ಚಾಂದೇಲ್ ಮಣಿಪುರದ ಅತೀ ಕಡಿಮೆ ಜನಸಂಖ್ಯೆ ಇರುವ ಜಿಲ್ಲೆ.
ಭಾರತ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯ ಈ ಜಿಲ್ಲೆಯನ್ನು ರಾಷ್ಟ್ರದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆಯೆಂದು ಪರಿಗಣಿಸಿದೆ. ಹಿಂದುಳಿದ ಜಿಲ್ಲೆಯಾಗಿರುವ ಚಾಂದೇಲ್ ಗೆ ಪ್ರತೀ ವರ್ಷ ವಿಶೇಷ ಅನುದಾನವೂ ಸಿಗುತ್ತಿದೆ. ಟ್ರಾನ್ಸ್-ಏಶ್ಯನ್ ಸೂಪರ್ ಹೈವೇ ಯೋಜನೆಗೆ ಚಾಂದೇಲ್ ಒಳಪಡುವುದರಿಂದ ಮುಂದಿನ ದಿನಗಳಲ್ಲಿ ಈಶಾನ್ಯ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಇದು ಗುರುತಿಸಲ್ಪಡಲಿದೆ. ಈ ಹೈವೇ ಯೋಜನೆ ಪೂರ್ಣಗೊಂಡರೆ ಏಶ್ಯಾದ ಹಲವಾರು ರಾಷ್ಟ್ರಗಳಿಗೆ ಚಾಂದೇಲ್ ಮಹಾದ್ವಾರವಾಗಲಿದೆ.
ಪ್ರವಾಸಿಗರನ್ನು ಆಕರ್ಷಿಸುವ ಜೀವವೈವಿಧ್ಯ:
ಪ್ರಕೃತಿ ಮಡಿಲಿನಲ್ಲಿರುವ ಚಾಂದೇಲ್ ಜಿಲ್ಲೆ ವಿಭಿನ್ನ ಸಸ್ಯಸಂಪತ್ತು ಹಾಗೂ ಪ್ರಾಣಿಸಂಕುಲಕ್ಕೆ ಹೆಸರುವಾಸಿಯಾಗಿದೆ. ಅಲಂಕಾರಿಕ ಸಸ್ಯಗಳು ಹಾಗೂ ಹೂವುಗಳನ್ನು ಇಲ್ಲಿ ಮಾತ್ರ ಕಾಣಲು ಸಾಧ್ಯ. ಅನಿಸೊಮೆಲೆಸ್ ಇಂಡಿಕಾ, ಅನೊಟಿಸ್ ಫೀಟಿಡಾ, ಕ್ರಾಸ್ಸೆಫಾಲಮ್ ಕ್ರೆಪಿಡಿಯೊಡೆಸ್ ಮುಂತಾದ ವಿಶೇಷ ಜಾತಿಯ ಸಸ್ಯರಾಶಿಗಳಿವೆ. ಇಲ್ಲಿರುವ ಕೆಲವು ಔಷಧೀಯ ಸಸ್ಯಗಳು ಸ್ಥಳೀಯ ಗಿಡಮೂಲಿಕೆಯ ಔಷಧಿಗಳಲ್ಲೂ ಬಳಸಲ್ಪಡುತ್ತಿದೆ.
ಚಾಂದೇಲ್ ಜಿಲ್ಲೆಯಲ್ಲಿರುವ ಅಪರೂಪದ ಪ್ರಾಣಿಸಂಕುಲಗಳು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ಹೂಲೊಕ್ ಗಿಬ್ಬನ್ ಕೂಡ ಚಾಂದೇಲ್ ಜಿಲ್ಲೆಯ ಕಾಡಿನಲ್ಲಿದೆ. ಚಿಕ್ಕ ಕಪಿ, ತುಂಡು ಬಾಲದ ಕೋತಿ, ಹಂದಿ ಬಾಲದ ಕೋತಿ ಮುಂತಾದವುಗಳು ಈ ಜಿಲ್ಲೆಯ ಕಾಡಿನಲ್ಲಿದೆ. ರಾತ್ರಿ ಸಂಚಾರದ ಮಾಂಸಾಹಾರಿ ಪ್ರಾಣಿಗಳಾದ ಚುಕ್ಕೆ ಚಿರತೆ ಮತ್ತು ಗೋಲ್ಡನ್ ಕ್ಯಾಟ್ ಗಳೂ ಇಲ್ಲಿವೆ. ಕೆಲವು ಸಲ ಹವಾಮಾನ ವೈಪರೀತ್ಯದಿಂದ ಪಾರಾಗಲು ನೆರೆಯ ರಾಷ್ಟ್ರ ಮ್ಯಾನ್ಮಾರ್ ನಿಂದ ಆನೆಗಳ ಹಿಂಡು ಇಲ್ಲಿಗೆ ವಲಸೆ ಬರುತ್ತವೆ.
ಇಲ್ಲಿನ ಜೀವವೈವಿಧ್ಯದಿಂದಾಗಿ ಸಾವಿರಾರು ಪ್ರವಾಸಿಗಳು ಈ ಪ್ರದೇಶಕ್ಕೆ ಆಕರ್ಷಿತರಾಗುವುದುದು ಮಾತ್ರವಲ್ಲದೆ ವಿಶ್ವದ ವಿವಿಧ ಮೂಲೆಗಳಿಂದ ಪ್ರಕೃತಿ ಪ್ರಿಯರು ಮಣೆಪುರದ ಈ ಜಿಲ್ಲೆಗೆ ಬಂದು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾರೆ.
ವ್ಯಾಪಾರ ಮಾರ್ಗ ಮತ್ತು ಚಾಂದೇಲ್ ಸುತ್ತಮುತ್ತಲಿನ ಪ್ರವಾಸಿ ತಾಣಗಳು:
ಜಿಲ್ಲೆಯ ಪ್ರಮುಖ ನಗರವೆಂದರೆ ಮೊರೆಹ. ಇದು ಮ್ಯಾನ್ಮಾರ್ ಗೆ ಮಹಾದ್ವಾರವಾಗಿರುವ ಕಾರಣ ಇದು ಪ್ರಮುಖ ನಗರವಾಗಿದೆ. ಮಣಿಪುರದ ವಿಶ್ವ ವ್ಯಾಪಾರ ಕೇಂದ್ರವಾಗಿ ಮೊರೆಹ ಜನಪ್ರಿಯ. ಮೊರೆಹ ನಗರ ಚಾಂದೇಲ್ ನಗರಕ್ಕಿಂತ ಸುಮಾರು 70 ಕಿ.ಮೀ. ದೂರದಲ್ಲಿದೆ. ಚಾಂದೇಲ್ ನಲ್ಲಿ ತೆಂಗನೌಪಾಲ್ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಇದು ಭಾರತ-ಮ್ಯಾನ್ಮಾರ್ ರಸ್ತೆ ಮಾರ್ಗದ ಪ್ರಮುಖ ಕೊಂಡಿಯಾಗಿದೆ. ಚಾಂದೇಲ್ ನಿಂದ ಇದು 20 ಕಿ.ಮೀ. ದೂರದಲ್ಲಿದ್ದು, ಇಲ್ಲಿಂದ ಮಣಿಪುರ ಕಣೆವೆಯ ಸೌಂದರ್ಯವನ್ನು ಸವಿಯಬಹುದು.
ವಿವಿಧತೆಯಲ್ಲಿ ಏಕತೆ:
ಚಾಂದೇಲ್ ಜಿಲ್ಲೆಯಲ್ಲಿ ವಿವಿಧ ಬುಡಕಟ್ಟು ಜನಾಂಗದವರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಸುಮಾರು 20 ಬುಡಕಟ್ಟು ಜನಾಂಗದವರು ಶತಮಾನಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಮಯೋನ್, ಅನಾಲ್, ಮಾರಿಂಗ್, ಕುಕಿಸ್, ಪೈಟೆ, ಚೊತೆ ಮತ್ತು ಥಾಡೌ ಇಲ್ಲಿನ ಪ್ರಮುಖ ಬುಡಕಟ್ಟು ಜನಾಂಗಗಳು. ಬುಡಕಟ್ಟು ಜನಾಂಗಗಳಲ್ಲದೆ ಹೊರಗಿನಿಂದ ಬಂದಂತಹ ವಿವಿಧ ಸಮುದಾಯದವರು ಇಲ್ಲಿ ವಾಸಿಸುತ್ತಿದ್ದಾರೆ. ಮೈತೆಯಿಗಳು ಮತ್ತು ಮೈತೆಯಿ ಪಂಗಲ್ ಜಿಲ್ಲೆಯಲ್ಲಿರುವ ಬಹುಸಂಖ್ಯಾತರು. ಮಣಿಪುರಿಗಳಲ್ಲದೆ ನೇಪಾಳಿಗಳು, ಬಂಗಾಳಿಗಳು, ತಮಿಳರು, ಪಂಜಾಬಿನವರು ಮತ್ತು ಬಿಹಾರಿಗಳು ಕೂಡ ಇಲ್ಲಿ ಶತಮಾನಗಳಿಂದ ವಾಸ್ತವ್ಯ ಹೊಂದಿದ್ದಾರೆ.
ಚಾಂದೇಲ್ ನಲ್ಲಿ ಹಲವಾರು ಭಾಷೆಗಳಿದ್ದರೂ ಥಾಡೌ ಇಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಭಾಷೆ. ಥಾಡೌ ಬಳಿಕ ಐಮೋಲ್ ಈ ಜಿಲ್ಲೆಯಲ್ಲಿ ಹೆಚ್ಚಿನ ಜನರು ಮಾತನಾಡುವ ಭಾಷೆ. ಈ ಭಾಷೆ ಸಿನೋ-ಟಿಬೆಟಿಯನ್ ಭಾಷೆ. ಅನಾಲ್ ಎನ್ನುವ ಬುಟಕಟ್ಟು ಜನಾಂಗದವರು ಅನಾಲ್ ಭಾಷೆಯನ್ನು ಮಾತನಾಡುತ್ತಾರೆ. ಚಾಂದೇಲ್ ಜಿಲ್ಲೆ ಹಲವಾರು ಭಾಷೆ ಹಾಗೂ ಜನಾಂಗದವರನ್ನು ಒಳಗೊಂಡ ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ಜಿಲ್ಲೆಯೆನ್ನಬಹುದು. ಚಾಂದೇಲ್ ನಗರವನ್ನು ಲಮ್ಕಾ ಎಂದೂ ಕರೆಯುತ್ತಾರೆ.
ಚಾಂದೇಲ್ ಗೆ ಪ್ರಯಾಣ ಹೇಗೆ?
ಚಾಂದೇಲ್ ಗೆ ರೈಲು, ವಿಮಾನ ಮತ್ತು ರಸ್ತೆ ಮಾರ್ಗವಾಗಿ ಪ್ರಯಾಣಿಸಬಹುದು.
ಚಾಂದೇಲ್ ಗೆ ಪ್ರಯಾಣಿಸಲು ಒಳ್ಳೆಯ ಸಮಯ:
ಚಳಿಗಾಲದ ಆರಂಭದಲ್ಲಿ ಚಾಂದೇಲ್ ಗೆ ಭೇಟಿ ನೀಡುವುದು ಪ್ರಸಕ್ತ ಸಮಯ.