ಭೋಜ್ ಪುರ್, ಬಿಹಾರ ರಾಜ್ಯದ ಜಿಲ್ಲೆಗಳಲ್ಲೊಂದಾಗಿದ್ದು, ಅರ್ರಾಹ್ ಇದರ ಕೇಂದ್ರ ಆಡಳಿತಾತ್ಮಕ ಕಾರ್ಯಸ್ಥಾನವಾಗಿದೆ. ಅರ್ರಾಹ್ ಇದು ತನ್ನ ಹೆಸರನ್ನು "ಅರಣ್ಯ" ಎಂಬ ಸಂಸ್ಕೃತ ಪದದಿಂದ ಪಡೆದಿದ್ದು, ಇದರ ಅರ್ಥವು ಅರಣ್ಯ ಎಂಬುದಾಗಿದೆ ಎಂಬ ಸಾರ್ವತ್ರಿಕ ನಂಬಿಕೆಯೂ ಇದೆ.
ಭೋಜ್ ಪುರ್ ನೊಂದಿಗೆ ಅನೇಕ ಪೌರಾಣಿಕ ಕಥೆಗಳೂ ಕೂಡ ತಳುಕು ಹಾಕಿಕೊಂಡಿವೆ. ಹಿಂದೂ ಪುರಾಣದ ಪ್ರಕಾರ, ಭಗವಾನ್ ಶ್ರೀ ರಾಮಚಂದ್ರನ ಗುರುಗಳಾದ ಮಹರ್ಷಿ ವಿಶ್ವಾಮಿತ್ರರು ಈ ಪ್ರದೇಶದಲ್ಲಿ ಆಶ್ರಯವನ್ನು ಪಡೆದಿದ್ದರು. ಇತಿಹಾಸದ ಆಧುನಿಕ ಕಾಲಘಟ್ಟದಲ್ಲಿಯೂ ಸಹ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭೋಜ್ ಪುರ್ ಮಹತ್ವದ ಪಾತ್ರವನ್ನು ನಿರ್ವಹಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಹಲವಾರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಜನ್ಮ ಸ್ಥಾನವು ಭೋಜ್ ಪುರ್ ಜಿಲ್ಲೆಯಾಗಿದೆ. ಸೋನೆ ಮತ್ತು ಗಂಗಾ ನದಿಗಳು ಜಿಲ್ಲೆಯ ಪ್ರಮುಖವಾದ ನೀರಿನ ಸೆಲೆಗಳಾಗಿವೆ.
ಭೋಜ್ ಪುರ್ ಪ್ರವಾಸೋದ್ಯಮವು ಅದರ ಶ್ರೀಮಂತ ಸಂಸ್ಕೃತಿ ಮತ್ತು ಚಲನಚಿತ್ರಗಳಿಗಾಗಿ ಅಗಾಧವಾದ ಪ್ರಸಿದ್ಧಿಯನ್ನು ಪಡೆದಿದೆ. ಭೋಜ್ ಪುರ್, ಶೋಭಾಯಮಾನವಾದ ಸಾಹಿತ್ಯಿಕ ಪರಂಪರೆಯನ್ನು ಹೊಂದಿದ್ದು, ಖರಿ ಬೋಲಿ ಎಂಬ ಸ್ಥಳೀಯ ಭಾಷೆಯಲ್ಲಿ, ಮುನ್ಷಿ ಸದಾಸುಖ್ ಲಾಲ್, ಸಯೀದ್ ಈಶೌತುಲ್ಲಹ್, ಲಲ್ಲೂ ಲಾಲ್ ಮತ್ತು ಸದಲ್ ಮಿಶ್ರ ಅವರಂತಹ ಘಟಾನುಘಟಿ ಬರಹಗಾರರ ಕೃತಿಗಳು ಸುಪ್ರಸಿದ್ಧವಾಗಿವೆ. ಭೋಜಪುರಿ ಚಲಚಿತ್ರ ಜಗತ್ತು ಅದ್ವಿತೀಯವಾಗಿ ವಿಕಾಸ ಹೊಂದಿದ್ದು, ತನ್ನದೇ ಆದ ವಿಶಿಷ್ಟವಾದ ಅಭಿರುಚಿಯನ್ನು ಹೊಂದಿದೆ. ಭೋಜಪುರಿ ಚಲನಚಿತ್ರಗಳು ತಮ್ಮದೇ ಅದ ಅತಿ ದೊಡ್ಡ ಪ್ರೇಕ್ಷಕ ವರ್ಗವನ್ನು ಹೊಂದಿವೆ.
ಭೋಜ್ ಪುರ್ ಕೃಷಿವಲಯದಲ್ಲಿ ಅತೀ ಶ್ರೀಮಂತ ಪ್ರದೇಶವಾಗಿದ್ದು, ಇಲ್ಲಿನ ಪ್ರಮುಖ ಬೆಳೆಗಳೆಂದರೆ ಭತ್ತ, ಗೋಧಿ, ಮತ್ತು ಎಣ್ಣೆಕಾಳುಗಳು. ಇಲ್ಲಿನ ನದಿಗಳು ನೀರಾವರಿಗೆ ಅವಶ್ಯಕವಾದ ನೀರನ್ನು ಒದಗಿಸುತ್ತವೆ. ಭೋಜ್ ಪುರ್ ನ ಐತಿಹಾಸಿಕ ಮಹತ್ವವು, ಭೋಜ್ ಪುರ್ ನ ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಭೋಜ್ ಪುರ್ ನ ಪ್ರಮುಖ ಸಂದರ್ಶನೀಯ ತಾಣಗಳೆಂದರೆ, ಜಗ್ದಿಶ್ ಪುರ್ ನಲ್ಲಿರುವ ವೀರ ಕುಂವರ್ ಸಿಂಗ್ ನ ಕೋಟೆ, ಅರಾದಲ್ಲಿರುವ ಮಹಾರಾಜ ಕಾಲೇಜು, ಮಹದೇವದಲ್ಲಿರುವ ಜೈನ ಮಂದಿರ, ಮತ್ತು ಅರಣ್ಯ ದೇವಿ ದೇವಸ್ಥಾನ. ಜಿಲ್ಲೆಯ ವಾತಾವರಣವು ತುಸು ವಿಪರೀತವಾಗಿಯೇ ಇದ್ದು, ಏಪ್ರಿಲ್ ಮತ್ತು ಮೇ ತಿಂಗಳುಗಳು ವಿಪರೀತವಾಗಿ ಬಿಸಿಯಾಗಿರುತ್ತವೆ.