ಉತ್ತರಖಂಡ ರಾಜ್ಯದ ನೈನಿತಾಲ್ ಜಿಲ್ಲೆಯಲ್ಲಿರುವ ಸುಂದರ ನಗರಿ ಭೀಮತಲ್. ಇದು ಸಮುದ್ರ ಮಟ್ಟದಿಂದ 1370 ಮೀಟರ್ ಎತ್ತರದಲ್ಲಿದೆ. ಐತಿಹಾಸಿಕ ಹಿನ್ನೆಲೆ ಅವಲೋಕಿಸಿದರೆ ಅರವಿಗೆ ಬರುವ ಅಂಶವೆಂದರೆ 1814 ಹಾಗೂ 1816 ರಲ್ಲಿ ನಡೆದ ಆಂಗ್ಲೋ-ನೇಪಾಳಿಯನ್ ಯುದ್ಧದ ನಂತರ ಈ ಪ್ರದೇಶವು ಬ್ರಿಟೀಷರ ಹಿಡಿತಕ್ಕೆ ಬಂತು. ಅವರ ಆಳ್ವಿಕೆಗೆ ಒಳಪಟ್ಟಿತು. ಇದು ಇದಕ್ಕೆ ಸಮೀಪದ ಪಟ್ಟಣವಾದ ನೈನಿತಾಲ್ಗಿಂತಲೂ ಹಳೆಯದು. ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಪುರಾತನ ಪಾದಚಾರಿ ರಸ್ತೆಗಳು ಇಲ್ಲಿರುವುದನ್ನು ಕಾಣಬಹುದು. ಇವು ಕತ್ತಗೊಂಡಂ, ಕುಮಾವೂನ್ ಬೆಟ್ಟ ಹಾಗೂ ಟಿಬೆಟ್ನ್ನು ಸಂಪರ್ಕಿಸುತ್ತವೆ. ಇವು ಇಂದಿಗೂ ಬಳಕೆಯಲ್ಲಿವೆ ಕೂಡ. ಹೇಳಿಕೆಗಳ ಪ್ರಕಾರ, ಭೀಮತಲವು ಒಂದು ಕಾಲದಲ್ಲಿ ರೇಷ್ಮೆ ಎಳೆಗೆ ಅತ್ಯಂತ ಜನಪ್ರಿಯವಾಗಿತ್ತು.
ಇಂದು ನೈನಿತಾಲ್ ಜಿಲ್ಲೆಯ ಒಂದು ಕಿರು ಕೇಂದ್ರಸ್ಥಳವಾಗಿ ಜನಪ್ರಿಯವಾಗಿದೆ. ಐತಿಹಾಸಿಕ ಪ್ರಸಿದ್ಧ ವ್ಯಕ್ತಿ, ಭಾರತೀಯ ಐತಿಹಾಸಿಕ ಪ್ರಸಿದ್ಧ ಮಹಾಗ್ರಂಥವಾದ ಮಹಾಭಾರತದಲ್ಲಿ ಬರುವ ಪಾಂಡವ ಸಹೋದರರಲ್ಲಿ ಎರಡನೇಯವನಾದ ಭೀಮನಿಂದಾಗಿ ಊರಿಗೆ ಈ ಹೆಸರು ಬಂದಿದೆ. ಇಲ್ಲಿರುವ ಭೀಮೇಶ್ವರ ದೇಗುಲವನ್ನು ಸಾಕ್ಷಾತ್ ಭೀಮನೇ ಕಟ್ಟಿಸಿದ್ದಾನೆ ಎಂದು ನಂಬಲಾಗುತ್ತದೆ. ಕೌರವರ ಜತೆ ಪಗಡೆ ಆಟದಲ್ಲಿ ಸೋತು ರಾಜ್ಯ ಕಳೆದುಕೊಂಡು ಅಜ್ಞಾತವಾಸದಲ್ಲಿ ಇದ್ದ ಸಂದರ್ಭದಲ್ಲಿ ಈ ದೇವಾಲಯವನ್ನು ಪಾಂಡವರು ನಿರ್ಮಿಸಿದರು ಎನ್ನಲಾಗುತ್ತದೆ.
ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಿಗುವ ಪ್ರಮುಖ ಆಕರ್ಷಣೆ ವಿಕ್ಟೋರಿಯಾ ಆಣೆಕಟ್ಟು. ಭೀಮತಲ ಕೆರೆಯ ಕೊನೆಯಲ್ಲಿ ಇದು ನಿರ್ಮಾಣಗೊಂಡಿದೆ. ಇಲ್ಲಿನ ಅತ್ಯಾಕರ್ಷಕ ಕೆರೆಯ ನೋಟ ನೋಡುಗರನ್ನು ಅಪಾರವಾಗಿ ಸೆಳೆಯುತ್ತದೆ. ಭೀಮತಲ ಕೆರೆಯ ದ್ವೀಪದಲ್ಲಿ ಅತ್ಯಾಕರ್ಷಕ ಅಕ್ವೇರಿಯಂ ಸಿದ್ಧಪಡಿಸಿ ಇಡಲಾಗಿದ್ದು, ಇದು ಅಪಾರ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ. ಜನರನ್ನು, ಇಲ್ಲಿನ ಸೌಂದರ್ಯ ಮಾತ್ರವಲ್ಲ ಹಿಮಾಲಯ ಭಾಗದ ಅಪಾರ ಸಂಖ್ಯೆಯ ಅಪರೂಪದ ಪಕ್ಷಿಗಳೂ ಸೆಳೆಯುತ್ತವೆ. ಅಲ್ಲದೆ, ಇಲ್ಲಿನ ಬೋಟಿಂಗ್ ಸೌಲಭ್ಯ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಇಲ್ಲೊಂದು ಮಂದಿರವಿದೆ. ಅದರ ಹೆಸರು ಕಾರ್ಕೋಟಕನಾಗ ದೇಗುಲ ಎಂದು. ಈ ದೇಗುಲವು ಸರ್ಪರಾಜ ನಾಗ ಕಾರಕೋಟಕ ಮಹಾರಾಜರು ಭಕ್ತಿಯಿಂದ ನಿರ್ಮಿಸಿದ್ದರು. ಇದೊಂದು ಕಲ್ಪಿತ ಕೋಬ್ರಾ ಎಂದು ನಂಬಲಾಗುತ್ತದೆ. ರಿಷಿ ಪಂಚಮಿಯಂದು ಅಪಾರ ಸಂಖ್ಯೆಯ ಭಕ್ತರು ಇಲ್ಲಿ ಸೇರುತ್ತಾರೆ. ಇಲ್ಲೊಂದು ಜಾನಪದ ಕಲೆ ವೈಭವ ಮೆರೆಯುವ ಮ್ಯೂಸಿಯಂ ಇದೆ. ಇಲ್ಲಿ ಕಲ್ಲಿನ ಕಲೆ, ಜಾನಪದ ಕಲೆ, ಪ್ರಾಚ್ಯವಸ್ತುಗಳ ಸಂಗ್ರಹ, ಪುರಾತನ ಲಿಪಿಗಳು ಇವೆ. ಅಪರೂಪದ ಹಾಗೂ ಆಕರ್ಷಕವಾದ ದೇವ- ದೇವತೆಗಳ ವಿಗ್ರಹ ಇಲ್ಲಿ ಗಮನ ಸೆಳೆಯುತ್ತದೆ.
ಪ್ರವಾಸಿಗರು ಇಲ್ಲಿನ ಸತ್ತಾಲ್ಗೂ ಭೇಟಿ ನೀಡಬಹುದು. ಇದು ಏಳು ಸಮೂಹ ಕೆರೆಗಳ ಪರಸ್ಪರ ಸಂಪರ್ಕ ತಾಣವಾಗಿದೆ. ಭೀಮತಲದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿದೆ. ನೈಸರ್ಗಿಕ ಸೌಂದರ್ಯ ಸವಿಯುವ ಜತೆ ಇಲ್ಲಿ ಸ್ಥಳೀಯ ಹಾಗೂ ವಲಸೆ ಬಂದ 500 ವಿಧದ ಪಕ್ಷಿಗಳು, 11000 ಕೀಟಗಳು, 525 ಜೀವಿಗಳು ಇಲ್ಲಿನ ಇತರೆ ಆಕರ್ಷಣೆಗಳಾಗಿವೆ. ಪಕ್ಷಿಗಳಲ್ಲಿ ಮುಖ್ಯವಾಗಿ ಕಿಂಗ್ ಫಿಷರ್, ಕಂದು ತಲೆಯ ಬಾರ್ಬೆಟ್, ನೀಲಿ ರೆಕ್ಕೆಯ ತರುಷ್, ಭಾರತೀಯ ಟ್ರೀ ಪೈ, ರೆಡ್ ಬಿಲ್ಲೆಡ್, ಬ್ಲ್ಯೂ ಮಗ್ಪೈಸ್ ಮತ್ತಿತರರವು ಸದಾ ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಭಾಗದಲ್ಲಿ ನಾನಾ ಪ್ರಾಣಿ ಸಂಕುಲಗಳೂ ಕಾಣಸಿಗುತ್ತವೆ.
ಈ ಕರೆಗೆ ಸಮೀಪವೇ ಹಿಡಿಂಬ ಪರ್ವತ ಕೂಡ ಇದೆ. ಐತಿಹಾಸಿಕ ಹಿನ್ನೆಲೆ ಇರುವ ಈ ಬೆಟ್ಟಕ್ಕೆ ಹೆಸರು ಬರಲು ಹಿಡಿಂಬ ಅರಸು ಕಾರಣ. ಮಹಾಭಾರತದಲ್ಲಿ ಇವರ ಕುರಿತು ಉಲ್ಲೇಖಿಸಲಾಗಿದೆ. ಈ ಬೆಟ್ಟ ಆಕರ್ಷಕ ಪರಿಸರ ಹೊಂದಿದೆ. ಇದರ ಮೇಲೆ ವೆಂಕಟಾದ್ರಿ ಮಹಾರಾಜ ನೆಲೆಸಿದ್ದಾರೆ. ಇವರು ಈ ಅರಣ್ಯದ ಸುತ್ತಲಿನ ಭಾಗವನ್ನು ವನ್ಯಜೀವಿ ಧಾಮವನ್ನಾಗಿ ಮಾಡಿದ್ದಾರೆ. ಹೀಗಾಗಿ ಇಂದು ಈ ಭಾಗವು ವೆಂಕಟಾದ್ರಿ ಆಶ್ರಮ ಅಂತಲೇ ಜನಪ್ರಿಯವಾಗಿದೆ.
ಭೀಮತಲವನ್ನು ಪ್ರವಾಸಿಗರು ವಿಮಾನ, ರೈಲು ಹಾಗೂ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಪಂತನಗರ ಏರ್ಪೋರ್ಟ್. ಇದು ಹೊಸ ದಿಲ್ಲಿಯ ಇಂದಿರಾಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ ನಿಂದ ಉತ್ತಮ ಸಂಪರ್ಕ ಹೊಂದಿದೆ. ಅಲ್ಲಿಂದ ನಿರಂತರ ವಿಮಾನ ಸಂಪರ್ಕ ಪತನಗರಕ್ಕಿದೆ. ಕಾತಗೊಂಡಂ ರೈಲು ನಿಲ್ದಾಣದಿಂದ ಇಲ್ಲಿಗೆ ಸಂಪರ್ಕ ಇದೆ. ಈ ರೈಲು ನಿಲ್ದಾಣ ಭೀಮತಲದಿಂದ 30 ಕಿ.ಮೀ. ದೂರದಲ್ಲಿದೆ. ಅತ್ಯಂತ ಸೂಕ್ತ ಹಾಗೂ ಸುಲಭ ತಲುಪುವ ಮಾರ್ಗ ರಸ್ತೆ ಮಾರ್ಗ. ಬಸ್ ಮೂಲಕ ಇಲ್ಲಿಗೆ ಆಗಮಿಸುವುದು ಉತ್ತಮ ವಿಧಾನ. ಅತ್ಯಂತ ಆಕರ್ಷಕ ಪ್ರವಾಸಿ ತಾಣಗಳಾದ ನೈನಿತಾಲ್, ಡೆಹ್ರಾಡೂನ್, ಹರಿದ್ವಾರ, ರಿಷಿಕೇಶ ಮತ್ತಿತರ ತಾಣಗಳು ಇಲ್ಲಿಂದ ಸಾಗುವ ಬಸ್ ಮಾರ್ಗದಲ್ಲಿಯೇ ಇವೆ. ಸುಲಭವಾಗಿ ಅಲ್ಲಿಗೆ ಕೂಡ ತೆರಳಬಹುದು. ಪ್ರವಾಸಿಗರು ಇವುಗಳಲ್ಲದೇ ಮಸ್ಸೂರಿ, ರುದ್ರಪ್ರಯಾಗ, ಕೌಸನಿ, ರಾನಿಖೇತ್ ಹಾಗೂ ಉತ್ತರ ಕಾಶಿಯಿಂದ ಕೂಡ ಬಸ್ ಮೂಲಕ ಆಗಮಿಸಬಹುದು. ಲಗ್ಜುರಿ ಬಸ್ಗಳು ಭೀಮತಲಕ್ಕೆ ದಿಲ್ಲಿಯಿಂದ ಸಂಪರ್ಕ ಕಲ್ಪಿಸುತ್ತವೆ. ಭೀಮತಲವು, ಸಮಶೀತೋಷ್ಣ ಉಷ್ಣಾಂಶವನ್ನು ವರ್ಷದ ಎಲ್ಲಾ ಸಮಯದಲ್ಲೂ ಹೊಂದಿರುತ್ತದೆ. ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲದಲ್ಲಿ ಇಲ್ಲಿಗೆ ಬರಲು ಅಡ್ಡಿಯೇನೂ ಇರುವುದಿಲ್ಲ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣಾಂಶ 27 ಡಿಗ್ರಿ ಸೆಲ್ಶಿಯಸ್ ಇದ್ದರೆ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಮಳೆಗಾದಲ್ಲಿ ಇಲ್ಲಿ ವಿಪರೀತ ವರ್ಷಧಾರೆಯಾಗುತ್ತದೆ. ನವೆಂಬರ್ನಲ್ಲಿ ಇಲ್ಲಿ ಚಳಿಗಾಲ ಆರಂಭವಾದರೆ ಅದು ಫೆಬ್ರವರಿವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಕನಿಷ್ಠ ಉಷ್ಣಾಂಶ -3 ಡ್ರಿಗ್ರಿ ಸೆಲ್ಶಿಯಸ್ ಆಗಿರುತ್ತದೆ. ಇದರಿಂದಾಗಿ ಪ್ರವಾಸಿಗರು ಭೀಮತಲಕ್ಕೆ ಭೇಟಿ ನೀಡುವುದಾದರೆ ಬೇಸಿಗೆ ಉತ್ತಮ ಎಂಬ ಸಲಹೆ ನೀಡಲಾಗುತ್ತದೆ.