ಪ್ರಾಚೀನ ಹಿನ್ನೆಲೆಯುಳ್ಳ ಹೊಯ್ಸಳ ಸಾಮ್ರಾಜ್ಯದ ಕುರುಹಾಗಿರುವ ಹಾಸನ ಜಿಲ್ಲೆಯಲ್ಲಿರುವ ಬೇಲೂರ ಪಟ್ಟಣವು ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ಪ್ರಾಚೀನ ದೇವಸ್ಥಾನದ ನಗರವೆಂದೇ ಹೆಸರಾಗಿರುವ ಬೇಲೂರು ನಗರವು ಬೆಂಗಳೂರಿನಿಂದಲೂ ಹತ್ತಿರವಾಗುತ್ತದೆ.
ಇದರ ಐತಿಹಾಸಿಕ ಮಹತ್ವ
ಯಗಚಿ ನದಿಯ ದಂಡೆಯ ಸುಂದರ ಪರಿಸರದಲ್ಲಿರುವ ಬೇಲೂರು ನಗರವು ಪ್ರಾಚೀನ ಕಾಲದಲ್ಲಿ ಹೊಯ್ಸಳರ ರಾಜಧಾನಿಯಾಗಿತ್ತು. ಬೇಲೂರು ನಗರದಾದ್ಯಂತ ಹಲವಾರು ದೇವಸ್ಥಾನಗಳು ಹೊಯ್ಸಳರ ಕೊಡುಗೆ ಎನ್ನಬಹುದು. ಬೇಲೂರುನಿಂದ 16 ಕೀ.ಮೀ. ದೂರದಲ್ಲಿರುವ ಹಳೇಬೀಡು ಕೂಡ ಪ್ರಾಚೀನ ದೇವಾಲಯಗಳ ನಗರವೆಂದೇ ಪ್ರಸಿದ್ಧಿಯಾಗಿದೆ. ಹಳೇಬೀಡು ಕೂಡ ಹೊಯ್ಸಳರ ರಾಜಧಾನಿಯಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ.
ಬೇಲೂರು-ಹಳೇಬೀಡು ಎಂದು ಖ್ಯಾತಿಯಾಗಿರುವ ಅತೀ ಸುಂದರ ವಾಸ್ತುಶೈಲಿ ಹೊಂದಿರುವ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ದೇವಸ್ಥಾನಗಳು ಪ್ರವಾಸಿಗರಿಗೆ ಪ್ರಾಚೀನ ಇತಿಹಾಸ ತಿಳಿಸುತ್ತವೆ. ವಿಷ್ಣುವಿನ ಅವತಾರವೆನ್ನಲಾಗುವ ಚೆನ್ನಕೇಶವ ದೇವಾಲಯವೆಂದೇ ಪ್ರಸಿದ್ಧಿ ಹೊಂದಿರುವ ಬೇಲೂರಿನ ದೇವಸ್ಥಾನದ ಮುಂಭಾಗದಲ್ಲಿರುವ ಎತ್ತರದ ಕಂಬಗಳು ಆಕರ್ಷಣೀಯವಾಗಿವೆ.
ಭಗವಾನ್ ವಿಷ್ಣುವಿನ ಮೂರ್ತಿ ಕೂಡ ಇಲ್ಲಿದ್ದು ಹೊಯ್ಸಳರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿವೆ. ಸುಂದರ ಕೆತ್ತೆನಗಳನ್ನು ಹೊಂದಿರುವ ದೇವಾಲಯಗಳುಇಂದಿಗೂ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ.ದಕ್ಷಿಣ ಭಾರತೀಯ ಶೈಲಿಯಲ್ಲಿ ಕಟ್ಟಲ್ಪಟ್ಟ ಚೆನ್ನಕೇಶವ ದೇವಾಲಯವು ನಿರ್ಮಾಣಕ್ಕಾಗಿ100 ವರ್ಷದಷ್ಟು ಅಪಾರ ಸಮಯ ತೆಗೆದುಕೊಂಡಿದೆ ಎಂಬುದು ಒಂದು ದಾಖಲೆ ಎನ್ನಬಹುದಾಗಿದೆ.
ಇನ್ನಿತರ ಪ್ರೇಕ್ಷಣೀಯ ಸ್ಥಳಗಳು
ಬೇಲೂರಿನಿಂದ ರಸ್ತೆ ಮತ್ತು ರೈಲು ಮಾರ್ಗಗಳಿರುವುದರಿಂದ ಹತ್ತಿರದ ಲಕ್ಷ್ಮಿದೇವಿಯ ದೇವಸ್ಥಾನ ಮತ್ತು ದೊಡ್ಡಗಾಡವಳ್ಳಿ ಹಾಗೂ ಶ್ರವಣಬೆಳಗೊಳ ಗೊಮ್ಮಟೇಶ್ವರ ಮತ್ತು ಜೈನ ಬಸದಿಗಳನ್ನೂ ಕೂಡ ನೋಡಬಹುದು.ಬೇಲೂರಿನಿಂದ 38 ಕೀ.ಮೀ.ದೂರದ ಹಾಸನದಲ್ಲಿ ರೈಲ್ವೆ ನಿಲ್ದಾಣವಿದೆ. ಹಲವಾರು ಬಸ್ ಗಳು ಬೇಲೂರಿಗೆ ನಿರಂತರ ಹೊರಡುತ್ತಿರುತ್ತವೆ. ಬೇಲೂರಿಗೆ ಹಾಸನ, ಬೆಂಗಳೂರು,ಮಂಗಳೂರು ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಸ್ ಸೌಲಭ್ಯಗಳಿವೆ.