ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ದಟ್ಟ ರಕ್ಷಿತಾರಣ್ಯವು ಹುಲಿಗಳ ವಾಸಸ್ಥಾನವೆಂದೇ ಭಾರತ ದೇಶದಲ್ಲಿ ಪ್ರಸಿದ್ಧಿ ಹೊಂದಿದೆ. ಈ ಪ್ರದೇಶವನ್ನು ಸಂರಕ್ಷಿತ ಹುಲಿಗಳ ಪ್ರದೇಶವೆಂದೆ ಕೇಂದ್ರ ಸರಕಾರ ಘೋಷಿಸಿದೆ. ನಮ್ಮ ದೇಶದ ಹೆಮ್ಮೆ ಎನಿಸಿರುವ ಸುಮಾರು 70 ಹುಲಿಗಳು, 900 ಸ್ಕೇ.ಕೀ.ಮೀ.ದಟ್ಟ ಅರಣ್ಯ ಪ್ರದೇಶ ಹೊಂದಿರುವ ಬಂಡೀಪುರದಲ್ಲಿ ವಾಸಿಸುತ್ತಿವೆ. ಈ ಪ್ರದೇಶವು ಮೈಸೂರಿನಿಂದ 80 ಕೀ.ಮೀ. ಮತ್ತು ಬೆಂಗಳೂರಿನಿಂದ 220 ಕೀ.ಮೀ. ದೂರದಲ್ಲಿದೆ. ಸ್ವಂತ ವಾಹನವಿದ್ದವರು ಅತೀ ಕಡಿಮೆ ಸಮಯದಲ್ಲಿ ಬಂಡೀಪುರವನ್ನು ತಲುಪಬಹುದಾಗಿದೆ.
ಒಂದು ಪ್ರದೇಶ, ವನ್ಯಜೀವಿಗಳು, ಇನ್ನೂ ಹೆಚ್ಚು
ತಮಿಳುನಾಡಿನ ಮುದುಮಲೈ ಮತ್ತು ಕೇರಳದ ವಯನಾಡ್ ಗಳವರೆಗೆ ವ್ಯಾಪಿಸಿರುವ ಬಂಡೀಪುರ ಅರಣ್ಯವು ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಸಂರಕ್ಷಿತಅರಣ್ಯ ಪ್ರದೇಶವಾಗಿದೆ. ಈ ಅರಣ್ಯಾದ್ಯಂತ ಸಂರಕ್ಷಿತ ನೀಲಗಿರಿ ತೋಪುಗಳನ್ನು ಹೊಂದಿರುವ ಬಂಡೀಪುರದಲ್ಲಿ ನಿಧಾನವಾಗಿ ಹರಿಯುವ ಕಬಿನಿ ನದಿಯು ಪ್ರವಾಸಿಗರ ಗಮನಸೆಳೆಯುತ್ತದೆ.
ಬಂಡೀಪುರ ಅರಣ್ಯದಲ್ಲಿ ಹುಲಿಗಳೊಂದಿಗೆ ಅಳಿವಿನಂಚಿನಲ್ಲಿರುವ ಚಿರತೆ, ಕಾಡಾನೆ, ಕಾಡೆಮ್ಮೆ, ಕಾಡುಕೋಣ, ಕಾಡು ಹಂದಿ, ವಿವಿಧಜಾತಿ ಕರಡಿ, ಕಾಡಾನೆ ಸೇರಿದಂತೆ ಅನೇಕ ಕಾಡುಪ್ರಾಣಿಗಳು ವಾಸಿಸುತ್ತವೆ.ಅರಣ್ಯದಾದ್ಯಂತ ಹರಿಯುವ ಕಬಿನಿ ನದಿ ದಂಡೆಯು ಇಲ್ಲಿರುವ ಎಲ್ಲ ಕಾಡು ಪ್ರಾಣಿಗಳಿಗೆ ಆಹಾರವೊದಗಿಸಲು (ಬೇಟೆಯಾಡಲು) ತುಂಬ ಸಹಕಾರಿಯಾಗಿದೆ.
ಪಕ್ಷಿಸಂಕುಲ: ಬಂಡೀಪುರ ರಕ್ಷಿತಾರಣ್ಯದಲ್ಲಿ ವಿವಿಧ ಜಾತಿಯ ಪಕ್ಷಿ ಸಂಕುಲಗಳು ಪ್ರವಾಸಿಗರ ಮನ ಸೆಳೆಯುವುದರಲ್ಲಿ ಸಂಶಯವೇ ಇಲ್ಲ.ಕೆಂಪೆದೆ ಹೊಂದಿರುವ ಗುಬ್ಬಿ (ರಾಬಿನ್), ಕಾಡುಕೋಳಿ, ಗೌಜುಗ, ನವಿಲು,ಪಾರಿವಾಳ ಮತ್ತಿತರ ಬೇಟೆಗಾರ ಪಕ್ಷಿಗಳು ಇಲ್ಲಿ ನೆಲೆಸಿವೆ.
ಶ್ರೀಗಂಧ: ಕರ್ನಾಟಕದ ಹೆಮ್ಮೆಯಾಗಿರುವ ಶ್ರೀಗಂಧದ ಗಿಡಗಳು ಬಂಡೀಪುರ ಅರಣ್ಯದಲ್ಲಿ ಹೇರಳವಾಗಿವೆ. ಶ್ರೀಗಂಧದೊಂದಿಗೆ ರೋಸ್ ವುಡ್, ತೇಗಿನ ಗಿಡಗಳು ಹಾಗೂ ಹಲವಾರು ವನಸ್ಪತಿ, ಹಣ್ಣು -ಹಂಪಲಗಳ ಗಿಡಗಳು ಇಲ್ಲಿನ ಪ್ರಾಣಿಗಳಿಗೆ ಆಹಾರವೊದಗಿಸುತ್ತಿವೆ. ವಿವಿಧ ಜಾತಿಯ ಮತ್ತು ಗಾತ್ರದ ಹೆಬ್ಬಾವುಗಳೊಂದಿಗೆ ನಾಗರಹಾವು ಮತ್ತು ವಿವಿಧ ಜಾತಿಯ ವಿಷಯುಕ್ತ ಹಾವುಗಳು ಹಾಗೂ ವಿಷಮುಕ್ತ ಹಾವುಗಳನ್ನು ಕೂಡ ಬಂಡೀಪುರದಲ್ಲಿ ಕಾಣಸಿಗುತ್ತವೆ.
ವನ್ಯಜೀವನ ವೀಕ್ಷಿಸಲು ಆಯ್ಕೆಗಳು
ಅರಣ್ಯ ಪ್ರವಾಸೋದ್ಯಮ ಇಲಾಖೆಯು ಬಂಡೀಪುರ ರಕ್ಷಿತಾರಣ್ಯದಲ್ಲಿ ಪ್ರವಾಸಿಗರಿಗೆಂದೇ ವಿಶೇಷ ವಾಹನಗಳ ವ್ಯವಸ್ಥೆ ಮಾಡಿದೆ.ಬೆಳಗಿನಿಂದ ಸಂಜೆಯವರೆಗೆಮಾತ್ರ ಅರಣ್ಯದಲ್ಲಿ ಸಫಾರಿ ಮಾಡಲು ಸುರಕ್ಷಿತ ಎನ್ನುವ ಪ್ರವಾಸೋದ್ಯಮ ಇಲಾಖೆಯು ಸಫಾರಿಗೆ ಬಸ್ ಮತ್ತು ಜೀಪ್ ವ್ಯವಸ್ಥೆ ಕಲ್ಪಿಸಿದೆ.
ಬೆಳಗಿನ ಹೊತ್ತು ಮತ್ತು ಸಂಜೆಯ ಸಮಯದಲ್ಲಿ ಕಾಡುಪ್ರಾಣಿಗಳು ನೀರು ಕುಡಿಯಲೆಂದು ಕಾಡಿನಿಂದ ಹೊರಗೆ ಬರುವುದರಿಂದ ಪ್ರಾಣಿಪ್ರಿಯರು ಸಫಾರಿ ಸಮಯದಲ್ಲಿ ಕಣ್ತುಂಬಿಕೊಳ್ಳಬಹುದು. ಪ್ರವೇಶ ದ್ವಾರದಲ್ಲಿರುವ ಅರಣ್ಯ ಇಲಾಖೆಯ ಕಚೇರಿಯಲ್ಲಿ ಸಫಾರಿಯ ಟಿಕೆಟ್ ಪಡೆದುಕೊಳ್ಳಬಹುದು. ಆದರೆ ಖಾಸಗಿ ವಾಹನಗಳಿಗೆ ಮಾತ್ರ ಪ್ರವೇಶವಿಲ್ಲ. ಏಕೆಂದರೆ ಸುರಕ್ಷೆಯ ದೃಷ್ಟಿಯಿಂದ ಖಾಸಗಿ ವಾಹನಗಳನ್ನು ಸಫಾರಿಗೆ ಬಿಡುವುದಿಲ್ಲ.
ವಸತಿ ವ್ಯವಸ್ಥೆ: ಬಂಡೀಪುರ ಅರಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಸತಿ ವ್ಯವಸ್ಥೆಗೆಂದು ಇಲ್ಲಿ ಸಾಕಷ್ಟು ವ್ಯವಸ್ಥೆಗಳಿವೆ. ಜಂಗಲ್ ರೆಸಾರ್ಟ್ ಹಾಗೂ ಲಾಡ್ಜಿಂಗ್ಗಳು, ಹೊಟೆಲ್ ಗಳು ಇವೆ. ಅಲ್ಲದೇ ಗೋಪಾಲಸ್ವಾಮಿ ಬೆಟ್ಟ ಮತ್ತು ಕಬಿನಿ ಡ್ಯಾಂ ಹತ್ತಿರದಲ್ಲೇ ಇರುವುದರಿಂದ ವಸತಿ ವ್ಯವಸ್ಥೆ ಮಾಡಿಕೊಂಡು ಪ್ರಕೃತಿ ಸೌಂದರ್ಯ ಪ್ರವಾಸಿಗರು ಸವಿಯಬಹುದಾಗಿದೆ.ಸಿಕ್ಕಿರುವ ರಜೆಯನ್ನು ಅತೀ ಕಡಿಮೆ ವೆಚ್ಚದಲ್ಲಿ ಅತೀ ಹೆಚ್ಚಿನ ಸಮಯವನ್ನು ಆನಂದದಿಂದ ಕಳೆಯಬೇಕೆಂದಲ್ಲಿ ಬಂಡೀಪುರ ಅತ್ಯಂತ ಸೂಕ್ತ ಸ್ಥಳವೆನ್ನುಬಹುದು.
ಏಕೆಂದರೆ ಇಲ್ಲಿರುವ ಪ್ರಶಾಂತ ದಟ್ಟಾರಣ್ಯ, ಕಾಡಿನಲ್ಲಿನ ಸಫಾರಿ, ಕಬಿನಿ ಡ್ಯಾಂ ಸೇರಿದಂತೆ ಸಾಕಷ್ಟು ಪ್ರದೇಶಗಳನ್ನು ಮೈಮನಗಳಲ್ಲಿ ತುಂಬಿಕೊಳ್ಳುವುದರಿಂದಹೊಸ ಉತ್ಸಾಹ ಹೊಂದಿ ಎಂದಿನ ಕೆಲಸಕ್ಕೆ ರೆಡಿಯಾಗಬಹುದು.