ವಿರಾಮದ ವೇಳೆಯನ್ನು ಆರಾಮಾಗಿ ಕಳೆಯುವುದಕ್ಕೊಂದು ಸ್ಥಳವನ್ನು ಹುಡುಕುತ್ತಿದ್ದರೆ, ಕೇರಳಾದ ಅಲೆಪ್ಪಿ ನಿಮಗಾಗಿ ಕಾದಿದೆ. ಒಂದು ಕಡೆ ಕಡಲು, ಕಡಲಿನಾಳದ ಹವಳಗಳು ತೇಲಿಬಂದು ಸೃಷ್ಟಿಸಿದ ಹವಳದ ದಂಡೆಗಳು... ಪಾಮ್ ಮರಗಳ ದಟ್ಟ ಕಾನು... ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಅಗಾಧ ಜಲಧಿ... ಹಿನ್ನೀರು! ಈ ಎಲ್ಲವೂ ಒಂದೇ ಕಡೆ ಕಲೆತು ಆಗಿದ್ದು ಅಲ್ಲೆಪ್ಪಿ. ಈ ಸೌಂದರ್ಯಕ್ಕೆ ಸಿಕ್ಕ ಬಿರುದು ಪೂರ್ವದ ವೆನಿಸ್! ನಿಜಕ್ಕೂ ಅರ್ಥಪೂರ್ಣವಾದ ಹೋಲಿಕೆ ಇದು. ನಿಮ್ಮೊಳಗೆ ಮಧುರವಾದ ಭಾವನೆಗಳನ್ನು ಈ ಪ್ರದೇಶ ಉದ್ದೀಪಿಸುತ್ತದೆ. ಕಲ್ಪನೆಗಳೆಲ್ಲವೂ ಸಾಕಾರಗೊಂಡಷ್ಟು ದಿಗ್ಭ್ರಮೆಗೊಳಿಸುವ ಶಕ್ತಿ ಇಲ್ಲಿಯ ಭೌಗೋಳಿಕ ರಚನೆಗೆ ಇದೆ. ಅಲೆಪ್ಪಿಗೆ ಒಮ್ಮೆ ಬಂದು ಇಲ್ಲಿಯ ಜಲಮಾರ್ಗಗಳಲ್ಲಿ ಸಂಚರಿಸಿದ ಆ ಕ್ಷಣಗಳನ್ನು ಜೀವಮಾನದಲ್ಲಿ ನೀವು ಮರೆಯಲಾರಿರಿ!
ಇಲ್ಲಿನ ಕಡಲ ತೀರ, ಸರೋವರಗಳು, ದೋಣಿ ಮನೆ ಇವೆಲ್ಲವೂ ನಿಮಗೆ ಹೊಸ ಕಲ್ಪನೆಯನ್ನೇ ಗರಿಗೆದರಿಸುತ್ತವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತ ಹಿನ್ನೀರಿನಲ್ಲಿ ದೋಣಿ ವಿಹಾರ ಮಾಡುತ್ತ ಜಗತ್ತೇ ಮರೆಯಬಹುದಾದಷ್ಟು ಅನುಭೂತಿ ನಿಮ್ಮದಾಗುತ್ತದೆ.
ದೋಣಿ ವಿಹಾರ:
ವಿಶ್ವದ ನಾನಾ ಭಾಗಗಳಿಂದ ದೊಣಿ ವಿಹಾರಕ್ಕಾಗಿಯೇ ಜಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೋಣಿ ವಿಹಾರವನ್ನು ನಡೆಸುವುದಕ್ಕೆಂದೇ ಹಲವಾರು ಕ್ಲಬ್ಗಳು ಇಲ್ಲಿವೆ. ನೆಹರೂ ಟ್ರೋಫಿ ಹೆಸರಿನಲ್ಲಿ ಪ್ರತಿವರ್ಷವೂ ದೋಣಿವಿಹಾರ ಸ್ಫರ್ಧೆಯನ್ನೂ ನಡೆಸಿ, ರೋಲಿಂಗ್ ಟ್ರೋಫಿ ನೀಡಲಾಗುತ್ತದೆ. ಈ ವಿಶಿಷ್ಠ ಸ್ಪರ್ಧೆ ಕಳೆದ ಅರವತ್ತು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವುದು ವಿಶೇಷವಾಗಿದೆ. ನಿರ್ಧಿಷ್ಟ ಗುರಿಯನ್ನು ಯಾರು ಮೊದಲು ತಲುಪುತ್ತಾರೆ? ಅವರ ಅನುಭವ, ಸಾಹಸ ಇತ್ಯಾಧಿಗಳನ್ನು ಪರಿಗಣಿಸಿ ಬಹುಮಾನ ವಿತರಿಸಲಾಗುತ್ತದೆ. ಪ್ರತೀ ವರ್ಷದ ಅಗಸ್ಟ್ ತಿಂಗಳ ಎರಡನೇ ಶನಿವಾರ ಈ ಪಂದ್ಯವನ್ನು ಆಯೋಜಿಸಲಾಗುತ್ತದೆ. ಇದನ್ನು ವೀಕ್ಷಿಸುವ ಸಲುವಾಗಿ ಲಕ್ಷಾಂತರ ಜನರು ಆಗಮಿಸುತ್ತಾರೆ. ನೋಡುತ್ತಾ ನಿಂತರೆ ಮನಸ್ಸಿನಲ್ಲಿ ವಿದ್ಯುತ್ಸಂಚಾರ! ಅಂದಹಾಗೆ ಮಳೆಯ ವರಸೆ ಹೇಗಿದೆ ಎಂಬುದನ್ನು ಅವಲಂಬಿಸಿ ನೀವು ಅಲೆಪ್ಪಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು.
ಆಧ್ಯಾತ್ಮಿಕ ಕೇಂದ್ರವೂ ಹೌದು:
ಕೇವಲ ದೋಣಿ ವಿಹಾರ, ಪ್ರವಾಸ, ಚಾರಣದ ಉದ್ದೇಸವಷ್ಟೇ ಅಲ್ಲ, ಅಲೆಪ್ಪಿಯನ್ನು ಭೇಟಿ ಮಾಡಲುಅಧ್ಯಾತ್ಮಿಕ ಕಾರಣವೂ ಇದೆ. ಮನಸಿಗೆ ಮುಧ ನೀಡುವ ಹಲವಾರು ಆಧ್ಯಾತ್ಮಿಕ ತಾಣಗಳ ನೆಲೆಬೀಡಿದು. ದೇವಾಲಯಗಳ ಭೇಟಿಯ ಮೂಲಕ ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ಹುಡುಕುತ್ತಿದ್ದವರಾದರೆ ಖಂಡಿತವಾಗಿಯೂ ಆ ಖುಷಿ ನಿಮಗೆ ಇಲ್ಲಿ ಸಿಗುತ್ತದೆ. ಅಂಬಾಲಪುಳದ ಶ್ರೀಕೃಷ್ಣ ದೇವಸ್ಥಾನ, ಮುಲ್ಲಕ್ಕಲ್ಲಿನ ರಾಜೇಶ್ವರಿ ದೇವಸ್ಥಾನ, ಚೆಟ್ಟಿಕುಲಂಗರ ಭಗವತಿ ದೇವಾಲಯ, ಮನ್ನಾರಸಾಲಾದ ಶ್ರೀ ನಾಗರಾಜ ದೇವಾಲಯ, ಮತ್ತು ಎಡತುವಾ ಚರ್ಚ್, ಸೇಂಟ್ ಸೆಬಾಸ್ಟಿಯನ್ ಚರ್ಚ್, ಚಂಪಾಕುಲಮ್ ಚರ್ಚ್ ಮುಂತಾದವು ಇಲ್ಲಿಯ ಪ್ರಸಿಧ್ದ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳು. ಕ್ರಿಶ್ಚಿಯನ್ ಧರ್ಮ ಪ್ರಸಾರಕ್ಕಾಗಿ ದಕ್ಷಿಣ ಭಾರತಕ್ಕೆ ಬಂದಿದ್ದ ಸೇಂಟ್ ಥಾಮಸ್ ಇಲ್ಲಿ ಇಲ್ಲಿ ತಂಗಿದ್ದ ಎಂಬ ನಂಬಿಕೆಯೂ ಇಲ್ಲಿನ ಜನರಲ್ಲಿದೆ. ಬೌದ್ಧ ಧರ್ಮದ ಪ್ರೇರಣೆಗೂ ಈ ಪ್ರದೇಶ ಒಳಗಾಗಿದೆ. ಇಲ್ಲಿರುವ ಭೌಧ್ಧ ಸ್ಮಾರಕಗಳನ್ನು ಕೇರಳ ಸಂರಕ್ಷಿಸಿದೆ. ಕುರುಮಾಡಿ ಕುಟ್ಟನ್ ಪ್ರತಿಮೆ ಇಲ್ಲಿನ ಚಾರಿತ್ರಿಕ ವೈಭವವನ್ನು ನೆನಪುಮಾಡಿಕೊಡುತ್ತದೆ. ಇದಕ್ಕೆ ಧಾರ್ಮಿಕ ಲೇಪವೂ ಇದೆ.
ಮನಮೋಹಕ ಪರಿಸರದ ವರ್ಣಮಯ ಜಗತ್ತು!
ಕೇರಳದ ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಅಲೆಪ್ಪಿಗೆ ಪ್ರಮುಖ ಸ್ಥಾನ. ಇಲ್ಲಿನ ಫಥಿರ್ಮನಾಲ್ ಎಂಬ ಧ್ವೀಪ ಸರಣಿಯಂತೂ ಮನಮೋಹಕ. ಎಲ್ಲೆಲ್ಲಿಂದಲೋ ವಲಸೆ ಬಂದ ಹಕ್ಕಿಗಳು ಇಲ್ಲಿಯ ವೈವಿಧ್ಯತೆಯನ್ನು ಹೆಚ್ಚಿಚಿವೆ. ಇದು ಅಪರೂಪದ ಪಕ್ಷಗಳ ವಾಸಸ್ಥಾನವಾಗಿ ಗಮನ ಸೆಳೆಯುತ್ತದೆ. ನಿಮ್ಮ ಕೇರಳ ಪ್ರವಾಸದ ಅನುಭವದಲ್ಲಿ ಅಲ್ಲೆಪ್ಪಿ ಸದಾ ನೆನಪಿನಲ್ಲುಳಿಯುವಂತದ್ದು. ವೇಂಬನಾಡ್ ಸರೋವರ ಇಲ್ಲಿನ ಭೂ ವಿನ್ಯಾಸಕ್ಕೆ ಹೊಸ ಕಾಂತಿಯನ್ನು ನೀಡಿದಂತೆ ಭಾಸವಾಗುತ್ತದೆ. ’ಕೇರಳದ ಅನ್ನದ ಪಾತ್ರೆ’ ಎಂದೇ ಹೆಸರಾದ ಈ ಪ್ರದೇಶಕ್ಕೆ ನೀವು ಖಂಡಿತವಾಗಿಯೂ ಭೇಟಿ ನೀಡಲೇ ಬೇಕು. ಆ ಪುಳಕ ನಿಮ್ಮನ್ನು ಬಹುಕಾಲ ಕಾಡುತ್ತದೆ. ನಿಮ್ಮ ರಜಾ ದಿನಗಳನ್ನು ಮತ್ತಷ್ಟು ಪರಿಪೂರ್ಣವಾಗಿಸುವ ಎಲ್ಲ ರೀತಿಯ ಪ್ರಾಕೃತಿಕ ಸಂಪತ್ತು ಇಲ್ಲಿ ನೆಲೆಸಿದೆ.
ಅಲ್ಲೆಪ್ಪಿ ಭೇಟಿ ಯಾವಾಗ?
ಅಲ್ಲೆಪ್ಪಿಗೆ ಬರಲು ನವೆಂಬರ್ನಿಂದ ಪೆಭ್ರುವರಿಯವರೆಗೂ ಸಕಾಲ.ಇಲ್ಲಿಗೆ ಬರುವುದಕ್ಕೆ ರೈಲು, ವಿಮಾನ ಮತ್ತು ಬಸ್ ವ್ಯವಸ್ಥೆಯನ್ನು ನೀವು ಅವಲಂಬಿಸಬಹುದು. ಅಲ್ಲೆಪ್ಪಿಯಲ್ಲಿ ವಿಮಾನ ನಿಲ್ದಾಣ ಇಲ್ಲದಿದ್ದರೂ ಕೆಲವೇ ನೂರು ಕಿ.ಮಿ ಅಂತರದಲ್ಲಿ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ದೇಶದ ಎಲ್ಲಾ ಮಹಾನಗರಗಳಿಂದ ಇಲ್ಲಿಗೆ ರೈಲು ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ ಸಮಖ್ಯೆ 47 ಈ ಪಟ್ಟಣದ ನಡುವೆಯಿಂದಲೇ ಹಾಯ್ದು ಹೋಗಿರುವುದುರಿಂದ ಸಾಕಷ್ಟು ಬಸ್ ಸೌಕರ್ಯವೂ ಇದೆ.
ಐತಿಹಾಸಿಕ, ಪೌರಾಣಿಕ ಪ್ರಸಿದ್ಧಿ:
ಇತಿಹಾಸದ ಬಗ್ಗೆ, ಪುರಾಣದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಅಲ್ಲೆಪ್ಪಿಗೆ ಭೇಟಿ ನೀಡಬೇಕು. ರಾಜ, ರಾಣಿಯರು, ರಾಜಾಶ್ರಯದಲ್ಲಿದ್ದ ಕವಿಗಳು ಬರೆದ ಕಾವ್ಯಗಳನ್ನು ತಿಳಿದುಕೊಳ್ಳುವ ಮನೊಭಾವದವರು ನೀವಾಗಿದ್ದರೆ ಖಂಡಿತವಾಗಿಯೂ ಇಲ್ಲಿ ನಿಮ್ಮ ಕುತೂಹಲ ತಣಿಯುತ್ತದೆ. ಪಾಂಡವನ್ ಗುಡ್ಡ ಹಾಗೂ ಕೃಷ್ಣಪುರಂ ಕ್ಷೇತ್ರಗಳು ಈ ಸಾಲಿನಲ್ಲಿ ಪ್ರಸಿದ್ಧವಾಗಿವೆ. ಕೌರವರೊಂದಿಗೆ ಕಟ್ಟಿದ ಪಂಥದಲ್ಲಿ ಸೋತು, ಪಾಂಡವರು ವನವಾಸ ಅನುಭವಿಸುತ್ತಿದ್ದ ಕಾಲದಲ್ಲಿ ಇಲ್ಲಿ ಬಂದು ನೆಲೆಸಿದ್ದರೆನ್ನಲಾದ ಗುಹೆ ಇಲ್ಲಿಯ ವಿಶೇಷತೆ. ತಿರುವಾಂಕೂರಿನ ಅನಿಜಾ ತಿರುನಾಳ್ ಮಾರ್ತಾಂಡ ವರ್ಮ 18 ನೇ ಶತಮಾನದಲ್ಲಿ ಕೃಷ್ಣಪುರಂ ದೇವಸ್ತಾನವನ್ನು ಕಟ್ಟಿದನೆಂಬ ಪ್ರತೀತಿ ಇದೆ. ಶಿಥಿಲಾವಸ್ಥೆ ತಲುಪಿದ್ದ ಮಾರ್ತಾಂಡ ವರ್ಮನ ಕೊಟೆಯನ್ನು ಕೇರಳದ ಪುರಾತತ್ವ ಇಲಾಖೆ ಪುನಶ್ಚೇತನಗೊಳಿಸಿದೆ. ಈಗ ಇದೆಲ್ಲವನ್ನು ಪರಾತತ್ವ ಇಲಾಖೆ ನಿರ್ವಹಣೆ ಮಾಡುತ್ತಿದೆ.