ಅದಿಲಾಬಾದ್ ಜಿಲ್ಲೆಯ ನಗರ ಪಾಲಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಅದಿಲಾಬಾದ್ ಪಟ್ಟಣ. ಜಿಲ್ಲೆಯ ಕೇಂದ್ರವೂ ಇದೇ ಆಗಿದೆ. ಈ ಜಿಲ್ಲೆ ದಕ್ಷಿಣ ಭಾರತ ರಾಜ್ಯಗಳಲ್ಲಿ ಒಂದಾಗಿರುವ ತೆಲಂಗಾಣದ ಒಂದು ಭಾಗವಾಗಿದೆ. ಸ್ಥಳೀಯ ಪುರಾಣದ ಪ್ರಕಾರ, ಈ ಸ್ಥಳಕ್ಕೆ ಈ ಹೆಸರು ಬರಲು ಕಾರಣ ಮಹಮದ್ ಆದಿಲ್ ಷಾ. ಈತ ಬಿಜಾಪುರವನ್ನು ಆಳಿದ ಅರಸನಾಗಿದ್ದ.
ಅದಿಲಾಬಾದ್ಗೆ ವರ್ಣಮಯ ಇತಿಹಾಸವಿದೆ. ಅನೇಕ ಧರ್ಮ ಹಾಗೂ ವರ್ಣಗಳ ಬೆಸುಗೆಯ ತಾಣವಾಗಿ ಇದು ಜನಪ್ರಿಯವಾಗಿದೆ. ಮೌರ್ಯರು, ನಾಗಪುರದ ಭೋನ್ಸಲೆ ರಾಜರು, ಮೊಘಲರು ಸೇರಿದಂತೆ ಹಲವು ರಾಜಮನೆತನದವರು ಹಾಗೂ ದಕ್ಷಿಣ ಭಾರತದ ಹಲವು ಅರಸರು ಈ ಭಾಗವನ್ನು ಆಳಿದ್ದಾರೆ. ಇದಲ್ಲದೇ ಈ ಭಾಗವನ್ನು ಉತ್ತರ ಭಾರತವನ್ನು ಆಳಿದ ಅರಸರಾದ ಶಾತವಾಹನರು, ವಕಟಕರು, ರಾಷ್ಟ್ರಕೂಟರು, ಕಾಕತೀಯರು, ಚಾಲುಕ್ಯರು ಹಾಗೂ ಬೀದರ್ನ ಇಮಾದ್ ಷಾಹಿಗಳು ಈ ಪ್ರದೇಶದಲ್ಲಿ ರಾಜ್ಯಭಾರ ನಡೆಸಿದ್ದಾರೆ. ಇದಕ್ಕೆ ಕಾರಣ ಈ ಪ್ರದೇಶ ಹೊಂದಿರುವ ಅನುಕೂಲಕರ ಭೌಗೋಳಿಕ ತಾಣ.
ಈ ಪಟ್ಟಣ ಕೇಂದ್ರ ಹಾಗೂ ದಕ್ಷಿಣ ಭಾರತದ ಗಡಿ ಭಾಗದಲ್ಲಿದೆ. ಇದರಿಂದ ಎರಡೂ ಭಾಗದವರನ್ನು ಆಕರ್ಷಿಸುತ್ತದೆ. ಇದರ ಪರಿಣಾಮವೇ ಅದಿಲಾಬಾದ್ನ ಆಧುನಿಕ ಇತಿಹಾಸ ತೆಲುಗು ಹಾಗೂ ಮರಾಠಿ ಸಂಸ್ಕೃತಿಯ ಕುತೂಹಲಕಾರಿ ಮಿಶ್ರಣವಾಗಿ ಗೋಚರಿಸುತ್ತದೆ. ಈ ಎರಡೂ ಸಂಸ್ಕೃತಿಯನ್ನು ಅನುಸರಿಸುವ ನಾಗರಿಕರು ಅದಿಲಾಬಾದ್ನಲ್ಲಿ ಇದ್ದಾರೆ. ಆದ್ದರಿಂದ ಈ ಎರಡೂ ಸಂಸ್ಕೃತಿಗಳು ಇಲ್ಲಿನ ನಿವಾಸಿಗಳ ಒಂದು ಭಾಗವಾಗಿ ಮಾರ್ಪಟ್ಟಿದೆ. ಇದಲ್ಲದೇ ಇತ್ತೀಚೆಗೆ ಇಲ್ಲಿನ ಕೆಲ ಭಾಗದಲ್ಲಿ ಬೆಂಗಾಲಿ, ರಾಜಸ್ಥಾನಿ, ಗುಜರಾತಿ ಸಂಸ್ಕೃತಿಗಳೂ ಗೋಚರಿಸಲು ಆರಂಭಿಸಿವೆ.
ಅದಿಲಾಬಾದ್ನ ಸುವರ್ಣಯುಗ
ಮೊಘಲರ ಕಾಲದಲ್ಲಿ ಅದಿಲಾಬಾದ್ ಅತಿ ಹೆಚ್ಚು ಪ್ರಾಧಾನ್ಯತೆ ಹೊಂದಿತ್ತು. ಔರಂಗಜೇಬ ಈ ಭಾಗವನ್ನು ವಿಕ್ಟರಿ ಆಫ್ ಡೆಕ್ಕನ್ ಎಂದು ಗುರುತಿಸಿ ಇದರ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿದ್ದ. ದಕ್ಷಿಣ ಭಾರತದಲ್ಲಿ ಆತನ ರಾಜ್ಯಭಾರ ಸಂಭಾಳಿಸಲು ಆತ ಈ ಕಾರ್ಯ ಮಾಡಿದ್ದ. ಔರಂಗಜೇಬನ ಅಧಿಕಾರಾವಧಿಯಲ್ಲಿ ಪ್ರಮುಖ ವಾಣಿಜ್ಯ ಹಾಗೂ ಹಣಕಾಸು ವಲಯವಾಗಿ ಅದಿಲಾಬಾದ್ ಅಭಿವೃದ್ಧಿಗೊಂಡಿತ್ತು.
ಮೆಣಸಿನ ಕಾಳು, ಬಟ್ಟೆ ಇತರೆ ಉತ್ಪನ್ನಗಳ ಪ್ರಮುಖ ರಫ್ತು ಕೇಂದ್ರವಾಗಿ ಜನಪ್ರಿಯತೆ ಹೊಂದಿತ್ತು. ಸ್ಥಳೀಯ ನಗರಗಳು, ಪಟ್ಟಣ ಹಾಗೂ ದಿಲ್ಲಿಯಿಂದ ಕೂಡ ಈ ವಸ್ತುಗಳನ್ನು ತರಿಸಿ ಇಲ್ಲಿಂದ ರವಾನೆ ಮಾಡಲಾಗುತ್ತಿತ್ತು. ಈ ಭಾಗದ ಆರ್ಥಿಕ ಸ್ಥಿತಿ ಸುಸ್ಥಿರವಾಗಿ ಇರುವಂತೆ ಔರಂಗಜೇಬ ನೋಡಿಕೊಂಡಿದ್ದ. ದಕ್ಷಿಣ ಭಾರತ ಸಂಪೂರ್ಣವಾಗಿ ತನ್ನ ಹಿಡಿತದಲ್ಲಿರುವ ಸಂದರ್ಭದಲ್ಲಿ ಆತ ಅದಿಲಾಬಾದ್ನ್ನು ಎಂಪೈರ್ ಆಫ್ ಇಂಡಿಯಾ ಎಂದು ಘೋಷಿಸಿದ್ದ.
ಅದಿಲಾಬಾದ್ನ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಇದು ಈಸ್ಟ್ ಇಂಡಿಯಾ ಕಂಪನಿ ಡೆಕ್ಕನ್ಗೆ ಬರುವವರೆಗೆ ಮಾತ್ರ. ಆ ಮೇಲೆ ಎಲ್ಲವೂ ಬದಲಾಯಿತು. ನಿಜಾಮರು ಹಣದಾಸೆಗೆ ಅದಿಲಾಬಾದ್ ಹಾಗೂ ಸುತ್ತಲಿನ ಪ್ರದೇಶವನ್ನು ಈಸ್ಟ್ ಇಂಡಿಯಾ ಕಂಪನಿಗೆ ಮಾರಿ ಬಿಟ್ಟರು. 1860ರಲ್ಲಿ ಅದಿಲಾಬಾದ್ನಲ್ಲಿ ಜನರು ರಾಮಜಿ ಗೊಂಡ ನೇತೃತ್ವದಲ್ಲಿ ದಂಗೆ ನಡೆಸಿದರು. 1940 ರ ಹೊತ್ತಿನಲ್ಲಿ ಮತ್ತೆ ಸಾಕಷ್ಟು ಹೋರಾಟಗಳು ಆರಂಭವಾದವು.
ಇಂದು ಅದಿಲಾಬಾದ್ ಜಿಲ್ಲೆಯು ತೆಲಂಗಾಣ ರಾಜ್ಯದ ಒಂದು ಪ್ರಮುಖ ಪ್ರವಾಸಿ ತಾಣವಾಗಿ ಗುರುತಾಗಿದೆ. ಇಲ್ಲಿನ ಕೆಲ ತಾಣಗಳು ನೋಡಲೇ ಬೇಕಾದಂತವು. ಇವುಗಳಲ್ಲಿ ಪ್ರಮುಖವಾದವು ಕುಂತಳ ಜಲಪಾತ, ಸೇಂಟ್ ಜೋಸೆಫ್ ಕ್ಯಾಥೆಡ್ರಲ್, ಕಡಂ ಅಣೆಕಟ್ಟು, ಸಾದರಮತ್ತ ಅಣೆಕಟ್ಟು, ಮಹಾತ್ಮಗಾಂಧಿ ಉದ್ಯಾನ ಹಾಗೂ ಬಸಾರ ಸರಸ್ವತಿ ದೇವಾಲಯ ಪ್ರಮುಖವಾದವುಗಳು.
ಸುಲಭ ಸಂಪರ್ಕ ನಗರಿ
ಅದಿಲಾಬಾದ್ ರಸ್ತೆ ಹಾಗೂ ರೈಲು ಮಾರ್ಗದ ಉತ್ತಮ ಸಂಪರ್ಕವಿದೆ. ನಗರದ ಮೂಲಕವೇ ರಾಷ್ಟ್ರೀಯ ಹೆದ್ದಾರಿ ಏಳು ಹಾದು ಹೋಗಿದೆ. ಅಕ್ಕಪಕ್ಕದ ಪಟ್ಟಣಗಳು, ನಗರಗಳಿಂದ ಖಾಸಗಿ ಟ್ಯಾಕ್ಸಿ ಹಾಗೂ ಬಸ್ಗಳ ಸಂಪರ್ಕ ನಗರಕ್ಕೆ ಚೆನ್ನಾಗಿದೆ. ಇಲ್ಲಿ ಓಡುವ ಬಸ್ಗಳು ಡಿಲಕ್ಸ್ ಅಥವಾ ಹವಾನಿಯಂತ್ರಿತ ಬಸ್ಗಳಲ್ಲ. ಆದರೆ ಇಲ್ಲಿಗೆ ಹೈದ್ರಾಬಾದ್, ಮುಂಬಯಿಯಿಂದ ಈ ವಿಶೇಷ ಬಸ್ಗಳು ಬರುತ್ತವೆ. ಎಲ್ಲಾ ಬಸ್ಗಳು ಹವಾನಿಯಂತ್ರಿತ ಹಾಗೂ ಡಿಲಕ್ಸ್ ಅಲ್ಲದಿದ್ದರೂ ಪ್ರಯಾಣ ಅಷ್ಟೊಂದು ತ್ರಾಸದಾಯಕವಾಗಿಲ್ಲ. ಈ ಪಟ್ಟಣಕ್ಕೆ ಹತ್ತಿರ ಇರುವ ದೊಡ್ಡ ನಗರ ನಾಗಪುರ.
ಆದರೆ ಜನರಿಗೆ ಇಲ್ಲಿಗೆ ಬರಲು ಆರಾಮದಾಯಕ ಪ್ರಯಾಣ ಹೈದ್ರಾಬಾದ್ನಿಂದ ಲಭಿಸುತ್ತದೆ. ಅದಿಲಾಬಾದ್ ಉತ್ತಮ ರೈಲು ಸಂಪರ್ಕ ಹೊಂದಿದೆ. ನಾಗಪುರ, ತಿರುಪತಿ, ಹೈದ್ರಾಬಾದ್, ನಾಸಿಕ್ ಹಾಗೂ ಇತರೆಡೆಯಿಂದ ರೈಲು ಸಂಪರ್ಕ ಉತ್ತಮವಾಗಿದೆ. ಇದಲ್ಲದೇ ಮಹಾರಾಷ್ಟ್ರದ ನಾಸಿಕ್, ಮುಂಬಯಿ, ನಾಗಪುರ, ಸೊಲ್ಲಾಪುರ ಮತ್ತಿತರ ಕಡೆಗಳಿಂದಲೂ ರೈಲು ಆಗಮಿಸುತ್ತವೆ. ಇದಕ್ಕೆ ಸಮೀಪದ ವಿಮಾನ ನಿಲ್ದಾಣ ನಾಗಪುರ ಹಾಗೂ ಹೈದ್ರಾಬಾದ್. ನಾಗಪುರ ವಿಮಾನ ನಿಲ್ದಾಣ ಡೊಮೆಸ್ಟಿಕ್ ವಿಮಾನ ನಿಲ್ದಾಣವಾಗಿದೆ. ಆದರೆ ದೇಶದ ಇತರೆಡೆಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಹೈದ್ರಾಬಾದ್ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ರಾಷ್ಟ್ರದ ಇತರೆಡೆ ಹಾಗೂ ವಿದೇಶದಿಂದಲೂ ವೈಮಾನಿಕ ಸಂಪರ್ಕ ಹೊಂದಿದೆ.
ಅದಿಲಾಬಾದ್ ವಿಶಿಷ್ಟ ಹವಾಮಾನ ಗುಣ ಹೊಂದಿದೆ. ಬೇಸಿಗೆಯಲ್ಲಿ ವಿಪರೀತ ಸೆಖೆ ಇಲ್ಲಿರುತ್ತದೆ. ಸಾಮಾನ್ಯ ಚಳಿ ಚಳಿಗಾಲದಲ್ಲಿರುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಸೆಖೆ ವಿಪರೀತವಾಗಿರುತ್ತದೆ. ತೇವಾಂಶರಹಿತವಾಗಿದ್ದು, ಹೊರಗೆ ಓಡಾಡುವುದು ಬಹಳ ಕಷ್ಟ. ಅದಿಲಾಬಾದ್ಗೆ ಪ್ರವಾಸ ಹಮ್ಮಿಕೊಳ್ಳಲು ವರ್ಷದಲ್ಲಿ ಇದು ಉತ್ತಮ ಕಾಲವಲ್ಲ. ಅಲ್ಲದೇ ಈ ಭಾಗದಲ್ಲಿ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿಯುವುದಿಲ್ಲ. ಇದರಿಂದ ಜಲಾಶಯಗಳನ್ನು ನಿರ್ಮಿಸಿ ನಗರಕ್ಕೆ ನೀರು ಪೂರೈಸಲಾಗುತ್ತದೆ.
ಚಳಿಗಾಲ ಅದಿಲಾಬಾದ್ಗೆ ಬರಲು ಉತ್ತಮ ಸಮಯ. ಈ ಸಂದರ್ಭದಲ್ಲಿ ವಾತಾವರಣ ಕೊಂಚ ತಂಪಾಗಿರುತ್ತದೆ. ಈ ಸಂದರ್ಭದಲ್ಲಿ ಪ್ರವಾಸ ಹಮ್ಮಿಕೊಳ್ಳಲು ಹಲವರು ಇಚ್ಛಿಸುತ್ತಾರೆ ಮತ್ತು ಸಲಹೆ ನೀಡುತ್ತಾರೆ. ಒಂದೊಮ್ಮೆ ಚಳಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪ್ರವಾಸಕ್ಕೆ ಹೊರಡುವಾಗ ಜಾಕೆಟ್ ಅಥವಾ ಶಾಲಿನೊಂದಿಗೆ ಬರಲು ಸಲಹೆ ನೀಡಲಾಗುತ್ತದೆ. ಸಂಜೆ ಹಾಗೂ ರಾತ್ರಿ ಹೊತ್ತು ಇಲ್ಲಿ ಚಳಿ ಹೆಚ್ಚಿರುತ್ತದೆ.