Search
  • Follow NativePlanet
Share
» »ಉಗ್ರನರಸಿಂಹ ಸೌಮ್ಯನಾದ ಸ್ಥಳ!

ಉಗ್ರನರಸಿಂಹ ಸೌಮ್ಯನಾದ ಸ್ಥಳ!

ಮದುರೈ ನಗರದಿಂದ ಎಂಟು ಕಿ.ಮೀ ದೂರದಲ್ಲಿರುವ ಆನೈಮಲೈ ಶಿಖರದ ಬುಡದಲ್ಲಿ ಸ್ಥಿತವಿರುವ ನರಸಿಂಗಂ ಹಳ್ಳಿಯು ಯೋಗ ನರಸಿಂಹ ದೇವಾಲಯಕ್ಕೆ ಹೆಸರುವಾಸಿಯಾಗಿದೆ

By Vijay

ಇದೊಂದು ಅದ್ಭುತ ಶ್ರೀಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಂತಕಥೆಯೂ ಸಹ ಅಷ್ಟೆ ರೋಚಕವಾಗಿದೆ. ಈ ಕ್ಷೇತ್ರವು ಪ್ರಮುಖವಾಗಿ ವಿಷ್ಣುವಿನ ಉಗ್ರ ವತಾರವಾದ ನರಸಿಂಹ ದೇವರಿಗೆ ಮುಡಿಪಾದ ದೇವಾಲಯವನ್ನು ಹೊಂದಿದೆ. ಈ ಕ್ಷೇತ್ರದ ಹೆಸರೆ ನರಸಿಂಗಂ ಹಾಗೂ ಇಲ್ಲಿರುವ ದೇವಾಲಯ ಯೋಗ ನರಸಿಂಹ ದೇವಾಲಯ.

ದಂತಕಥೆಯಂತೆ ರೋಮಸ ಮುನಿಯೋರ್ವರು ವಿಷ್ಣುವಿನ ಪರಮ ಭಕ್ತರಾಗಿದ್ದರು ಹಾಗೂ ಉಗ್ರ ನರಸಿಂಹನ ರೂಪದಲ್ಲಿರುವ ವಿಷ್ಣುವನ್ನು ದರ್ಶಿಸಬೇಕೆಂಬ ಬಯಕೆ ಹೊಂದಿದ್ದರು ಹಾಗೂ ಸಂತಾನಾಪೇಕ್ಷೆಯಲ್ಲಿದ್ದರು. ಅದಕ್ಕಾಗಿ ಸೂಕ್ತ ಸ್ಥಳವೊಂದರ ಹುಡುಕಾಟದಲ್ಲಿದ್ದರು.

ಉಗ್ರನರಸಿಂಹ ಸೌಮ್ಯನಾದ ಸ್ಥಳ!

ಚಿತ್ರಕೃಪೆ: Ssriram mt

ಪ್ರಸ್ತುತ ದೇವಾಲಯವಿರುವ ಗಜಗಿರಿ ಕ್ಷೇತ್ರದ ಬಳಿಯಿರುವ (ಇಂದಿನ ಆನೈಮಲೈ) ಸ್ಥಳಕ್ಕೆ ಬಂದಾಗ ಅಲ್ಲಿರುವ ಕಮಲಗಳಿಂದ ತುಂಬಿದ ಸರೋವರವನ್ನು ನೋಡಿ ಆನಂದಿತರಾದರು ಹಾಗೂ ಅಲ್ಲಿಯೆ ವಿಷ್ಣುವನ್ನು ಕುರಿತು ತಪಸ್ಸನ್ನಾಚರಿಸಲು ಪ್ರಾರಂಭಿಸಿದರು. ಇದರಿಂದ ಪ್ರಸನ್ನನಾದ ವಿಷ್ಣು ನರಸಿಂಹನ ಅವತಾರದಲ್ಲಿ ಅವರಿಗೆ ದರ್ಶನವಿತ್ತನು.

ಆದರೆ ನರಸಿಂಹನ ಅವತಾರದಲ್ಲಿದ್ದಾಗ ವಿಷ್ಣುವಿನ ತೇಜಸ್ಸು ಎಷ್ಟು ಪ್ರಖರವಾಗಿತ್ತೆಂದರೆ ಲೋಕದೆಲ್ಲೆಡೆ ಅಲ್ಲೋಲ ಕಲ್ಲೋಲ ಉಂಟಾಯಿತು. ಎಲ್ಲರಿಗೂ ಆ ತೇಜಸ್ಸನ್ನು ತಡೆಯಲಾಗಲಿಲ್ಲ. ಆಗ ದೇವತೆಗಳೆಲ್ಲ ಸೇರಿ ಲಕ್ಷ್ಮಿ ದೇವಿಯನ್ನು ಪರಿ ಪರಿಯಾಗಿ ವಿನಂತಿಸಿದರು. ಪರಿಸ್ಥಿತಿ ಅರ್ಥೈಸಿಕೊಂಡ ಲಕ್ಷ್ಮಿದೇವಿಯು ನರಸಿಂಗವಲ್ಲಿಯಾಗಿ ನರಸಿಂಹನಲ್ಲಿ ಐಕ್ಯಳಾದಳು.

ಉಗ್ರನರಸಿಂಹ ಸೌಮ್ಯನಾದ ಸ್ಥಳ!

ಮದುರೈ ಯೋಗನರಸಿಂಹ, ಚಿತ್ರಕೃಪೆ: Skrishnankec

ಆ ಸಂದರ್ಭದಲ್ಲಿ ಉಗ್ರ ನರಸಿಂಹನು ಸೌಮ್ಯ ಚಿತ್ತದ ಯೋಗ ನರಸಿಂಹನಾಗಿ ಶಾಂತನಾದನು ಹಾಗೂ ಮುನಿಗಳಿಗೆ ಬೇಕಾಗಿದ್ದ ವರವನ್ನು ದಯಪಾಲಿಸಿದನು. ಈ ರೀತಿಯಾಗಿ ಆನೈಮಲೈ ಶಿಖರದ ಕೆಳಗೆ ಪೆರುಮಾಳನ ಈ ಅದ್ಭುತ ದೇವಾಲಯವಿರುವುದನ್ನು ಕಾಣಬಹುದು. ಇದು ಮದುರೈನಿಂದ ಮೇಲೂರಿಗೆ ಹೋಗುವ ಮಾರ್ಗದಲ್ಲಿ ಸುಮಾರು ಎಂಟು ಕಿ.ಮೀ ಗಳಷ್ಟು ದೂರದಲ್ಲಿದೆ.

ಇನ್ನೊಂದು ದಂತಕಥೆಯ ಪ್ರಕಾರ, ಹಿಂದೆ ಚೋಳ ರಾಜನೊಬ್ಬ ಪಾಂಡ್ಯ ರಾಜನನ್ನು ಯುದ್ಧದಲ್ಲಿ ಸೊಲಿಸುವ ಆಸೆಯಲ್ಲಿದ್ದ. ಆದರೆ ಪಾಂಡ್ಯ ರಾಜನು ಸಾಕಷ್ಟು ಶಕ್ತಿಶಾಲಿ ಸೇನೆ ಹೊಂದಿದ್ದರಿಂದ ಚೋಳ ರಾಜನಿಗೆ ಅವನನು ಸೋಲಿಸುದು ಸುಲಭವಾಗಿರಲಿಲ್ಲ. ಆ ಕಾರಣದಿಂದಾಗಿ ಅವನು ಜೈನ ಸಾಧಕರ ಸಹಾಯವನ್ನು ಬಯಸಿದ.

ಉಗ್ರನರಸಿಂಹ ಸೌಮ್ಯನಾದ ಸ್ಥಳ!

ಆನೈಮಲೈ ಶಿಖರ, ಚಿತ್ರಕೃಪೆ: Ve.Balamurali

ಅದಕ್ಕೊಪ್ಪಿದ ಜೈನ ಸಿದ್ಧ ಪುರುಷರು ತಮ್ಮ ಸಿದ್ಧ ಶಕ್ತಿಯಿಂದ ಅತ್ಯಂತ ಎತ್ತರವಾದ ಆನೆಯೊಂದನ್ನು ರೂಪಿಸಿದರು ಹಾಗೂ ಅದರಲ್ಲಿ ಶಕ್ತಿಯ ಅವಗಾಹನೆ ಮಾಡಿ ಅದು ಪಾಂಡ್ಯ ರಾಜ್ಯದ ಮೇಲೆ ಆಕ್ರಮಣ ಮಾಡುವಂತೆ ಮಾಡಿದರು. ತದನಂತರ ಅತ್ಯಂತ ದೈತ್ಯ ಗಾತ್ರದ ಆ ಆನೆಯು ಪಾಂಡ್ಯರ ಮೇಲೆ ಆಕ್ರಮಣ ಮಾಡಲು ಬಂದೆ ಬಿಟ್ಟಿತು.

ಅದರ ಅಸಾಧಾರಣ ಆಕಾರ ಗಮನಿಸಿದ ಪಾಂಡ್ಯ ದೊರೆ ಇನ್ನು ನಾವೆಲ್ಲ ಉಳಿಯುವುದು ಕಷ್ಟವೆಂದು ಅರಿತು ಉಳಿಯುವುದಾದರೆ ಭಗವಂತನೆ ಕಾಪಾಡಬೇಕೆಂದು ಅಂದುಕೊಂಡು ಅತ್ಯಂತ ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿದನು. ಅದಕ್ಕೆ ಮೆಚ್ಚಿದ ಶಿವ ಅವನಿಗೆ ನರಸಿಂಗ ಅಸ್ತ್ರವನ್ನು ಕಳುಹಿಸಿದನು. ಆ ಅಸ್ತ್ರ ನಮೋನಾರಾಯಣ ಎಂಬ ಪದಗಳನ್ನು ಹೊಂದಿತ್ತು.

ಸಿಂಹಾಚಲಂ ಹಾಗೂ ಭದ್ರಾಚಲಂ ಮಹಾತ್ಮೆ

ಆ ಅಸ್ತ್ರವನ್ನು ರಾಜ ಬಳಸಿದಾಗ ಚಮತ್ಕಾರವೆಂಬಂತೆ ಹೂಂಕರಿಸಿ ಬರುತ್ತಿದ್ದ ಅತ್ಯಂತ ದೈತ್ಯ ಗಾತ್ರದ ಆ ಆನೆಯು ಒಂದು ಗಿರಿಯಾಗಿ ಬದಲಾಗಿ ಹೋಯಿತು ಹಾಗೂ ತಟಸ್ಥವಾಗಿ ಅಲ್ಲೆ ನಿಂತಿತು. ಅ ಗಿರಿಯೆ ಇಂದು ಪ್ರಸಿದ್ಧ ಆನೈಮಲೈ ಬೆಟ್ಟ ಎಂದು ಕರೆಯಲ್ಪಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X