ಬದಾಮಿ ಎಂದ ತಕ್ಷಣ ನೆನಪಾಗುವುದು ಬನಶಂಕರಿ ಅಮ್ಮನವರ ದೇವಸ್ಥಾನ. ಈ ದೇವಸ್ಥಾನವು ತಿಲಕಾರಣ್ಯ ಕಾಡಿನ ಭಾಗದಲ್ಲಿ ನೆಲೆಸಿರುವುದರಿಂದ ದೇವಿಯನ್ನು ವನಶಂಕರಿ ಎಂತಲೂ ಕೂಡ ಕರೆಯಲಾಗುತ್ತದೆ. ಶಾಖಾಂಬರಿ ಅವತಾರವಾದ ಈ ದೇವಿಯ ದೇವಾಲಯವಿರುವುದು ಬದಾಮಿಯಲ್ಲಿರುವ ಚೊಳಚಗುಡ್ಡದಲ್ಲಿ. ಹಲವು ಮನೆತನಗಳ ಕುಲದೇವತೆಯಾಗಿರುವ ಈ ಬನಶಂಕರಿ ದೇವಿಯ ಜಾತ್ರೆಯನ್ನು ಪ್ರತಿ ವರ್ಷ ಜನವರಿಯಲ್ಲಿ ಅತ್ಯಂತ ಅದ್ದೂರಿಯಿಂದ ಆಚರಿಸಲಾಗುತ್ತದೆ.
ಕೇವಲ ಕರ್ನಾಟಕವಲ್ಲದೆ ಪಕ್ಕದ ಮಹಾರಾಷ್ಟ್ರ ರಾಜ್ಯದಿಂದಲೂ ಅಪಾರ ಸಂಖ್ಯೆಯಲ್ಲಿ ಜನರನ್ನು ಸೆಳೆಯುವ ಈ ಜಾತ್ರೆಯು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ದೋಣಿ ಸ್ಪರ್ಧೆ ಹಾಗು ರಥಯಾತ್ರೆ (ತೇರು) ಗಳನ್ನು ಒಳಗೊಂಡಿರುತ್ತದೆ. ಸ್ಥಳೀಯರು ಈ ದೇವಿಯನ್ನು ಬಾಳವ್ವಾ, ಬನದವ್ವಾ, ಸುಂಕವ್ವಾ, ಶಿರವಂತಿ, ಚೌಡಮ್ಮಾ ಹಾಗು ವನದುರ್ಗೆಗಳೆಂಬ ಹೆಸರಿನಿಂದ ಕರೆಯುತ್ತಾರೆ. ಬನಶಂಕರಿ ದೇವಿಯು ದುರ್ಗೆಯ ಆರನೇಯ ಜನ್ಮವೆಂದು ನಂಬಲಾಗಿದೆ.
ಇದಲ್ಲದೆ, ಹಿಂದೆ ಚಾಲುಕ್ಯರಾಳಿದ ಈ ಬದಾಮಿಯಲ್ಲಿ ನೋಡಲು ಸುಂದರವಾದ ಭೂತನಾಥ ದೇವಾಲಯ ಸಂಕೀರ್ಣವಿದೆ ಹಾಗು ಇಲ್ಲಿನ ಗುಹಾ ದೇವಾಲಯಗಳು (ಮೇಣದ ಬಸ್ತಿ) ಅತ್ಯದ್ಭುತ ಗುಹಾ ರಚನೆಗಳಾಗಿದ್ದು, ಭಾರತೀಯ ಕಲ್ಲಿನಲ್ಲಿ ಕೆತ್ತನೆಯ ವಾಸ್ತುಶಿಲ್ಪ ಶೈಲಿಗೆ ಉತ್ತಮ ಉದಾಹರಣೆಯಾಗಿವೆ.
ತಲುಪುವ ಬಗೆ:
ಬಸ್ ಹಾಗು ರೈಲು ನಿಲ್ದಾಣಗಳೆರಡನ್ನು ಹೊಂದಿರುವ ಬದಾಮಿಯನ್ನು ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ 463 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಪಟ್ಟಣವು ಬಾಗಲಕೋಟೆಯಿಂದ ಕೇವಲ 39 ಕಿ.ಮೀ ಗಳಷ್ಟು ಅಂತರದಲ್ಲಿದೆ.
ಮಾರ್ಗ:
1. ಬೆಂಗಳೂರು - ಚಿತ್ರದುರ್ಗ - ಹೊಸಪೇಟ - ಇಳಕಲ್ - ಅಮಿನ್ಗಡ್ - ಐಹೊಳೆ - ಪಟ್ಟದಕಲ್ಲು - ಬದಾಮಿ
2. ಬೆಂಗಳೂರು - ಚಿತ್ರದುರ್ಗ - ಹಾವೇರಿ - ಗದಗ - ರೋಣ್ - ಬದಾಮಿ
3. ಬೆಳಗಾವಿ - ರಾಮದುರ್ಗ - ಕಲ್ಗೇರಿ - ಬದಾಮಿ
4. ಧಾರವಾಡ - ಹುಬ್ಬಳ್ಳಿ - ನವಲಗುಂದ - ನರಗುಂದ - ಬದಾಮಿ
ಬನಶಂಕರಿ ದೇವಾಲಯ:
ಬದಾಮಿ ಬಸ್ ನಿಲ್ದಾಣದ ಆಗ್ನೇಯ ದಿಕ್ಕಿಗೆ ಸುಮಾರು 5 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ ಈ ಬನಶಂಕರಿ ದೇವಾಲಯ.
ಬನಶಂಕರಿ ದೇವಾಲಯ:
1855 ರಲ್ಲಿ ಸೆರೆಹಿಡಿಯಲಾದ ಸುಂದರ ಬದಾಮಿ ಬನಶಂಕರಿ ದೇವಾಲಯ ಸಂಕೀರ್ಣದ ಚಿತ್ರ.
ಭೂತನಾಥ ದೇವಾಲಯ:
5 ನೇಯ ಶತ್ಮಾನದಲ್ಲಿ ಚಾಲುಕ್ಯರಿಂದ ನಿರ್ಮಾಣವಾದ ಈ ದೇವಾಲಯ ಸಂಕೀರ್ಣದಲ್ಲಿ ಎರಡು ದೇವಾಲಯಗಳಿವೆ. ಕೆರೆಗೆ ಎದುರಾಭಿಮುಖವಾಗಿ ನಿಂತಿರುವ ಈ ದೇವಾಲಯದ ಆರಾಧ್ಯ ದೈವ ಭೂತನಾಥನ ರೂಪದಲ್ಲಿ ಪೂಜಿಸಲ್ಪಡುವ ಶಿವ.
ಗುಹಾ ದೇವಾಲಯ 1:
ಮೊದಲನೇಯ ಗುಹಾ ದೇವಾಲಯದಲ್ಲಿ ಇಬ್ಬರು ದ್ವಾರಪಾಲಕರನ್ನು ಕೆತ್ತಲಾಗಿದ್ದು ಒಳಗೆ ಶಿವನ 5 ಅಡಿ ವಿಗ್ರಹವನ್ನು ಕೆತ್ತಲಾಗಿದೆ. ನೃತ್ಯ ಭಂಗಿಯಲ್ಲಿರುವ ಈ ಶಿವನ ವಿಗ್ರಹದಲ್ಲಿ 18 ಕೈಗಳಿರುವುದನ್ನು ಗಮನಿಸಬಹುದು.
ಗುಹಾ ದೇವಾಲಯ 2:
ಎರಡನೇಯ ಗುಹೆಯಲ್ಲಿ ದ್ವಾರಪಾಲಕರು ಕಮಲದ ಹೂವನ್ನು ಹಿಡಿದು ನಿಂತಿರುವುದನ್ನು ಗಮನಿಸಬಹುದಾಗಿದೆ. ಪೂರ್ವ ಹಾಗು ಪಶ್ಚಿಮ ಗೋಡೆಗಳಲ್ಲಿ ವರಾಹ ಹಾಗು ತ್ರಿವಿಕ್ರಮರ ಬೃಹತ್ ಚಿತ್ರಗಳಿವೆ.
ಗುಹಾ ದೇವಾಲಯ 3:
ಮೂರನೇಯ ಗುಹಾ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿದ್ದು ಬೃಹತ್ ಹಾಗು ಸುಂದರವಾಗಿದೆ. ಪರವಸುದೇವ, ಭೂವರಾಹ, ಹರಿಹರ ಹಾಗು ನರಸಿಂಹರ ತೇಜಸ್ಸು ತುಂಬಿದ ವಿಗ್ರಹಗಳನ್ನು ಇಲ್ಲಿ ಗಮನಿಸಬಹುದಾಗಿದೆ.
ಗುಹಾ ದೇವಾಲಯ 4:
ನಾಲ್ಕನೇಯ ಗುಹೆಯು ಜೈನ ಮತಕ್ಕೆ ಸಂಬಂಧಿಸಿದ ದೇವಾಲಯವಾಗಿದೆ. ಮೂರನೆ ಗುಹೆಯ ಪೂರ್ವಕ್ಕೆ ಈ ದೇವಾಲಯವಿರುವುದನ್ನು ಕಾಣಬಹುದು. ಜೈನ ತೀರ್ಥಂಕರರ, ಯಕ್ಷ, ಯಕ್ಷಿಯರ ಚಿತ್ರಗಳನ್ನು ಇಲ್ಲಿನ ಖಂಬಗಳ ಮೇಲೆ ಕೆತ್ತಿರುವುದನ್ನು ಗಮನಿಸಬಹುದಾಗಿದೆ.